Advertisement

ವಿದ್ಯಾರ್ಥಿಗಳ ಕ್ರಿಯಾಶೀಲತೆ- ಸೃಜನಶೀಲತೆ ಬಿಚ್ಚಿಟ್ಟ ಪ್ರದರ್ಶನ

07:33 AM Jan 12, 2019 | |

ದಾವಣಗೆರೆ: ಥರ್ಮಕೋಲ್‌ನಲ್ಲಿ ಸಿದ್ಧಗೊಂಡಿರುವ ಯಕ್ಷಗಾನ ಕಿರೀಟ…, ಭತ್ತ ಬಳಸಿ ಸಿದ್ಧಪಡಿಸಿದ ಆತ್ಯಾಕರ್ಷಕ ಜ್ಯೂಯೆಲರಿ…, ಬಲೂನ್‌ ಪುಟ್ಟಿ…, ರದ್ದಿ ಪೇಪರ್‌ನಲ್ಲಿ ಸಿದ್ಧವಾಗಿರುವ ಬ್ಯಾಗ್‌… ಹೀಗೆ ವಿವಿಧ ನಮೂನೆ, ಮಾದರಿ, ಬಣ್ಣಗಳಲ್ಲಿ ಸಿದ್ಧಗೊಂಡಿರುವ ಕರಕುಶಲ ವಸ್ತುಗಳ ಲೋಕವೇ ಕಂಡು ಬಂದಿದ್ದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರೌಢಶಾಲಾ ಶೆ„ಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತುಪ್ರದರ್ಶನದಲ್ಲಿ.

Advertisement

ಪ್ರದರ್ಶನದಲ್ಲಿ ಪಾಲ್ಗೊಂಡಿರುವ 110 ಶಾಲೆಗಳ ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ ಸಿದ್ಧಗೊಂಡಿರುವ ವಸ್ತುಗಳು ಮಕ್ಕಳ ದೇಹ, ಮನಸ್ಸು ಮತ್ತು ಆತ್ಮಗಳಿಗೆ ಸರ್ವಾಂಗೀಣ ಶಿಕ್ಷಣವನ್ನು ನೀಡುವುದೇ ವೃತ್ತಿ ಶಿಕ್ಷಣದ ಪ್ರಮುಖ ತತ್ವ… ಎನ್ನುವ ಮೂಲಕ ವೃತ್ತಿ ಶಿಕ್ಷಣದ ಮಹತ್ವವನ್ನು ತಿಳಿಸಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮಾತಿಗೆ ಅನುಗುಣವಾಗಿದ್ದವು.

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗೌರಮ್ಮ, ಹೇಮ, ಸಿಂಚನ, ಅಂಜಲಿ ಸಿದ್ಧಪಡಿಸಿರುವ ಡಿಟರ್ಜೆಂಟ್ ಪೌಡರ್‌, ಸ್ನಾನದ ಚೂರ್ಣ, ಡ್ರಾಯಿಂಗ್‌ ಪೇಪರ್‌, ಹಳೆಯ ಕ್ಯಾಲೆಂಡರ್‌ ಬಳಸಿ ತಯಾರಿಸಿರುವ ಪೇಪರ್‌ ಬ್ಯಾಗ್‌, ಪೋಸ್ಟಲ್‌ ಕವರ್‌… ಮಕ್ಕಳಲ್ಲಿನ ಕ್ರಿಯಾತ್ಮಕತೆಗೆ ಸಾಕ್ಷಿಯಾಗಿದ್ದವು.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜಯನಗರದ ಸರ್ಕಾರಿ ಪ್ರೌಢಶಾಲೆಯ ಕಲಾ ಶಿಕ್ಷಕಿ ಎಸ್‌. ಪವಿತ್ರಾ ಮಾರ್ಗದರ್ಶನದಲ್ಲಿ 9ನೇ ತರಗತಿಯ ಎಸ್‌. ಅನ್ಸಿರಾ, ಶರಣ್ಯ, ನಿರಂಜನ್‌ ಸಿದ್ದಪಡಿಸಿರುವ ಥರ್ಮಕೋಲ್‌ನ ಯಕ್ಷಗಾನ ಕಿರೀಟ…, ಭತ್ತದ ಆತ್ಯಾಕರ್ಷಕ ಜ್ಯೂಯೆಲರಿ…, ಬಲೂನ್‌ ಪುಟ್ಟಿ, ಅಡಕೆ ಮತ್ತು ನವಧಾನ್ಯದಲ್ಲಿ ಒಡಮೂಡಿದ ಗಣಪ, ಸ್ಪಂಜಿನ ಶಂಖು… ಮನ ಮೆಚ್ಚುವಂತಿದ್ದವು.

ಕಸದಿಂದ ರಸ… ಎನ್ನುವಂತೆ ಹಳೆಯ ತೆಂಗಿನಕಾಯಿ, ಬಲೂನ್‌, ಪೇಪರ್‌ ಇತರೆ ವಸ್ತುಗಳ ಬಳಸಿ ಅನೇಕ ಸಾಮಗ್ರಿ ತಯಾರಿಸುವುದನ್ನು ನಮ್ಮ ಶಿಕ್ಷಕಿ ಪವಿತ್ರಾ ಹೇಳಿಕೊಟ್ಟಿದ್ದಾರೆ. ಶಾಲೆಯಲ್ಲಿ ಕ್ರಾಫ್ಟ್‌ ಪಿರಿಯಡ್‌ ಇದ್ದಾಗ ಮಾತ್ರ ಮಾಡುವುದಲ್ಲ. ಮನೆಯಲ್ಲೂ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

Advertisement

ಬೆಳಗಾವಿ ಜಿಲ್ಲೆಯ ಹಣ್ಣಿಕೇರಿ ಪ್ರೌಢಶಾಲೆಯ ಮಹಾಂತೇಶ್‌ ದೊಡ್ಮನಿ, ಸಾಗರ್‌ ಬೆಳಗಣ್ಣನವರ್‌ ಸಿರಿಧಾನ್ಯ ಪ್ರಾತ್ಯಕ್ಷಿಕೆ, ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ಶ್ರೀ ರೇಣುಕ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಕುಬೇರನಾಯ್ಕ, ಎ.ನಂದೀಶ್‌ ಸಿದ್ದಪಡಿಸಿರುವ ತಾರಸಿ ಉದ್ಯಾನವನ, ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ, ಬೈಲಹೊಂಗಲದ ಸೋಮೈಯಾ ವಿನಯ ಮಂದಿರ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶಿವಾನಿ, ಕಬ್ಬಿನ ಗರಿಯಿಂದ ಮಾಡಿದ ಮನೆ… ಎಲ್ಲವೂ ಉತ್ತಮವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next