Advertisement

ಯುವಶಕ್ತಿಯಿಂದ ಭಾರತ ವಿಶ್ವ ಗುರುವಾಗಲು ಸಾಧ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

06:50 PM Jan 04, 2022 | Team Udayavani |

ಮಂಡ್ಯ: ಭಾರತ ವಿಶ್ವ ಗುರುವಾಗಲು ಯುವಶಕ್ತಿಯಿಂದ ಸಾಧ್ಯವಿದೆ. ಈಗಾಗಲೇ ಭಾರತ ವಿಶ್ವಗುರುವಾಗಿ ಗುರುತಿಸಿಕೊಂಡಿದೆ. ಮುಂದೆಯೂ ವಿಶ್ವಗುರುವಾಗಲು ಯುವಕರು ಮಹತ್ವದ ಪಾತ್ರ ವಹಿಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

Advertisement

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾರ್ಷಲ್ ಆರ್ಟ್ಸ್, ಯುವಕರ ಕಲಾ ಪ್ರದರ್ಶನದ ಕಾರ್ಯಾಗಾರಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯುವಕ-ಯುವತಿಯರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.

ವಿವೇಕಾನಂದರ ನಂತರ ಯುವ ಸಬಲೀಕರಣವನ್ನು ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ. ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡುವಾಗ ಸಹೋದರರೆ, ಸಹೋದರಿಯರೇ ಎಂದು ಗಮನ ಸೆಳೆದಿದ್ದರು. ವಿವೇಕಾನಂದರವರು ತಮ್ಮ ಭಾಷಣದಲ್ಲಿ ರಾಷ್ಟ್ರವನ್ನು ಉನ್ನತೀಕರಣಕ್ಕೆ ಕರೆದೊಯ್ಯಲು ಯುವಕರ ಅವಶ್ಯಕತೆ ಇದೆ ಎಂದಿದ್ದರು. ಭಾರತ ದೇಶ ಯುವಶಕ್ತಿಯ ದೇಶವಾಗಿದೆ. ಯುವಶಕ್ತಿಯನ್ನು ಸದ್ಬಳಕೆ ಮಾಡಿದರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.

ವಿವೇಕಾನಂದರು ಪರಿವರ್ತನೆಗೆ ಯುವಕರ ಪಾತ್ರ ದೊಡ್ಡದು ಎಂದು ಹೇಳುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಅದರಂತೆ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಯುವಶಕ್ತಿ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದೆ. ಯುವಕರು ಸದೃಢ ದೇಶ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

Advertisement

ರಾಷ್ಟ್ರದಲ್ಲಿ ಪರಿವರ್ತನೆ, ಬಲವರ್ಧನೆ ಹಾಗೂ ವಿಶ್ವ ಮಟ್ಟದಲ್ಲಿ ಭಾರತವನ್ನು ಗುರುತಿಸಲು ಯುವಜನರ ಅವಶ್ಯಕತೆ ಇದೆ. ದೇಶದಲ್ಲಿ ಕೈಗೊಂಡಿರುವ ಆತ್ಮನಿರ್ಭರ್ ಯೋಜನೆಯಲ್ಲಿ ಯುವಕರಿಗೆ ಅನುಕೂಲವಾಗುವ ಕಾರ್ಯಕ್ರಮಗಳಿವೆ. ರಾಜ್ಯ ಸರ್ಕಾರ ಯುವಜನರ ಪ್ರೋತ್ಸಾಹಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಿದೆ ಎಂದರು.

ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವುದರಿಂದ ಯುವಕರಿಗೆ ಮಾರ್ಗದರ್ಶನ, ಪ್ರೋತ್ಸಾಹ, ಪ್ರತಿಭೆ ಗುರುತಿಸುವ ಮೂಲಕ ಮತ್ತಷ್ಟು ಸದೃಢಗೊಳಿಸಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ದೇಶ ಸದೃಢವಾಗಿ ಬೆಳೆಯಲಿದೆ. ಯುವ ಜನರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬೆಳೆಯಲಿದ್ದಾರೆ. ಭಾರತ ಯುವ ಜನರ ದೇಶ. ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಈ ರಾಷ್ಟçವನ್ನು ಮುನ್ನೆಡೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.

ಐಐಟಿ, ಐಎಎಂ ದೇಶದ ಅತಿ ದೊಡ್ಡ ಶಿಕ್ಷಣ ಸಂಸ್ಥೆಗಳು. ಇವುಗಳ ಮೂಲಕ ಯುವ ಜನರನ್ನು ತಯಾರು ಮಾಡುವ ಅವಶ್ಯಕತೆ ಇದೆ. ತರಬೇತಿ ನೀಡಿದರೆ ಪ್ರಪಂಚ ಭಾರತದ ಯುವಕರನ್ನು ನೋಡಿ ಆಶ್ಚರ್ಯಪಡಲಿದೆ. ಆದಿಚುಂಚನಗಿರಿ ಮಠವು ಹಲವಾರು ದಶಕಗಳಿಂದ ಸಾವಿರಾರು ಯುವಕರನ್ನು ಸಮಾಜಕ್ಕೆ ಕೊಡುಗೆ ನೀಡಿದೆ. ಶಿಕ್ಷಣ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು ಪ್ರಶಂಶನೀಯ ಎಂದರು.

ಆದಿಚುAಚನಗಿರಿ ಮಠವು ಸಮಾಜದಲ್ಲಿ ವ್ಯಕ್ತಿ ವಿಕಾಸ ಹಾಗೂ ಮೌಲ್ಯಯುತ ಯುವಜನರನ್ನು ಹೊರ ತರುವಲ್ಲಿ ಪರಿಣಾಮಕಾರಿಯಾದ ಕಾರ್ಯವನ್ನು ಮಾಡುತ್ತಿದೆ. ಇಂತಹ ಕಾರ್ಯವು ಯುವ ಜನರನ್ನು ಸದೃಢಗೊಳಿಸುವಲ್ಲಿ ಸಹಕಾರಿಯಾಗಲದೆ. ಮುಂದೆ ಈ ಸದೃಢ ಯುವ ಸಮುದಾಯ ಭಾರತ ನಿರ್ಮಾಣದಲ್ಲಿ ತೊಡಗಲಿದೆ ಎಂದು ತಿಳಿಸಿದರು.

ಸಚಿವರಾದ ಕೆ.ಸಿ.ನಾರಾಯಣಗೌಡ, ಸುನಿಲ್ ಕುಮಾರ್, ಶಾಸಕರಾದ ಕೆ.ಸುರೇಶ್‌ಗೌಡ, ಎಂ.ಶ್ರೀನಿವಾಸ್, ಯುವಜನ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯ ಯುವ ನೀತಿಯ ಅಧ್ಯಕ್ಷ ಡಾ.ಆರ್.ಬಾಲಸುಬ್ರಮಣ್ಯಂ, ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ದಿವ್ಯಪ್ರಭು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next