Advertisement

ಮೂರ್ತಿ ತಯಾರಿಕೆ ಇಲ್ಲದೇ ಬೀದಿಗೆ ಬಿದ್ದ ಕುಂಬಾರರು

10:11 AM Aug 07, 2020 | Suhan S |

ಕುದೂರು: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಹಲವು ಸಮುದಾಯಗಳಿಗೆ ಸಂಕಷ್ಟದ ಪರಿಸ್ಥಿತಿ ಬಂದಿರುವಂತೆ ಮಣ್ಣಿನ ಗಣಪತಿಯನ್ನು ತಯಾರಿಸುವ ಕುಂಬಾರರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಪ್ರತಿವರ್ಷ ಗಣೇಶ ಹಬ್ಬದಲ್ಲಿ ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಬದುಕು ಕಟ್ಟಿಕೊಳ್ಳುತ್ತಿದ್ದ ಕಲಾವಿದರ ಬದುಕು ಮೂರಾಬಟ್ಟೆ ಯಾಗಿದೆ.

Advertisement

ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸದಂತೆ ಸರ್ಕಾರ ಆದೇಶ ಹೊರಡಿಸಿದ್ದರಿಂದ ರಾಮನಗರ ಜಿಲ್ಲೆಯ, ಮಾಗಡಿ, ಬಾನುವಾಡಿ, ಕುದೂರು, ಬಿಸ್ಕೂರು ಸೇರಿದಂತೆ ನೂರಾರು ಗಣೇಶ ತಯಾರಕ ಕಲಾವಿದರ ಬದುಕಿನ ಮೇಲೆ ಪರಿಣಾಮ ಬೀರಿದೆ.

ನಮ್ಮ ಕಷ್ಟ ಯಾರಿಗೆ ಹೇಳ್ಳೋಣ?: ಪ್ರತಿ ವರ್ಷ ಹತ್ತಾರು ಜನ ಕಲಾವಿದರು ನಮ್ಮಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಇರುವುದರಿಂದ ದೊಡ್ಡ ಗಾತ್ರದ ಮೂರ್ತಿ ಖರೀದಿ ಆಗುವುದಿಲ್ಲ. ಭಕ್ತರು ಮನೆಯಲ್ಲಿಯೇ ಇಟ್ಟು ಪೂಜೆ ಮಾಡುವುದರಿಂದ 2-3 ಅಡಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಅನೇಕ ಕಲಾವಿದರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಬಾರಿ ಕೆಲಸವಿಲ್ಲ. ಹಣವೂ ಇಲ್ಲ ಎಂಬಂತಾಗಿದೆ. ಕೆಲವರು ಊರು ಬಿಟ್ಟು ಬೇರೆಡೆ ಹೋಗಿದ್ದಾರೆ. ಈ ವೃತ್ತಿಯನ್ನೇ ನಂಬಿದ್ದ ಕಲಾವಿದರು, ಹಣ ಕಾಸಿನ ಸಮಸ್ಯೆ ಎದುರಿಸುತ್ತಿದ್ದು. ಸರ್ಕಾರ ನಮ್ಮಂತವರ ಸಮಸ್ಯೆ ಎಲ್ಲಿ ಕೇಳುತ್ತದೆ ಎಂದು ಬೇಸರದಿಂದ ಹೇಳುತ್ತಾರೆ.

ಒಟ್ಟಾರೆ ಈ ಬಾರಿ ಗಣೇಶ ಹಬ್ಬ ಸಂಭ್ರಮದಿಂದ ದೂರವಾದ ನೋವು ಒಂದೆಡೆಯಾದರೆ ಹಬ್ಬದಲ್ಲಿ ಖರೀದಿಯಾಗುತ್ತಿದ್ದ ಗಣೇಶ ಮೂರ್ತಿಗಳನ್ನೇ ಆಶ್ರಯಿಸಿದ ಕಲಾವಿದರು ಪಾಡು ಹೇಳ ತೀರದಾಗಿದೆ.

ಈ ಬಾರಿ ಗಣೇಶ ಮೂರ್ತಿ ಗಳಿಗೆ ಬೇಡಿಕೆ ಇಲ್ಲ. ದೊಡ್ಡ ಗಾತ್ರದ ಮೂರ್ತಿಗಳನ್ನು ಯಾರೂ ಮಾಡುತ್ತಿಲ್ಲ. ಮನೆಯಲ್ಲಿ ಪೂಜೆ ಮಾಡುವ ಒಂದರಿಂದ ಎರಡೂ ವರೆ ಅಡಿ ಎತ್ತರದ ಗಣೇಶನ ಮೂರ್ತಿ ಗಳನ್ನು ಮಾತ್ರ ತಯಾರಿಸುತ್ತಿದ್ದೇವೆ. ಭಾನುಪ್ರಕಾಶ್‌, ಮಾಗಡಿ ಗಣೇಶ ಮೂರ್ತಿ ತಯಾರಕ

Advertisement
Advertisement

Udayavani is now on Telegram. Click here to join our channel and stay updated with the latest news.

Next