Advertisement

ವಿದ್ಯಾರ್ಥಿ ಜೀವನದ ಹವ್ಯಾಸಗಳು ಬದುಕನ್ನು ರೂಪಿಸಬಹುದು

02:20 PM Jun 13, 2020 | mahesh |

ವಿದ್ಯಾರ್ಥಿ ಎಂದರೆ ಯಾರು ಎಂಬುದನ್ನು ನಾವು ಅರಿತಾಗ ಮಾತ್ರ ಆತನ ಜವಾಬ್ದಾರಿ ಹೆಚ್ಚಲು ಸಾಧ್ಯ. ಇದೊಂದು ಸಂಸ್ಕೃತ ಪದ. “ವಿದ್ಯಾಯಾ ಅರ್ಥಿ’ ಎಂದು ಇದನ್ನು ಬಿಡಿಸಿ ಹೇಳುವುದಿದೆ. ವಿದ್ಯೆಯನ್ನು ಸಂಪಾದಿಸುವುದೇ ಈತನ ಮುಖ್ಯ ಗುರಿಯಾಗಿರುತ್ತದೆ. ಹಾಗಾದರೆ ವಿದ್ಯೆ ಎಂದರೆ ಯಾವುದು? 64 ವಿದ್ಯೆಗಳನ್ನು
ಅನೇಕ ಗ್ರಂಥಗಳು ಹೇಳುತ್ತವೆ. ಅಕ್ಷರ ಮಾತ್ರ ವಿದ್ಯೆಯಲ್ಲ. ಸಮಾಜದಲ್ಲಿ ಆರೋಗ್ಯಕರವಾದ ಬದುಕಿಗೆ ಏನೆಲ್ಲ ಆವಶ್ಯಕ ಮತ್ತು ಯಾವುದನ್ನು ಅಪೇಕ್ಷಿಸುತ್ತೇವೆಯೋ ಅವೆಲ್ಲವುಗಳ ಅರ್ಜನೆಯೂ ವಿದ್ಯೆಯೇ ಆಗಿರುತ್ತದೆ.

Advertisement

ಗ್ರಂಥಗಳೆಂದರೆ ಬರೀ ಹೆಬ್ಬೊತ್ತಿಗೆಯಲ್ಲ. ಅವುಗಳು ಜೀವನದ ಸಾರಗಳು. ವಿದ್ಯಾರ್ಥಿ ಜೀವನದಲ್ಲಿ ನಾವು ಹಾದಿ ತಪ್ಪಲು ಸಾಕಷ್ಟು ಅಡೆ ತಡೆಗಳು ಇರುತ್ತವೆ. ಇವುಗಳ ಲಾಭ ಪಡೆದುಕೊಳ್ಳುವ ರಾಜಕೀಯ ಮುಂದಾಳುಗಳು ತಮ್ಮ ಪಕ್ಷಕ್ಕೆ ಬಲ ಬರಬೇಕೆಂದು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದಿದೆ. ಬಿಸಿ ರಕ್ತವಾದ ಕಾರಣ ಅವುಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಇದಕ್ಕೆ ಬಲಿಯಾಗಿ ಜೀವ ನವನ್ನು ತ್ರಿಶಂಕು ಸ್ಥಿತಿಯಲ್ಲಿ ಕಂಡವರೂ ಇದ್ದಾರೆ. ಆದರೆ ತಪ್ಪಿನ ಅರಿವಾಗುವ ಹೊತ್ತಿಗೆ ಸಮಯ ಮೀರಿರುತ್ತದೆ.

ಹಿಂದೆ “ಗುರುಕುಲ’ ಪದ್ಧತಿ ಇತ್ತು. ಶಿಷ್ಯರು ಗುರುವಿನ ಸಾನ್ನಿಧ್ಯದಲ್ಲಿ ಕುಳಿತು ಅಭ್ಯಾಸ ಕಾರ್ಯದಲ್ಲಿ ತೊಡಗುತ್ತಿದ್ದರು. ಅಂದಿನ ಕಾಲದಲ್ಲಿ ಗುರುಕುಲದಲ್ಲಿದ್ದ ಶಿಷ್ಯರು ಯಾವ ರೀತಿ ಅಭ್ಯಸಿಸುತ್ತಿದ್ದರೆಂದು ಬಾಣನ ಕಾದಂಬರಿಯಿಂದ ತಿಳಿಯಬಹುದಾಗಿದೆ. ಶುಕನಾಸ ಮಂತ್ರಿಯು ಮಹಾ ಪಂಡಿತ. ಲೋಕದ ಅನುಭವ ತಿಳಿದವನು. ಅವನು ರಾಜಕುಮಾರ ಚಂದ್ರಾ ಪೀಡನಿಗೆ ಉಪದೇಶಿಸಿದ್ದು ಮಾದರಿಯಾಗಿದೆ. ಅವನು ಅರಸೊತ್ತಿಗೆಯ ಮಬ್ಬಿನೊಂದಿಗೆ ಲಕ್ಷ್ಮಿಯ ಪ್ರಭಾವದಿಂದ ಅನರ್ಥಗಳಾಗುವುದರಿಂದ ರಾಜ ಕುಮಾರರು ಅದನ್ನು ನಂಬ ಬಾರದೆಂದು ಹೇಳಿದ್ದಾನೆ. ಯೌವ್ವನ, ಧನಸಂಪತ್ತು. ಪ್ರಭುತ್ವ, ಅವಿವೇಕ ಇವುಗಳ ಬಲೆಗೆ ಬಿಳಬಾರದು ಎಂಬ ಎಚ್ಚರಿಕೆಯನ್ನೂ ಅವನು ನೀಡಿದ್ದಾನೆ ಈ ಮೇಲಿನವುಗಳಿಗೆ ಬಲಿಯಾಗದೆ ಜ್ಞಾನಾರ್ಜನೆಯಲ್ಲಿ ತೊಡಗುವುದೇ ನಿಜವಾದ ವಿದ್ಯಾರ್ಥಿಯ  ಲಕ್ಷಣವಾ ಗಿದೆ. ಇದೇ ಮಾದರಿಯಾಗಿ ಶೇಕ್ಸ್‌ ಪಿಯರ್‌ನ ಅತ್ಯುನ್ನತ ನಾಟಕವಾದ ಹ್ಯಾಮ್‌ಲೆಟ್‌ನಲ್ಲಿ ಪೋಲೋನಿಯಸ್‌ನು ತನ್ನ ಮಗ ವಿದ್ಯಾಭ್ಯಾಸಕ್ಕೆಂದು ಹೊರಟಾಗ ಹೇಳಿದ ಮಾತುಗಳು ಮಾನವೀಯವಾಗಿವೆ.

‘Give every man thy ear few voice”
ವಿಲಾಸೀ ಜೀವನ ಪದ್ಧತಿಯನ್ನು ವಿದ್ಯಾರ್ಥಿಗಳು ಅನುಸರಿಸುತ್ತಿದ್ದಾರೆ. ಆಧುನಿಕ ಜೀವನ ಪದ್ಧತಿಯ ಕಡೆಗೆ ಆಕರ್ಷಿತರಾಗದೆ ಶಿಕ್ಷಣದ ನೈಜ ಆಶಯವನ್ನು ಈಡೇರಿಸುವತ್ತ ಮನಸ್ಸು ಮಾಡಬೇಕಾಗಿದೆ. ಕಷ್ಟ ಪಟ್ಟು ವ್ಯಾಸಂಗದತ್ತ ಮುಖ ಮಾಡಬೇಕು. ಆಯಾಸವಿಲ್ಲದೆ ಯಾವ ಸಿಂಹದ ಬಾಯಿಯಲ್ಲಿಯೂ ಆಹಾರವು ತಾನಾಗಿಯೇ ಬಂದು ಬೀಳುವುದಿಲ್ಲ. ಹಾಗಾಗಿಯೇ ವಿದ್ಯಾರ್ಥಿಯಾದವನು ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಯು ಸುಖವನ್ನು ಬಿಡಬೇಕು. ಇಲ್ಲವಾದರೆ ಸುಖಾರ್ಥಿಯು ವಿದ್ಯೆಯನ್ನು ಬಿಡಬೇಕು. ವಿದ್ಯಾರ್ಥಿಯಾದವನು ಪ್ರತಿದಿನ ಕ್ರೀಯಾಶೀಲವಾಗಿರಬೇಕು. ಅಭ್ಯಾಸದ ಜತೆಗೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡರೆ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ.

‘Early to bed and early to rise, makes a man healthy, wealthy, and wise”ಎಂಬುದು ಸಾಮಾನ್ಯವಾದರೂ ಅರ್ಥಪೂರ್ಣವಾಗಿದೆ.ಹಾಡುವುದೂ ಒಂದು ಕಲೆ. ಇದನ್ನು ಹವ್ಯಾಸವನ್ನಾಗಿಸಿ ಜೀವನವನ್ನು ಪಾವನವಾಗಿಸಿಕೊಂಡ ಅದೆಷ್ಟೋ ದಾಸ ಪುಂಗವರನ್ನು ನಾವು ಬಲ್ಲೆವು. ಜೀವನದ ಅತ್ಯಂತ ವೈಭವವನ್ನು ಕಂಡವರೂ ಇದ್ದಾರೆ. ಹಾಡುವ ಹವ್ಯಾಸ ಬೆಳೆಸಿಕೊಂಡರೆ ಮನಸ್ಸಿಗೆ ಸಂತೋಷ ಸಿಗುವುದರ ಜತೆಗೆ ಖ್ಯಾತಿಯನ್ನು ಗಳಿಸಬಹುದು. ಒಟ್ಟಿನಲ್ಲಿ ಹವ್ಯಾಸ ಯಾವುದೇ ಬಗೆಯದಾಗಿರಲಿ; ಅದು ವ್ಯಕ್ತಿಯ ಮನೋಭಾವ, ಸ್ವಭಾವ ಮತ್ತು ಅಭಿರುಚಿಗೆ ಸಂಬಂಧಪಟ್ಟದಾಗಿರುತ್ತದೆ. ನಮ್ಮ ಹವ್ಯಾಸಗಳು ಬೇರೆಯವರಿಗೆ ಅನುಕರಣೀಯವೋ, ಸಮಾಜಕ್ಕೆ ವಿಷಯಯುಕ್ತವೋ ಆಗಿರಬೇಕು.

Advertisement


ಮಧುರಾ ಎಲ್‌. ಭಟ್‌,
ಎಸ್‌.ಡಿ.ಎಂ. ಕಾಲೇಜು, ಉಜಿರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next