Advertisement

ಕೈಗಳಿಲ್ಲದ ಯುವಕನಿಗೆ ಇಂದು ಕಲೆಯೇ ಎಲ್ಲಾ! ನೀವು ಬಲ್ಲಿರಾ ಖತ್ರಿಯ ಕಥೆ?

08:58 PM Sep 16, 2020 | Suhan S |

ಬದುಕು ಅನಿರೀಕ್ಷಿತ ಆಘಾತ,ಆನಂದಗಳ ನಿಲ್ದಾಣ.! ನಿರೀಕ್ಷೆಯಿಂದ ಯಾವುದು ಆಗಬೇಕು ಎನ್ನುತ್ತೇವೋ ಅದು ನಿರೀಕ್ಷಿತ ವೇಳೆಯಲ್ಲಿ ಆಗದು. ಸಂತೋಷ,ಸಂಕಷ್ಟ ಅನಿರೀಕ್ಷಿತವಾಗಿ ಆದರೂ ಅದನ್ನು ನಾವುಸುಲಭವಾಗಿ ಭ್ರಮಿಸಿಕೊಂಡು ಅನುಭವಿಸಲು ಕಷ್ಟ ಪಡುತ್ತೇವೆ.

Advertisement

ಅನಿರೀಕ್ಷಿತವಾಗಿ ಎದುರಾದ ಆಘಾತದಿಂದ ಪಾತಾಳಕ್ಕೆ ಬಿದ್ದ ಬದುಕನ್ನು ಸರಿದಾರಿಗೆ ತಂದು ಸಾಧಕನಾಗಿ ಬೆಳೆದು ಮಾದರಿಯಾಗಿರುವ ಯುವಕನೊಬ್ಬನ ಕಥೆಯಿದು.

ಧವಳ್ ಖತ್ರಿ.ಗುಜರಾತಿನ ಅಹಮದಾಬಾದ್ ನಿವಾಸಿ. ಎರಡು ಹೊತ್ತಿನ ಊಟ,ದಿನವಿಡೀ ಕೇಳುವ ಪಾಠ,ಸಂಜೆಯ ಬಳಿಕ ಸ್ನೇಹಿತರೊಟ್ಟಿಗಿನ ಆಟ. ಸಹಜವಾಗಿ, ಸಾಮಾನ್ಯನ ಬದುಕು ಹೇಗೆ ಇರುತ್ತದೋ ಹಾಗೆಯೇ ಧವಳ್ ದಿನಚರಿ ಸಾಗುತ್ತಾ ಇತ್ತು.ಅದೊಂದು ಘಟನೆ ನಡೆದು ಹೀಗೆಲ್ಲಾ ಬದಲಾಗುತ್ತದೆ, ಬದುಕು ಭರವಸೆ ಕಳೆದ ಕತ್ತಲಾಗುತ್ತದೆ ಎಂದು ಧವಳ್ ಕನಸು ನನಸಾಲೂ ಅಂದುಕೊಂಡು ಇರಲಿಲ್ಲ.

ಸಂತೋಷದಲ್ಲಿದ್ದಾಗ ಸಂಕಷ್ಟ ತಂದ ಆಟ :  ಅದು ಹಬ್ಬದ ಸಮಯ. ಎಲ್ಲ ಮಕ್ಕಳಂತೆ ಧವಳ್ ಮತ್ತು ಅವನ ಸ್ನೇಹಿತರು ಮನೆಯ ಮಹಡಿಯ ಮೇಲೆ ಗಾಳಿಪಟವನ್ನು ಹಾರಿಸುತ್ತಾ ಖುಷಿ ಖುಷಿಯಾಗಿಯೇ ಇದ್ದರು. ಅದೇ ಸಮಯದಲ್ಲಿ ಖುಷಿಯ ನಡುವೆ ಅಕ್ಕ ಪಕ್ಕದ ಆಗು ಹೋಗನ್ನು ಮರೆತ ಧವಳ್, ಗಾಳಿ ಪಟ ಹಾರಿಸುವಾಗ ಅನಿರೀಕ್ಷಿತವಾಗಿ ಹೈಟೆನ್ಚನ್ ಎಲೆಕ್ಟ್ರಾಕ್ ವೈಯರ್ ಮೇಲೆ ಕೈ ಇಡುತ್ತಾರೆ. ಅಷ್ಟೇ! ಮುಂದೆ ಧವಳ್ ಸಾವು ಬದುಕಿನ ಆಟದಲ್ಲಿ ಅಭ್ಯರ್ಥಿಯಾಗಿ ಆಸ್ಪತ್ರೆಯ ಬೆಡ್ ನಲ್ಲಿ ಮಲಗಿರುತ್ತಾರೆ.!

ಧವಳ್ ಹೈಟೆನ್ಷನ್ ವೈಯರ್ ಸ್ಪರ್ಶದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಡಿಯ ಮೇಲಿಂದ ಕೆಳಗೆ ಕುಸಿದು ಬೀಳುತ್ತಾರೆ. ತನಗೆ ಏನಾಗಿದೆ ಎನ್ನುವುದರ ಪರಿವೇ ಇಲ್ಲದ ಹಾಗೆ ಬಿದ್ದ ಧವಳ್ ರನ್ನು ಆ ಕೂಡಲೇ ಆಸ್ಪತ್ರೆಗೆ ಕೊಂಡ್ಯೊಲಾಗುತ್ತದೆ. ಆಸ್ಪತ್ರೆಯಿಂದ ಧವಳ್ ಬದುಕಿ ಬರುತ್ತಾರೆ. ಆದರೆ ಬದುಕಿನ ಭರವಸೆಯನ್ನು ಸಂಪೂರ್ಣ ಕಸಿದುಕೊಂಡು. ಏಕೆಂದರೆ ಧವಳ್ ಅವರ ಎರಡು ಕೈಗಳನ್ನು ಕತ್ತರಿಸಿರುತ್ತಾರೆ. ಮೊಂಡು ಕೈಗಳಿಂದಲೇ ನೋವಿನ ಹೊಸ ಬದುಕನ್ನು ಪ್ರಾರಂಭ ಮಾಡುತ್ತಾರೆ ಧವಳ್.

Advertisement

ಹೊಸ ಬದುಕು ;ಚಿಗುರಿದ ಬೆಳಕು : ಧವಳ್ ಆಗಷ್ಟೇ 13 ನೇ ವಯಸ್ಸಿನಲ್ಲಿ, ಒಂಬತ್ತನೇ ಕ್ಲಾಸ್ ನಲ್ಲಿ ಇದ್ದ ಹುಡುಗ. ಮತ್ತೆ ಶಾಲೆಗೆ ಹೋಗುವ ಆಸಕ್ತಿಯಿದ್ರು ಶಾಲೆಯ ಬಾಗಿಲು ಅವರ ಆಗಮನಕ್ಕೆ ನಿರಾಕರಿಸುವ ಮೂಲಕ ಆತ್ಮವಿಶ್ವಾಸಕ್ಕೆ ಕೊಡಲಿ ಏಟು ಕೊಡುತ್ತದೆ. ಹೇಗೆ ಆದರೂ ಮಾಡಿ ಅಕ್ಷರ ಕಲಿಯಬೇಕೆನ್ನುವ ಧವಳ್ ಗೆ ದೇವರು ಜೊತೆಯಾಗುತ್ತಾನೆ. ಬೇರೊಂದು ಶಾಲೆಯಲ್ಲಿ ಅಕ್ಷರ ಕಲಿಯುತ್ತಾರೆ.

ಧವಳ್ ಗೆ ಆದ ಆಘಾತದಿಂದ ಅಪ್ಪ ಅಮ್ಮ ಭರವಸೆ ಕಳೆದುಕೊಂಡು ದುಃಖಿಸಿದ್ದರೂ, ಅದನ್ನು ತೋರಿಸದೆ ಧವಳ್ ಗೆ ದಿನನಿತ್ಯ ಭರವಸೆ ತುಂಬುವ ಒಂದಿಷ್ಟು ಚಟುವಟಿಕೆಗಳನ್ನು ಕೊಟ್ಟು ಪ್ರೋತ್ಸಾಹಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಪ್ರೋತ್ಸಾಹಿಸುತ್ತಾ, ಧವಳ್ ರಿಗೆ ಚಿತ್ರ ಬಿಡಿಸಲು ಪೈಟಿಂಗ್ ಬ್ರಷ್ ನೀಡುತ್ತಾರೆ. ಅಮ್ಮ ಕೊಟ್ಟ ಬ್ರಷ್ ಅನ್ನು ಮೊಂಡು ಕೈಯಿಂದ ಹಿಡಿದು, ಬಣ್ಣಗಳನ್ನು ಕಾಗದದ ಮೇಲೆ ಹಾಕಿ ಚಿತ್ರಕ್ಕೆ ರೂಪ ಕೊಟ್ಟು,ಬಣ್ಣಗಳಿಂದ ಭಾವನೆ ತುಂಬುವ ಪ್ರಯತ್ನವನ್ನು ಧವಳ್ ನಿರಂತರವಾಗಿ ಆರು ತಿಂಗಳು ಮಾಡುತ್ತಾರೆ. ಆರು ತಿಂಗಳ ಬಳಿಕ ಧವಳ್ ಒಬ್ಬ ಕುಂಚ ಹಿಡಿದು ಬಣ್ಣ ತುಂಬುವ ಕಲಾವಿದನಾಗುತ್ತಾರೆ.! ಜೊತೆಗೆ ಪದವಿಯನ್ನು ಪೂರ್ತಿಗೊಳಿಸುತ್ತಾರೆ.

ಹುಡುಕಿಕೊಂಡು ಬಂದ ಅವಕಾಶಗಳು :  ಧವಳ್ ಬಿಡಿಸುವ ಚಿತ್ರಗಳು ಯಾರನ್ನು ಒಮ್ಮೆ ಮಂತ್ರ ಮುಗ್ಧಗೊಳಿಸಬಹುದು. ಕೈ ಗಳೇ ಇಲ್ಲದ ವ್ಯಕ್ತಿಯೊಬ್ಬ ಇಂಥ ಅದ್ಭುತ ಕಲೆಯನ್ನು ಬಿಡಿಸುತ್ತಾನ ಅನ್ನಿಸಬಹುದು. ಧವಳ್ ಕಲೆ ಖ್ಯಾತಿಗಳಿಸಲು ಆರಂಭವಾಗುತ್ತದೆ. ಖಾಸಗಿ ಚಾನೆಲ್ ವೊಂದರ ‘ಎಂಟರ್ಟೈನ್ಮೆಂಟ್ ಕೇ ಲೇ ಯೇ ಕುಚ್ ಬಿ ಕರೇಗಾ’ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇಗವಾಗಿ ಚಿತ್ರ ಬಿಡಿಸಿ ನಟ ಸಲ್ಮಾನ್ ಖಾನ್ ರನ್ನು ಬೆರಗುಗೊಳಿಸುತ್ತಾರೆ. ‘ಇಂಡಿಯಾ ಗಾಟ್ ಟ್ಯಾಲೆಂಟ್’, ಕಪಿಲ್ ಶರ್ಮ ಶೋ, ಹಿಂದೂಸ್ತಾನ್ ಕಾ ಬಿಗ್ ಸ್ಟಾರ್’  ಹೀಗೆ ಹತ್ತಾರು ಕಾರ್ಯಕ್ರಮಗಳಲ್ಲಿ ಧವಳ್ ಕುಂಚದ ಕಲೆ ಪಸರಿದೆ. 300 ಕ್ಕೂ ಹೆಚ್ಚು ಚಿತ್ರಕಲೆಯನ್ನು ಬಿಡಿಸಿದ್ದಾರೆ

ಇವರ ಸಾಧನೆ ನೋಡಿ ಪ್ರಶಸ್ತಿಗಳು ಹುಡುಕುತ್ತಾ ಬಂದಿವೆ.  ಎ.ಪಿ.ಜೆ ಅದ್ಬುಲ್ ಕಲಾಂ ವಿಶೇಷ ಪ್ರಶಸ್ತಿ, ಪಾಸಿಟಿವ್ ಹೆಲ್ತ್ ಹಿರೋಸ್ ಅವಾರ್ಡ್, ಎಪೀಕ್ ಅವಾರ್ಡ್, ದಿವ್ಯಾಂಗ್ ರತ್ನ ಅವಾರ್ಡ್, ಇನ್ನೂ ಹಲವು.

ಸದ್ಯ ಧವಳ್ ಒಬ್ಬ ಸಾಮಾನ್ಯ ಸೆಲೆಬ್ರಿಟಿ ಅಂದರೂ ತಪ್ಪು ಆಗದು. ಇವರು ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಚಿತ್ರ ಕಲೆಯನ್ನು ಹಾಕುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಧವಳ್, Unique Artist Foundation ಎನ್ನುವ ಸ್ವಯಂ ಸೇವಾ ಸಂಸ್ಥೆಯಡಿಯಲ್ಲಿ ಸಾಮಾಜಿಕ ‌ಸೇವೆಯನ್ನು‌ ಮಾಡುತ್ತಿದ್ದಾರೆ.

ಒಂದು ಆಘಾತ ಎಲ್ಲವನ್ನೂ ಮುಗಿಸಿ ಬಿಡುತ್ತದೆ ಎನ್ನುವ ಎಷ್ಟೋ ಜನರ ಮುಂದೆ ಒಂದು ಆಘಾತ ಎಲ್ಲವನ್ನೂ ಮಾಡಲು ದಿಕ್ಕು ತೋರಿಸುತ್ತದೆ ಎನ್ನುವುದ್ದಕ್ಕೆ ಧವಳ್ ಸಾಕ್ಷಿಯಾಗಿ ನಿಲ್ಲುತ್ತಾರೆ.

 

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next