Advertisement

ರಾಜ್ಯ ಕ್ರಿಕೆಟ್‌ ಸಂಸ್ಥೆ ಚುನಾವಣೆ ಗಡುವು ವಿಸ್ತರಣೆ

12:55 AM Sep 07, 2019 | Sriram |

ಮುಂಬಯಿ: ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಚುನಾವಣೆಯ ಗಡುವನ್ನು ಬಿಸಿಸಿಐ ವಿಸ್ತರಿಸಿದೆ. ಇದರಿಂದ ಕರ್ನಾಟಕ ಕ್ರಿಕೆಟ್‌ ಸಂಸ್ಥೆಯೂ ಸೇರಿದಂತೆ ದೇಶದ ಹಲವು ರಾಜ್ಯ ಸಂಸ್ಥೆಗಳು ನಿಟ್ಟುಸಿರುಬಿಟ್ಟಿವೆ.

Advertisement

ಈ ಮೊದಲು ಸೆ.14ಕ್ಕೆ ಮುನ್ನ ಚುನಾವಣೆಗಳನ್ನು ಮುಗಿಸಿಕೊಳ್ಳಬೇಕು ಎಂದು ಬಿಸಿಸಿಐ ಸೂಚಿಸಿತ್ತು. ಆದರೆ ಹಲವು ರಾಜ್ಯ ಸಂಸ್ಥೆಗಳು ಇದನ್ನು ಪಾಲಿಸುವುದು ಅಸಾಧ್ಯ ಎಂದರಿತ ಮೇಲೆ ಗಡುವನ್ನು ಸೆ. 28ಕ್ಕೆ ಮುಂದೂಡಿದೆ. ಇನ್ನು ಯಾವುದೇ ಕಾರಣಕ್ಕೆ ಗಡುವು ವಿಸ್ತರಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌ ಖಡಾಖಂಡಿತವಾಗಿ ಹೇಳಿದ್ದಾರೆ.

ಇನ್ನೂ ಅಳವಡಿಸದ
ಲೋಧಾ ಶಿಫಾರಸು
ಚುನಾವಣೆ ನಡೆಸಲು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಲೋಧಾ ಸಮಿತಿ ಶಿಫಾರಸನ್ನು ಪೂರ್ಣವಾಗಿ ಅಳವಡಿಸಿಕೊಂಡಿರಬೇಕು. ಆದರೆ ಕರ್ನಾಟಕ ಕ್ರಿಕೆಟ್‌ ಸಂಸ್ಥೆಯೂ ಸೇರಿದಂತೆ 14 ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಲೋಧಾ ಶಿಫಾರಸನ್ನು ಪೂರ್ಣವಾಗಿ ಅಳವಡಿಸಿಕೊಂಡಿಲ್ಲ ಎಂದು ಬಿಸಿಸಿಐ ತನ್ನ ಹಿಂದಿನ ವರದಿಯಲ್ಲಿ ತಿಳಿಸಿತ್ತು. ಆದ್ದರಿಂದ ಅನಿವಾರ್ಯವಾಗಿ ಬಿಸಿಸಿಐ ಗಡುವನ್ನು ವಿಸ್ತರಿಸಬೇಕಾಗಿ ಬಂದಿದೆ. ಇಲ್ಲೂ ಬಿಸಿಸಿಐ ಷರತ್ತನ್ನು ಹೇರಿದ್ದು, ಸೆ. 12ರೊಳಗೆ ಶಿಫಾರಸನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡು, ಈ ಬಗೆಗಿನ ಮಾಹಿತಿ ಯನ್ನು ಬಿಸಿಸಿಐಗೆ ಸಲ್ಲಿಸಬೇಕು.

ಅ. 22ಕ್ಕೆ ಬಿಸಿಸಿಐ ಚುನಾವಣೆಯಿದೆ. ಸೆ. 28ರ ಒಳಗೆ ರಾಜ್ಯ ಸಂಸ್ಥೆಗಳು ಚುನಾವಣೆ ಮುಗಿಸಿಕೊಳ್ಳಬೇಕು. ಸೆ. 30ಕ್ಕೆ ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿನಿಧಿಗಳ ವಿವರವನ್ನು ಬಿಸಿಸಿಐಗೆ ಕಳುಹಿಸಬೇಕು. ಈ ಪ್ರಕ್ರಿಯೆ 21 ದಿನ ಮುಂಚಿತವಾಗಿ ನಡೆಯಬೇಕಿರುವುದರಿಂದ ಸೆ. 28ಕ್ಕಿಂತ ಜಾಸ್ತಿ ಗಡುವನ್ನು ವಿಸ್ತರಿಸಲು ಸಾಧ್ಯವೇ ಇಲ್ಲ ಎಂದು ವಿನೋದ್‌ ರಾಯ್‌ ಅವರು ಖಚಿತವಾಗಿ ಹೇಳಿದ್ದಾರೆ.

ಕೆಎಸ್‌ಸಿಎ ಚುನಾವಣೆ
ಸೆ. 28ರೊಳಗೆ ರಾಜ್ಯ ಸಂಸ್ಥೆಗಳ ಚುನಾವಣೆ ಮುಗಿಸಿಕೊಳ್ಳಲು ಬಿಸಿಸಿಐ ಸೂಚಿಸಿರುವುದರಿಂದ, ಕೆಎಸ್‌ಸಿಎ ಚುನಾವಣೆ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಧ್ಯಮ ವಕ್ತಾರ ವಿನಯ್‌ ಮೃತ್ಯುಂಜಯ, ಕೆಎಸ್‌ಸಿಎಗೆ ಇನ್ನೂ ಒಂದು ವಾರ ಸಮಯ ಬೇಕು. ಅನಂತರ ಎಲ್ಲವೂ ಸ್ಪಷ್ಟಗೊಳ್ಳಲಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next