Advertisement

150 ಸೀಟು ಗೆಲ್ಲಲು ಸ್ಟ್ರಾಟಜಿ ಮಾಡಿದ್ದೇವೆ: ಸಿಎಂ

08:30 AM Aug 14, 2017 | |

ಕಲಬುರಗಿ: ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲಲು ಸ್ಟ್ರಾಟಜಿ ಮಾಡಿದ್ದೇವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಏನೇ ತಂತ್ರಗಳನ್ನು ಮಾಡಿದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ. ಅಲ್ಲದೆ, 50 ಸೀಟು ಗೆಲ್ಲುವುದು ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ಆಳಂದದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶಾಸಕ ಬಿ.ಆರ್‌.ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಈ ರಾಜ್ಯದ ಬಡವರು, ದಲಿತರು, ಶೋಷಿತರು ಮತ್ತು ರೈತರು ರಾತ್ರಿ ಉಪವಾಸ ಮಲಗಬಾರದು ಅಂತ ಅಕ್ಕಿ ಭಾಗ್ಯ ನೀಡಿಲ್ಲವೇ? ಬಿಜೆಪಿಯವರೇನು ಕೊಟ್ಟಿದ್ದಾರೆ? ಜಾತಿ -ಧರ್ಮದ ಹೆಸರಿನಲ್ಲಿ ಒಡೆದು ಹಾಕುತ್ತಿದ್ದಾರಲ್ಲ… ಅವರಿಗೆ ಜನರೇಕೆ ಮತ ಹಾಕ್ತಾರೆ ಎಂದು ಪ್ರಶ್ನಿಸಿದರು. 

ಬೆಂಗಳೂರಲ್ಲೇ ಠಿಕಾಣಿ ಹೂಡಲಿ: 
ಅಮಿತಾ ಶಾ ಆದ್ರು.. ಬೆಂಗಳೂರಿಗೆ ಬರಲಿ.. ಪ್ರಧಾನಿ ಮೋದಿನೇ ಬಂದು ಠಿಕಾಣಿ ಹೂಡಲಿ. ನಮಗೇನೂ ತೊಂದರೆ ಇಲ್ಲ. ಇವರಿಗೆ ಅಂಜುವ ಅಗತ್ಯವೂ ಇಲ್ಲ. ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅವಧಿಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ ಎಂದರು. 

ಡಿಕೆಶಿ ವಿರುದ್ಧ ಸೇಡಿನ ಕ್ರಮ: “ಸಚಿವ ಡಿ.ಕೆ. ಶಿವಕುಮಾರ ಮನೆ ಮೇಲೆ ಐಟಿ ದಾಳಿ ಮಾಡಿರುವುದು ಸೇಡಿನ ಕ್ರಮ. ಬಿಜೆಪಿಯಲ್ಲಿ ಎಷ್ಟು ಜನರಿಲ್ಲ ಹೇಳಿ? ಅವರ ಮನೆಯ ಮೇಲೇಕೆ ದಾಳಿ ನಡೆದಿಲ್ಲ? ಡಿಕೆಶಿ ಅವರನ್ನು ಗುರಿಯಾಗಿಸಿಕೊಂಡು ರಾಜಕೀಯ ಪ್ರೇರಿತ ದಾಳಿ ಮಾಡುವುದು ಸರಿಯಲ್ಲ. ಎಸಿಬಿ ಮತ್ತು ಲೋಕಾಯುಕ್ತಕ್ಕೆ ನಾನು ಯಾವುದೇ ಸೂಚನೆ ನೀಡಿಲ್ಲ. ಅದು ನನ್ನ ಜಾಯಮಾನವಲ್ಲ. ಎರಡೂ ಇಲಾಖೆಗಳು ತಮ್ಮ ಕೆಲಸ ತಾವು ಮಾಡುತ್ತವೆ’ ಎಂದರು.

ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಟಾಳಕರ್‌, ಗೋವಿಂದರಾಜು, ಶಾಮನೂರು ಶಿವಶಂಕರಪ್ಪ, ನಾಗರಾಜ್‌ ಮುಂತಾದವರನ್ನು ಗುರಿಯಾಗಿಸಿಕೊಂಡು ಐಟಿ ದಾಳಿಗೆ ಸಂಚು ಮಾಡಲಾಗುತ್ತಿದೆ. ಆದರೆ, ಬಿಜೆಪಿಯಲ್ಲಿದ್ದವರೆಲ್ಲ ಸತ್ಯ ಹರಿಶ್ಚಂದ್ರರೇ? ಅವರಲ್ಲೂ ಭ್ರಷ್ಟರಿಲ್ಲವೇ? ಜೈಲಿಗೆ ಹೋಗಿ ಬಂದಿಲ್ಲವೇ? ನಿಜಕ್ಕೂ ಅಮಿತ್‌ ಶಾಗೆ ನೈತಿಕತೆ ಮತ್ತು ಎದೆಗಾರಿಕೆ ಇದ್ದರೆ ಭ್ರಷ್ಟರನ್ನು ಬಿಟ್ಟು ರಾಜ್ಯದಲ್ಲಿ ಓಡಾಡಲಿ ಎಂದರು.

Advertisement

ಕಾಂಗ್ರೆಸ್‌ ಭವಿಷ್ಯ ಮೋದಿ ಕೈಯಲ್ಲಿಲ್ಲ: ಖರ್ಗೆ
ಕಲಬುರಗಿ: ಕರ್ನಾಟಕ ಮತ್ತು ಕಾಂಗ್ರೆಸ್‌ ಭವಿಷ್ಯ ಜನರ ಕೈಯಲ್ಲಿದೆ. ಪ್ರಧಾನಿ ಮೋದಿ ಮತ್ತು ತಂತ್ರಗಾರ ಅಮಿತ್‌ ಶಾ ಕೈಯಲ್ಲಿಲ್ಲ. ನಾವು ಜನರ ಆರಾಧಕರು. ಮೋದಿ, ಶಾ ಅವರು ಆರೆಸ್ಸೆಸ್‌ ಪ್ರಚಾರಕರು ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಆಳಂದ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಶಾಸಕ ಬಿ.ಆರ್‌.ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಂಸತ್‌ನಲ್ಲಿ ಮೋದಿ ಹೇಳ್ತಾರೆ, ಗುಜರಾತಿಗಳಾದ ನಮ್ಮ ಇಡೀ ಶರೀರ ವ್ಯಾಪಾರದ ಮನೋಭಾವದಲ್ಲಿದೆ ಎಂದು. ಇಂತಹ ವ್ಯಾಪಾರಿಯಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? ಅದಕ್ಕಾಗಿ ಅವರಿಗೆ ರೈತರ ಸಾಲಕ್ಕಿಂತ ವ್ಯಾಪಾರಿಗಳ ಸಾಲ ಮನ್ನಾ ಮಾಡುವುದರಲ್ಲೇ ಖುಷಿ’ ಎಂದು ತರಾಟೆಗೆ ತೆಗೆದುಕೊಂಡರು. ಲೋಕಸಭೆಯಲ್ಲಿ ಸಚಿವ ಅರುಣ್‌ ಜೇಟ್ಲಿ ಅವರು ರೈತರ ಸಾಲವಲ್ಲ, ಯಾವುದೇ ಸಾಲ ಮನ್ನಾ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದರು. ಆದರೆ, ಮೋದಿ ಅವರು ಕಾರ್ಪೋರೇಟ್‌ ವಲಯದ ದೊಡ್ಡ ಬಂಡವಾಳದಾರರ 6 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದ್ದಾರೆ. ಹಾಗಿದ್ದರೆ ಇವರಿಗೆ ಯಾರ ಮೇಲೆ ಜಾಸ್ತಿ ಪ್ರೀತಿ ಇದೆ ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು. ಬಿಜೆಪಿ ರಾಜ್ಯದಲ್ಲಿ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿತು. ಆ ಮೂವರು ಜನರಿಗೆ ಮೂರು ನಾಮ ಹಾಕಿ ಹೋಗಿದ್ದಾರೆ. ಬಿಜೆಪಿಯದು ಊಪರ್‌ ಶೇರವಾನಿ, ಅಂದರ್‌ ಪರೇಶಾನಿ ಎನ್ನುವ ಧೋರಣೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next