Advertisement

ನಕ್ಸಲೀಯರ ವಿರುದ್ಧ ಕಠಿನ ಕ್ರಮ ಅತ್ಯಗತ್ಯ

12:09 AM Apr 27, 2023 | Team Udayavani |

ಕೇಂದ್ರ ಸರಕಾರ ಹಳೆಯ 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಅನಂತರ ಮತ್ತು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಕ್ಷರಶಃ ಅನುಸರಿಸಲಾರಂಭಿಸಿದ ಬಳಿಕ ದೇಶದಲ್ಲಿ ನಕ್ಸಲ್‌ವಾದ ಕ್ಷೀಣಿಸತೊಡಗಿದೆ. ಇದರ ಹೊರತಾಗಿಯೂ ಛತ್ತೀಸ್‌ಗಢ, ಝಾರ್ಖಂಡ್‌, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರದ ಕೆಲವೆಡೆ ಅದರಲ್ಲೂ ಮುಖ್ಯವಾಗಿ ಈ ರಾಜ್ಯಗಳ ಅರಣ್ಯ ಪ್ರದೇಶಗಳ ತಪ್ಪಲಿನಲ್ಲಿರುವ ಗ್ರಾಮಗಳಲ್ಲಿ ನಕ್ಸಲೀಯರು ಸದ್ದಿಲ್ಲದೆ ತಮ್ಮ ತೀವ್ರಗಾಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಪೊಲೀಸರು ಮತ್ತು ರಕ್ಷಣ ಪಡೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ನಕ್ಸಲೀಯರು ನಡೆಸುತ್ತಲೇ ಬಂದಿದ್ದಾರೆ. ನಕ್ಸಲೀಯರ ಇಂತಹ ಕುಕೃತ್ಯಕ್ಕೆ ಸಾಕ್ಷಿ ಬುಧವಾರ ಛತ್ತೀಸ್‌ಗಢದ ದಂತೇವಾಡದಲ್ಲಿ ನಕ್ಸಲೀಯರು ಪೊಲೀಸರನ್ನು ಗುರಿಯಾಗಿಸಿ ನಡೆಸಿದ ದಾಳಿ. ನಕ್ಸಲೀಯರು ದಂತೇವಾಡದ ಅರಣು³ರ ಪ್ರದೇಶದಲ್ಲಿ ನಡೆಸಿದ ಈ ಮಾರಕ ದಾಳಿಗೆ ರಾಜ್ಯ ಪೊಲೀಸ್‌ನ ಜಿಲ್ಲಾ ಮೀಸಲು ಕಾವಲು ಪಡೆ(ಡಿಆರ್‌ಜಿ)ಯ 10 ಸಿಬಂದಿ ಹುತಾತ್ಮರಾದರೆ, ಇವರು ಪ್ರಯಾಣಿಸುತ್ತಿದ್ದ ಸ್ಥಳೀಯ ಮಿನಿ ಗೂಡ್ಸ್‌ ವ್ಯಾನ್‌ನ ಚಾಲಕ ಸಾವನ್ನಪ್ಪಿದ್ದಾರೆ.

Advertisement

ಸರಕಾರ ಪೊಲೀಸ್‌ ಇಲಾಖೆಯ ಡಿಆರ್‌ಜಿಯ ತಂಡವೊಂದು ಬುಧವಾರ ದಂತೇವಾಡದ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ, ಸ್ಥಳೀಯ ಗೂಡ್ಸ್‌ ವಾಹನವೊಂದರಲ್ಲಿ ವಾಪಸಾಗುತ್ತಿದ್ದ ವೇಳೆ ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸಿ ನಕ್ಸಲೀಯರು ಈ ಕೃತ್ಯ ಎಸಗಿದ್ದಾರೆ. ನಕ್ಸಲರು ಪೂರ್ವನಿಯೋಜಿತವಾಗಿಯೇ ಈ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಕಳೆದೆರಡು ವರ್ಷಗಳಲ್ಲಿ ನಕ್ಸಲೀಯರು ನಡೆಸಿದ ಅತ್ಯಂತ ಮಾರಕ ದಾಳಿ ಇದಾಗಿದೆ. ಡಿಆರ್‌ಜಿಗೆ ಸ್ಥಳೀಯ ಬುಡಕಟ್ಟು ಮತ್ತು ಆದಿವಾಸಿ ಜನರನ್ನೇ ನೇಮಿಸಿಕೊಳ್ಳುತ್ತಿದೆ. ಅರಣ್ಯ ಪ್ರದೇಶಗಳು ಮತ್ತು ನಕ್ಸಲೀಯರ ಚಲನವಲನಗಳ ಬಗೆಗೆ ಸ್ಥಳೀಯರಿಗೆ ಹೆಚ್ಚಿನ ಮಾಹಿತಿಗಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಡಿಆರ್‌ಜಿಗೆ ಇವರನ್ನೇ ನೇಮಿಸಿಕೊಂಡು ಸೂಕ್ತ ತರಬೇತಿಯನ್ನು ನೀಡುತ್ತಿದೆ. ಇದೇ ಹಿನ್ನೆಲೆಯಲ್ಲಿ ನಕ್ಸಲೀಯರು ಡಿಆರ್‌ಜಿ ಸಿಬಂದಿಯನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ.

ನಕ್ಸಲರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರ ತೀವ್ರ ತೆರನಾದ ಕಾರ್ಯಾಚರಣೆ ಆರಂಭಿಸಿದ ಬಳಿಕ ನಕ್ಸಲೀಯರು ತಮ್ಮ ದಾಳಿಯ ಕಾರ್ಯತಂತ್ರವನ್ನು ಬದಲಾಯಿಸಿದ್ದರು. ಈ ಹಿಂದೆ ಪೊಲೀಸರು ಮತ್ತು ರಕ್ಷಣ ಪಡೆಗಳ ದೊಡ್ಡ ಗುಂಪುಗಳನ್ನು ನಕ್ಸಲೀಯರು ಗುರಿಯಾಗಿಸುತ್ತಿದ್ದರೆ ಈಗ ಸಣ್ಣ ಗುಂಪುಗಳನ್ನು ತಮ್ಮ ಗುರಿಯಾಗಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಈಗ ನಕ್ಸಲೀಯರು ಈ ಹಿಂದಿನ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬದಲಾಗಿ ಐಇಡಿ ಯಂತಹ ಸ್ಫೋಟಕ ಸಾಧನಗಳನ್ನು ದಾಳಿಗೆ ಬಳಸಿಕೊಳ್ಳತೊಡಗಿದ್ದಾರೆ. ಒಟ್ಟಾರೆ ದೇಶದಲ್ಲಿ ನಕ್ಸಲ್‌ ಚಟುವಟಿಕೆ ಕ್ಷೀಣವಾಗಿದ್ದರೂ ಅಲ್ಲೊಮ್ಮೆ ಇಲ್ಲೊಮ್ಮೆ ಎಂಬಂತೆ ನಕ್ಸಲೀಯರು ದಾಳಿ ನಡೆಸುವ ಮೂಲಕ ಸರಕಾರದ ವಿರುದ್ಧದ ತಮ್ಮ ಹೋರಾಟ ನಿಂತಿಲ್ಲ ಎಂದು ತೋರ್ಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ನಕ್ಸಲೀಯರನ್ನು ಮಟ್ಟ ಹಾಕಲು ಕೇಂದ್ರ ಮತ್ತು ರಾಜ್ಯ ಸರಕಾರ ಪಣತೊಟ್ಟು ಕಾರ್ಯಾಚರಣೆ ನಡೆಸುತ್ತಿದ್ದರೂ ನಕ್ಸಲೀಯರು ಇಂಥ ದಾಳಿಗಳ ಮೂಲಕ ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಸಡ್ಡು ಹೊಡೆಯುತ್ತಿರುವುದು ಒಂದಿಷ್ಟು ಆತಂಕ ಮೂಡಿಸಿದೆ. ವಿದೇಶಗಳ ಉಗ್ರಗಾಮಿ ಸಂಘಟನೆಗಳು ದೇಶದೊಳಗಿನ ತೀವ್ರಗಾಮಿ ಸಂಘಟನೆಗಳನ್ನು ಬಳಸಿಕೊಂಡು ದೇಶದಲ್ಲಿ ಹಿಂಸಾಚಾರ, ಭಯೋ ತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಬಗೆಗೆ ಈಗಾಗಲೇ ತನಿಖಾ ಸಂಸ್ಥೆಗಳಿಗೆ ಸಾಕಷ್ಟು ಮಾಹಿತಿ, ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಇದನ್ನು ಆಧಾರವಾಗಿಸಿ ಆಳ ವಾಗಿ ತನಿಖೆ ನಡೆಸಿದ್ದೇ ಆದಲ್ಲಿ ದೇಶದಲ್ಲಿ ನಕ್ಸಲ್‌ ಹೋರಾಟವನ್ನು ಜೀವಂತ ವಾಗಿಡುವ ಪ್ರಯತ್ನದಲ್ಲಿ ಶಾಮೀಲಾಗಿರುವವರನ್ನು ಪತ್ತೆಹಚ್ಚಲು ಸಾಧ್ಯ. ನಕ್ಸಲ್‌ ನಿಗ್ರಹ ಕಾರ್ಯಾಚರಣೆಯ ಜತೆಯಲ್ಲಿ ದೇಶದಲ್ಲಿ ಹಿಂಸಾತ್ಮಕ ಹೋರಾಟ, ಭಯೋತ್ಪಾದನ ಕೃತ್ಯಗಳಿಗೆ ಪರೋಕ್ಷವಾಗಿ ನೆರವಾಗುತ್ತಿರುವವರ ವಿರುದ್ಧ ಕಠಿನ ಕ್ರಮ ಕೈಗೊಂಡದ್ದೇ ಆದಲ್ಲಿ ನಕ್ಸಲರ ಮೂಲೋತ್ಪಾಟನೆ ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next