Advertisement

ಜಯಂತ್‌ ಶೆಟ್ಟಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ರಾಜ್ಯ ಹೈಕೋರ್ಟ್‌

02:06 AM Jul 09, 2022 | Team Udayavani |

ಮಂಗಳೂರು: ಹಳೆಯ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಎಸ್‌ಪಿ ಜಯಂತ್‌ ಶೆಟ್ಟಿ ವಿರುದ್ಧ ಮಂಗಳೂರಿನ ಅಡಿಷನಲ್‌ ಸೀನಿಯರ್‌ ಸಿವಿಲ್‌ ನ್ಯಾಯಾಲಯ ನೀಡಿದ್ದ ಜಾಮೀನು ರಹಿತ ವಾರಂಟ್‌ಗೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿ ಅಂದಿನ ಇನ್‌ಸ್ಪೆಕ್ಟರ್‌ ಜಯಂತ್‌ ಶೆಟ್ಟಿ ಮತ್ತು ಎಸ್‌ಐ ಶಿವಪ್ರಕಾಶ್‌ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕಬೀರ್‌ ಉಳ್ಳಾಲ್‌ ವಕೀಲ ಖಾಝಿ ಅವರ ಮುಖಾಂತರ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ವಿಚಾರಾಧೀನ ನ್ಯಾಯಾಲಯ, ಜಯಂತ್‌ ಶೆಟ್ಟಿ ಹಾಗೂ ಶಿವಪ್ರಕಾಶ್‌ಗೆ ನೋಟಿಸ್‌ ಜಾರಿಗೊಳಿಸಿತ್ತು.

ಕೋರ್ಟ್‌ ಆದೇಶದ ವಿರುದ್ಧ ಈ ಇಬ್ಬರು ಪೊಲೀಸ್‌ ಅಧಿಕಾರಿಗಳು ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪೊಲೀಸ್‌ ಅಧಿಕಾರಿಗಳ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿತ್ತು. ಈ ಬಗ್ಗೆ ಕಬೀರ್‌ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಹೈಕೋರ್ಟ್‌ ಪ್ರಕರಣವನ್ನು ವಿಚಾರಣೆ ನಡೆಸಿ, ಮರು ತನಿಖೆ ನಡೆಸುವಂತೆ ಆದೇಶಿಸಿ, ಪೊಲೀಸ್‌ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿತ್ತು. ಆ ಪ್ರಕಾರ ಶಿವಪ್ರಕಾಶ್‌ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಜಯಂತ್‌ ಶೆಟ್ಟಿಗೆ ಯಾವುದೇ ನೋಟಿಸ್‌ ಸಿಕ್ಕಿರಲಿಲ್ಲ. ಈ ಮಧ್ಯೆ ವಿಚಾರಣಾಧೀನ ನ್ಯಾಯಾಲಯ ಏಕಾಏಕಿ ಜೂ.20ರಂದು ಜಯಂತ್‌ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರು ಆಯುಕ್ತರ ಮೂಲಕ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರು.

ಜಯಂತ್‌ ಶೆಟ್ಟಿ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದು, ಯಾವುದೇ ನೋಟಿಸ್‌ ಜಾರಿಯಾಗಿಲ್ಲ. ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರಗಿಸಲು ಸೆಕ್ಷನ್‌ 197 ಸಿಆರ್‌ಪಿಸಿ ಹಾಗೂ 170 ಪೊಲೀಸ್‌ ಕಾಯ್ದೆಯಡಿ ಅನುಮತಿ ಪಡೆದಿಲ್ಲ ಎಂದಿದ್ದರು. ಇದನ್ನು ಪುರಸ್ಕರಿಸಿದ ಹೈಕೋರ್ಟ್‌ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ ಎಂದು ಜಯಂತ್‌ ಶೆಟ್ಟಿ ಪರ ವಕೀಲ ಪದ್ಮರಾಜ್‌ ಆರ್‌. ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next