Advertisement

ಉತ್ತರ ಕರ್ನಾಟಕದ ಅಭಿವೃದ್ಧಿ ಪರ್ವ ಆರಂಭ: ಸಚಿವ ಶೆಟ್ಟರ್

12:26 PM Jan 15, 2021 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಏಕಸ್‌ ಮತ್ತು ಯುಫ್ಲೆಕ್ಸ್‌ ಕಂಪನಿಗಳ ಸ್ಥಾಪನೆಗೆ ರಾಜ್ಯ ಸರಕಾರ ಅನುಮತಿ ನೀಡಿದ್ದು, ಕಂಪನಿಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ಶೀಘ್ರ ಹಸ್ತಾಂತರಿಸಲಾಗುವುದು. ಉತ್ತರ ಕರ್ನಾಟದ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆ ಕುರಿತು ಸುದೀರ್ಘ‌ ಚರ್ಚೆ ನಡೆಸಿ ಅನುಮತಿ ನೀಡಲಾಗಿತ್ತು. ಜನವರಿ 12ರಂದು ಕೈಗಾರಿಕೆಗಳ ಸ್ಥಾಪನೆಗೆ ಹಣಕಾಸು ಇಲಾಖೆಯ ಅನುಮತಿ ದೊರೆತಿದೆ. ಶೀಘ್ರ ಕಂಪನಿಗಳಿಗೆ ಅನುಮೋದನೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.

20 ಸಾವಿರ ಉದ್ಯೋಗ ಸೃಷ್ಟಿ: ಏಕಸ್‌ ಕಂಪನಿ 3524 ರೂ. ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಇದಕ್ಕೆ ಬೇಕಾದ 358 ಎಕರೆ ಜಮೀನನ್ನು ಇಟಗಟ್ಟಿ ಹಾಗೂ ಗಾಮನಗಟ್ಟಿ ಕೈಗಾರಿಕೆ ವಸಾಹತುಗಳಲ್ಲಿ ಮಂಜೂರು ಮಾಡಲು ನಿರ್ಧರಿಸಲಾಗಿದೆ. ಮುಖ್ಯವಾಗಿ ದಿನನಿತ್ಯ ಉಪಯೋಗಿ ಗ್ರಾಹಕ ವಸ್ತುಗಳ ತಯಾರಿಕಾ ಘಟಕ ಸ್ಥಾಪನೆ ಮಾಡುವುದು. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ 20 ಸಾವಿರ ಉದ್ಯೋಗ ಅವಕಾಶಗಳು ಲಭಿಸಲಿವೆ. ಪೊಟ್ಟಣ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಯುಫ್ಲೆಕ್ಸ್‌ ಕಂಪನಿ 1464 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಿದೆ. ಧಾರವಾಡ ಮಮ್ಮಿಗಟ್ಟಿ ಬಳಿ 50 ಎಕರೆ ಜಮೀನು ಕಂಪನಿಗೆ ಮಂಜೂರು ಮಾಡಲಾಗಿದೆ. ಕಂಪನಿಯಿಂದ ನೇರವಾಗಿ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.

ಇದನ್ನೂ ಓದಿ:ಯಡಿಯೂರಪ್ಪ ಈಗ ದಾರಿ ತಪ್ಪಿದ ಮಗ, ಅವರ ಜೀವ ವಿಜಯೇಂದ್ರನ ಕೈಯಲ್ಲಿದೆ: ವಿಶ್ವನಾಥ್

ಎಫ್‌ಎಂಸಿಜಿ ಕ್ಲಸ್ಟರ್‌ ಘೋಷಣೆ: ಹುಬ್ಬಳ್ಳಿಯನ್ನು ಎಫ್‌ಎಂಸಿಜಿ (ಫಾಸ್ಟ್‌ ಮೂವಿಂಗ್‌ ಕಂಜ್ಯೂಮರ್‌ ಗೂಡ್ಸ್‌) ಕ್ಲಸ್ಟರ್‌ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಮೂರು ಹಂತದಲ್ಲಿ 2500 ಕೋಟಿ ರೂ.ಯಂತೆ ಒಟ್ಟು 7500 ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ. ಇದರಿಂದ ಸುಮಾರು 1ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

Advertisement

ಕ್ಲಸ್ಟರ್‌ ಸ್ಥಾಪನೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಕೈಗಾರಿಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಉತ್ತರ ಭಾರತದ ಗೌವಾಟಿಯಲ್ಲಿ ಸದ್ಯ ಎಫ್‌.ಎಂ.ಸಿ.ಜಿ ಕ್ಲಸ್ಟರ್‌ ಇದ್ದು, ಅಲ್ಲಿನ ಉದ್ಯಮಿಗಳ ಮನ ಒಲಿಸಿ ಹುಬ್ಬಳ್ಳಿಗೆ ಕರೆ ತರಲು ಉದ್ಯಮಿ ಉಲ್ಲಾಸ ಕಾಮತ ನೇತೃತ್ವದಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದು ವಿವರಿಸಿದರು.

ಉ-ಕ ಕೈಗಾರಿಕಾ ಅಭಿವೃದ್ಧಿ: ಕೊಪ್ಪಳದಲ್ಲಿ ಬಾಣಾವರ ಗ್ರಾಮದಲ್ಲಿ 400 ಎಕರೆ ಜಮೀನು ಖರೀದಿಸಿ ಎಸ್‌ಇಝಡ್‌  ಘೋಷಣೆ ಮಾಡಲಾಗಿದೆ. ಆಟಿಕೆ ತಯಾರಿಕಾ ಕ್ಲಸ್ಟರ್‌ ನಿರ್ಮಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 4000 ಎಕರೆ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಹೈದ್ರಾಬಾದ್‌ ಮೂಲದ ಔಷಧ ತಯಾರಿಕಾ ಕಂಪನಿಗಳು ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ರಾಜ್ಯಮಟ್ಟದ ಸಮಿತಿಯಿಂದ ಲಾಕ್‌ ಡೌನ್‌ ಸಂದರ್ಭದಲ್ಲಿ 55 ಔಷಧ ಕಂಪನಿಗಳ ಸೇರಿದಂತೆ ಒಟ್ಟು 70 ಕಂಪನಿಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. 2289 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 11,000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದರು. ವಿಧಾನ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಗೌರವ ಗುಪ್ತಾ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next