Advertisement

ಕಾರ್ಮಿಕ ಸಂಘಟನೆಗಳ ಮುಷ್ಕರ

12:02 PM Mar 29, 2022 | Team Udayavani |

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಾರ್ಮಿಕ ಸಂಘಟನೆಗಳ ಒಕ್ಕೂಟ ರಾಷ್ಟ್ರವ್ಯಾಪಿ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮುಷ್ಕರ ನಡೆಸಲಾಯಿತು.

Advertisement

ಜೆಸಿಟಿಯು ಸಂಚಾಲಕ ಮಹೇಶ ಪತ್ತಾರ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿವೆ. ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸರಕಾರಗಳು ಮುಂದಾಗಬೇಕು. ರೈತರ ಐತಿಹಾಸಿಕ ಹೋರಾಟಕ್ಕೆ ಮಣಿದ ಮೋದಿ ಸರಕಾರ ಕೃಷಿ ಕಾನೂನುಗಳನ್ನು ವಾಪಸ್‌ ಪಡೆದಿದೆ. ಆದರೆ ಅವರದ್ದೇ ಸರಕಾರ ರಾಜ್ಯದಲ್ಲಿ ರೈತ ವಿರೋಧಿ ಎಪಿಎಂಸಿ, ಭೂ ಸುಧಾರಣಾ, ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ ಈ ಕಾನೂನುಗಳನ್ನು ವಾಪಸ್‌ ಪಡೆಯಲಿ. ರಾಜ್ಯ ಸರಕಾರ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಕೂಡದೆಂದು ಒತ್ತಾಯಿಸಿದರು.

ಬೆಲೆ ಏರಿಕೆ ನಿಯಂತ್ರಣ, 26 ಸಾವಿರ ಕನಿಷ್ಟ ವೇತನ ಜಾರಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಸಾರ್ವಜನಿಕ ವಲಯದ ಖಾಸಗೀಕರಣ ತಡೆಯುವುದು ಸೇರಿದಂತೆ 12 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರತಿಭಟನೆ ನಡೆಸಿತು.

ಸರಕಾರ ನಮ್ಮ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸದಿದ್ದರೆ ರೈತ ಕಾರ್ಮಿಕರ ಐಕ್ಯತೆಯ ಬೃಹತ್‌ ಹೋರಾಟಗಳು ದೇಶದಲ್ಲಿ ರೂಪಗೊಳ್ಳಲಿವೆ ಎಂದು ಎಚ್ಚರಿಸಿದರು. ಕಾರ್ಮಿಕ ಮುಖಂಡರಾದ ಸ್ಟಿಫನ್‌ ಜಯಚಂದ್ರ, ದೇವಾನಂದ ಜಗಾಪುರ, ಅಶೋಕ ಬಾರ್ಕಿ, ವಿ.ಕೆ. ಬನ್ನಿಗೋಳ, ಗುರುಸಿದ್ದಪ್ಪ ಅಂಬಿಗೇರ, ಎ.ಎಸ್‌.ಪೀರಜಾದೆ, ರೈತ ಮುಖಂಡ ಬಿ.ಎಸ್‌.ಸೊಪ್ಪಿನ ಮಾತನಾಡಿದರು. ಇಲ್ಲಿನ ಬಸವವನದಿಂದ ಮೆರವಣಿಗೆ ಆರಂಭವಾಯಿತು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.

ನಂತರ ತಹಶೀಲ್ದಾರ್‌ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಅಮೃತ ಇಜಾರಿ, ಬಾಬಾಜಾನ ಮುಧೋಳ, ಶಿವಗಂಗಾ ಹೆಬ್ಬಳ್ಳಿ, ರವೀಂದ್ರ ಪತ್ತಾರ, ಆನಂದ ಬಡಿಗೇರ, ಎಂ.ಎಚ್‌. ಮುಲ್ಲಾ, ಬಸೀರ ಮುಧೋಳ, ಹುಲಿಗೆಮ್ಮ ಚಲವಾದಿ, ಅನ್ನಪೂರ್ಣ ಕುಂಕುರಮಠ, ಬಸಣ್ಣ ನೀರಲಗಿ, ಚಿದಾನಂದ ಸವದತ್ತಿ, ದುರ್ಗಪ್ಪ ಪೂಜಾರಿ, ರಮೇಶ ಭೂಸ್ಲೆ, ಪುಂಡಲೀಕ ಬಡಿಗೇರ, ಪ್ರವೀಣ ಶಿಂಪೇರ, ದಾನಮ್ಮ ಕುಸ್ತಿ ಸೇರಿದಂತೆ ಹಮಾಲಿ, ಕಟ್ಟಡ, ಸ್ಕೀಂ ನೌಕರರು, ಬೀದಿಬದಿ ವ್ಯಾಪಾರಸ್ಥರು, ಅಟೋರಿಕ್ಷಾ ಚಾಲಕರು, ವಿವಿಧ ಫ್ಯಾಕ್ಟರಿ ಕಾರ್ಮಿಕರು, ಬ್ಯಾಂಕ್‌, ವಿಮಾ ನೌಕರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next