Advertisement

ಸೀಮಿತ ಅವಧಿಯಲ್ಲಿ ಅಂಗಡಿ ಕಾರ್ಯಾಚರಣೆ

09:00 PM Mar 29, 2020 | Sriram |

ಜಿಲ್ಲಾಡಳಿತ ಬೆಳಗ್ಗೆ 7ರಿಂದ 11ರ ವರೆಗೆ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳದಲ್ಲಿ ಇದೇ ಸಮಯದಲ್ಲಿ ಜನರು ಆಗಮಿಸಿ ಖರೀದಿ ನಡೆಸಿದರು. ಎಲ್ಲೆಡೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಖರೀದಿ ಬಳಿಕ ಎಲ್ಲೆಡೆ ಪೊಲೀಸರು ನಾಕಾ ಬಂದಿ ನಡೆಸಿದ್ದು ಬಳಿಕ ತುರ್ತು ಮತ್ತು ಮೆಡಿಕಲ್‌ಗೆ ತೆರಳುವವರನ್ನು ಮಾತ್ರ ಬಿಡಲಾಗಿದೆ. ಇಷ್ಟು ದಿನ ಲಾಕ್‌ಡೌನ್‌ ಆದ ಅನುಭವದ ಹಿನ್ನೆಲೆಯಲ್ಲೂ ಸ್ಥಳೀಯರು ಈ ನಿಗದಿತ ಸಮಯಕ್ಕೆ ಹೊಂದಿಕೊಂಡಿದ್ದರು.

Advertisement

ಉಡುಪಿ
ಉಡುಪಿ/ ಕಾರ್ಕಳ/ ಕುಂದಾಪುರ: ನಿಗದಿತ ಸಮಯದಲ್ಲೇ ಜನರು ದಿನಸಿ, ತರಕಾರಿ, ಮೆಡಿಕಲ್‌ ಅಂಗಡಿಯಲ್ಲಿ ಖರೀದಿ ನಡೆಸಿದರು. ಇಲ್ಲೆಲ್ಲ ಸಾಮಾಜಿಕ ಅಂತರವನ್ನು ಪಾಲನೆ ಮಾಡಲಾಗಿತ್ತು.
ಓಡಾಟ ವಿರಳ ಬೆಳಗ್ಗಿನ ಹೊತ್ತು ನಗರದ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಖರೀದಿಗೆಂದು ಸಾಕಷ್ಟು ಮಂದಿ ಭೇಟಿ ನೀಡಿದ್ದರು. ಮೆಡಿಕಲ್‌ ಶಾಪ್‌ಗ್ಳಿಗೆ ಆಗಮಿಸುವ ಗ್ರಾಹಕರನ್ನು ಹೊರತುಪಡಿಸಿ ಉಳಿದಂತೆ ನಗರದ ಎಲ್ಲ ರಸ್ತೆಗಳು ಖಾಲಿಯಾಗಿದ್ದವು. ನಗರಕ್ಕೆ ಕೂಲಿ ಕೆಲಸಕ್ಕೆಂದು ಬಂದ ಕೆಲ ಮಂದಿ ಬಸ್‌ಸ್ಟಾಂಡ್‌ಗಳಲ್ಲಿ ಕಂಡು ಬಂದರು. ಕೆಲ ಕಡೆ ಮಾಸ್ಕ್ ಧರಿಸುವ ಸೂಚನೆ ಬರೆಹಗಳು ರಸ್ತೆಬದಿ ಕಂಡುಬಂದವು.

ಕಾರ್ಕಳ
ಕಾರ್ಕಳದಲ್ಲಿ ರವಿವಾರ ಹೆಚ್ಚಿನ ಜನಸಂದಣಿ ಇರಲಿಲ್ಲ. ಮೆಡಿಕಲ್‌, ಪ್ರಾಥಮಿಕ ಆರೋಗ್ಯ ಕೇಂದ್ರ ಎಂದಿನಂತೆ ಸಂಜೆ ತನಕ ತೆರೆದಿತ್ತು. ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿದ್ದರೂ ತರಕಾರಿ, ಹಣ್ಣು ಹಂಪಲು ದರದಲ್ಲಿ ತುಸು ಏರಿಕೆಯಾಗಿತ್ತು. ಹಣ್ಣು ದರ ಏರಿಕೆ 80 ರೂ. ಇದ್ದ ದ್ರಾಕ್ಷಿ ಬೆಲೆ 100 ರೂ.ಗೆ ಏರಿದೆ. 120 ರೂ. ಇದ್ದ ದಾಳಿಂಬೆ ಬೆಲೆ 140 ರೂ. ಆಗಿದೆ. ಸೇಬು ದರ (140-160) ಹಾಗೂ ಕಲ್ಲಂಗಡಿ ದರ (20)ದಲ್ಲಿ ಯಥಾಸ್ಥಿತಿಯಲ್ಲಿದೆ. ಬೇಡಿಕೆ ಇಲ್ಲದ್ದರಿಂದ ಅನಾನಸು ದರ 50 ರೂ.ಗಳಿಂದ 20 ರೂ.ಗೆ ಕುಸಿದಿದೆ. ಇದೇ ವೇಳೆ ತರಕಾರಿ ಬೆಲೆ ತುಸು ಏರಿಕೆಯಾಗಿತ್ತು. ಪೌರಾಡಳಿತ, ಕಂದಾಯ ಇಲಾಖೆ ಸಿಬಂದಿ ನಿಗದಿತ ಅವಧಿ ಬಳಿಕ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ನಿರಾಶ್ರಿತರಿಗೆ ಸೂರು
ನಿರಾಶ್ರಿತರಾಗಿದ್ದ 11 ಮಂದಿ ಬೇರೆ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ ಭುವನೇಂದ್ರ ಕಾಲೇಜಿನ ಇಂಡೋರ್‌ ಸ್ಟೇಡಿಯಂನಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಈ ನಿಟ್ಟಿನಲ್ಲಿ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಹಾಗೂ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್‌ ಸಹಕರಿಸಿದ್ದರು. ಇವರೊಂದಿಗೆ ಸುಮಾರು 20 ಮಂದಿ ಕಾರ್ಮಿಕರು ತಮ್ಮೂರಿಗೆ ತೆರಳಲು ವ್ಯವಸ್ಥೆಗೊಳಿಸುವಂತೆ ಕಾರ್ಕಳ ಪೊಲೀಸರಿಗೆ ವಿನಂತಿಸಿದ್ದು, ಆದರೆ ಅದು ಸಾಧ್ಯವಿಲ್ಲದಿರುವುದರಿಂದ ಸಂಘ ಸಂಸ್ಥೆಗಳ ನೆರವಿನೊಂದಿಗೆ ವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೊರ ಜಿಲ್ಲೆ, ತಾಲೂಕಿನಿಂದ ಕಾರ್ಕಳಕ್ಕೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಬಜಗೋಳಿ, ಮಾಳ, ಬೆಳ್ಮಣ್‌, ಸಾಣೂರು, ಕೆದಿಂಜೆ ಭಾಗದಲ್ಲಿ ನಾಕಾಬಂದಿ ಮಾಡಲಾಗಿದೆ. ದಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಪೊಲೀಸ್‌ ಜೀಪ್‌ನಲ್ಲಿ ಸಾಗಿಸಿ ನೀಡಲಾಗುತ್ತಿದೆ ಎಂದು ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್‌ ಹುಸೇನ್‌ ಹೇಳಿದರು.

ನಿಗದಿತ ಅವಧಿಯಲ್ಲಷ್ಟೇ ಪೆಟ್ರೋಲ್‌
ಮುಂದಿನ ಆದೇಶದವರೆಗೆ ಪೆಟ್ರೋಲ್‌ ಬಂಕ್‌ಗಳು ಬೆಳಗ್ಗೆ 7ರಿಂದ 11ರವರೆಗೆ ಸೇವೆ ನೀಡುವಂತೆ ಕಾರ್ಕಳ ತಾಲೂಕು ಆಡಳಿತ ತಿಳಿಸಿದೆ. ಆಗಿದ್ದಾಗ್ಯೂ ವೈದ್ಯರಿಗೆ, ಆರೋಗ್ಯ ಇಲಾಖಾ ಸಿಬ್ಬಂದಿ, ಪೊಲೀಸರು ಹಾಗೂ ಮಾಧ್ಯಮದವರಿಗೆ ಪೆಟ್ರೊಲ್‌ ಪಡೆಯಲು ಅವಕಾಶ ನೀಡಲಾಗಿದೆ.

Advertisement

ಮೆಡಿಕಲ್‌ನಲ್ಲಿ ಔಷಧ ಕೊರತೆ
ಮೆಡಿಕಲ್‌ಗ‌ಳಿಗೆ ಔಷಧ ಪೂರೈಕೆಯಲ್ಲಿ ವ್ಯತ್ಯಾಯ ಕಂಡುಬಂದ ಹಿನ್ನೆಲೆಯಲ್ಲಿ ಬಿಪಿ, ಶುಗರ್‌ಗಾಗಿ ಔಷಧ ಪಡೆಯುವವರಿಗೆ ತೊಂದರೆಯುಂಟಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್‌ಗೆ ವಿಪರೀತ ಬೇಡಿಕೆಯಿದ್ದರೂ ದೊರೆಯುತ್ತಿಲ್ಲ. ಔಷಧ ವಿತರಣ ಕೇಂದ್ರಗಳಲ್ಲೂ ಸಿಬಂದಿ ಕೊರತೆ ಕಾಡಿತು.

ಕುಂದಾಪುರ
ಕುಂದಾಪುರದಲ್ಲಿ ಬೆಳಗ್ಗೆ ಅನೇಕರು ಮೆಡಿಕಲ್‌, ತರಕಾರಿ, ದಿನಸಿ ಎಂದು ನಗರಕ್ಕೆ ಆಗಮಿಸಿದ್ದರು. ಇವರನ್ನು ವಿಚಾರಣೆ ನಡೆಸಿಯೇ ಪೊಲೀಸರು ಬಿಡುತ್ತಿದ್ದರು. ಇದರಿಂದ ಅನಗತ್ಯ ನಗರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಇವರಿಗೆ ಪೊಲೀಸರು ವಿಚಾರಣೆ ನಡೆಸಿ ನಗರದ ಒಳಗೆ ಪ್ರವೇಶ ನೀಡುತ್ತಿದ್ದರು. ಅನಗತ್ಯವಾಗಿ ನಗರಕ್ಕೆ ತಿರುಗಲು ಬರುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಲ್ಲಲಾಗಿತ್ತು.

11 ಗಂಟೆಗೆ ಬ್ಯಾರಿಕೇಡ್‌ನ್ನು ಪೂರ್ಣ ಪ್ರಮಾಣದಲ್ಲಿ ಹಾಕಿ ನಗರದ ಒಳಗೆ ಪ್ರವೇಶ ನಿರ್ಬಂಧಿಸಲಾಯಿತು. ನಂತರ ಆಗಮಿಸಿದವರಿಗೆ ತುರ್ತು ಸೇವೆ ಹಾಗೂ ಮೆಡಿಕಲ್‌ ಕಾರಣಗಳಿಷ್ಟೇ ಪ್ರವೇಶ ಇತ್ತು. ಈ ಕುರಿತು ಧವನಿ ಬೆಳಕು ಸಂಘದವರ ಸಹಕಾರದಲ್ಲಿ ಪೊಲೀಸ್‌ ಇಲಾಖೆ ಧ್ವನಿವರ್ಧಕ ಮೂಲಕ ವಿವಿಧೆಡೆ ಜಾಗೃತಿ ಮೂಡಿಸಿತು. ಪರಿಣಾಮ ಅಪರಾಹ್ನ ನಗರದಲ್ಲಿ ಮೆಡಿಕಲ್‌ ಅಂಗಡಿಗಳು ಮಾತ್ರ ತೆರೆದಿದ್ದವು. ಸಿಪಿಐ ಗೋಪಿಕೃಷ್ಣ, ಎಸ್‌ಐ ಹರೀಶ್‌ ಆರ್‌. ನಾಯ್ಕ, ಸಂಚಾರ ಠಾಣೆ ಎಸ್‌ಐ ಸುದರ್ಶನ್‌, ಪುಷ್ಪಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.

ವಲಸೆ ಕಾರ್ಮಿಕರಿಗೆ ವ್ಯವಸ್ಥೆ
ನೆಹರು ಮೈದಾನದಲ್ಲಿ, ಸರಕಾರಿ ಹಾಸ್ಟೆಲ್‌ನಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಸಹಾಯಕ ಕಮಿಷನರ್‌ ಕೆ. ರಾಜು ಹಾಗೂ ತಹಶೀಲ್ದಾರ್‌ ತಿಪ್ಪೇಸ್ವಾಮಿ ಅವರು ಭೇಟಿ ನೀಡಿ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಿದರು. ಜೆಸಿಐ ಸಿಟಿ ಕುಂದಾಪುರದ ಸ್ಥಾಪಕಾಧ್ಯಕ್ಷ ಹುಸೈನ್‌ ಹೈಕಾಡಿ, ಅಧ್ಯಕ್ಷ ನಾಗೇಶ್‌ ನಾವಡ, ಪಾರಿಜಾತ ಹೋಟೆಲ್‌ನ ಮಾಲಕ ಗಣೇಶ್‌ ಭಟ್‌ ಸೇರಿದಂತೆ ನಿರಾಶ್ರಿತರಿಗೆ, ವಲಸೆ ಕಾರ್ಮಿಕರಿಗೆ, ವಿವಿಧೆಡೆ ಕಾರ್ಯನಿರ್ವಹಿಸುವ ಪೊಲೀಸರಿಗೆ ಆಹಾರದ ವ್ಯವಸ್ಥೆ ಮಾಡಿದರು.

ಬಸ್ರೂರಿನಲ್ಲಿ ಬೆಳಗ್ಗೆ ಮಾತ್ರ ವ್ಯವಹಾರ
ಬಸ್ರೂರು, ಬಳ್ಕೂರು, ಕೋಣಿ, ಕಂದಾವರ, ಕಂಡೂÉರು ಗುಲ್ವಾಡಿ, ಜಪ್ತಿ, ಆನಗಳ್ಳಿ ಮುಂತಾದೆಡೆ ಮುಂಜಾನೆ 7ರಿಂದ 11ರ ವರೆಗೆ ತರಕಾರಿ ಅಂಗಡಿ, ದಿನಸಿ ಅಂಗಡಿ ಮತ್ತು ಔಷಧ ಅಂಗಡಿಗಳು ತೆರೆದಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಸಂಜೆಯಾದರೂ ಪೇಟೆಗಳಲ್ಲಿ ಜನರು ಕಂಡು ಬಂದಿಲ್ಲ.

ಪೊಲೀಸರಿಂದ
ಮಾಸ್ಕ್ ವಿತರಣೆ
ಉಡುಪಿ ನಗರದಲ್ಲಿ ಮಾಸ್ಕ್ ಹಾಕದೆ ಬೈಕ್‌ನಲ್ಲಿ ಸಂಚರಿಸುತ್ತಿದ್ದವರಿಗೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌ ಅವರು ಮಾಸ್ಕ್ ನೀಡಿ ಜಾಗೃತಿ ಪಾಠ ಮಾಡಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಪೊಲೀಸರು ಲಾಠಿ ಏಟು ನೀಡಿದರೆ ಉಡುಪಿ ಪೊಲೀಸರು ಮಾತ್ರ ವಿಭಿನ್ನವಾಗಿ ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಆರಂಭವಾಗಿನಿಂದ ಇಲ್ಲಿಯವರೆಗೆ ಇವರು ಸುಮಾರು 150ರಷ್ಟು ಮಾಸ್ಕ್ಗಳನ್ನು ವಿತರಿಸಿದ್ದಾರಂತೆ.

ನಿರಾಶ್ರಿತರ ಶಿಬಿರ
ಉದ್ಯೋಗ ಅರಸಿ ಕಾರ್ಕಳಕ್ಕೆ ಬಂದಿರುವ ಹೊರ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಬಿಸಿಎಂ ಹಾಸ್ಟೆಲ್‌ನಲ್ಲಿ ಮೂರು ಹೊತ್ತು ಊಟ ನೀಡಲಾಗುವುದು. ಅನ್ನ, ನೀರಿಗಾಗಿ ಕಾರ್ಕಳದಲ್ಲಿ ಯಾರೊಬ್ಬರೂ ತೊಂದರೆಗೀಡಾಗಬಾರದೆಂಬ ನಿಟ್ಟಿನಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಅಗತ್ಯ ಸೇವೆಗಾಗಿ 9449052310 (ಮಂಜು ದೇವಾಡಿಗ) 9845243495 (ರಾಜೇಶ್‌ ರಾವ್‌ ಕುಕ್ಕುಂದೂರು) 9980225319 (ಹರೀಶ್‌ ಶೆಣೈ) ಸಂಪರ್ಕಿಸುವಂತೆ ಶಾಸಕ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ

ಗ್ರಾಮೀಣ ಭಾಗದಲ್ಲೂ ಉತ್ತಮ ಬೆಂಬಲ
ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಜನ ಸಂಚಾರ ವಿರಳವಾಗಿತ್ತು. ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು, ಹಾಲಾಡಿ, ಗೋಳಿಯಂಗಡಿ, ಶಂಕರನಾರಾಯಣ ಸೇರಿದಂತೆ ಎಲ್ಲ ಕಡೆಗಳಲ್ಲಿ ಬೆಳಗ್ಗಿನ ಅವಧಿಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಸ್ವಲ್ಪ ಮಟ್ಟಿಗೆ ಸರತಿ ಸಾಲು ಕಂಡು ಬಂತು. ಆ ಬಳಿಕ ಮೆಡಿಕಲ್‌ ಹೊರತುಪಡಿಸಿ ಎಲ್ಲ ಅಂಗಡಿ – ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಕೆಲವೆಡೆಗಳಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದ್ದರೆ, ಮತ್ತೆ ಕೆಲವೆಡೆಗಳಲ್ಲಿ ಪೊಲೀಸರೇ ಬಂದು ಬಂದ್‌ ಮಾಡಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next