Advertisement

ಮನೆ ಫಲಾನುಭವಿಗಳ ಪರದಾಟ

03:57 PM Mar 20, 2018 | Team Udayavani |

ಮುದಗಲ್ಲ: ಗುಡಿಸಲು ಮುಕ್ತ ರಾಜ್ಯ ನಿರ್ಮಾಣಕ್ಕೆ ಸರಕಾರ ಬಸವ ವಸತಿ, ಪ್ರಧಾನಮಂತ್ರಿ ಆವಾಸ ಯೋಜನೆ,
ಅಂಬೇಡ್ಕರ್‌ ವಸತಿ ಸೇರಿ ವಿವಿಧ ವಸತಿ ಯೋಜನೆ ಜಾರಿಗೆ ತಂದಿದೆ.

Advertisement

ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿ ಕೊಳ್ಳಲು ಅನುದಾನ ನೀಡುತ್ತಿದೆ. ಆದರೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕಂತಿನ ಹಣ ಜಮಾ ಮಾಡದ್ದರಿಂದ ಈಗಾಗಲೇ ಸಾಲ ಮಾಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳು ಅನುದಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಲಿಂಗಸುಗೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ 2015-16, 2016-17, 2017-18ಕ್ಕೆ ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮದಿಂದ ಗುಡಿಸಲು ವಾಸಿಗಳಿಗೆ ಮನೆ ಮಂಜೂರಾಗಿವೆ.

ಫಲಾನುಭವಿಗಳು ಈಗಾಗಲೇ ತಳಪಾಯ ಮತ್ತು ಗೋಡೆ ಹಂತದವರೆಗೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ವಸತಿ ಯೋಜನೆ ನಿಯಮಗಳಂತೆ ಗ್ರಾಪಂ ಅಧಿಕಾರಿಗಳು ಜಿಪಿಎಸ್‌ ಮಾಡಿದ್ದಾರೆ. ಆದರೆ ಇದುವರೆಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಬಿಡಿಗಾಸು ಜಮೆಯಾಗಿಲ್ಲ, ಸಾಲ ಮಾಡಿ ಮನೆ ನಿರ್ಮಾಣಕ್ಕೆ ಸಿಮೆಂಟ್‌, ಮರಳು, ಕಿಟಕಿ ,ಬಾಗಿಲು, ಇಟ್ಟಿಗೆ ತಂದು ಹಾಕಿದ್ದಾರೆ.

ಆದರೆ ಒಂದೂವರೆ ತಿಂಗಳಿಂದ ಅನುದಾನ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕೆಲ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ನಾಲ್ಕೈದು ತಿಂಗಳಾದರೂ ರಾಜೀವಗಾಂಧಿ ವಸತಿ ನಿಗಮದಿಂದ ಅನುದಾನ ಬಂದಿಲ್ಲ, ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ವಿಚಾರಿಸಿದರೆ ರಾಜೀವಗಾಂಧಿ ವಸತಿ ನಿಗಮದ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ.

Advertisement

ಗ್ರಾಪಂಗೆ ಯಾವುದೇ ಹಣಕಾಸಿನ ಅಧಿಕಾರ ಇಲ್ಲ ಎಂದು ಜಾರಿಕೊಳ್ಳುತ್ತಾರೆ. ಇದ್ದ ಹರಕು-ಮುರಕು ಗುಡಿಸಲುಗಳಲ್ಲಿ
ವಾಸ ಮಾಡುತ್ತಿದ್ದ ಬಡ ಕುಟುಂಬಗಳು ಸರಕಾರ ಸಹಾಯಧನ ನೀಡುತ್ತದೆ ಎಂಬ ಆಶೆಯಿಂದ ಗುಡಿಸಲುಗಳನ್ನು ಕಿತ್ತಿ ಸಾಲ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಸಕಾಲಕ್ಕೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಮನೆಗಳ
ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಂಬಂಧಿಸಿದ ಅಧಿಕಾರಿಗಳು ಮನೆ ನಿರ್ಮಿಸಿಕೊಂಡವರಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಹಡಗಲಿ ತಾಪಂ ಸದಸ್ಯೆ ಶಾರದಾ ರಾಠೊಡ ಆಗ್ರಹಿಸಿದ್ದಾರೆ.

ಜಿಪಿಎಸ್‌ ತಂತ್ರಜ್ಞಾನದ ಫಲಾನುಭವಿಗಳು ನಿರ್ಮಿಸಿಕೊಂಡ ಫೋಟೋಗಳನ್ನು ಸೆರೆಹಿಡಿಯಲಾಗಿದೆ. ಅನುದಾನದ ಕಂತು ಬಿಡುಗಡೆಗೆ ರಾಜೀವಗಾಂಧಿ ವಸತಿ ನಿಗಮಕ್ಕೆ ಶಿಫಾರಸು ಮಾಡಲಾಗಿದೆ. ಇಂದು-ನಾಳೆ ಕಂತಿನ ಅನುದಾನ ಜಮೆಯಾಗುವ ಸಾಧ್ಯತೆ ಇದೆ. 
 ಶಂಕರ ನಾಯ್ಕ, ವಸತಿ ಯೋಜನೆಗಳ ನೋಡಲ್‌ ಅಧಿಕಾರಿ

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next