Advertisement

ವಂಡ್ಸೆ ಗ್ರಾ.ಪಂ.: ಮಹಿಳೆಯರಿಗೆ ಹೊಲಿಗೆ ತರಬೇತಿ ಸ್ವಾವಲಂಬನ ಕೇಂದ್ರ

01:20 AM Dec 23, 2018 | Team Udayavani |

ಕೊಲ್ಲೂರು: ಸ್ಥಳೀಯ ಸರಕಾರವಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯತ್‌ ಗ್ರಾಮದ ಏಳಿಗೆಯಲ್ಲಿ ಏನೆಲ್ಲಾ ಕಾರ್ಯಯೋಜನೆಗಳನ್ನು ರೂಪಿಸಬಹುದು, ಅನುಷ್ಠಾನಕ್ಕೆ ತರಬಹುದು ಎನ್ನುವುದಕ್ಕೆ ವಂಡ್ಸೆ ಗ್ರಾಮ ಪಂಚಾಯತ್‌ ನೇತೃತ್ವದಲ್ಲಿ ಆರಂಭಗೊಂಡಿರುವ ಸ್ವಾವಲಂಬನ ತರಬೇತಿ ಕೇಂದ್ರವೇ ಸಾಕ್ಷಿ.

Advertisement

ಆಸಕ್ತ ಮಹಿಳೆಯರಿಗೆ ಸೂಕ್ತ ಉದ್ಯೋಗಾವಕಾಶಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಅವರು ಪಂಚಾಯತ್‌ ವತಿಯಿಂದ 6 ತಿಂಗಳ ಅವಧಿಯ ಹೊಲಿಗೆ ತರಬೇತಿ ಕೇಂದ್ರ, ಪರಿಸರಸ್ನೇಹಿ ಕೈ ಚೀಲಗಳ ತಯಾರಿ ಘಟಕವನ್ನು ತೆರೆಯುವ ಚಿಂತನೆ ಮಾಡಿದರು. ಈಗಾಗಲೇ ಎಸ್‌.ಎಲ್‌.ಆರ್‌.ಎಂ. ಘಟಕ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಘಟಕದ ಅಡಿಯಲ್ಲಿಯೇ ಆರಂಭಿಸಿರುವುದು ಸ್ವಾವಲಂಬನೆಯ ಬದುಕಿಗೆ ಹಿಡಿದ ಕನ್ನಡಿ.

ವಂಡ್ಸೆ ಮಾರುಕಟ್ಟೆ ರಸ್ತೆಯ ಈ ಹಿಂದೆ ಇದ್ದ ಪಶು ಆಸ್ಪತ್ರೆಯು ಸರಕಾರಿ ಕಚೇರಿಗಳ ಸಮುಚ್ಚಯಕ್ಕೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಆ ಕಟ್ಟಡದಲ್ಲಿ ಸ್ವಾವಲಂಬನ ಕೇಂದ್ರವನ್ನು ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಈ ಕೇಂದ್ರವನ್ನು ಉದ್ಘಾಟಿಸಿದ್ದರು. ಡಿಸೆಂಬರ್‌ನಿಂದ ಇಲ್ಲಿ ಉಚಿತ ಹೊಲಿಗೆ ತರಬೇತಿ ಆರಂಭವಾಗಿದ್ದು, ಸುಮಾರು 40 ಜನ ಮಹಿಳೆಯರು ತರಬೇತಿಗೆ ನೊಂದಣಿ ಮಾಡಿಕೊಂಡಿದ್ದಾರೆ. ಆರು ತಿಂಗಳ ಕಾಲ ಇಲ್ಲಿ ನುರಿತ ತರಬೇತುದಾರರಿಂದ 20 ಜನ ಅಭ್ಯರ್ಥಿಗಳ ಬ್ಯಾಚ್‌ ಮಾಡಿ ಬೆಳಗ್ಗೆ ಮತ್ತು ಮಧ್ಯಾಹ್ನ ತರಬೇತಿ ನೀಡಲಾಗುತ್ತಿದೆ.

ಎಸ್‌.ಎಲ್‌.ಆರ್‌.ಎಂ. ಘಟಕ ವಂಡ್ಸೆಯಲ್ಲಿ ದಾಖಲೆಯ ಮಟ್ಟದಲ್ಲಿ ಯಶಸ್ವಿಯಾಗಿರುವ ಹಿನ್ನೆಲ್ಲೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಕೈ ಚೀಲಗಳ ತಯಾರಿ ಮಾಡಲು ಇಲ್ಲಿ ಒತ್ತು ನೀಡಲಾಗುತ್ತಿದೆ. ತರಬೇತಿ ಪಡೆದ ಅನಂತರ ಹೊರಗಿನಿಂದ ಆರ್ಡರ್‌ ಪಡೆದು ಬಟ್ಟೆ ಹೊಲಿದು ಕೊಡುವ ಯೋಜನೆಯೂ ಇದೆ. ಬಂದ ಆದಾಯವನ್ನು ಎಸ್‌.ಎಲ್‌.ಆರ್‌.ಎಂ. ನಿರ್ವಹಣೆಗೆ ಬಳಕೆ ಮಾಡುವ ಚಿಂತನೆ ಇದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಸಹಕಾರ ನೀಡುವ ಭರವಸೆ ನೀಡಿದ್ದಾರೆ. ತರಬೇತಿ ಅನಂತರ ಪ್ರಮಾಣ ಪತ್ರವನ್ನು ನೀಡಲಾಗುವುದು. ಉದ್ಯೋಗಾವಕಾಶ ಕಲ್ಪಿಸಲು ಪ್ರೋತ್ಸಾಹ ನೀಡಲಾಗುವುದು ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷರು.

ವಂಡ್ಸೆ ಗ್ರಾಮ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಂದ ತರಬೇತಿಗೆ ಆಸಕ್ತರು ಮುಂದೆ ಬರುತ್ತಿದ್ದು, ಮೊದಲ ಆದ್ಯತೆ ವಂಡ್ಸೆ ಗ್ರಾಮಸ್ಥರಿಗೆ ನೀಡಲಾಗಿದೆ. ಮೊದಲ ತರಬೇತಿ ತಂಡವೂ ಭರ್ತಿ ಆಗಿದ್ದು, ನುರಿತ ತರಬೇತುದಾರರಾದ ಮಹಾಲಕ್ಷ್ಮೀ ಅವರು ತರಬೇತಿ ನೀಡುತ್ತಿದ್ದಾರೆ. ಎಸ್‌.ಎಲ್‌.ಆರ್‌.ಎಂ. ಘಟಕದ ಮೇಲ್ವಿಚಾರಕರೇ ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ. ಒಟ್ಟಾರೆಯಾಗಿ ವಂಡ್ಸೆಯಂಥಹ ಪುಟ್ಟ ಗ್ರಾಮದಲ್ಲಿ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿಸುವ ಮಹತ್ವದ ಕಾರ್ಯ ಮಾದರಿಯಾಗಿದೆ.

Advertisement

ಮಹಿಳೆಯರು ಸ್ವಾವಲಂಬಿಗಳಾಗಿ ಸ್ವಉದ್ಯೋಗದೊಡನೆ ಬದುಕಲು ವಂಡ್ಸೆ ಗ್ರಾ.ಪಂ. ರೂಪಿಸಿರುವ ಜಿಲ್ಲೆಯಲ್ಲಿಯೇ ಪ್ರಥಮವಾದ ಗ್ರಾಮ ಪಂಚಾಯತ್‌ ಮಟ್ಟದ ಈ ಯೋಜನೆಯು ಗ್ರಾಮಸ್ಥರ ಬದುಕಿಗೊಂದು ಆಶಾಕಿರಣ.
– ವಿಜಯಲಕ್ಷ್ಮೀ, ಗ್ರಾಮಸ್ಥರು

ನಿರುದ್ಯೋಗಿ ಆಸಕ್ತ ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬನೆಗೆ ಪ್ರೇರೇಪಿಸುವುದು, ಪ್ಲಾಸ್ಟಿಕ್‌ ನಿಷೇಧಕ್ಕೆ ಪರ್ಯಾಯವಾಗಿ ಪರಿಸರಸ್ನೇಹಿ ಬ್ಯಾಗ್‌ಗಳ ತಯಾರಿ, ಹೊರಗಿನ ಆರ್ಡರ್‌ಗಳನ್ನು ಪಡೆದು ಬಟ್ಟೆ ಹೊಲಿದು ಕೊಡುವುದು. ತರಬೇತಿ ಖರ್ಚುವೆಚ್ಚಗಳನ್ನು ದಾನಿಗಳ ನೆರವಿನಿಂದ ಭರಿಸುವ ಯೋಚನೆಯೂ ಇದೆ. ಇದರಿಂದ ಬಂದ ಲಾಭಾಂಶವನ್ನು ಎಸ್‌.ಎಲ್‌.ಆರ್‌.ಎಂ ಘಟಕದ ನಿರ್ವಹಣೆಗೆ ಬಳಸಲಾಗುವುದು.
– ಉದಯ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ವಂಡ್ಸೆ  ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next