Advertisement

ಸುರಕ್ಷತಾ ಕ್ರಮಗಳೊಂದಿಗೆ 6 ರಿಂದ 8ನೇ ತರಗತಿ ಭೌತಿಕ ತರಗತಿ ಪುನಾರಂಭ|ಸಚಿವ ಬಿ.ಸಿ ನಾಗೇಶ್  

09:36 PM Aug 30, 2021 | Team Udayavani |

ಬೆಂಗಳೂರು: ಕೋವಿಡ್-19 ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಸೆಪ್ಟಂಬರ್ 6 ರಿಂದ ವಾರದಲ್ಲಿ ಐದು ದಿನ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ಪುನಾರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

Advertisement

ಸೋಮವಾರ(ಆ.30) ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಕೋವಿಡ್-19 ತಜ್ಞರು ಮತ್ತು ಸರ್ಕಾರದ ಸಚಿವರ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.

ಕೋವಿಡ್ 19 ಸೋಂಕಿನ ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಅದೇ ರೀತಿ ಸೋಂಕಿನ ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 9 ಮತ್ತು 10ನೇ ತರಗತಿ ಹಾಗೂ ಪಿಯು ಭೌತಿಕ ತರಗತಿಗಳನ್ನು  ಕೂಡ ಆರಂಭಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಶಾಲೆಗೆ ಆಗಮಿಸುವ ಮಕ್ಕಳಿಂದ ಪಾಲಕರು, ಪೋಷಕರ ಒಪ್ಪಿಗೆ ಪತ್ರ ತರಬೇಕು. ಮಧ್ಯಾಹ್ನದವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಮಕ್ಕಳು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಭೌತಿಕ ತರಗತಿಗಳ ಜೊತೆಗೆ ಆನ್‌ಲೈನ್ ತರಗತಿಗಳು ಕೂಡ  ಮುಂದುವರೆಯುತ್ತವೆ. ಮಕ್ಕಳು ಆನ್‌ಲೈನ್ ತರಗತಿಗಳಲ್ಲಿ ಹಾಜರಾಗಬಹುದು ಎಂದು ಸಚಿವರು ತಿಳಿಸಿದರು.

ಮಕ್ಕಳ ಶೈಕ್ಷಣಿಕ ಪ್ರಗತಿ, ಭವಿಷ್ಯದ ದೃಷ್ಟಿಯಿಂದ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಭೌತಿಕ ತರಗತಿಗಳನ್ನು ಪುನಾರಂಭಿಸಲಾಗುತ್ತದೆ. ಈಗಾಗಲೇ ಆರಂಭವಾಗಿರುವ 9 ಮತ್ತು 10ನೇ ತರಗತಿ ಹಾಗೂ ಪಿಯು ತರಗತಿಗಳಿಗೆ ಮಕ್ಕಳು ಮತ್ತು ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೋವಿಡ್ ಬಾಧಿಸುವ ಪ್ರಮಾಣ ಅತ್ಯಂತ ಕಡಿಮೆ ಇರುವ ಕಾರಣ 6 ರಿಂದ 8ನೇ ತರಗತಿಗಳ ಭೌತಿಕ ತರಗತಿಗಳ ಪುನಾರಂಭಕ್ಕೆ ಸಿಎಂ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ ಎಂದು ಸಚಿವರು ಹೇಳಿದರು.

Advertisement

ಆ.23 ರಿಂದ 9, 10ನೇ ತರಗತಿ ಹಾಗೂ ಪಿಯು ಭೌತಿಕ ತರಗತಿಗಳು ಪುನಾರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ಅವಧಿಯಲ್ಲಿ ಶಾಲೆಗೆ ಬಂದಿದ್ದ 6 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ 14 ಮಕ್ಕಳಿಗೆ ಮಾತ್ರ ಕೋವಿಡ್ ಪಾಸಿಟಿವ್ ಬಂದಿದೆ. ತಜ್ಞರ ಪ್ರಕಾರ ಇದು ಅತ್ಯಂತ ಕಡಿಮೆ. ಹೀಗಾಗಿ, ಮಕ್ಕಳು, ಪಾಲಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ನಾಗೇಶ್ ತಿಳಿಸಿದರು.

ಈಗಾಗಲೇ ಆರಂಭವಾಗಿರುವ ಶಾಲೆಗಳಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳ ಪಾಲನೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆಗೆ ಸೂಚಿಸಲಾಗಿತ್ತು. ಪರಿಶೀಲನೆ ಬಳಿಕ ಬಂದಿರುವ ಮಾಹಿತಿ ಪ್ರಕಾರ ಬಹುತೇಕ ಎಲ್ಲ ಶಾಲೆಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ಸಚಿವರು ತಿಳಿಸಿದರು.

ಸೆ.10ರ ನಂತರ ಕೋವಿಡ್ 19 ತಜ್ಞರ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಸಭೆ ಬಳಿಕ 1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳ ಪುನಾರಂಭದ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಆ.27ರಂದು 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳ ಭೌತಿಕ ಹಾಜರಾತಿ 64.12ರಷ್ಟು ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next