Advertisement

ಟೆಕ್ಕಿಯನ್ನು ಇರಿದು ಕೊಲ್ಲಲು ಯತ್ನ 

06:25 AM Jan 16, 2019 | Team Udayavani |

ಬೆಂಗಳೂರು: ನಾಯಂಡಹಳ್ಳಿ ಬಸ್‌ನಿಲ್ದಾಣ ಸಮೀಪ  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಚುಡಾಯಿಸಿದ ಪುಂಡರಿಗೆ ಬುದ್ಧಿವಾದ ಹೇಳಿದ ಟೆಕ್ಕಿಯೊಬ್ಬರಿಗೆ ಪುಂಡರ ಗುಂಪು ಚಾಕುವಿನಿಂದ ಇರಿದಿರುವ ಘಟನೆ ಜ.13ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಯುವತಿಯ ಸಹಾಯಕ್ಕೆ ಧಾವಿಸಿದ್ದರಿಂದ ಪುಂಡರ ಕೆಂಗಣ್ಣಿಗೆ ಗುರಿಯಾಗಿ ಇರಿತಕ್ಕೊಳಗಾದ ಯುವಕ ಅರುಣ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರುಣ್‌ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣೆ ಪೊಲೀಸರು ಆರೋಪಿಗಳಾದ, ತೇಜು, ಶ್ಯಾಮ್‌, ಸಂಜಯ್‌ ಸೇರಿದಂತೆ ಮತ್ತಿತರ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಯುವತಿಯನ್ನು ತಬ್ಬಿಕೊಳ್ಳಲು ಯತ್ನ: ಗಾಯಾಳು ಅರುಣ್‌ ಅವರ ತಂದೆ ಕೀರ್ತಿಕಾಂತ್‌ ಸಿದ್ದಣಗೌಡ ಇಂಗಳಗಿ ಅವರು ನಾಯಂಡಹಳ್ಳಿ ಬಸ್‌ನಿಲ್ದಾಣದ ಸಮೀಪ ನರ್ಸಿಂಗ್‌ ಹೋಮ್‌ ಇಟ್ಟುಕೊಂಡಿದ್ದಾರೆ. ಅರುಣ್‌ ಕೂಡ ಆಗಾಗ್ಗೆ ನರ್ಸಿಂಗ್‌ ಹೋಂ ಬಳಿ ಹೋಗುತ್ತಿದ್ದರು. ಜ.13ರಂದು ರಾತ್ರಿ ಅಲ್ಲಿಗೆ ತೆರಳಿದ್ದರು.

ರಾತ್ರಿ 10 ಗಂಟೆ ಸುಮಾರಿಗೆ ಕ್ಲಿನಿಕ್‌ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಚುಡಾಯಿಸಿದ ನಾಲ್ವರು ಯುವಕರು, ಆಕೆಯನ್ನು ಹಿಡಿದುಕೊಳ್ಳಲು ಹೋದರು. ಇದನ್ನು ಗಮನಿಸಿದ ಅರುಣ್‌ ಆಕೆಯ ರಕ್ಷಣೆಗೆ ಧಾವಿಸಿ, ಹಾಗೆ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ್ದು. ಪರಸ್ಪರ ಮಾತಿನ ಚಕಮಕಿ ನಡೆದಿದೆ.

ಮಾರನೇ ದಿನ ಸಂಜೆ 4.30ರ ಸುಮಾರಿಗೆ ಅರುಣ್‌ ಕ್ಲಿನಿಕ್‌ ಮುಂಭಾಗ ನಿಂತಿದ್ದಾಗ, ಯುವಕನೊಬ್ಬ ಬಂದು, ಶನಿವಾರ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಮಾತನಾಡಲು ಶನಿಮಹಾತ್ಮ ದೇವಾಲಯದ ಸಮೀಪ ಬರುವಂತೆ ಹೇಳಿದ್ದಾನೆ.

Advertisement

ಹೀಗಾಗಿ ಅರುಣ್‌ ಹಾಗೂ ಆತನ  ಸ್ನೇಹಿತ ಸಂತೋಷ್‌ ಅಲ್ಲಿಗೆ ತೆರಳುತ್ತಲೇ, ನಾಲ್ವರು ಯುವಕರು ಹಲ್ಲೆ ನಡೆಸಿದ್ದು ಚಾಕುವಿನಿಂದ ಹೊಟ್ಟೆಗೆ ಇರಿಯಲು ಮುಂದಾಗಿದ್ದಾರೆ. ಇದರಿಂದ ತಪ್ಪಿಸಿಕೊಂಡ ಅರುಣ್‌ ಕಿರುಚಿಕೊಂಡು ರಸ್ತೆಗೆ ಓಡಿಬಂದಿದ್ದಾರೆ. ಸಾರ್ವಜನಿಕರನ್ನು ಕಂಡ ಕೂಡಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಘಟನೆಯಲ್ಲಿ ಅರುಣ್‌ ಹೊಟ್ಟೆಗೆ ತರಚಿದ ಗಾಯವಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲ. ಅರುಣ್‌ ನೀಡಿದ ದೂರಿನ ಅನ್ವಯ, ತೇಜು, ಶ್ಯಾಮ್‌, ಸಂಜಯ್‌ ಸೇರಿ ಇನ್ನಿತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಾಯಂಡಹಳ್ಳಿ ಬಸ್‌ನಿಲ್ದಾಣ ಹಾಗೂ ಸಮೀಪ ರಾತ್ರಿ ಆಗುತ್ತಿದ್ದಂತೆ ಪುಂಡರ ಪುಂಡಾಟಿಕೆ ಮಿತಿಮೀರಿದ್ದು, ಹೆಣ್ಣುಮಕ್ಕಳು ಸೇರಿದಂತೆ ಸಾರ್ವಜನಿಕರು ಓಡಾಡಲೂ ಕಷ್ಟವಾಗಿದೆ. ಯುವತಿಯ ಸಹಾಯಕ್ಕೆ ಧಾವಿಸಿದ್ದಕ್ಕೆ ನನ್ನ ಕೊಲೆಗೆ ಯತ್ನಿಸಿದ್ದಾರೆ.
-ಅರುಣ್‌, ಗಾಯಾಳು

Advertisement

Udayavani is now on Telegram. Click here to join our channel and stay updated with the latest news.

Next