Advertisement

ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆಗೆ ಬದ್ಧರಾಗಿರಬೇಕು

11:18 PM Feb 10, 2022 | Team Udayavani |

ಬೆಂಗಳೂರು: ಶಾಲೆಗಳು ಆರಂಭವಾಗಿ ವಿದ್ಯಾರ್ಥಿಗಳು ಪಾಠ ಆಲಿಸಬೇಕು ಎಂದು ಸರಕಾರ ಬಯಸುತ್ತದೆ. ಆದರೆ, ಒಂದು ವರ್ಗದ ವಿದ್ಯಾರ್ಥಿಗಳು ಶಿರವಸ್ತ್ರ (ಹಿಜಾಬ್‌) ಧರಿಸಿ, ಮತ್ತೊಂದು ವರ್ಗದವರು ಕೇಸರಿ ಶಾಲು ಹಾಕಿಕೊಂಡು ಬಂದರೆ ಶಾಲೆಗಳನ್ನು ಆರಂಭಿಸ ಲಾಗದು. ಹಾಗಾಗಿ, ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆಗೆ ಬದ್ಧರಾಗಬೇಕು ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ನ್ಯಾಯಪೀಠಕ್ಕೆ ವಿವರಿಸಿದರು.

Advertisement

ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠದ ಮುಂದೆ ಸರಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಿದರು. ವಿದ್ಯಾರ್ಥಿಗಳು ನಿರ್ದಿಷ್ಟ ವಸ್ತ್ರ ಸಂಹಿತೆ (ಡ್ರೆಸ್‌ಕೋಡ್‌)ಗೆ ಒತ್ತಾಯಿ ಸದೆ ಈಗಿರುವ ವಸ್ತ್ರಸಂಹಿತೆಯನ್ನು ಅನುಸರಿಸಬೇಕು. ಕಾನೂನು ಸುವ್ಯವಸ್ಥೆಯ ಹೊರತಾಗಿಯೂ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಬೇಕು ಎಂಬುದು ಸರಕಾರದ ಕಾಳಜಿ ಎಂದು ಪೀಠಕ್ಕೆ ಸರಕಾರದ ನಿಲುವನ್ನು ಅವರು ವಿವರಿಸಿದರು.

ಅರ್ಜಿದಾರರ ಪರ ವಕೀಲರ ಆಕ್ಷೇಪಗಳಿಗೆ ಪ್ರತಿಕ್ರಿಯಿ ಸಿದ ಅಡ್ವೊಕೇಟ್‌ ಜನರಲ್‌, ಹಿಜಾಬ್‌ ವಿಚಾರವಾಗಿ ಅರ್ಜಿಗಳು ನ್ಯಾಯಾಲ ಯದಲ್ಲಿ ಸಲ್ಲಿಕೆ ಯಾದ ಬಳಿಕ ಕೆಲವು ಬೆಳವಣಿಗೆಗಳು ನಡೆದಿವೆ. ಕೆಲವು ವಿದ್ಯಾರ್ಥಿಗಳು ಹಸಿರು ಶಾಲು ಧರಿಸಿ ಶಾಲೆಗಳಿಗೆ ಬರಲು ಆರಂಭಿಸಿದರು. ಇದರಿಂದ ರಾಜ್ಯಾದ್ಯಂತ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಹೀಗಾಗಿ ರಾಜ್ಯ ಸರಕಾರ ಮೂರು ದಿನಗಳ ಮಟ್ಟಿಗೆ ರಜೆ ಘೋಷಿಸಿತು. ಅದು ಶುಕ್ರವಾರಕ್ಕೆ ಮುಗಿಯಲಿದೆ. ಈ ಮಧ್ಯೆ ಎಲ್ಲ ಶಿಕ್ಷಣ ಸಂಸ್ಥೆಗಳು ತಮ್ಮ ಸಮವಸ್ತ್ರ ನಿರ್ಧರಿಸಬೇಕು ಎಂದು ಸರಕಾರ ಆದೇಶ ಹೊರಡಿಸಿತು ಎಂದು ಒಟ್ಟೂ ಬೆಳವಣಿಗೆಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಸಮವಸ್ತ್ರಕ್ಕೆ ನಿಯಮಗಳಿಲ್ಲ: ಹೆಗ್ಡೆ
ಇದಕ್ಕೂ ಮೊದಲು ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್‌ ಹೆಗ್ಡೆ ಅವರು, ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಸಮವಸ್ತ್ರದ ಬಗ್ಗೆ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ. ಶಾಲೆಗಳಲ್ಲಷ್ಟೇ ಇದ್ದ ಸಮವಸ್ತ್ರ ಸಂಹಿತೆ ಬಳಿಕ ಕಾಲೇಜುಗಳಿಗೆ ಬಂದಿತು. ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ) ನಿಯಮಗಳು-1995ರ ನಿಯಮಗಳು ಶಾಲೆಗಳ ಸಮವಸ್ತ್ರಕ್ಕೆ ಸಂಬಂಧಿ
ಸಿದ್ದಾಗಿದೆ. ಈ ನಿಯಮಗಳು ಪಿಯು ಹಾಗೂ ಪದವಿ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿ, ಸೂಕ್ತ ಮಧ್ಯಾಂತರ ಆದೇಶದ ಮೂಲಕ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.

ಇದನ್ನೂ ಓದಿ:ಪದವಿ ಸೆಮಿಸ್ಟರ್‌ ಪರೀಕ್ಷೆ ಒಂದು ತಿಂಗಳ ಕಾಲ ಮುಂದೂಡಲು ಮನವಿ

Advertisement

ಆದೇಶ ವಿವೇಚನಾರಹಿತ: ಕಾಮತ್‌
ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿಯರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು, ಸಮವಸ್ತ್ರಕ್ಕೆ ಸಂಬಂಧಿಸಿ ಸರಕಾರ ಹೊರಡಿಸಿರುವ ಆದೇಶ ವಿವೇಚನಾರಹಿತವಾಗಿದೆ. ಕಾನೂನಿಗೆ ವಿರುದ್ಧವಾಗಿ ಸರಕಾರ ಆದೇಶ ಹೊರಡಿಸಿದೆ. ಹಿಜಾಬ್‌ ಧರಿಸುವುದನ್ನು ನಿರ್ಬಂಧಿಸಲು ಸರಕಾರ ಹೊರಡಿಸಿರುವ ಆದೇಶದಲ್ಲಿ ಕೇರಳ, ಬಾಂಬೆ ಹಾಗೂ ಮದ್ರಾಸ್‌ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖೀಸಲಾಗಿದೆ. ಆಧಾರವೇ ಇಲ್ಲದೆ ಹೊರಡಿಸಿರುವ ಆದೇಶವೂ ಊರ್ಜಿತವಲ್ಲ, ಹೀಗಾಗಿ, ರಾಜ್ಯ ಸರಕಾರ ಹಿಜಾಬ್‌ ನಿರ್ಬಂಧಿಸಲು ಆಧರಿಸಿರುವ ಹೈಕೋರ್ಟ್‌ಗಳ 3 ತೀರ್ಪುಗಳನ್ನು ಇಲ್ಲಿ ಪರಿಗಣಿಸಲಾಗದು ಎಂದರು.

60 ಸಾವಿರಕ್ಕೂ ಅಧಿಕ ವೀಕ್ಷಣೆ
ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್‌ನ ಯೂಟ್ಯೂಬ್‌ ಚಾನಲ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ವಿಚಾರಣೆ ಪೂರ್ಣಗೊಳ್ಳುವ ಹೊತ್ತಿಗೆ 60 ಸಾವಿರಕ್ಕೂ ಅಧಿಕ ಮಂದಿ ಕಲಾಪ ವೀಕ್ಷಿಸುತ್ತಿದ್ದರು ಜತೆಗೆ, ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್‌ನಲ್ಲೂ ವಕೀಲರು ಕಿಕ್ಕಿರಿದು ತುಂಬಿದ್ದರು.ವಿಚಾರಣೆ ಮಧ್ಯಾಹ್ನ 2.30ಕ್ಕೆ ಆರಂಭವಾಗುವುದಿದ್ದರೂ, ಝೂಮ್‌ ಆನ್‌ಲೈನ್‌ನಲ್ಲಿ 1 ಗಂಟೆಯ ವೇಳೆಗೆ 500 ಜನ ಲಾಗಿನ್‌ ಆಗಿದ್ದರು. ಹೀಗಾಗಿ, ಆರಂಭದಲ್ಲಿ ಕೆಲವು ವಕೀಲರು, ಮಾಧ್ಯಮದ ವರಿಗೂ ಲಾಗಿನ್‌ ಆಗಲು ಸಾಧ್ಯವಾಗಿಲ್ಲ.
ಸಿಜೆ ಮನವಿ: ವಿಚಾರಣೆ ವೇಳೆ ಮಾಧ್ಯಮಗಳನ್ನುದ್ದೇಶಿಸಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡುವ ಆದೇಶವನ್ನು ಪರಿಶೀಲಿಸದೆ, ಕಲಾಪದ ವೇಳೆ ನ್ಯಾಯಪೀಠ ವ್ಯಕ್ತಪಡಿಸುವ ಯಾವುದೇ ಅನಿಸಿಕೆ- ಅಭಿಪ್ರಾಯಗಳನ್ನು ವರದಿ ಮಾಡದಂತೆ ಮನವಿ ಮಾಡಿದರು.

ಶಾಲಾ ಕಾಲೇಜುಗಳಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿ ಯಾವುದೇ ಶಾಂತಿ ಕದಡುವ ವಿಚಾರಗಳನ್ನು ಮಾತನಾಡದೆ, ನಮಗೆ ನಾವೇ ನಿಯಂತ್ರಣ ಹಾಕಿಕೊಳ್ಳೋಣ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಎಲ್ಲ ಸಂಘಟನೆಗಳ ಕರ್ತವ್ಯ .
-ಬಸವರಾಜ ಬೊಮ್ಮಾಯಿ , ಮುಖ್ಯಮಂತ್ರಿ

ಎಲ್ಲ ಶಿಕ್ಷಣ ಸಂಸ್ಥೆಗಳು ಆದಷ್ಟು ಬೇಗ ಪ್ರಾರಂಭವಾಗಬೇಕು ಮತ್ತು ಸಮಸ್ಯೆಗಳನ್ನು ನ್ಯಾಯಾಲಯ ಇತ್ಯರ್ಥಪಡಿಸಲಿದೆ ಎಂಬುದು ಪ್ರತಿಯೊಬ್ಬರ ಕಾಳಜಿಯಾಗಿದೆ. ವಿದ್ಯಾರ್ಥಿಗಳ ಶಿಕ್ಷಣ ಆರಂಭವಾಗಬೇಕು ಹಾಗೂ ಅದಕ್ಕೆ ನಮ್ಮೆಲ್ಲರ ಪ್ರಯತ್ನ ಪೂರಕವಾಗಬೇಕು.
– ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ.

Advertisement

Udayavani is now on Telegram. Click here to join our channel and stay updated with the latest news.

Next