Advertisement

ಕೋವಿಡ್‌ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ: ಹರೀಶ್‌ ಪೂಂಜ

10:36 PM Sep 30, 2020 | mahesh |

ಬೆಳ್ತಂಗಡಿ: ಕೋವಿಡ್‌ ಪ್ರಕರಣ ವ್ಯಾಪಕವಾಗಿ ಹರಡುತ್ತಿರುವುದರಿಂದ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಅನಿವಾರ್ಯವಾಗಿದೆ. ಸರಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ 48 ಗ್ರಾ.ಪಂ. ಹಾಗೂ 1 ನ.ಪಂ. ವ್ಯಾಪ್ತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಶಾಸಕ ಹರೀಶ್‌ ಪೂಂಜ ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕಿನಲ್ಲಿ ಕೋವಿಡ್‌ ರೋಗದ ಪರಿಶೀಲನೆ ಹಾಗೂ ನಿಯಂತ್ರಣದ ಬಗ್ಗೆ ಬೆಳ್ತಂಗಡಿ ತಾ.ಪಂ. ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜತೆ ಕರೆದ ಸಭೆಯಲ್ಲಿ ಮಾತನಾಡಿದರು. ಮಾರ್ಚ್‌ನಿಂದ ಈವರೆಗೆ ಕೊರೊನಾ ತಡೆಗಟ್ಟುವಲ್ಲಿ ಜೀವದ ಹಂಗುತೊರೆದು ಕರ್ತವ್ಯನಿರ್ವಹಿಸಿದ ಕೊರೊನಾ ವಾರಿಯರ್ಸ್‌ಗಳ ಶ್ರಮವನ್ನು ಶಾಸಕರು ಅಭಿನಂದಿಸಿದರು. ಈಗಾಗಲೇ ಶ್ರೀ ಕ್ಷೇ.ಧ.ಹಳೇ ಟಿ.ಬಿ. ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸುವ ಮೂಲಕ ರಾಜ್ಯದಲ್ಲೇ ಮಾದರಿ ಕಾರ್ಯ ತಾಲೂಕಿನಿಂದಾಗಿದೆ. ಈವರೆಗೆ 155 ಜನ ರೋಗ ಲಕ್ಷಣ ರಹಿತ ಕೋವಿಡ್‌ ಪಾಸಿಟಿವ್‌ ವ್ಯಕ್ತಿಗಳು ದಾಖಲಾಗಿದ್ದಾರೆ. ಈ ಪೈಕಿ 144 ಮಂದಿ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದ 67 ಮಂದಿ ಸೋಂಕಿತರು ಗುಣಮುಖರಾಗಿ ತೆರಳಿದ್ದಾರೆ ಎಂದು ತಿಳಿಸಿದರು.

ಪುತ್ತೂರು ಸಹಾಯಕ ಕಮಿಷನರ್‌ ಡಾ|ಯತೀಶ್‌ ಉಳ್ಳಾಲ್‌ ಮಾತನಾಡಿ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದಲ್ಲಿ ಕಾರ್ಯಾಚರಣೆ ಕೈಗೊಂಡು ದಂಡ ವಿಧಿಸಲಾಗುವುದು. ಕೋವಿಡ್‌ ನಿಯಂತ್ರಣ ಕ್ರಮ, ಕೋವಿಡ್‌ ಪರೀಕ್ಷೆ ನಡೆಸುವ ಉದ್ದೇಶ ಕುರಿತು ಜಿಲ್ಲಾಧಿಕಾರಿ ಸೂಚನೆಯಂತೆ ಈಗಾಗಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿ ಮೂಲಕ ಕರಪತ್ರ ಹಂಚುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

ತಾಲೂಕುವಾರು ಕೋವಿಡ್‌ ಪರೀಕ್ಷೆಗೆ ನಿರ್ದಿಷ್ಟ ಗುರಿ ಹೊಂದಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ವ್ಯವಹಾರ ಕೇಂದ್ರಗಳಲ್ಲಿ, ಸಾರ್ವಜನಿಕವಾಗಿ ಮಾಸ್ಕ್ ಧರಿಸದಿದ್ದಲ್ಲಿ ಪೊಲೀಸ್‌ ಸಹಕಾರದೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ದಂಡ ವಿಧಿಸುವ ಕ್ರಮ ಅ.1ರಿಂದಲೇ ಕಾರ್ಯಗತಗೊಳ್ಳಲಿದೆ ಎಂದು ಅವರು ತಿಳಿಸಿದರು.

ತಾಲೂಕಿನಲ್ಲಿ 1,539 ಸೋಂಕಿತರು ಪತ್ತೆ
ತಾಲೂಕು ಆರೋಗ್ಯಧಿಕಾರಿ ಡಾ| ಕಲಾಮಧು ಮಾಹಿತಿ ನೀಡಿ, ಮಾರ್ಚ್‌ ಅವಧಿಯಿಂದ ಈವರೆಗೆ 8,000 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಕೈಗೊಂಡಿದ್ದು, 3,000 ಮಂದಿಯ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ 1,539 ಮಂದಿಗೆ ಕೋವಿಡ್‌ ಸೋಂಕಿತ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯತ್‌ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆ ಆರಂಭಗೊಂಡಿದ್ದು, ಪ್ರತಿದಿನ 557 ಪರೀûಾ ಗುರಿ ಹೊಂದಲಾಗಿದೆ. ಸೆ. 28ರಂದು 450, ಸೆ. 29ರಂದು 350 ಪರೀಕ್ಷೆ ನಡೆಸಲಾಗಿದೆ ಎಂದರು.

Advertisement

ಜಿಲ್ಲಾ ಪಂ. ಸದಸ್ಯ ಧರಣೇಂದ್ರ ಕುಮಾರ್‌ ಮಾತನಾಡಿ, ಹೊಸಂಗಡಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿವಾಹದಲ್ಲಿ ನಿಯಮಬಾಹಿರವಾಗಿ 500 ಮಂದಿ ಸೇರಿದ್ದರು. ಪರಿಣಾಮ ಈ ಭಾಗದಲ್ಲಿ ಸೋಂಕಿತ ಪ್ರಕರಣ ಅಧಿಕವಾಗುತ್ತಿದೆ. ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾನೂನು ಪಾಲಿಸದಿದ್ದಲ್ಲಿ ದೂರು ದಾಖಲಿಸಬೇಕು ಎಂದರು.

ಇದಕ್ಕೆ ಪೂರಕವಾಗಿ ತಾಲೂಕು ಪಂಚಾಯತ್‌ ಸದಸ್ಯ ಸುಧಾಕರ್‌ ಬಿ.ಎಲ್‌. ಮಾತನಾಡಿ, ಕೊರೊನಾ ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ಗೊಳಪಡಿಸಬೇಕು. ಪಾಸಿಟಿವ್‌ ಬಂದ ವ್ಯಕ್ತಿಗಳು ಎಲ್ಲೆಂದರಲ್ಲೆ ಸುತ್ತಾಡುತ್ತಿರುವುದು ಕೋವಿಡ್‌ ಪ್ರಕರಣ ಹೆಚ್ಚಾಗಲು ಕಾರಣವಾಗುತ್ತಿದೆ. ಕಾನೂನು ಕ್ರಮದಿಂದಷ್ಟೆ ನಿಯಂತ್ರಣ ಸಾಧ್ಯ ಎಂದರು.

ಪೊಲೀಸ್‌ ಇಲಾಖೆಯಿಂದಲೇ ಕಾರ್ಯಾ ಚರಣೆ
ಇಂತಹ ಪ್ರಕರಣ ಕಂಡುಬಂದಲ್ಲಿ ಪೊಲೀಸ್‌ ಇಲಾಖೆ ವ್ಯಾಪ್ತಿಯಡಿ ವಿಧಿಸಬಹುದಾದ ಕ್ರಮದ ಕುರಿತು ಪೊಲೀಸ್‌ ವೃತ್ತನಿರೀಕ್ಷಕರ ಬಳಿ ಶಾಸಕರು ಚರ್ಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ., ಮೂರು ದಿನಗಳಿಂದ ದಂಡ ವಿಧಿಸಲು ಇಲಾಖೆಗೆ ಆದೇಶ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ 169, 170 ಕಾಯ್ದೆಯಡಿ ಪ್ರಕರಣ ದಾಖಲಿಸಲು ಅವಕಾಶವಿದೆ. ಈಗಾಗಲೇ ಮಾಸ್ಕ್ ಧರಿಸದಿದ್ದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದರು.

ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಯಿತು. ಪ್ರಗತಿ ವರದಿ ಸಹಿತ ಎಲ್ಲ ಇಲಾಖೆಗಳು ಕೋವಿಡ್‌ ಸಂದರ್ಭ ಕೈಗೊಂಡ ಕ್ರಮದ ಕುರಿತು ಸಭೆಗೆ ವಿವರಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯರಾದ ಕೊರಗಪ್ಪ ನಾಯ್ಕ, ಶೇಖರ್‌ ಕುಕ್ಕೇಡಿ, ತಾಲೂಕು ಪಂಚಾಯತ್‌ ಸದಸ್ಯರಾದ ಕೊರಗಪ್ಪ ಗೌಡ, ಜಯಶೀಲ, ಜಿಲ್ಲಾ ಪಂಚಾಯತ್‌ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ತಾಲೂಕು ಪಂಚಾಯತ್‌ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ತಹಶೀಲ್ದಾರ್‌ ಮಹೇಶ್‌ ಜೆ., ತಾಲೂಕು ಪಂಚಾಯತ್‌ ಕಾರ್ಯ ನಿರ್ವಹನಧಿಕಾರಿ ಕುಸುಮಾಧರ್‌ ಕೆ. ಮೊದಲಾದವರು ಉಪಸ್ಥಿತರಿದ್ದರು.

ಸಭೆ ಸಮಾರಂಭಕ್ಕೆ ನಿಯಂತ್ರಣ
ಸಭೆ ಸಮಾರಂಭಗಳಿಗೆ, ವಿವಾಹ, ಶುಭಕಾರ್ಯಗಳಿಗೆ, ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ನಿಯಮಿತ ಜನಕ್ಕಷ್ಟೆ ಅವಕಾಶ ಕಲ್ಪಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಹಿರಿಯ ನಾಗರಿಕರು, ಬಾಣಂತಿಯರು, ಅಂಗವಿಕಲರ ಪರೀಕ್ಷೆ ಕಡ್ಡಾಯ. ಗ್ರಾ.ಪಂ. ಮಟ್ಟದಲ್ಲಿ ಜಾಗೃತಿ ಅಭಿಯಾನದೊಂದಿಗೆ ದಂಡ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ.
-ಹರೀಶ್‌ ಪೂಂಜ,ಶಾಸಕರು

ಅಭಿಯಾನ ಬಳಿಕ ದಂಡ
ಆರಂಭದಲ್ಲಿ ಅಧಿಕಾರಿಗಳು ಅಭಿಯಾನದ ರೂಪದಲ್ಲಿ ಗ್ರಾಮ ಮಟ್ಟದಲ್ಲಿ ಎಚ್ಚರಿಕೆ ನೀಡಬೇಕು. ಬಳಿಕ ಸ್ಥಳೀಯ ಬೀಟ್‌ ಪೊಲೀಸರ ಸಹಾಯದಿಂದ ಕಾರ್ಯಕ್ರಮಗಳಿಗೆ ತೆರಳಿ ದಂಡ ವಿಧಿಸುವ ಪ್ರಕ್ರಿಯೆ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next