Advertisement

ಪರಿಸರ, ಬಫ‌ರ್‌ ವಲಯದಲ್ಲಿ ಗಣಿಗಾರಿಕೆ ನಿಲ್ಲಿಸಿ

03:02 PM Mar 14, 2022 | Team Udayavani |

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡದಲ್ಲಿ ನಡೆದ ಕಲ್ಲುಗಣಿ ದುರಂತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ ಕಾರ್ಮಿಕರ ಕುಟುಂಬದವರಿಗೆ ಪರಿಹಾರ ಘೋಷಿಸಬೇಕು. ಈ ಅಕ್ರಮ ಗಣಿಗಾರಿಕೆ ತನಿಖೆ ನಡೆಸಿ ಅಕ್ರಮ ನಡೆಸಿರುವ ಎಲ್ಲರ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು. ಪರಿಸರ ಸೂಕ್ಷ್ಮ ವಲಯ ಹಾಗೂ ಬಫ‌ರ್‌ ವಲಯದಲ್ಲಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಪಿಯುಸಿಎಲ್‌ ಜಿಲ್ಲಾ ಅಧ್ಯಕ್ಷ ಡಿ.ಎಸ್‌. ದೊರೆಸ್ವಾಮಿ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿ (ಪಿಯುಸಿಎಲ್‌) ಚಾ.ನಗರ ಸಮಿತಿಯ ತಂಡವು ಮಾ.7ರಂದು ಘಟನೆ ನಡೆದ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡ ಸರ್ವೆ ನಂ.192 ರ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಈ ಗಣಿಗಾರಿಕೆ ವಿಷಯದಲ್ಲಿ ಅನೇಕ ಅಕ್ರಮಗಳು, ಕಾನೂನು ಉಲ್ಲಂಘನೆಗಳು, ಸಂದೇ ಹಾಸ್ಪದ ವಿಷಯಗಳು ಕಂಡು ಬಂದವು ಎಂದರು.

ಇದೊಂದು ಅಕ್ರಮ ವ್ಯವಹಾರ: ದುರ್ಘ‌ಟನೆ ನಡೆದ ಗಣಿಯನ್ನು ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಬಿನ್‌ ಹುಚ್ಚಪ್ಪ ಎಂಬುವರು 2016 ರ ಜುಲೈನಲ್ಲಿ 5 ವರ್ಷದ ಅವಧಿಗೆ ಗುತ್ತಿಗೆ ಪಡೆದಿದ್ದರು. ಬಳಿಕ ಅದೇ ವರ್ಷದ ಆಗಸ್ಟ್‌ನಲ್ಲಿ 20 ವರ್ಷಕ್ಕೆ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ. ಮಹೇಂದ್ರಪ್ಪ ನಂತರ ಕೇರಳದ ಹಕೀಂ ಮತ್ತು ಜಾಫ‌ರ್‌ ಎಂಬುವರಿಗೆ ಉಪಗುತ್ತಿಗೆ ನೀಡಿದ್ದಾರೆ. ಪೊಲೀಸರು ಹಕೀಂ ಎಂಬುವವರ ಮೇಲೆ ಮಾತ್ರ ಎಫ್ಐಆರ್‌ ದಾಖಲಿಸಿದ್ದಾರೆ. ಗುತ್ತಿಗೆ ಪಡೆದವರು ಉಪಗುತ್ತಿಗೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಉಪಗುತ್ತಿಗೆ ನೀಡಿದ್ದಾರೆ. ಇದೊಂದು ಅಕ್ರಮ ವ್ಯವಹಾರ ಎಂದು ಆರೋಪಿಸಿದರು.

ಹೊರ ರಾಜ್ಯದಿಂದ ಕಾರ್ಮಿಕರ ನೇಮಕ: ಕಲ್ಲುಗಣಿಗಾರಿಕೆಯಲ್ಲಿ 25 ರಿಂದ 30 ಮಂದಿ ಕೆಲಸ ಮಾಡುತ್ತಾರೆ. ಉದ್ದೇಶ ಪೂರ್ವಕವಾಗಿಯೇ ಸ್ಥಳೀಯರನ್ನು ಬಿಟ್ಟು ಹೊರ ರಾಜ್ಯದವ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಘಟನೆ ನಡೆದು ನಾಲ್ಕೈದು ದಿನಗಳಾಗಿದ್ದರೂ ನಾವು ಹೋದಾಗ ಅಲ್ಲಿ ಒಬ್ಬ ಕೆಲಸಗಾರನೂ ಇರಲಿಲ್ಲ. ಕಾರ್ಮಿಕರ ವಿವರಗಳನ್ನು ಕಾನೂನಿನ ಅನ್ವಯ ಗಣಿ ಕಂಪೆನಿಯಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು. ಅದನ್ನು ಮ್ಯಾನೇಜರ್‌ ನಿರ್ವಹಿಸಬೇಕು. ಆದರೆ ಇಲ್ಲಿ ಮ್ಯಾನೇಜರ್‌ ಆಗಲೀ ಯಾವುದೇ ರಿಜಿಸ್ಟರ್‌ ಅನ್ನಾಗಲೀ ನಿರ್ವಹಣೆ ಮಾಡುತ್ತಿಲ್ಲ. ಈ ಗಣಿಗಳಿಂದ ತೆಗೆದ ಕಲ್ಲನ್ನು ತೆಗೆದುಕೊಂಡ ಟಿಪ್ಪರ್‌ಗಳು 5 ನಿಮಿಷಕ್ಕೊಂದರಂತೆ ಸಂಚರಿಸುತ್ತವೆ ಎಂದರೆ ಯಾವ ಪ್ರಮಾಣದ ಅವ್ಯಹಾರ ನಡೆಯುತ್ತಿದೆ ಎಂಬುದನ್ನು ಅಂದಾಜಿಸಬಹುದು ಎಂದು ದೊರೆಸ್ವಾಮಿ ಮತ್ತು ವೆಂಕಟರಾಜು ಹೇಳಿದರು.

ಈ ಗಣಿ ಪ್ರದೇಶ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸೂಕ್ಷ ವಲಯದ ಬಫ‌ರ್‌ ಝೋನ್‌ ಆಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಂತೆಯೇ ಇಲ್ಲ. ರಾಜಕೀಯ ಪಕ್ಷದ ಮುಖಂಡರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸೇರಿದ ಗಣಿಗಳಿವೆ. ಇದು ಬಹುಕೋಟಿ ಅಕ್ರಮ ಅವ್ಯವಹಾರ ವಾಗಿದೆ. ಕಂದಾಯ, ಗಣಿ, ಅರಣ್ಯ ಮತ್ತು ಇನ್ನಿತರ ಇಲಾಖೆಗಳ ನೌಕರರಿಂದ ಅಧಿಕಾರಿಗಳಿಗೆ ಪಾಲು ನೀಡಲಾಗುತ್ತಿದೆ ಎಂದು ಆರೋಪಿಸಿದರು.

Advertisement

ಕಾರ್ಯದರ್ಶಿ ಕೆ.ವೆಂಕಟರಾಜು, ಪಿಯುಸಿಎಲ್‌ ರಾಷ್ಟ್ರೀಯ ಉಪಾಧ್ಯಕ್ಷ ಡಾ. ವಿ. ಲಕ್ಷ್ಮಿನಾರಾಯಣ್‌, ಡಾ. ರತಿ ರಾವ್‌, ರೂಪಾರಾವ್‌, ರಾಜ್ಯ ಕಾರ್ಯದರ್ಶಿ ಕಮಲ್‌ ಗೋಪಿನಾಥ್‌ ಇದ್ದರು.

ಅನುಮಾನಕ್ಕೆ ಆಸ್ಪದ ನೀಡುತ್ತದೆ: ದೊರೆಸ್ವಾಮಿ : ಸರ್ವೆ ನಂ. 192 ರಲ್ಲಿ ಒಟ್ಟು 6 ಜನರಿಗೆ 13 ಎಕರೆ 30 ಗುಂಟೆ ಪ್ರದೇಶವನ್ನು ಗಣಿ ಇಲಾಖೆ ಉಪನಿರ್ದೇ ಶಕರು 2007ರಲ್ಲೇ ಕಲ್ಲು ತೆಗೆಯಲು ಪರವಾನಗಿ ನೀಡಿದ್ದಾರೆ. ಆದರೆ ಕಣ್ಣಳತೆಗೆ ಕಾಣುವ ಕನಿಷ್ಟ ಅಂದಾಜು ತೆಗೆದುಕೊಂಡರೂ 50 ರಿಂದ 60 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ಹೆಚ್ಚುವರಿ ಪ್ರದೇಶ ಅಕ್ರಮವಾಗಿದೆ. ಅಧಿಕೃತ 13 ಎಕರೆ ಪ್ರದೇಶವನ್ನು ಹೊರತುಪಡಿಸಿ, ಇನ್ನುಳಿದ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತ್ತಿರುವವರು ಯಾರು? ಇದು ಅನುಮಾನಕ್ಕೆ ಆಸ್ಪದ ನೀಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next