Advertisement

ಸದೃಢ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

03:56 PM Jan 27, 2018 | |

ದಾವಣಗೆರೆ: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಪ್ರತಿಯೊಬ್ಬರು ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನವಿ
ಮಾಡಿದರು.

Advertisement

ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ 69 ನೇ ಗಣರಾಜ್ಯೋತ್ಸವದ ಲಿಖೀತ ಸಂದೇಶ ನೀಡಿದ ಅವರು, ಸಾಧನೆಗಳು ಪರಿಶ್ರಮದ
ಅಳತೆಗೋಲುಗಳಾಗಬೇಕು. ರಾಷ್ಟ್ರದ ಸಾರ್ವಭೌಮತೆ, ಸಾಮಾಜಿಕ ನ್ಯಾಯದ, ಜಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕತೆಯ
ಭದ್ರ ತಳಹದಿಯ ಮೇಲೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದರು. ದೇಶದ ಅಖಂಡತೆಯ ಪ್ರತೀಕವಾದ ಸಂವಿಧಾನ 1950 ಜ. 26 ರಂದು ಜಾರಿಗೆ ಬಂದಿದೆ. ಇಡೀ ದೇಶದ ಏಕೈಕ ಪೌರತ್ವ ಉಪಬಂಧಿಸಿ ಪ್ರತಿಯೊಬ್ಬ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ನಾಗರಿಕರು ಜವಾಬ್ದಾರಿಯಿಂದ ವರ್ತಿಸಲು ಮೂಲ ಕರ್ತವ್ಯಗಳು ಇವೆ. ಗಣರಾಜ್ಯೋತ್ಸವ
ಮಹತ್ತರ ಪ್ರೇರಣಾದಾಯಕ ದಿನ. ನಾವೆಲ್ಲರೂ ನಮಗಾಗಿ ಹೃದಯಪೂರ್ವಕವಾಗಿಯೇ ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ.
ಹಾಗಾಗಿಯೇ ಭಾರತ ಸರ್ವ ಸ್ವತಂತ್ರ, ಸಾರ್ವಭೌಮತೆಯ ದೇಶ ಎಂದು ಬಣ್ಣಿಸಿದರು.

ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷ ಪೂರೈಸುತ್ತಿದೆ. ಈವರೆಗೆ ಅನೇಕ ಜನಪರ ಯೋಜನೆ ರೂಪಿಸಿ ಅತ್ಯಂತ 
ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. 6 ಕೋಟಿಗೂ ಹೆಚ್ಚು ಜನರು ಒಂದಿಲ್ಲೊಂದು ಯೋಜನೆಯ ಪ್ರಯೋಜನ ಪಡೆದಿದ್ದಾರೆ.
ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ,
ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಹೀಗೆ ಎಲ್ಲಾ ವರ್ಗದ ಜನರಿಗೂ ಸರ್ಕಾರ ಸೌಲಭ್ಯ ನೀಡಿದೆ ಎಂದು ತಿಳಿಸಿದರು. ದಾವಣಗೆರೆ ಜಿಲ್ಲೆಯಲ್ಲಿ ದಾಖಲೆರಹಿತ ತಾಂಡ, ಹಾಡಿ, ಗೊಲ್ಲರಹಟ್ಟಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಈವರೆಗೆ 40 ಇಂತಹ ಹಾಡಿ-ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಹೊನ್ನಾಳಿ ತಾಲೂಕಿನ ಭಾಗವಾಗಿದ್ದ ನ್ಯಾಮತಿ ತಾಲೂಕು ಕೇಂದ್ರವಾಗಿದೆ. 2013 ರಿಂದ ಈವರೆಗೆ ಗ್ರಾಮೀಣ ಪ್ರದೇಶದಲ್ಲಿ ಒಟ್ಟು
155.34 ಕಿಲೋ ಮೀಟರ್‌ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. 28 ಸೇತುವೆ ನಿರ್ಮಿಸಲಾಗಿದೆ. ಕೆರೆ ಸಂಜೀವಿನಿ ಯೋಜನೆಯಡಿ
5.14 ಕೋಟಿ ಅನುದಾನದಲ್ಲಿ 59 ಕೆರೆ ಹೂಳೆತ್ತಲಾಗಿದೆ ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ 2013-14 ನೇ ಸಾಲಿನಿಂದ ಈವರೆಗೆ 4,268 ಕೃಷಿ ಹೊಂಡ, 81 ಪಾಲಿಹೌಸ್‌ ನಿರ್ಮಿಸಲಾಗಿದೆ. 39,458 ಹೆಕ್ಟೇರ್‌ನಲ್ಲಿ 27 ಸಾವಿರ ರೈತರು ಸೂಕ್ಷ್ಮ ನೀರಾವರಿ ಕೈಗೊಂಡಿದ್ದಾರೆ. 13 ಸೇವಾ ಕೇಂದ್ರಗಳಲ್ಲಿ 22,714 ಫಲಾನುಭವಿಗಳು ಕೃಷಿಯಂತ್ರಧಾರೆ ಸೇವೆ ಪಡೆದಿದ್ದಾರೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಡಿ 23 ಕೋಟಿ ವೆಚ್ಚದಲ್ಲಿ 7,430 ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. 30 ಕೋಟಿ ವೆಚ್ಚದಲ್ಲಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲಾ 2 ಸಾವಿರ ರೂ. ಮೊತ್ತದ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 1.99 ಕೋಟಿ ವೆಚ್ಚದಲ್ಲಿ 9,800 ಫಲಾನುಭವಿಗಳಿಗೆ ತರಕಾರಿ ಬೀಜಗಳ ಕಿಟ್‌ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕುಂದುವಾಡ ಕೆರೆಯ ಬಳಿ 18 ಕೋಟಿ ವೆಚ್ಚದ ಗಾಜಿನಮನೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಗಾಜಿನಮನೆ ಸುತ್ತ
4.25 ಕೋಟಿ ವೆಚ್ಚದಲ್ಲಿ ಸುಂದರ ಉದ್ಯಾನ ನಿರ್ಮಿಸಲು ಯೂನಿಕ್‌ ಟ್ರೀಸ್‌, ವಿದೇಶಿ ಅಲಂಕಾರಿಕ ಮರಗಳನ್ನು ನೆಡಲು ಕ್ರಮ
ವಹಿಸಲಾಗಿದೆ. ಹಳೆ ಪಿಬಿ ರಸ್ತೆ ವಿಭಜಕದಲ್ಲಿ 1.50 ಕೋಟಿ ವೆಚ್ಚದಲ್ಲಿ ನೆಟ್ಟಿರುವ ವಿದೇಶಿ ಪಾಂಗ್‌ಪಾಂಗ್‌ ಮತ್ತು ಫೈಕಸ್‌
ಮ್ಯಾಕ್ರೋಕಾರ್ಪ್‌ ಗಿಡಗಳು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ ಎಂದು ತಿಳಿಸಿದರು.

Advertisement

ಅನ್ನಭಾಗ್ಯ ಯೋಜನೆಯಡಿ 2013 ರಿಂದ ಈವರೆಗೆ ಜಿಲ್ಲೆಯಲ್ಲಿ 4.15 ಲಕ್ಷ ಕುಟುಂಬ ಪ್ರಯೋಜನ ಪಡೆದಿವೆ. ಗಂಗಾ ಕಲ್ಯಾಣ
ಯೋಜನೆಯಡಿ 1,255 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ. ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ 2013 ರಿಂದ
ಈವರೆಗೆ 1,65,976 ಶೌಚಾಲಯ ನಿರ್ಮಿಸಿ, ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. 17 ಬಹುಗ್ರಾಮ
ಕುಡಿಯುವ ನೀರಿನ ಯೋಜನೆಯಲ್ಲಿ 9 ಪೂರ್ಣಗೊಂಡಿವೆ. 231 ಕೊಳವೆ ಬಾವಿ ನೀರು ಸರಬರಾಜು, 45 ಕಿರುನೀರು ಸರಬರಾಜು
ಯೋಜನೆ ಪೂರ್ಣಗೊಂಡಿದೆ. ಸರ್ಕಾರದ ಪ್ರಯೋಜನ ಪಡೆದು ತೃಪ್ತಿಗೊಂಡ ಜನರು ನೀಡುವ ಉತ್ತೇಜನ ಇನ್ನೂ ಹೆಚ್ಚು ಕೆಲಸಕ್ಕೆ
ಪ್ರೇರಣೆ ನೀಡಲಿದೆ. ಅಭಿವೃದ್ಧಿ ಕಾರ್ಯಗಳ ರಾಜ್ಯದ ಅಭ್ಯುದಯದೊಂದಿಗೆ ದೇಶ ಅಭ್ಯುದಯವಾಗುವುದರಲ್ಲಿ ಯಾವುದೇ
ಸಂಶಯ ಇಲ್ಲ ಎಂದು ತಿಳಿಸಿದರು. ವಿಧಾನ ಪರಿಷತ್‌ ಸದಸ್ಯರಾದ ಕೆ.  ಅಬ್ದುಲ್‌ ಜಬ್ಟಾರ್‌, ಆರ್‌. ರಮೇಶ್‌ಬಾಬು, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮಂಜುಳಾ ಟಿ. ವಿ. ರಾಜು, ಮೇಯರ್‌ ಅನಿತಾಬಾಯಿ, ಡೆಪ್ಯುಟಿ ಮೇಯರ್‌ ನಾಗರತ್ನಮ್ಮ ಇತರರು ಇದ್ದರು. 

ದಾವಣಗೆರೆ ತಹಶೀಲ್ದಾರ್‌ ಜಿ. ಸಂತೋಷ್‌ ಕುಮಾರ್‌ಗೆ 2017-18 ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ನವ ಕರ್ನಾಟಕ ವಿಷನ್‌- 2025 ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಮಂತ್ರಿಗಳ ಸಾಂತ್ವನ ಹರೀಶ್‌ ಯೋಜನೆಯಡಿ ರಸ್ತೆ ಅಪಘಾತದ
ಗಾಯಾಳುಗಳನ್ನು ಮಾನವೀಯ ದೃಷ್ಟಿಯಿಂದ ಆಸ್ಪತ್ರೆಗೆ ಸೇರಿಸಿದವನ್ನು  ಗುರುತಿಸುವ ಜೀವರಕ್ಷಕ ರಾಜ್ಯ ಮಟ್ಟದ
ಪ್ರಶಸ್ತಿಯನ್ನು ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಡಿ. ವಿರೂಪಾಕ್ಷಪ್ಪ ಹಾಗೂ ದಾವಣಗೆರೆಯ ರೇವಣಸಿದ್ದಪ್ಪ ಅವರಿಗೆ ಜಿಲ್ಲಾ ಮಟ್ಟದ ಜೀವರಕ್ಷಕ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಎಸ್‌ಪಿಎಸ್‌ ನಗರದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜೈನ್‌ ಪ್ರೌಢಶಾಲೆ ಹಾಗೂ ಅಮೃತ ವಿದ್ಯಾಲಯ ವಿದ್ಯಾರ್ಥಿಗಳು ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next