Advertisement

ಹಗಲು ಆರೈಕೆ ಕೇಂದ್ರ ಆರಂಭ

09:56 PM Aug 30, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಮಾನಸಿಕವಾಗಿ ಖಿನ್ನತೆಗೊಳಗಾಗಿರುವ ಅಸ್ವಸ್ಥರನ್ನು ಗುಣಪಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮಹತ್ವಕಾಂಕ್ಷೆ ಹೊಂದಿ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲಾಗಿರುವ ಮಾನಸಧಾರ ಹಗಲು ಆರೈಕೆ ಕೇಂದ್ರವನ್ನು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ ಉದ್ಘಾಟಿಸಿ ಜಿಲ್ಲೆಯ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನಿಮ್ಹಾನ್ಸ್‌ ಆಸ್ಪತ್ರೆ ಸಹಯೋಗದಲ್ಲಿ ನಗರದ ಎಂಜಿ ರಸ್ತೆಯ ಪ್ರಸಿಡೆನ್ಸಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾನಸಿಕ ಅಸ್ವಸ್ಥರ ಆರೈಕೆಯಾಗಿ ಆರಂಭಿಸಿದ ಮಾನಸಧಾರ ಹಗಲು ಆರೈಕೆ ಕೇಂದ್ರವನ್ನು ಉದ್ಘಾಟಿಸಲಾಯಿತು.

ಉಚಿತ ಚಿಕಿತ್ಸೆ ಸದ್ಬಳಕೆ ಮಾಡಿಕೊಳ್ಳಿ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ, ಈ ಹಿಂದೆ ಮಾನಸಿಕ ಕಾಯಿಲೆಗೆ ತುತ್ತಾಗಿರುವವ‌ರನ್ನು ಕಡೆಗಣಿಸಿ ಅಂತಹವರನ್ನು ಸಮಾಜದಿಂದ ಹೊರ ಹಾಕಲಾಗುತ್ತಿತ್ತು. ಇದರಿಂದ ಅವರು ಮತ್ತಷ್ಟು ಖಿನ್ನತೆಗೊಳಗಾಗಿ ದುಃಖೀತರಾಗುತ್ತಿದ್ದರು. ಆದರೆ ಈಗ ಮಾನಸಿಕ ಅಸ್ವಸ್ಥರನ್ನು ಸಮಾಜಮುಖೀಯಾಗಿ ಮಾಡಲು ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಾನಸಿಕ ತೊಂದರೆಗೊಳಗಾಗಿರುವವರು ಮಾನಸಧಾರ ಹಗಲು ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಸರ್ಕಾರ ಒದಗಿಸುವ ಉಚಿತವಾದ ಚಿಕಿತ್ಸೆ ಪಡೆದುಕೊಂಡು ಮುಖ್ಯ ಭೂಮಿಕೆಗೆ ಬರಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯು ಆಂಧ್ರಪ್ರದೇಶದ ಗಡಿಭಾಗದಲ್ಲಿರುವುದರಿಂದ ಆಂಧ್ರದ ಜನರು ಕೂಡ ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಾರೆ. ಈ ಕೇಂದ್ರದ ಉಪಯೋಗಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಾನಸಿಕ ಆರೋಗ್ಯ ಮುಖ್ಯ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್‌ಕುಮಾರ್‌ ಮಾತನಾಡಿ, ಇಂದಿನ ಆಧುನಿಕ ಸಮಾಜದಲ್ಲಿ ಒತ್ತಡದ ಜೀವದಲ್ಲಿ ಎಲ್ಲರಿಗೂ ಒತ್ತಡಗಳು ಸಾಮಾನ್ಯ, ಒತ್ತಡಗಳಿಂದಲೇ ಎಷ್ಟೋ ಜನರು ಮಾನಸಿಕ ಖಿನ್ನತೆಗೊಳಗಾಗುತ್ತಿದ್ದಾರೆ. ಇದರಿಂದ ದೂರವಾಗಲು ನಾವು ಮಾಡುವ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಆಗಬೇಕು.

Advertisement

ಯೋಗ, ವ್ಯಾಯಾಮ, ಮಿತವಾದ ಊಟ ಮಾಡುವುದು, ಕಾಲ ಕಾಲಕ್ಕೆ ವಿಶ್ರಾಂತಿ ಪಡೆದುಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಇದರಿಂದ ಮಾನವನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಮನುಷ್ಯನ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ. ಚಿಕ್ಕಬಳ್ಳಾಪುರದಲ್ಲಿ ಹಗಲು ಆರೈಕೆ ಕೇಂದ್ರ ತೆರೆಯುತ್ತಿರುವುದು ಸಂತಸದ ವಿಚಾರ.

ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವವರನ್ನು ಪೋಷಕರು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಮಾಡಿ ಈ ಕೇಂದ್ರದ ನೆರವು ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ರಾಜ್ಯ ಮಟ್ಟದ ಉಪ ನಿರ್ದೇಶಕಿ ಡಾ.ರಜನಿ, ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಜಿಲ್ಲಾಸ್ಪತ್ರೆಯ ಮಾನಸಿಕ ತಜ್ಞ ಡಾ.ಕಿಶೋರ್‌ಕುಮಾರ್‌, ನಿಮ್ಹಾನ್ಸ್‌ನ ಸಹಾಯ ಅಧಿಕಾರಿ ಡಾ.ಶನಿವರ್ಮ ರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ್‌ ಸೇರಿದಂತೆ ಹಗಲು ಆರೈಕೆ ಕೇಂದ್ರದ ಸಂಯೋಜಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಹಗಲು ಆರೈಕೆ ಕೇಂದ್ರದ ಚಟುವಟಿಕೆ ಏನು?: ನಿಮ್ಹಾನ್ಸ್‌ ಆಸ್ಪತ್ರೆಯ ಪ್ರೊ.ಡಾ.ಜಗದೀಶ್‌ ತೀರ್ಥಹಳ್ಳಿ ಮಾತನಾಡಿ, ಮಾನಸಧಾರಾ ಹಗಲು ಆರೈಕೆ ಕೇಂದ್ರದಲ್ಲಿ ರೋಗಿಗಳು ಪ್ರತಿದಿನ ಭಾಗವಹಿಸಬೇಕು. ಕೇಂದ್ರದಲ್ಲಿ ಅನುಭವವುಳ್ಳ ಸಾಮಾಜಿಕ ಕಾರ್ಯಕರ್ತರು, ಶುಶ್ರೂಷಕಿಯರು, ಆಯಾ ಮತ್ತು ಭದ್ರತಾ ಸಿಬ್ಬಂದಿಗಳಿರುತ್ತಾರೆ.  ಕೇಂದ್ರಕ್ಕೆ ಭೇಟಿ ನೀಡಲು ಉಚಿತವಾದ ವಾಹನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ.

ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲಾಗುತ್ತದೆ. ಈ ಚಟುವಟಿಕೆಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಮಾನಸಿಕವಾಗಿ, ದೈಹಿಕವಾಗಿ ಆತ್ಮವಿಶ್ವಾಸ ತುಂಬುವಂತಾಗುತ್ತದೆ. ಕೇಂದ್ರದಲ್ಲಿ ಸರಳ ದೈಹಿಕ ವ್ಯಾಯಾಮ, ಯೋಗ, ಕಾಗದದ ಕವರ್‌ ತಯಾರಿಕೆ, ನೈಸರ್ಗಿಕ ಲಭ್ಯವಿರುವ ಹೋಳಿ ಬಣ್ಣದ ತಯಾರಿಕೆ, ಆರೋಗ್ಯ, ಶಿಕ್ಷಣ, ಗುಂಪು ಚರ್ಚೆ, ಆಟದ ಚಟುವಟಿಕೆಗಳು ಮತ್ತಿತರ ದೈನಂದಿನ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next