Advertisement

ಹಂಬಲದ ನಾವೆಗೆ ಕೋವಿಡ್ -19 ರಂಧ್ರ

04:43 PM Apr 24, 2020 | mahesh |

ಭೀಕರ ಪ್ರವಾಹದಿಂದಾಗಿ ಮೊದಲೇ ಕಂಗೆಟ್ಟಿದ್ದ ಇಂಡೋನೇಷ್ಯಾಕ್ಕೆ ಕೋವಿಡ್ -19 ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಮಣಿಪಾಲ: ಎರಡು ವರ್ಷಗಳ ಹಿಂದೆ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ನಲುಗಿದ ಇಂಡೋನೇಷ್ಯಾ ಇನ್ನೂ ಪೂರ್ಣವಾಗಿ ಎದ್ದು ಕುಳಿತಿಲ್ಲ. ಆಗಲೇ ಕೋವಿಡ್‌-19 ಬಂದು ಕಾಡತೊಡಗಿದೆ. ಏನು ಮಾಡಬೇಕು ಎಂಬುದೇ ತೋಚದ ಸ್ಥಿತಿ ಆ ದೇಶದ್ದು,. ಸುಮಾರು 5 ಸಾವಿರ ಜನರನ್ನು ಬಲಿತೆಗೆದುಕೊಂಡು, ಲಕ್ಷಕ್ಕೂ ಹೆಚ್ಚು ಮನೆ-ಮಠಗಳನ್ನು ನಿರ್ನಾಮ ಮಾಡಿತ್ತು ಪ್ರವಾಹ. ಜತೆಗೆ ಲಕ್ಷಾಂತರ ಮಂದಿ ನಿರಾಶ್ರಿತರಾದರು. ನಿಧಾನವಾಗಿ ಚೇತರಿಸಿ ಕೊಳ್ಳಬೇಕೆನ್ನುವಷ್ಟರಲ್ಲಿ ಕೋವಿಡ್‌-19 ಸೋಂಕಿನ ಆತಂಕದ ಛಾಯೆ ಮೂಡಿದೆ. ಈಗಾಗಲೇ ಅಗತ್ಯ ವೈದ್ಯಕೀಯ ಸೇವೆಗಳಿಲ್ಲದೇ ಪರದಾಡುತ್ತಿರುವ ಜನರು ಈಗ ಇನ್ನಷ್ಟು ಆತಂಕಗೊಳ್ಳುವಂತಾಗಿದೆ.

ಶೆಡ್‌ ವನವಾಸ
2018 ರಲ್ಲಿ ಇಂಡೋನೇಷ್ಯಾದ ಮಧ್ಯ ಸುಲಾವೆಸಿ ಪ್ರಾಂತ್ಯದಾದ್ಯಂತ ಸಂಭವಿಸಿದ ಭೀಕರ ಭೂಕಂಪ ಅಗಾಧ ಮಟ್ಟದ ಅನಾಹುತಗಳಿಗೆ ಕಾರಣವಾಯಿತು. ಈ ವೇಳೆ ಮನೆ-ಮಠ ಕಳೆದುಕೊಂಡ ಅನುತಪುರದ 9 ಸಾವಿರಕ್ಕೂ ಹೆಚ್ಚು ಮಂದಿ ಇಂದಿಗೂ ಸುಮಾರು 699 ಶೆಡ್‌ಗಳಲ್ಲಿ ಬದುಕಿದ್ದಾರೆ. ಕೆಲವರು ನಿರಾಶ್ರಿತರ ಕೇಂದ್ರಗಳಲ್ಲೇ ಉಳಿದಿದ್ದು, ಉಳಿದವರು ಟಾರ್ಪಾಲ್‌ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. 18 ತಿಂಗಳಿನಿಂದ ಇಲ್ಲಿನ ಸರಕಾರ ನೂತನ ಗೃಹ ನಿರ್ಮಾಣದಲ್ಲಿ ತೊಡಗಿದ್ದರೂ, ಇದುವರೆಗೂ ಒಂದು ಕುಟುಂಬಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಸಾಮಾಜಿಕ ಅಂತರ ಅಸಾಧ್ಯ ಸೋಂಕು ನಿಯಂತ್ರಣಕ್ಕಾಗಿ ವಿಶ್ವದೆಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಜಾರಿಯಾಗಿದ್ದು, ಸುರಕ್ಷಣೆಯ ಸಲುವಾಗಿ ಇಷ್ಟೇ ಮೀಟರ್‌ ಅಂತರ ಪಾಲಿಸಬೇಕು ಎಂದು ನಿರ್ದಿಷ್ಟ ಅಂಕಿಯನ್ನು ತಜ್ಞರು ಸೂಚಿಸಿದ್ದಾರೆ. ಆದರೆ ಈ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಅಂಶಗಳು ವಾಸ್ತವಿಕತೆಗೆ ದೂರವಿದ್ದು, ಪ್ರತಿ ಕುಟುಂಬ 20 ಚದರ ಮೀಟರ್‌ ಸುತ್ತಲೇ ವಾಸ ಮಾಡುತಿದೆ. ಕಿರಿದಾದ ಪ್ರದೇಶದಲ್ಲಿ ಜನಸಾಂದ್ರತೆ ಹೆಚ್ಚಿದ್ದು, ಕನಿಷ್ಠ ಬೆಳಕು ಮತ್ತು ಗಾಳಿ ಇಲ್ಲದಂತಹ ವಾತಾವರಣದಲ್ಲಿ ಜನರು ಕಳೆಯುವಂತಾಗಿದೆ. ಇನ್ನು ಈ ಕುರಿತು ಅಲ್ಲಿನ ನಿವಾಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮೊದಲೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದೇವೆ. ಈಗ ನಮ್ಮ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಮೂಲ ಸೌಕರ್ಯ ವಂಚಿತರು
ಸೋಂಕು ನಿಯಂತ್ರಣಕ್ಕಾಗಿ ಸ್ವತ್ಛತೆ ಕಾಪಾಡಿಕೊಳ್ಳಿ, ಸ್ಯಾನಿಟೈಸರ್‌ನಲ್ಲಿ ಪ್ರತಿ ಗಂಟೆಗೆ ಒಮ್ಮೆ ಕೈ ತೊಳೆದುಕೊಳ್ಳಿ ಎಂದು ದಿನಕ್ಕೆ ಹತ್ತಾರು ಸುದ್ದಿ ಮಾಧ್ಯಮಗಳು ಎಚ್ಚರಿಸುತ್ತಿವೆ. ಆದರೆ ಇಲ್ಲಿನ ಪ್ರತಿ ಹತ್ತು ಕುಟುಂಬಗಳಿಗೆ ಕೇವಲ ಒಂದು ಶೌಚ ಗೃಹವಿದ್ದು, ಪ್ರತಿ ಹತ್ತು ಕುಟುಂಬಗಳಿಗೂ ಒಂದೇ ಅಡುಗೆ ಮನೆ ಇದೆ. ಪರಿಸ್ಥಿತಿ ಕೈ ಗೊಂಬೆಗಳಾಗಿರುವ ಇಲ್ಲಿನ ಜನತೆ ನಮಗೂ ನಿಯಮಗಳನ್ನು ಪಾಲಿಸಬೇಕೆಂದಿದೆ. ಆದರೆ ನಿಯಮ ಪಾಲನೆ ಅಂತ ಕುಳಿತರೆ ಜೀವನ ನಡೆಯಲ್ಲ, ಆಹಾರ ಸಿಗಲ್ಲ. ಹಾಗಾಗಿ ಅನಿವಾರ್ಯವಾಗಿ ನಿಯಮಗಳನ್ನು ಮೀರುತ್ತಿದ್ದೇವೆ ಎನ್ನುತ್ತಾರೆ ನಾಗರಿಕರೊಬ್ಬರು.

ದುರ್ಬಲ ಆರೋಗ್ಯ ವ್ಯವಸ್ಥೆ
ಮೊದಲೇ ಇಲ್ಲಿನ ಆರೋಗ್ಯ ವ್ಯವಸ್ಥೆ ದುರ್ಬಲಗೊಂಡು ಹತ್ತಾರು ಸೋಂಕು ಕಾಯಿಲೆಗಳು ತಾಂಡವ ಆಡುತ್ತಿತ್ತು. ಅದರ ಮಧ್ಯೆ ಭೂಕಂಪ ಸಂಭವಿಸಿದಾಗ, ಅನುತಪುರದ ಮುಖ್ಯ ಜಿಲ್ಲಾ ಆಸ್ಪತ್ರೆಯ ಶುಶ್ರೂಷಾ ಮತ್ತು ವಸತಿ ವಿಭಾಗ ಸಂಪೂರ್ಣ ವಿನಾಶಗೊಂಡಿದ್ದು, ಉನ್ನತ ಮಟ್ಟದ ಖಾಸಗಿ ಆಸ್ಪತ್ರೆಗಳ ಮಹಡಿಯು ನೆಲಕ್ಕೆ ಉರುಳಿದವು. ಎಲ್ಲ ಸಹಜವಾಗಿ ನಡೆದಿದ್ದರೆ ಒಂದು ತಿಂಗಳಲ್ಲಿ ಚಿಕಿತ್ಸಾಲಯಗಳು ಆರಂಭವಾಗಬೇಕಿತ್ತು. ಅದಾಗಿಲ್ಲ ಎಂಬುದರ ಬಗ್ಗೆ ಕೆಲವು ಜನರಿಂದ ಬೇಸರ ವ್ಯಕ್ತವಾಗಿದೆ. ಆದರೆ ಲಾಕ್‌ಡೌನ್‌ ಪರಿಣಾಮ ನಿರ್ಮಾಣ ಹಂತದ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತಿದ್ದು, ಸುಮಾರು 2.6 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಅಗತ್ಯ ವೈದ್ಯಕೀಯ ಸೇವೆ ಇಲ್ಲದೆ ತಬ್ಬಿಬ್ಟಾಗಿದೆ. ಅಲ್ಲದೇ ಈ ರೀತಿಯ ವಾಸಸ್ಥಳಗಳಲ್ಲಿ ಮತ್ತು ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸೋಂಕು ಅತ್ಯಂತ ವೇಗವಾಗಿ ಹರಡುತ್ತದೆ ಮತ್ತು ಮುಂದೆ ಈ ಪ್ರದೇಶ ಹಾಟ್‌ಸ್ಪಾಟ್‌ ಆಗಿ ಮಾರ್ಪಾಡಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದಿಗೂ ಅಲ್ಲಿನ ಎನ್‌ಜಿಒ ಸಂಸ್ಥೆಗಳೇ ಅನುತಪುರದ ಟೆಂಟ್‌, ಶೆಡ್‌ಗಳಿಗೆ ಆಹಾರ ಮತ್ತು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿವೆ. ಆದರೆ ಈ ಆಹಾರ ತಿಂಡಿ-ತಿನ್ನಿಸುಗಳಲ್ಲಿ ಪೌಷ್ಟಿಕಾಂಶದ ಕೊರತೆ ಇದ್ದು, ಕುಡಿಯಲು ಅರ್ಹವಾದ ನೀರು ಜನರಿಗೆ ದೊರೆಯುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿನ ಮಟ್ಟದಲ್ಲಿ ಇರುವವರು ಸೋಂಕಿನ ವಿರುದ್ಧ ಹೋರಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಪ್ರದೇಶದ ಜನರು ಪೌಷ್ಟಿಕಾಂಶ ಆಹಾರ ಸೇವನೆಯಿಂದ ದೂರವಿದ್ದು, ಅವರಲ್ಲಿನ ರೋಗ ನಿರೋಧಕ ಶಕ್ತಿ ಕುಸಿಯುತ್ತಿದೆ ಎಂಬ ಅಂಶ ಆತಂಕವನ್ನು ಹೆಚ್ಚಿಸಿದೆ. ಇದರೊಂದಿಗೆ ಸೋಂಕಿನ ಕುರಿತಾದ ಮಾಹಿತಿಯ ಅಭಾವವೂ ಇದ್ದು, ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ವೈರಾಣು ಸಾಯುತ್ತದೆ ಎಂದು ನಂಬಿದ್ದಾರೆ. ಪರಿಣಾಮ ಜನರು ಗಂಭೀರವಾಗಿ ತೆಗೆದುಕೊಳ್ಳದಂಥ ಸ್ಥಿತಿ ಉದ್ಭವಿಸಿದೆ.

Advertisement

ಒಟ್ಟಾರೆಯಾಗಿ ಇನ್ನೇನು ಕಷ್ಟ-ಕಾರ್ಪಣ್ಯಗಳೆಲ್ಲ ಜಯಿಸಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಹಂಬಲದಲ್ಲಿದ್ದವರಿಗೆ ಈ ಮಾರಣಾಂತಿಕ ಸೋಂಕು ದುಸ್ವಪ್ನವಾಗಿ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next