Advertisement

ಆದರ್ಶ ಗ್ರಾಮಕ್ಕೆ ರಾಜ್ಯ ನಿರಾಸಕ್ತಿ

01:14 PM Jun 20, 2017 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರದಿಂದ 2.65 ಕೋಟಿ ರೂ. ಅನುದಾನ ಒದಗಿಸಿದ್ದರೂ ಸಂಸದರ ಆದರ್ಶ ಗ್ರಾಮದ ವಿಚಾರದಲ್ಲಿ ರಾಜ್ಯ ಸರ್ಕಾರ ಉದಾಸೀನತೆ ತೋರುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Advertisement

ಸೋಮವಾರ ಜಿಎಂಐಟಿ ಆವರಣದ ತಮ್ಮ ಖಾಸಗಿ ಕಚೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಚನ್ನಗಿರಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್‌ ಸದಸ್ಯರ ನಿಯೋಗದೊಂದಿಗೆ ಮಾತನಾಡುವ ವೇಳೆ ತಮ್ಮ ಅಸಮಾಧಾನ ಹೊರಹಾಕಿರುವ ಸಿದ್ದೇಶ್ವರ್‌, ಕೇಂದ್ರದ ಬಹುತೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ.

ಸಂಸದರ ಆದರ್ಶ ಗ್ರಾಮ ಯೋಜನೆಗೂ ಸಹಕಾರ ನೀಡುತ್ತಿಲ್ಲ ಎಂದರು. ನಾನು ಪ್ರಥಮಹಂತದಲ್ಲಿ ಆಯ್ಕೆ ಮಾಡಿಕೊಂಡ ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿ ಅನುದಾನದಡಿ 2.65 ಕೋಟಿ ರೂ. ತಂದು ಸಿಮೆಂಟ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಿದೆ.

ಮೂರು ಶುದ್ದ ಕುಡಿಯುವ ನೀರಿನ ಘಟಕ, ಸೋಲಾರ್‌ ಬೀದಿ ದೀಪ ಅಳವಡಿಸಿದೆ. ಬಾಕ್ಸ್‌ ಚರಂಡಿಗಳ ನಿರ್ಮಾಣ, ಸೇರಿದಂತೆ ವಿವಿಧ ಕಾಮಗಾರಿ ಮಾಡಿಸಿದ್ದೇನೆ ಎಂದರು. ರಾಜ್ಯ ಸರ್ಕಾರ ಕೇವಲ 80 ಲಕ್ಷ ರೂ. ಅನುದಾನವನ್ನು ಮುಸ್ಟೂರು ಗ್ರಾಮಪಂಚಾಯತಿಗೆ ವಿನಿಯೋಗಿಸಿದೆ.

ಅದೇ ರೀತಿ 2ನೇ ಹಂತದಲ್ಲಿ ಚನ್ನಗಿರಿ ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಂಡು ಒಂದುವರ್ಷ ಕಳೆದಿದ್ದರೂ ಕೂಡ ಸರ್ಕಾರ ಕೇವಲ 30 ಲಕ್ಷ ರೂ. ಮಾತ್ರ ಅನುದಾನ ವಿನಿಯೋಗಿಸಿದೆ ಎಂದರು. ಕೋಟಿಗಟ್ಟಲೇ ಕ್ರಿಯಾ ಯೋಜನೆ ಸಿದ್ದಪಡಿಸಿ, ರಾಜ್ಯ ಸರ್ಕಾರ ಅನುದಾನ ಹೊಂದಿಸದೇ ಇದ್ದರೆ ಇಚ್ಚಾಶಕ್ತಿಯ ಕೊರತೆಯಲ್ಲದೇ ಇನ್ನೇನು ಎಂದು ಅವರು ಪ್ರಶ್ನಿಸಿದರು. 

Advertisement

ನಾನು ಸ್ವತಃ ಎನ್‌ಜಿಓ ಮೂಲಕ ಈ ಎರಡೂ ಗ್ರಾಮಪಂಚಾಯತಿಗೆ ಒಳಪಡುವ ಗ್ರಾಮಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ, ಕೇಂದ್ರ ಸರ್ಕಾರದ ವಿಮಾ ಯೋಜನೆಗಳನ್ನು ಪ್ರತಿಯೊಬ್ಬರೂ ನೋಂದಾಯಿಸುವಂತೆ ಮನವೊಲಿಸಲಾಗಿದೆ. ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು. 

ಮಲ್ಲಾಪುರ ಗ್ರಾಮಪಂಚಾಯತಿಯ ಮಲ್ಲಾಪುರ ಮತ್ತು ಆಲೂರು ಗ್ರಾಮಗಳಲ್ಲಿ ಶಾಲಾ ಕೊಠಡಿ, ಬಸ್‌ ತಂಗುದಾಣ, ಶಾಲಾ ಕಾಂಪೌಂಡ್‌, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣಕ್ಕೆ 51 ಲಕ್ಷ ರೂ.ಗಳನ್ನು ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಬಿಡುಗಡೆ ಮಾಡಿದ್ದೇನೆ ಎಂದು ಅವರು ತಿಳಿಸಿದರು. 

ನಗರದಂತೆ ಹಳ್ಳಿಗಳೂ ಕೂಡ ಅಭಿವೃದ್ದಿ ಹೊಂದಬೇಕು. ನಗರದ ಕಡೆ ಗ್ರಾಮೀಣರು ವಲಸೆ ಹೋಗುವುದನ್ನು ತಡೆಬೇಕು, ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂಬ ಕಾರಣದಿಂದ ಪ್ರಧಾನ ಮಂತ್ರಿಗಳು ಸಂಸದ ಆದರ್ಶಗ್ರಾಮ ಯೋಜನೆ ರೂಪಿಸಿದ್ದಾರೆ.

ಈ ಯೋಜನೆಯಡಿ ಸರ್ಕಾರಗಳಿಂದ ಮಂಜೂರಾಗುವ ಯೋಜನೆಗಳು ಸಂಸದ ಆದರ್ಶಗ್ರಾಮಗಳಿಗೆ ಮೊದಲು ದೊರೆಯಬೇಕು ಎಂದು ಮಾರ್ಗಸೂಚಿಯನ್ನು ರಚಿಸಲಾಗಿದ್ದರೂ ಕೂಡ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಇಚ್ಚಾಶಕ್ತಿ ಹೊಂದಿಲ್ಲ ಎಂದು ದೂರಿದರು. 

ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಮುಖಂಡರಾದ ಮಹಾಬಲೇಶ್ವರ ಗೌಡ್ರು, ಜಿಪಂ ಸದಸ್ಯ ವಾಗೀಶ್‌ ಸ್ವಾಮಿ, ಮುಖಂಡರಾದ ಟಿ. ಮುಕುಂದ್‌, ಜಯಪ್ರಕಾಶ್‌ ಕೊಂಡಜ್ಜಿ, ಹಿಂಡಸಘಟ್ಟೆ ಪರಮೇಶ್ವರಪ್ಪ, ಗೋವಿನಾಳ್‌ ರಾಜಣ್ಣ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯ್ಯಮ್ಮ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ್‌ ಇತರರು ಈ ವೇಳೆ ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next