Advertisement

ರಾಜ್ಯ ವೀರಶೈವರೆಲ್ಲರೂ ಲಿಂಗಾಯತರೇ

03:27 PM Mar 21, 2022 | Team Udayavani |

ಬೆಳಗಾವಿ: ಕರ್ನಾಟಕದಲ್ಲಿರುವ ವೀರಶೈವರೂ ಸೇರಿ ಪ್ರತಿಯೊಬ್ಬರೂ ಲಿಂಗಾಯತರು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಾಗ ವೀರಶೈವರಿಗೂ ಎಲ್ಲ ಸೌಲಭ್ಯಗಳೂ ಸಿಗುತ್ತವೆ ಎಂದು ಬೆಂಗಳೂರಿನ ಕುಂಬಳಗೋಡದ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

Advertisement

ನಗರದ ಗಾಂಧಿ ಭವನದಲ್ಲಿ ರವಿವಾರ ನಡೆದ ಲಿಂ| ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಡಾ. ಮಾತೆ ಮಹಾದೇವಿ ತಾಯಿ ಸಂಸ್ಮರಣೆ ನಿಮಿತ್ತ ಲಿಂಗಾಯತ ಧರ್ಮ ಹೋರಾಟದ ಮಹಾದಂಡನಾಯಕರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ವಿಷಯ ನಮಗೆ ಅಲ್ಲವೇ ಅಲ್ಲ. ವೀರಶೈವ ಎಂದು ಇರುವವರೂ ಲಿಂಗಾಯತರೇ ಆಗಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಯಾರೂ ವೀರಶೈವರಿಲ್ಲ. ಸುಮ್ಮನೇ ವೀರಶೈವ ಲಿಂಗಾಯತ ಎಂದು ಹೇಳಿಕೊಳ್ಳುತ್ತಾರೆ ಹೊರತು ವೀರಶೈವರಲ್ಲ, ಬದಲಾಗಿ ಅವರೆಲ್ಲರೂ ಲಿಂಗಾಯತರು ಎಂದರು.

ಪಂಚಮಸಾಲಿ ಲಿಂಗಾಯತರು, ಬಣಜಿಗ ಲಿಂಗಾಯತರು, ಕುಂಬಾರ ಲಿಂಗಾಯತರಂತೆ ವೀರಶೈವ ಲಿಂಗಾಯತರಿದ್ದಾರೆ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಾಗ ವೀರಶೈವರಿಗೂ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯಗಳು ಸಿಗುತ್ತವೆ. ವೀರಶೈವರಿಗೂ ಸೇರಿಸಿ ಲಿಂಗಾಯತ ಧರ್ಮದ 100 ಒಳಗಪಂಗಡಗಳಿಗೂ ಧಾರ್ಮಿಕ ಅಲ್ಪಸಂಖ್ಯಾತ ಸೌಲಭ್ಯ ಸಿಗಬೇಕು. ವೀರಶೈವರನ್ನೂ ಜತೆಗೆ ಕರೆದುಕೊಂಡು ಹೋಗುತ್ತೇವೆ. ಸರ್ಕಾರದ ಎಲ್ಲ ಸವಲತ್ತುಗಳು ಅವರಿಗೂ ಸಿಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀರಶೈವರನ್ನು ಸೇರಿಸಿ ಎಲ್ಲ 100 ಉಪಪಂಗಡಗಳ ಹೆಸರು ಸೇರ್ಪಡೆ ಮಾಡಿ ಮತ್ತೂಮ್ಮೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಸಿಗಲು ಬೊಮ್ಮಾಯಿ ಮುತುವರ್ಜಿ ವಹಿಸಬೇಕು ಎಂದರು.

ಒಂದು ಸಾವಿರ ಪುಟದ ನ್ಯಾ| ನಾಗಮೋಹನ್‌ ದಾಸ್‌ ವರದಿಯನ್ನು ಓದಲಾರದೇ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ತಿರಸ್ಕಾರ ಮಾಡಿರುವ ಬಗ್ಗೆ ಸರ್ಕಾರ ನೀಡಿರುವ ಕಾರಣ ಸಮಂಜಸ ಆಗಿಲ್ಲ. ಕಾಂಗ್ರೆಸ್‌ ಸರ್ಕಾರ ಕಳುಹಿಸಿದ ವರದಿಯನ್ನು ನಿಮಗೆ ಒಪ್ಪಲು ಸಾಧ್ಯವಾಗಿಲ್ಲ ನಿಜ. ಆದರೆ ಈಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಈ ಸರ್ಕಾರ ನೀಡಿರುವ ವರದಿಯನ್ನು ಒಪ್ಪಿಕೊಂಡು ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದರು.

ಲಿಂಗಾಯತ ಧರ್ಮ ಸ್ಥಾಪಕ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಲಿಂ| ಲಿಂಗಾನಂದ ಸ್ವಾಮೀಜಿ, ಡಾ| ಮಾತೆ ಮಹಾದೇವಿ ತಾಯಿ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ನಂತರ ಬಸವ ಧ್ವಜಾರೋಹಣವನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಗಣ್ಯರು ನೆರವೇರಿಸಿದರು.

Advertisement

ಸಚ್ಚಿದಾನಂದ ಚಟ್ನಳ್ಳಿ ಸಂಪಾದಕತ್ವದ ಲಿಂಗದೇವರ ನೆನೆ ಮನವೆ ಹಾಗೂ ಹರನೆಡೆಯಿಂದ ಪರಮನೆಡೆಗೆ ಎಂಬ ಸಂಶೋಧನಾ ಕೃತಿಯ 3ನೇ ಆವೃತ್ತಿಯನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ಶ್ರಾವಣಿ ಭಾಗ್ಯನವರ ಎಂಬ ಬಾಲಕಿಯ ವಚನ ನೃತ್ಯ ಗಮನಸೆಳೆಯಿತು.

ಉತ್ತರ ಮತಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಆಗಮಿಸಿದ್ದರು. ಕೂಡಲಸಂಗಮ ಬಸವಧರ್ಮ ಪೀಠದ ಸದ್ಗುರು ಶ್ರೀ ಮಹಾದೇಶ್ವರ ಸ್ವಾಮೀಜಿ, ಬೆಂಗಳೂರಿನ ಲಕ್ಷ್ಮೀಪುರ ಬಸವಯೋಗಾಶ್ರಮದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಅಖೀಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಶ್ರೀ ದಯಾನಂದ ಸ್ವಾಮೀಜಿ, ಬಸವಕಲ್ಯಾಣದ ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಕಲಬುರ್ಗಿ ಬಸವ ಮಂಟಪದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಬೆಳಗಾವಿ ಬಸವ ಮಂಟಪದ ಶ್ರೀ ಬಸವಪ್ರಕಾಶ ಸ್ವಾಮೀಜಿ, ಚಳ್ಳಿಕೇರಿ ಹಡಪದ ಅಪ್ಪಣ್ಣ ಪೀಠದ ಶ್ರೀ ಗುರುಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಲಿಂಗಾಯತ ಧರ್ಮ ಸಮನ್ವಯ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಅವಿನಾಶ ಭೂಸಿಕರ, ಲಿಂಗಾಯತ ಮುಖಂಡರಾದ ಅಶೋಕ ಬೆಂಡಿಗೇರಿ, ಮಹಾಂತೇಶ ಗುಡಸ, ಆನಂದ ಗುಡಸ, ಮಾರಯ್ಯ ಗಡಗಲಿ, ರಾಷ್ಟ್ರೀಯ ಬಸವದಳ ಪದಾಧಿ ಕಾರಿಗಳು, ಸದಸ್ಯರಿದ್ದರು.

 

ಲಿಂಗಾಯತ ಸಮುದಾಯವದವರೇ ಆದ ಸಿಎಂ ಬಸವರಾಜ ಬೊಮ್ಮಾಯಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗುವಂತೆ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಬೇಕು. ಲಿಂಗಾಯತ ಸಮಾಜದ ಜನರ ಹಿತ ಕಾಪಾಡಬೇಕು. ಸರ್ಕಾರಿ ಸೌಲಭ್ಯಗಳು ಸಿಗುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು.

-ಚನ್ನಬಸವಾನಂದ ಸ್ವಾಮೀಜಿ, ಕುಂಬಳಗೋಡದ ಚನ್ನಬಸವೇಶ್ವರ ಜ್ಞಾನಪೀಠ

Advertisement

Udayavani is now on Telegram. Click here to join our channel and stay updated with the latest news.

Next