Advertisement

ಪ್ರಬಲ ತಂಡವಾಗಿದ್ದ ವಿಂಡೀಸ್‌ ದುರ್ಬಲ ತಂಡವಾದ ಕಥೆ

05:30 AM Nov 17, 2018 | |

ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ವಿಶ್ವದ ಪ್ರಬಲ ತಂಡವಾಗಿದ್ದ ವೆಸ್ಟ್‌ಇಂಡೀಸ್‌ ಕಾಲಕ್ರಮೇಣ ದುರ್ಬಲ ತಂಡಗಳ ಪೈಕಿ ಒಂದಾಗಿದೆ. ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲೂ ವಿಫ‌ಲವಾಗಿದೆ. ಹಾಗಂತ ಆ ತಂಡದಲ್ಲಿ ಪ್ರತಿಭೆಗಳಿಗೇನು ಬರವಿಲ್ಲ. ಆದರೆ ತಂಡವನ್ನು ನಿರ್ವಹಿಸಲು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಪೂರ್ಣ ವಿಫ‌ಲವಾಗಿದೆ.  ವಿಂಡೀಸ್‌ನ ಇತಿಹಾಸ ತಿರುವಿ ನೋಡಿದಾಗ 1975ರಿಂದ 1995ರವರೆಗೆ ಅದು ಆಡಿದ 152 ಟೆಸ್ಟ್‌ ಪಂದ್ಯಗಳಲ್ಲಿ 72 ಗೆದ್ದು ಕೇವಲ 25ರಲ್ಲಿ ಪರಾಭವಗೊಂಡಿತ್ತು.  1975ರಿಂದ 1995ರವರೆಗೆ ಒಂದೂ ಟೆಸ್ಟ್‌ ಸರಣಿ ಸೋತಿರಲಿಲ್ಲ. ಇದು ಅವರ ಪ್ರಾಬಲ್ಯಕ್ಕೆ ಹಿಡಿದ ಕನ್ನಡಿ. ಈಗ ಅಂತಹ ಅದ್ಭುತ ತಂಡ ನೆಲ ಕಚ್ಚಿದೆ. ಕಾರಣ? ರಾಜಕೀಯ. ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿಯದ್ದು ಇಲ್ಲಿ ಪ್ರಮುಖ ಪಾತ್ರ. ವಿಂಡೀಸ್‌ನ ಅನೇಕರು ಕ್ರಿಕೆಟಿಗರು ಅಸಮರ್ಪಕ ಆಡಳಿತದಿಂದ ಬೇಸತ್ತು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

Advertisement

ವಿಂಡೀಸ್‌ನಲ್ಲಿ ರೋಚಕತೆ ಕಳೆದುಕೊಳ್ಳುತ್ತಿರುವ ಕ್ರಿಕೆಟ್‌
ಹಲವು ದ್ವೀಪರಾಷ್ಟ್ರಗಳು ಸೇರಿ ರಚಿಸಿಕೊಂಡಿರುವ ಒಂದು ಕ್ರಿಕೆಟ್‌ ತಂಡ ವೆಸ್ಟ್‌ಇಂಡೀಸ್‌. ಆಟಗಾರರು ಎಲ್ಲ ದ್ವೀಪಗಳಿಂದ ಒಗ್ಗೂಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ ಈ ಭಾಗದಲ್ಲಿ ತನ್ನ ರೋಚಕತೆ ಕಳೆದುಕೊಳ್ಳುತ್ತಿದೆ. ಅದರಂತೆಯೇ ಅಲ್ಲಿನ ಯುವಕರ ಒಲವು ಸಹ ಬಾಸ್ಕೆಟ್‌ಬಾಲ್‌ ಕಡೆ ತಿರುಗಿದೆ. ನಿಧಾನಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶುರುವಾದ ವಿಂಡೀಸ್‌ ವೈಫ‌ಲ್ಯ ನಂತರ ಏಕದಿನಕ್ಕೂ ವಿಸ್ತರಿಸಿತು. ಅದರ ಪರಿಣಾಮ ಅಲ್ಲಿನ ಆಟಗಾರರು ಟಿ20 ಕ್ರಿಕೆಟಿಗೆ ಅಂಟಿಕೊಂಡರು. ಭಾರೀ ಹಣ ನೀಡುವ ವಿಶ್ವದ ವಿವಿಧ ಲೀಗ್‌ಗಳಲ್ಲಿ ಮಿಂಚತೊಡಗಿದರು. ತಂಡದಲ್ಲಿ ಅದ್ಭುತ ಆಟಗಾರರಿದ್ದರು ಇವರು ಸಂಘಟಿತವಾಗಿ ಆಡದ ಪರಿಣಾಮ ವಿಂಡೀಸ್‌ ತಂಡ ಟಿ20ಯಲ್ಲೂ ಪರಿಣಾಮಕಾರಿ ಸಾಧನೆ ಮಾಡಲಿಲ್ಲ. ಆದರೂ 2 ಟಿ20 ವಿಶ್ವಕಪ್‌ ಗೆದ್ದ ವಿಶ್ವದ ಏಕೈಕ ತಂಡ ವೆಸ್ಟ್‌ ಇಂಡೀಸ್‌.

ತಂಡದ ಸತತ ವೈಫ‌ಲ್ಯ

 ವಿಂಡೀಸ್‌ ತಂಡ ಮೊದಲಿನಂತಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ವಿಶ್ವ ಕಂಡ ಶೇಷ್ಠ ತಂಡಗಳಲ್ಲಿ ಒಂದಾಗಿದ್ದ ವಿಂಡೀಸ್‌ ಇಂದು ದುರ್ಬಲ ತಂಡಗಳ ವಿರುದ್ಧ ದಾಖಲೆಯ ಸೋಲು ಕಾಣುತ್ತಿರುವುದು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ದುರ್ಬಲ ತಂಡಗಳಾದ ಜಿಂಬಾಬ್ವೆ, ಐರೆಲಂಡ್‌, ಬಾಂಗ್ಲಾ ವಿರುದ್ಧವೂ ಸೋಲು ಕಾಣುತ್ತಿದೆ. 

ವಿಂಡೀಸ್‌ ತೊರೆದು ಟಿ20 ಲೀಗ್‌ನಲ್ಲಿ ಆಟ: ತಮ್ಮ ಕ್ರಿಕೆಟ್‌ ಮಂಡಳಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ವಿಂಡೀಸ್‌ ಕ್ರಿಕೆಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ಸರಿಯಾಗಿ ನೀಡುವುದಿಲ್ಲ ಎನ್ನುವುದರ ಜೊತೆಗೆ, ವಿಪರೀತ ರಾಜಕೀಯವೂ ಬೇಸರಕ್ಕೆ ಕಾರಣ. ಇದೇ ಕಾರಣದಿಂದ ಕ್ರಿಸ್‌ಗೆàಲ್‌, ಕೈರನ್‌ ಪೊಲಾರ್ಡ್‌, ಡ್ವೇನ್‌ಬ್ರಾವೊ, ಆಂಡ್ರೆ ರಸೆಲ್‌ರಂತಹ ಆಟಗಾರರು ವಿಂಡೀಸ್‌ ಪರ ಆಡುವುದನ್ನು ನಿಲ್ಲಿಸಿದರು. ವಿಂಡೀಸ್‌ ಬೇರೆ ದೇಶದ ವಿರುದ್ಧ ಪ್ರಮುಖ ಕೂಟದಲ್ಲಿ ಆಡುತ್ತಿದ್ದರೂ ತಂಡದ ದಿಗ್ಗಜ ಆಟಗಾರರು ಮಾತ್ರ ಇನ್ಯಾವುದೋ ದೇಶದ ಟಿ20 ಲೀಗ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ಆಟಗಾರರಿಗೂ ನೋವಿದ್ದರೂ ಮಂಡಳಿ ನಡತೆ ಸರಿಯಿಲ್ಲದ ಪರಿಣಾಮ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.

Advertisement

ಪ್ರತಿಭಾವಂತರಿಗೆ ಈಗಲೂ ಕೊರತೆಯಿಲ್ಲ
ವೆಸ್ಟ್‌ ಇಂಡೀಸ್‌ ತಂಡದಲ್ಲಿ ಪ್ರತಿಭಾವಂತ ಆಟಗಾರರಿಗೇನು ಕಡಿಮೆ ಇಲ್ಲ. ತಂಡ ಈ ಮಟ್ಟದ ದುಸ್ಥಿತಿಯಲ್ಲಿದ್ದರೂ ಪ್ರತೀಬಾರಿಯೂ ಹೊಸತಾರೆಯರು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಎವಿನ್‌ ಲೆವಿಸ್‌, ಶೈ ಹೋಪ್‌, ಶಿಮ್ರನ್‌ ಹೆಟ್‌ಮೈರ್‌, ಕೀಮೊ ಪೌಲ್‌, ಆಂಡ್ರೆ ರಸೆಲ್‌ ಅವರೆಲ್ಲ ಇದಕ್ಕೆ ಉದಾಹರಣೆ. ಯಾವುದೇ ದೇಶದ ಟಿ20 ಲೀಗ್‌ಗಳಲ್ಲಿ ವಿಂಡೀಸಿಗರಿಗೆ ಬಹಳ ಆದ್ಯತೆಯಿರುತ್ತದೆ. ಈ ಆಟಗಾರರು ತಾರೆಯರಾಗುವವರೆಗೆ ವಿಂಡೀಸ್‌ ಪರ ಆಡುತ್ತಾರೆ. ಮತ್ತೆ ಅವರೂ ತಂಡವನ್ನು ತೊರೆಯುತ್ತಾರೆ. ಇಂತಹ ವಲಸೆ ಸತತವಾಗಿ ನಡೆಯುತ್ತಿದೆ. ಇದನ್ನು ತಡೆಯಲು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯ ಅಸಮರ್ಪಕ ನಾಯಕತ್ವ ವಿಫ‌ಲವಾಗಿದೆ. ಪ್ರತೀ ಬಾರಿ ಆಟಗಾರರು ತಂಡ ತೊರೆದಾಗಲೂ ಯಾರೊ ಹೊಸಬರಿಗೆ ಸ್ಥಾನ ನೀಡುತ್ತಿದೆ ಹೊರತು ಈ ವಲಸೆ ತಡೆಯಲು ಏನು ಮಾಡಬೇಕೆಂದು ಯೋಚಿಸಿಯೇ ಇಲ್ಲ.

ಅರ್ಧದಲ್ಲೇ ಆಟ ಮುಗಿಸಿದರು: ವಿಂಡೀಸ್‌ ಕ್ರಿಕೆಟ್‌ನ ಭಿನ್ನಮತ ಜೋರಾಗಿ ಬೆಳಕಿಗೆ ಬಂದಿದ್ದು 2014ರಲ್ಲಿ. ಆಗ ಭಾರತಕ್ಕೆ ಬಂದಿದ್ದ ಆ ತಂಡ ಅರ್ಧಕ್ಕೆ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಹಿಂತಿರುಗಿತು. ಧರ್ಮಶಾಲಾದಲ್ಲಿ ನಡೆದ 4ನೇ ಏಕದಿನ ಕ್ರಿಕೆಟ್‌ ಬಳಿಕ ವಿಂಡೀಸ್‌ ಆಟಗಾರರು ಮತ್ತು ಮಂಡಳಿ ನಡುವೆ ಜಗಳ ತೀವ್ರವಾಯಿತು. ವೇತನ ಕಡಿಮೆಯಾಯಿತು ಎಂದು ಆಟಗಾರರು ತಗಾದೆ ತೆಗೆದರು. ಮುಂದಿನ ಪಂದ್ಯ ಆಡುವುದಿಲ್ಲವೆಂದು ಹಟ ಹಿಡಿದರು. ವಿಂಡೀಸ್‌ ತಂಡ ಇನ್ನೂ 1 ಏಕದಿನ ಪಂದ್ಯ, 1 ಟಿ20 ಪಂದ್ಯ ಮತ್ತು 3 ಟೆಸ್ಟ್‌ಗಳನ್ನು ಆಡಬೇಕಿತ್ತು. ಅಷ್ಟರಲ್ಲೇ ಗಂಟುಮೂಟೆ ಕಟ್ಟಿತು. ಸರಣಿಯ ಆತಿಥೇಯತ್ವ ವಹಿಸಿದ್ದ ಬಿಸಿಸಿಐಗೆ ನಷ್ಟವಾಗಿತ್ತು. ಇದರಿಂದ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಕೆಂಡಾಮಂಡಲವಾದರೆ, ಬಿಸಿಸಿಐ ವಿಂಡೀಸ್‌ ಮಂಡಳಿಯಿಂದ 258 ಕೋಟಿ ರೂ. ಪರಿಹಾರ ಕೇಳಿತು.

ಟಿ20 ವಿಶ್ವಕಪ್‌ ಜಯಭೇರಿ ಬೆನ್ನಲ್ಲೇ ಭಿನ್ನಮತ
2014 ಮತ್ತು 2016ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಡ್ಯಾರೆನ್‌ ಸ್ಯಾಮಿ ನೇತೃತ್ವದಲ್ಲೇ ವಿಂಡೀಸ್‌ ಗೆದ್ದಿತ್ತು. ಎರಡು ಟಿ20 ವಿಶ್ವಕಪ್‌ ಗೆದ್ದ ವಿಶ್ವದ ಏಕೈಕ ತಂಡ ವಿಂಡೀಸ್‌. 2016ರ ವಿಶ್ವಕಪ್‌ ಗೆದ್ದು ಪ್ರಶಸ್ತಿ ಸ್ವೀಕರಿಸಲು ನಾಯಕ ಸ್ಯಾಮಿ ವೇದಿಕೆ ಏರಿದ ಗಳಿಗೆಯಿಂದಲೇ ಭಾರೀ ವಿವಾದ ಶುರುವಾಯಿತು. ಸ್ಯಾಮಿ ವೇದಿಕೆಯಲ್ಲೇ ವಿಂಡೀಸ್‌ ಮಂಡಳಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ತಮ್ಮ ಮಂಡಳಿ ಆರ್ಥಿಕ ಪರಿಸ್ಥಿತಿ, ಆಟಗಾರರ ದುಸ್ಥಿತಿಯನ್ನು ಬಿಚ್ಚಿಟ್ಟರು. ಇದರಿಂದ ಸಿಟ್ಟಾದ ವಿಂಡೀಸ್‌ ಮಂಡಳಿ ಸ್ಯಾಮಿಯನ್ನು ಶಾಶ್ವತವಾಗಿ ಹೊರಹಾಕಿತು. ಹಲವು ಇತರೆ ಆಟಗಾರರೂ ತಂಡದಿಂದ ಹೊರಹೋದರು.

ಎರಡು ಏಕದಿನ ವಿಶ್ವಕಪ್‌ ವಿಜಯ
ಆ ಕಾಲದ ಬೌಲರ್‌ಗಳಾದ ಕಾಲಿನ್‌ ಕ್ರಾಫ್ಟ್, ಮಾಲ್ಕಮ್‌ ಮಾರ್ಷಲ್‌ , ಜೋಯೆಲ್‌ ಗಾರ್ನರ್‌, ಆ್ಯಂಡಿ ರಾಬರ್ಟ್ಸ್, ಮೈಕೆಲ್‌ ಹೋಲ್ಡಿಂಗ್‌ ಅಂತ ಘಟಾನುಘಟಿಗಳು ಎದುರಾಳಿಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಅದರಲ್ಲೂ 5.7 ಎತ್ತರದ ಮಾಲ್ಕಮ್‌ ಮಾರ್ಷಲ್‌ ಅವರ ಬೌಲಿಂಗ್‌ ಎಂದರೆ ಬ್ಯಾಟ್ಸ್‌ಮನ್‌ಗಳು ಒದ್ದಾಡುತ್ತಿದ್ದರು. ಇನ್ನು ಬ್ಯಾಟಿಂಗ್‌ ವಿಚಾರಕ್ಕೆ ಬಂದರೆ ಸರ್‌ ವಿವಿ ರಿಚರ್ಡ್ಸ್‌, ಡೆಸ್ಮಂಡ್‌ ಹೇಯ್ನ, ಕಾಳಿಚರಣ್‌, ಕ್ಲೈವ್‌ ಲಾಯ್ಡ್‌ ನಂತರ ಕ್ರಿಕೆಟ್‌ ಲೋಕದ ದೊರೆ ಬ್ರಿಯಾನ್‌ ಚಾರ್ಲ್ಸ್‌ ಲಾರಾ ಈ ಪಟ್ಟಿಗೆ ಕೊನೆಯೇ ಇಲ್ಲವಂತೆ ಬೆಳೆಯುತ್ತಾ ಹೋಗುವುದು. ಈ ತಂಡ  1975 ಹಾಗೂ 79ರ ಏಕದಿನ ವಿಶ್ವಕಪ್‌ ಸತತವಾಗಿ ಗೆದ್ದಿತ್ತು.

-ಧನಂಜಯ ಆರ್‌, ಮಧು

Advertisement

Udayavani is now on Telegram. Click here to join our channel and stay updated with the latest news.

Next