Advertisement

ನವ ನಿರ್ಮಾಣದ ಬಜೆಟ್‌: ಜನಪ್ರಿಯತೆಗಿಂತ ತುರ್ತು ಅಗತ್ಯ ಬೇಡಿಕೆಗಳು ಆದ್ಯತೆಯಾಗಬೇಕು

01:56 AM Feb 16, 2021 | Team Udayavani |

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಮಾರ್ಚ್‌ ಮೊದಲ ವಾರದಲ್ಲಿ ರಾಜ್ಯ ಬಜೆಟ್‌ ಮಂಡನೆಯಾಗಲಿದ್ದು, ಇಡೀ ರಾಜ್ಯದ ಜನರ ನಿರೀಕ್ಷೆ ಇದರ ಮೇಲಿದೆ. ಒಂದು ರೀತಿಯಲ್ಲಿ ಇದು ಮರುನಿರ್ಮಾಣದ ಬಜೆಟ್‌. ಜನಪ್ರಿಯ ಯೋಜನೆಗಳಿಗಿಂತ ಕೃಷಿ, ಆರೋಗ್ಯ, ಉದ್ಯೋಗ ಸೃಷ್ಟಿ, ಸಂಚಾರ- ಸಾರಿಗೆ ಸುಧಾರಣೆ, ಕೈಗಾರಿಕೆಗಳಿಗೆ ಪ್ರೋತ್ಸಾಹ, ವ್ಯಾಪಾರ- ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಮತ್ತು ಅನಗತ್ಯ ವೆಚ್ಚ, ಸಂಪನ್ಮೂಲ ಸೋರಿಕೆ ತಡೆಯುವುದು ಬಜೆಟ್‌ನ ಆದ್ಯತೆಗಳಾಗಬೇಕಾಗಿದೆ. ಇದು ಉದಯವಾಣಿ ಆಶಯವೂ ಹೌದು.

Advertisement

ಆರೋಗ್ಯಕ್ಕೆ ಬೇಕು ಒತ್ತು
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲೇ ಮೂಲ ಸೌಕರ್ಯ ವೃದ್ಧಿಸಬೇಕಿದೆ. ಆ್ಯಂಬುಲೆನ್ಸ್‌ ಲಭ್ಯತೆ, ಟೆಲಿ ಮೆಡಿಸಿನ್‌ ಮಾರ್ಗದರ್ಶನ, ನಗರ – ಗ್ರಾಮೀಣ ಜನರಿಗೆ ಅನುಕೂಲ ವಾಗುವಂತೆ ಆಯ್ದ ಕಡೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅನುದಾನ ನೀಡಬೇಕು. ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಗೆ ಪ್ರದೇಶವಾರು ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವುದು ಆದ್ಯತೆಯಾಗಬೇಕು.

ಕೃಷಿ ಮೇಲಿರಲಿ ಕೃಪೆ
ನಗರದಿಂದ ಬಹಳಷ್ಟು ಮಂದಿ ಹಳ್ಳಿ ಕಡೆಗೆ ವಾಪಸ್‌ ಹೋಗಿದ್ದಾರೆ. ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ, ಉತ್ತಮ ಸಾಲ ಸೌಲಭ್ಯ, ಅಗತ್ಯ ಸಬ್ಸಿಡಿಗಳು, ನೀರಾವರಿಗೆ ಯೋಜನೆಗಳು, ಆಧುನಿಕ ಕೃಷಿ ಅಥವಾ ತಂತ್ರಜ್ಞಾನ ಆಧಾರಿತ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು.

ಗ್ರಾಮೀಣಾಭಿವೃದ್ಧಿ
ಹಳ್ಳಿಗೆ ವಾಪಸ್‌ ಹೋಗಿರುವವರಿಗೆ ಉದ್ಯೋಗ ಸೃಷ್ಟಿಗಾಗಿ ನರೇಗಾಗೆ ಹೆಚ್ಚಿನ ಅನುದಾನ, ಸ್ಥಳೀಯರನ್ನೇ ಬಳಸಿಕೊಂಡು ಮೂಲ ಸೌಕರ್ಯ ಅಭಿವೃದ್ಧಿ ಮಾಡುವುದು, ಸ್ವಯಂ ಸಹಾಯ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕಿದೆ.

ವ್ಯಾಪಾರ- ವಹಿವಾಟಿಗೆ ಉತ್ತೇಜನ
ಇದು ತೆರಿಗೆ ಏರಿಕೆಯ ಕಾಲವಲ್ಲ. ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜನ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ. ಇಂಥ ಕಾಲದಲ್ಲಿ ವ್ಯಾಪಾರ -ವಹಿವಾಟಿಗೆ ಉತ್ತೇಜನ ನೀಡಬೇಕು. ಆಗ ತೆರಿಗೆ ಸಂಗ್ರಹ, ಜನರ ಖರೀದಿ ಸಾಮರ್ಥ್ಯ ಹೆಚ್ಚಳ, ವಿಪುಲ ಉದ್ಯೋಗಾವಕಾಶ ಸಿಗುತ್ತದೆ.

Advertisement

ಉದ್ಯೋಗ ಸೃಷ್ಟಿಗೆ ಆದ್ಯತೆ
ಕೈಗಾರಿಕೆಗಳು ಸಹಿತ ಉತ್ಪಾದನೆ, ಸೇವಾ ವಲಯದ ವಹಿವಾಟು ಚೇತರಿಸಿಕೊಳ್ಳುತ್ತಿದ್ದು, ಕಾರ್ಮಿಕರ ಕೊರತೆ ಇದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮಗಳನ್ನು ಜೋಡಿಸುವ, ಅಗತ್ಯ ತರಬೇತಿ ಕೊಡಿಸಿ ಉದ್ಯೋಗ ಕಲ್ಪಿಸುವುದು ಸದ್ಯದ ಅಗತ್ಯವಾಗಿದೆ.

ಕೈಗಾರಿಕೆ ಸ್ಥಾಪನೆಗೆ ಒತ್ತು
ಒಂದೆರಡು ವರ್ಷಗಳಲ್ಲಿ ಮಂಜೂ ರಾತಿ ಪಡೆದವರು ತ್ವರಿತವಾಗಿ ಕೈಗಾರಿಕೆಗಳನ್ನು ಆರಂಭಿಸುವಂತೆ ಸರಕಾರ ಕ್ರಮ ವಹಿಸಬೇಕು. ಅದಕ್ಕೆ ಅಗತ್ಯವಿರುವ ಸೌಲಭ್ಯ, ಉತ್ತೇಜನ, ವಿನಾಯಿತಿಗಳ ಬಗ್ಗೆಯೂ ಬಜೆಟ್‌ನಲ್ಲಿ ಘೋಷಿಸಿ ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹಿಸಬೇಕು.

ಮೂಲ ಸೌಕರ್ಯ
ರಾಜ್ಯಾದ್ಯಂತ ಜನ ಸಂಚಾರ ಮತ್ತು ಸರಕು ಸಾಗಣೆಗಾಗಿ ರಸ್ತೆ ಮೂಲ ಸೌಕರ್ಯ, ರೈಲ್ವೇ ಮಾರ್ಗ, ಬಂದರು, ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಅನುದಾನ ಒದಗಿಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಾಗ್ಧಾನ ನೀಡಬೇಕಿದೆ.

ಶಿಕ್ಷಣ
ಸರಕಾರಿ ಶಾಲೆಗಳ ಅಭಿವೃದ್ಧಿಗೆ ಇದು ಸುಸಮಯ. ಲಾಕ್‌ಡೌನ್‌ ಬಳಿಕ ಶಾಲೆಗಳಿಗೆ ಮಕ್ಕಳನ್ನು ಕಳುಹಿ ಸುವ ಹೆತ್ತವರ ಸಂಖ್ಯೆ ಅಧಿಕವಾಗಿದೆ. ಇದನ್ನು ಸರಕಾರ ಸದುಪಯೋಗಿಸಿ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸ‌ಬೇಕು. ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಂತಹ ಇನ್ನಷ್ಟು ಶಿಕ್ಷಣ ಸಂಸ್ಥೆಗಳನ್ನು ತೆರೆಯುವಲ್ಲೂ ಆಸ್ಥೆ ವಹಿಸಬೇಕು.

ನಿರ್ವಹಣ ಬಜೆಟ್‌
ಸ್ವಂತ ತೆರಿಗೆ ಆದಾಯ ನಿರೀಕ್ಷೆಯ ಜತೆಗೆ ಕೇಂದ್ರದಿಂದ ಬರುವ ತೆರಿಗೆ ಪಾಲು, ಸಹಾಯಾನುದಾನದ ಬಗ್ಗೆ ರಾಜ್ಯ ಸರಕಾರಕ್ಕೆ ಈಗಾಗಲೇ ಸ್ಪಷ್ಟ ಅಂದಾಜು ಇದ್ದಂತಿದೆ. ಹಾಗಾಗಿ ಅನುದಾನ ಹಂಚಿಕೆಯನ್ನಷ್ಟೇ ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಆರ್ಥಿಕ ಶಿಸ್ತು ಪಾಲನೆ ಜತೆಗೆ ಹೆಚ್ಚುವರಿ ಸಾಲದ ಮೊರೆ ಹೋಗದೆ ಲಭ್ಯವಿರುವ ಸಂಪನ್ಮೂಲವನ್ನೇ ಪರಿಣಾಮಕಾರಿಯಾಗಿ ಬಳಸುವ ಮೂಲಕ “ನಿರ್ವಹಣ ಬಜೆಟ್‌’ ಮಂಡಿಸುವುದು ಸದ್ಯದ ಅನಿವಾರ್ಯವಾಗಿದೆ.

ಬದ್ಧತಾ ವೆಚ್ಚ ತಗ್ಗಿಸಲು ದಿಟ್ಟ ಕ್ರಮ ಬೇಕು
ಸದ್ಯ ಆಯವ್ಯಯದ ಅಂದಾಜು ವೆಚ್ಚದಲ್ಲಿ ಶೇ. 90ರಷ್ಟು ಬದ್ಧತಾ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಸರಕಾರಿ ನೌಕರರಿಗೆ ಸಂಬಳ, ಸಾರಿಗೆ, ಪಿಂಚಣಿ, ಆಡಳಿತ ವೆಚ್ಚ, ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ, ನೆರವು, ಸಾಲ ಮರುಪಾವತಿ, ಇತರ ವೆಚ್ಚಗಳನ್ನು ಸರಕಾರ ಭರಿಸಲೇಬೇಕು. ಆದರೆ ಅನಗತ್ಯ ಹುದ್ದೆಗಳು, ಸಮಾನ ಜವಾಬ್ದಾರಿಯ ಪುನರಾವರ್ತಿತ ಹುದ್ದೆಗಳ, ನಾಮ್‌ ಕೇ ವಾಸ್ತೆ ಹುದ್ದೆ, ಸ್ಥಾನಗಳನ್ನು ಕಡಿತಗೊಳಿಸಲು ಪೂರಕ ಕ್ರಮಗಳನ್ನು ಬಜೆಟ್‌ನಲ್ಲೇ ಘೋಷಿಸಿದರೆ ಪರಿಣಾಮಕಾರಿ ಜಾರಿಗೆ ನೆರವಾಗಬಹುದು.

-  ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next