Advertisement

ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ 4 ಸಚಿವ ಸ್ಥಾನ : ಪ್ರಧಾನಿಯವರಿಗೆ ರಾಜ್ಯ ಬಿಜೆಪಿ ಅಭಿನಂದನೆ

03:43 PM Jul 09, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತಿತರ ಕೆಲವು ರಾಜಕಾರಣಿಗಳು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದರು. 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ ರಾಜ್ಯಕ್ಕೆ ಪ್ರಧಾನಿಯವರು ಒಂದು ದೊಡ್ಡ ಉಡುಗೊರೆÉಯನ್ನು ನೀಡಿದ್ದಾರೆ ಎಂದು ಹೆಮ್ಮೆಯಿಂದ ನಾವು ಹೇಳುತ್ತೇವೆ. ಅದರಲ್ಲೂ ಮುಖ್ಯವಾಗಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ದಲಿತರು, ಹಿಂದುಳಿದ ವರ್ಗದವರಿಗೆ ಒಂದು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಚಿತ್ರದುರ್ಗದ ಸಂಸದರಾದ ಶ್ರೀ ಎ. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಶ್ರೀ ಎನ್.ರವಿಕುಮಾರ್ ಅವರು ತಿಳಿಸಿದರು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದ ಕರಾವಳಿ ಭಾಗವನ್ನು ಪ್ರತಿನಿಧಿಸುವ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ಅವರಿಗೂ ಸಚಿವ ಸ್ಥಾನ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಬೀದರ್‍ನಿಂದ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಶ್ರೀ ಭಗವಂತ್ ಖೂಬಾ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಅದೇರೀತಿಯಲ್ಲಿ ಬೆಂಗಳೂರು ನಗರಕ್ಕೆ ಮಾತ್ರವಲ್ಲದೆ, ವಿಜ್ಞಾನ, ತಂತ್ರಜ್ಞಾನ, ಕೌಶಲ್ಯ, ಎಂಜಿನಿಯರಿಂಗ್, ಮಾಧ್ಯಮ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಯನ್ನು ಪ್ರಧಾನಿಯವರು ಕೊಟ್ಟಿದ್ದಾರೆ. ಶ್ರೀ ರಾಜೀವ್ ಚಂದ್ರಶೇಖರ್ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಇಡೀ ಕರ್ನಾಟಕವೇ ಹೆಮ್ಮೆ ಪಡುವ ರೀತಿಯಲ್ಲಿ ಮಂತ್ರಿ ಮಂಡಲಕ್ಕೆ ನಾಲ್ವರ ಸೇರ್ಪಡೆಯಾಗಿದೆ. ಇದಕ್ಕಾಗಿ ರಾಜ್ಯ ಬಿಜೆಪಿ ವತಿಯಿಂದ ಪ್ರಧಾನಿಯವರನ್ನು, ಕೇಂದ್ರ ಸಚಿವ ಶ್ರೀ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕೋವಿಡ್ ಮೂರನೇ ಅಲೆ ತಡೆಯಲು ದೇಶಕ್ಕೆ 23,123 ಕೋಟಿ ರೂಪಾಯಿಯನ್ನು ನೀಡಿದ್ದನ್ನು ಬಿಜೆಪಿ ಸ್ವಾಗತಿಸುತ್ತದೆ. ರೈತರು, ಕೃಷಿ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಅವರು ಪದೇಪದೇ ಹೇಳುತ್ತಿದ್ದರು. ಈಗ ಮತ್ತೆ ಒಂದು ಲಕ್ಷ ಕೋಟಿ ರೂಪಾಯಿಯನ್ನು ಕೃಷಿ ಮತ್ತಿತರ ಪೂರಕ ಕ್ಷೇತ್ರಕ್ಕೆ ಪ್ರಧಾನಿಯವರು ಘೋಷಿಸಿದ್ದಾರೆ. ಕೋಲ್ಡ್ ಸ್ಟೋರೇಜ್, ಮಾರುಕಟ್ಟೆ ಅಭಿವೃದ್ಧಿ ಮತ್ತಿತರ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಇದು ಬಳಕೆಯಾಗಲಿದೆ ಎಂದು ವಿವರಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಶ್ರೀ ಅಶ್ವತ್ಥನಾರಾಯಣ ಅವರು ಮಾತನಾಡಿ, ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ಸಾಮಾಜಿಕ ನ್ಯಾಯ ನೀಡಿರುವುದು ಸಂತಸದ ವಿಚಾರ ಎಂದರು. ಅನುಭವಿಗಳಾದ ಶ್ರೀ ರಾಜೀವ್ ಚಂದ್ರಶೇಖರ್ ಸೇರಿದಂತೆ ನೇಮಕಗೊಂಡ ಎಲ್ಲ ಸಚಿವರೂ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ; ಅಲ್ಲದೆ ಪರಿಣಿತರೂ ಸೇರಿದ್ದಾರೆ. ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯವನ್ನು ಪ್ರಧಾನಿಯವರು ನೀಡಿದ್ದಾರೆ ಎಂದು ವಿವರಿಸಿದರು.

Advertisement

ರಾಜ್ಯವನ್ನೇ ಪ್ರತಿನಿಧಿಸುವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕ್ಯಾಬಿನೆಟ್ ಸಚಿವರಾಗಿದ್ದರೆ, ಇತರ ನಾಲ್ವರು ರಾಜ್ಯ ಸಂಪುಟದ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕರ್ನಾಟಕಕ್ಕೆ ಇದು ಧನಾತ್ಮಕ ವಿಚಾರ. ಇದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.

ದೇಶದಲ್ಲಿ ಶೌಚಮುಕ್ತ ಮನೆಗಳು- ಗ್ರಾಮಗಳನ್ನು ಹೊಂದುವ ಪ್ರಧಾನಿಯವರ ಪ್ರಯತ್ನ ಶ್ಲಾಘನೀಯ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲ ಜೀವನ್ ಮಿಷನ್ ಯೋಜನೆ ಜಾರಿಯಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಇರುವ ಜಿಲ್ಲೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಜಿಲ್ಲೆಯಾದ ರಾಮನಗರದಲ್ಲಿ 1,23,175 ಮನೆಗಳಿಗೆ ಕುಡಿಯುವ ನೀರು ನೀಡುವ ಯೋಜನೆ ಚಾಲನೆಯಾಗಿದೆ. 43 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ ಕೊಡಲಾಗಿದೆ. ಇದರಡಿ 658 ಕಾಮಗಾರಿಗಳಿಗೆ ಚಾಲನೆ ಕೊಡಲಾಗಿದೆ ಎಂದರು.
ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿರುವುದು ನೀರಾವರಿ ಕ್ಷೇತ್ರಕ್ಕೆ ನೀಡಿದ ದೊಡ್ಡ ಕೊಡುಗೆ. 4 ಹೊಸ ಸಚಿವರು ಬರುವ ಮೂಲಕ ಹೆಚ್ಚು ಯೋಜನೆಗಳು ರಾಜ್ಯಕ್ಕೆ ಬರಲಿವೆ ಮತ್ತು ಕೇಂದ್ರ ಸರಕಾರವು ಇದಕ್ಕೆ ಸಮರ್ಪಕವಾಗಿ ಸ್ಪಂದಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, 4 ಸಚಿವರ ಪೈಕಿ ಶ್ರೀ ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯದ ಸಚಿವ ಸ್ಥಾನವನ್ನು ನೀಡುವ ಮೂಲಕ ಮಾನ್ಯ ಮೋದಿಜಿ ಅವರು ಇಡೀ ದೇಶಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ. 8 ಜನ ಎಸ್‍ಟಿ ಮತ್ತು 12 ಜನರನ್ನು ಎಸ್‍ಸಿ ಸಮುದಾಯದಿಂದ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ದಲಿತ ಸಮುದಾಯಕ್ಕೆ ಇದುವರೆಗೆ ಯಾವುದೇ ಕೇಂದ್ರ ಸರಕಾರಗಳು ಕೊಡದಷ್ಟು ಪ್ರಾತಿನಿಧ್ಯವನ್ನು ಪ್ರಧಾನಿಯವರು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಇದು ಸಾಮಾಜಿಕ ಸಾಮರಸ್ಯ ಕಾಪಾಡುವಂತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಾತಿನಂತೆ ಅವರು ನಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಅವರು “ದಲಿತರಿಗೆ ಇಷ್ಟೊಂದು ಸ್ಥಾನ ಕೊಟ್ಟಿರುವುದು ದಾರಿ ತಪ್ಪಿಸುವ ಕೆಲಸ” ಎಂದು ಹೇಳಿಕೆ ನೀಡಿದ್ದಾರೆ. ಇದು ನಮಗ್ಯಾರಿಗೂ ಅರ್ಥವಾಗಿಲ್ಲ. ಕಾಂಗ್ರೆಸ್ಸಿಗರು ದಲಿತರನ್ನು ದಾರಿ ತಪ್ಪಿಸಿದ್ದು ನೆನಪಾಗಿ ಅವರು ಹೀಗೆ ಹೇಳಿರಬಹುದೆಂಬ ನನಗನಿಸುತ್ತಿದೆ ಎಂದು ತಿಳಿಸಿದರು. ದಲಿತರಿಗೆ ಹೆಚ್ಚು ಸ್ಥಾನ ನೀಡಿದ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರೆ ಅದು ಸಾಂದರ್ಭಿಕವಾಗಿ ಸರಿ ಇರುತ್ತಿತ್ತು ಎಂದು ತಿಳಿಸಿದರು. ಕಾಂಗ್ರೆಸ್‍ನವರು ಈಗ ವಿಚಲಿತರಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಒಟ್ಟು ಸಚಿವ ಸ್ಥಾನಗಳ ಪೈಕಿ 27 ಜನ ಒಬಿಸಿ, ಎಸ್‍ಸಿ 12, ಎಸ್ಟಿ 8, ಅಲ್ಪಸಂಖ್ಯಾತರ ಸಮುದಾಯಕ್ಕೆ 5 ಸೇರಿ 52 ಸ್ಥಾನಗಳನ್ನು ನೀಡಿ ಸಾಮಾಜಿಕ ನ್ಯಾಯ ಮೆರೆದಿದ್ದಾರೆ. ಆದರೂ, ಮೇಲ್ವರ್ಗಕ್ಕೆ ಅರ್ಧಕ್ಕಿಂತ ಹೆಚ್ಚು ಸ್ಥಾನ ಕೊಡಲಾಗಿದೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಜಾತಿಗೆ ಮಣೆ ಹಾಕುವುದು ಕಾಂಗ್ರೆಸ್‍ನ ಕಾರ್ಯ. ಜಾತಿ ನೋಡಿ ಮಣೆ ಹಾಕುವ ಕಾರ್ಯ ಬಿಜೆಪಿಯಲ್ಲಿ ಇಲ್ಲ. ಆದರೆ, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಎಲ್ಲರನ್ನೂ ಗುರುತಿಸುವ ಕಾರ್ಯವನ್ನು ಪಕ್ಷ ಮಾಡಿದೆ ಎಂದು ವಿವರಿಸಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿಗಳಾದ ಶ್ರೀ ಅರುಣ್ ಸಿಂಗ್ ಅವರು, ಯಾರು ಪಕ್ಷ ವಿರೋಧಿ ಚಟುವಟಿಕೆಂiÀiಲ್ಲಿ ತೊಡಗಿದ್ದಾರೆ. ಯಾರು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ ಎಂಬ ಬಗ್ಗೆ ತಿಳಿದುಕೊಂಡು ಹೋಗಿದ್ದಾರೆ. ಏನು ಮಾಡಿದರೂ ನಡೆಯುತ್ತೆ ಎಂಬುದು ಇದರ ಅರ್ಥವಲ್ಲ. ಇದುವರೆಗೆ ಕೋವಿಡ್ 2ನೇ ಅಲೆಯ ವಿಪರೀತ ಕೆಲಸದಲ್ಲಿದ್ದರು. ಈ ನಡುವೆ ಕೇಂದ್ರ ಸರಕಾರದ ಸಂಪುಟ ವಿಸ್ತರಣೆ ಆಗಿದೆ. ಆದ್ದರಿಂದ ರಾಜ್ಯದ ಕಡೆ ಗಮನ ಹರಿಸಲು ಆಗಿರಲಿಕ್ಕಿಲ್ಲ. ಯಾರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವರೋ ಅಂಥವರ ವಿರುದ್ಧ ಸರಿಯಾದ ಕ್ರಮವನ್ನು ಕೇಂದ್ರದ ಪಕ್ಷದ ನಾಯಕರು ಕೆಲವೇ ದಿನಗಳಲ್ಲಿ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ರವಿಕುಮಾರ್ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.

ಶಾಸಕರು ನಮ್ಮವರೇ. ಹಾಗಾಗಿ ನಮ್ಮ ಶಾಸಕರ ಬಗ್ಗೆ ನಾವು ಬಹಳ ಹಗುರವಾಗಿ ಮಾತನಾಡಲು ಹೋಗುವುದಿಲ್ಲ. ಬಾಯಿ ನಮ್ಮದೇ, ಹಲ್ಲು ನಮ್ಮದೇ, ನಾಲಗೆ ಎಲ್ಲವೂ ನಮ್ಮದೇ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಹದ್ದು ಮೀರಿ ಮಾತನಾಡುವವರ ವಿರುದ್ಧ ಕೆಲವೇ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುವ ಸ್ಪಷ್ಟ ಸೂಚನೆಯನ್ನು ಕೇಂದ್ರದ ನಾಯಕರು ನೀಡಿದ್ದಾರೆ. ಪಕ್ಷ ವಿರೋಧಿ ಪತ್ರಿಕಾ ಹೇಳಿಕೆಗಳನ್ನು ಕೇಂದ್ರಕ್ಕೆ ಕಳುಹಿಸಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಾಧ್ಯಮ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next