Advertisement

ನೀರಿನ ಸಭೆಯಲ್ಲಿ ಉಕ್ಕಿನ ಬಿಸಿ ಚರ್ಚೆ

11:57 AM Mar 03, 2017 | |

ಬೆಂಗಳೂರು: ರಾಜಧಾನಿಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರೆಯಲಾಗಿದ್ದ ಸಭೆಯಲ್ಲಿ ಕೊನೆಗೆ ಹೊರಬಿದ್ದ ನಿರ್ಧಾರ, ಉಕ್ಕಿನ ಸೇತುವೆ ಯೋಜನೆಯನ್ನು ಕೈ ಬಿಟ್ಟಿದ್ದು! ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಜಾರ್ಜ್‌ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ಆರಂಭವಾಯಿತು. ಸಭೆ ಆರಂಭದಲ್ಲಿ ಶಾಸಕರು ತಮ್ಮ ಅಭಿಪ್ರಾಯ ಹೇಳಲು ಆರಂಭಿಸಿದಾಗ ಉಕ್ಕಿನ ಸೇತುವೆ ಯೋಜನೆ ವಿಚಾರ ಪ್ರಸ್ತಾಪವಾಯಿತು.

Advertisement

ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌, ನೀರಿನ ಸಮಸ್ಯೆ ಪ್ರಸ್ತಾಪಿಸಿದ ಬಳಿಕ ಟ್ರಾμಕ್‌ ಸಮಸ್ಯೆ, ಉಕ್ಕಿನ ಯೋಜನೆ ಕುರಿತು ಮಾತನಾಡಲು ಅವಕಾಶ ನೀಡಬೇಕು ಎನ್ನುವ ಮೂಲಕ ಚರ್ಚೆಗೆ ನಾಂದಿ ಹಾಡಿದರು.  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, “ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಉಕ್ಕಿನ ಸೇತುವೆ ಬಗ್ಗೆ ಚರ್ಚಿಸುವುದು ಸರಿಯಲ್ಲ. ಹಾಗೆ ಚರ್ಚಿಸುವುದಾದರೆ ತ್ಯಾಜ್ಯ ಸಮಸ್ಯೆ, ಬೆಳ್ಳಂದೂರು ಕೆರೆ ಮಾಲಿನ್ಯದ ಬಗ್ಗೆಯೂ ಮಾತನಾಡಲು ಅವಕಾಶ ನೀಡಬೇಕು,” ಎಂದರು. 

ಕಾಂಗ್ರೆಸ್‌ನ ಮುನಿರತ್ನ, “ನೀರಿನ ಚರ್ಚೆಗೆ ಆದ್ಯತೆ ನೀಡಿ. ಬೇಕಾದರೆ ಉಕ್ಕಿನ ಸೇತುವೆ ಯೋಜನೆಯನ್ನೇ ಕೈಬಿಡಿ ಪರವಾಗಿಲ್ಲ,” ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಆಗ ಹ್ಯಾರಿಸ್‌, “ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಭ್ರಷ್ಟಾಚಾರ ಎಂಬ ಸುದ್ದಿ ಬರುತ್ತಿದೆ. ಈ ಬಗ್ಗೆ ಚರ್ಚೆ ಆಗಬೇಕು,” ಎಂದು ಆಗ್ರಹಿಸಿದರು. ಇದಕ್ಕೆ ಕೆ.ಜೆ.ಜಾರ್ಜ್‌, “”ಇದರಿಂದ ನನ್ನ ಮನಸ್ಸಿಗೂ ನೋವಾಗಿದೆ. ಜನರಿಗಾಗಿ ಯೋಜನೆ ಕೈಗೊಂಡರೂ ಆರೋಪ ಮಾಡಲಾಗುತ್ತಿದೆ. ನನ್ನ ತಾಳ್ಮೆಗೂ ಮಿತಿ ಇದೆ,” ಎಂದರು.

ಆಗ ಕಾಂಗ್ರೆಸ್‌ನ ನಾರಾಯಣಸ್ವಾಮಿ, “ಸ್ಟೀಲ್‌ ಬ್ರಿಡ್ಜ್ ಬಗ್ಗೆ ಚರ್ಚೆಯಾಗಲಿ,” ಎಂದು ಆಗ್ರಹಿಸಿದರು. ಬಿಜೆಪಿಯ ತಾರಾ ಅನುರಾಧ, “ನೀವು ಏನಾದರೂ ಮಾಡಿಕೊಳ್ಳಿ. ಆದರೆ ನಗರದ ಹಸಿರು ನಾಶಪಡಿಸಿ ಕಾಮಗಾರಿ ಕೈಗೊಳ್ಳುವುದು ಬೇಡ ಎಂದರು.ವಿಧಾನಪರಿಷತ್‌ ಸದಸ್ಯ ಕಾಂಗ್ರೆಸ್‌ನ ನಾರಾಯಣಸ್ವಾಮಿ, ಪೀಕ್‌ ಅವರ್‌ನಲ್ಲಿ ವಿಧಾನಸೌಧದಿಂದ ಕೊಡಿಗೇಹಳ್ಳಿ ನಡುವೆ ಸಂಚರಿಸಲು ಎರಡು ತಾಸು ಬೇಕಾಗುತ್ತದೆ. ಯೋಜನೆ ಅಗತ್ಯವಾಗಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌, “ಉಕ್ಕಿನ ಸೇತುವೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಧಾರರಹಿತ ಆರೋಪ ಮಾಡಲಾಗುತ್ತಿದೆ. ಹಾಗಿದ್ದರೂ ಸೇತುವೆ ನಿರ್ಮಿಸಿದರೆ ಅದನ್ನು ಕಾಂಗ್ರೆಸ್‌ನ ಭ್ರಷ್ಟಾಚಾರದ ಸ್ಮಾರಕ ಎಂಬಂತೆ ಬಿಂಬಿಸುವ ಅಪಾಯವಿದೆ. ನಗರದ ಜನರಿಗೆ ಅನುಕೂಲ ಮಾಡಿಕೊಡಲು ಹೋಗಿ ಪಕ್ಷ ಕೆಟ್ಟ ಹೆಸರು ಪಡೆಯುವಂತಾಗಿರುವುದು ವಿಪರ್ಯಾಸ. ಈ ಬಗ್ಗೆ ಪುನರ್‌ ಪರಿಶೀಲಿಸುವುದು ಒಳಿತು ಎಂದರು.

Advertisement

ಚರ್ಚೆಯ ದಿಕ್ಕು ಬದಲು: ನಂತರ ಬಿಜೆಪಿಯ ಅರವಿಂದ ಲಿಂಬಾವಳಿ, ಡೈರಿ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದಾಗಸಚಿವ ಜಾರ್ಜ್‌, ಉಕ್ಕಿನ ಸೇತುವೆ ಯೋಜನೆಯಲ್ಲಿ ಒಂದು ರೂ. ಪಡೆದಿರುವುದಾಗಿ ಸಾಬೀತುಪಡಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಎಲ್ಲ ಒಪ್ಪಿದರೆ ಯೋಜನೆ ಕೈಬಿಡಲು ಸಿದ್ಧ ಎಂದು ಘೋಷಿಸಿದರು. ಎನ್‌ಜಿಟಿಯಲ್ಲೂ ಯಾವುದೇ ಆದೇಶ ಬರುತ್ತಿಲ್ಲ. ಇತ್ತ  ಗುತ್ತಿಗೆದಾರರಿಗೂ ಬ್ಯಾಂಕ್‌ ಖಾತರಿ ಸಿಗುತ್ತಿಲ್ಲ.

ವಿರೋಧಿಗಳು ಕಾಮಗಾರಿಗೆಅಡ್ಡಿಪಡಿಸುವರೇ ಎಂಬ ಆತಂಕ ಗುತ್ತಿಗೆದಾರರಿಗೆ ಮೂಡಿದೆ’ ಎಂದರು.  ಆಗ ಚರ್ಚೆಯ ದಿಕ್ಕೇ ಬದಲಾಯಿತು. ಆಗ ಸಚಿವ ಕೃಷ್ಣಬೈರೇಗೌಡ, ಈ ಹಿಂದೆ ಗೃಹ ಸಚಿವರಾಗಿದ್ದಾಗಲೂ ಐಎಎಸ್‌ಅಧಿಕಾರಿ ಡಿ.ಕೆ.ರವಿ ಪ್ರಕರಣ, ಡಿವೈಎಸ್ಪಿ ಗಣಪತಿ ಪ್ರಕರಣ ಸೇರಿದಂತೆ ಹಲವು ಸಂದರ್ಭದಲ್ಲಿ ಕೇಳಿಬಂದ ಕಪೋಲಕಲ್ಪಿತ ಆರೋಪಗಳಿಗೆ ಮಿತಿಯೇ ಇಲ್ಲ. ತಾವು ಬಹಳ ತಾಳ್ಮೆಯಿಂದ ವರ್ತಿಸಿದ್ದೀರಿ. ಈ ವಿಚಾರದ ಬಗ್ಗೆ ಚರ್ಚಿಸಿ ನಿರ್ಧರಿಸುವುದು ಸೂಕ್ತ ಎಂದರು.

ಜನ ಶಾಪ ಹಾಕುತ್ತಾರೆ: ಆಗ ಸಚಿವ ರಾಮಲಿಂಗಾರೆಡ್ಡಿ, ಆಧಾರರಹಿತ ಆರೋಪ ಮಾಡಿ ಯೋಜನೆ ನಿಲ್ಲಿಸಿದರೆ ಜನ ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಯಲಹಂಕ, ಹೆಬ್ಟಾಳ, ಮಲ್ಲೇಶ್ವರ ಭಾಗದ ಜನ ಬಿಜೆಪಿಗೆ ಶಾಪ ಹಾಕುತ್ತಾರೆ. ಬಿಜೆಪಿಯವರು ಏನೇ ಆರೋಪ ಮಾಡಿದರೂ ಅಧಿಕಾರಕ್ಕೆ ಬರಲ್ಲ’ ಎಂದರು. 

ಬಿಜೆಪಿ ದ್ವಂದ್ವ ನಿಲುವು: ಆಂತರಿಕ ಸಭೆಗಳಲ್ಲಿ ಯೋಜನೆ ಅಗತ್ಯವಿದೆ ಎನ್ನುವ ಕೆಲ ಬಿಜೆಪಿ ನಾಯಕರು, ಬಹಿರಂಗವಾಗಿ ಯೋಜನೆ ವಿರೋಧಿಸುವುದು ಬಿಜೆಪಿಯ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಜಾರ್ಜ್‌ ಕಿಡಿ ಕಾರಿದರು. ಬಿಜೆಪಿಯ ನಾರಾಯಣಸ್ವಾಮಿ, ಎಸ್‌.ಆರ್‌.ವಿಶ್ವನಾಥ್‌ ಅವರು ಸ್ಟೀಲ್‌ ಬ್ರಿಡ್ಜ್ ಬೇಕೆ, ಬೇಡವೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್‌ ಶಾಸಕರು ಒತ್ತಾಯಿಸಿದಾಗ ಇಬ್ಬರೂ ಮುಜುಗರಕ್ಕೊಳಗಾದರು. 

ಇನ್ನೊಂದೆಡೆ ಶಾಸಕರಾದ ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್‌, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಏಕವಚನದಲ್ಲಿ ಬೈದಾಡಿಕೊಂಡ ಪ್ರಸಂಗವೂ ನಡೆಯಿತು. ನಂತರ ಸಭೆ ಮಧ್ಯೆಯೇ ಹೊರ ನಡೆದು ಮುಖ್ಯಮಂತ್ರಿಗಳಿಗೆ ಮೊಬೈಲ್‌ ಕರೆ ಮಾಡಿ ಚರ್ಚಿಸಿದ ಬಳಿಕ ಸಭೆಗೆ ಬಂದ ಸಚಿವ ಕೆ.ಜೆ.ಜಾರ್ಜ್‌, ಜನಪ್ರತಿನಿಧಿಗಳು ಬೇಡ ಎನ್ನುವುದಾದರೆ ಕೈಬಿಡುವ ನಿರ್ಧಾರ ಕೈಗೊಳ್ಳಿ ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದು ಯೋಜನೆ ಸರ್ಕಾರ ಕೈಬಿಟ್ಟಿದೆ ಎಂದು ಪ್ರಕಟಿಸಿದರು. 

ಇದಕ್ಕೆ ಆಕ್ಷೇಪಿಸಿದ ವಿಧಾನ ಪರಿಷತ್‌ ಸದಸ್ಯ ಬೈರತಿ ಸುರೇಶ್‌, “ಹೆಬ್ಟಾಳದಲ್ಲಿ ಉಕ್ಕಿನ ಸೇತುವೆ ಬೇಕೆ, ಬೇಡವೇ ಎಂಬ ಬಗ್ಗೆ ಕೋರಮಂಗಲದ ಜನರ ಮಾತು ಯಾಕೆ ಕೇಳಬೇಕು. ಹೆಬ್ಟಾಳ ಭಾಗದಲ್ಲಿನ ಸಂಚಾರ ಸಮಸ್ಯೆ ಏನು ಎಂಬುದು ಅಲ್ಲಿನ ಜನರಿಗೆ ಗೊತ್ತಿದೆ. ಹೀಗಿದ್ದರೂ ಯೋಜನೆ ಕೈಬಿಡುವ ನಿರ್ಧಾರ ಕೈಗೊಂಡಿರುವುದನ್ನು ವಿರೋಧಿಸಿ ಸಭೆಯಿಂದ ಹೊರ ನಡೆಯುತ್ತೇನೆ ಎಂದರು.

ಮೇ ಅಂತ್ಯದವರೆಗೆ ಬೆಂಗಳೂರಿಗೆ ಅಗತ್ಯ ಪ್ರಮಾಣದ ನೀರು ಪೂರೈಕೆ : ಜಾರ್ಜ್‌
ಬೆಂಗಳೂರು:
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದರೂ ಬೆಂಗಳೂರು ನಗರಕ್ಕೆ ಮೇ ಅಂತ್ಯದವರೆಗೂ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಸಲು ಯಾವುದೇ ತೊಂದರೆಯಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

“ಮುಂಗಾರು, ಹಿಂಗಾರು ವೈಫ‌ಲ್ಯದಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ. ಹಾಗಿದ್ದರೂ ಮೇ ಅಂತ್ಯದವರೆಗೆ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ನಗರದ ಜನರು ಮಿತವಾಗಿ ನೀರು ಬಳಸಲು ಗಮನ ಹರಿಸಬೇಕು,” ಎಂದು ಮನವಿ ಮಾಡಿದರು. ಕಾವೇರಿ ನೀರಿನ ಜತೆಗೆ ಪರ್ಯಾಯವಾಗಿ ಕೊಳವೆ ಬಾವಿಗಳನ್ನು ಕೊರೆಯಲು ಕ್ರಮ ಕೈಗೊಳ್ಳಲಾಗುತ್ತದೆ.

ಪಾಲಿಕೆ ಹಳೆಯ ವಾರ್ಡ್‌ಗಳಿಗೆ ತಲಾ ಐದು ಹಾಗೂ ಹೊಸ ವಾಡ್‌ ìಗಳಿಗೆ 10 ಕೊಳವೆ ಬಾವಿ ಕೊರೆಸಲು ಜಲಮಂಡಳಿ ಕ್ರಮ ಕೈಗೊಳ್ಳಲಿದೆ. 110 ಹಳ್ಳಿಗಳಲ್ಲಿ ಪಾಲಿಕೆಯೇ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಿದೆ ಎಂದರು. ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನೂ ರಚಿಸಿ ಕೊಳವೆಬಾವಿ ಕೊರೆಸುವ ಸ್ಥಳಗಳನ್ನು ಗುರುತಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು.

ಹಾಗೆಯೇ ಕೊಳೆಗೇರಿ ನಿವಾಸಿಗಳ ನೀರಿನ ಬಾಕಿ ಬಿಲ್‌ ಮೊತ್ತ ಮನ್ನಾ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎಂ.ಆರ್‌.ಸೀತಾರಾಂ, ಎಂ.ಕೃಷ್ಣಪ್ಪ, ಮೇಯರ್‌ ಜಿ.ಪದ್ಮಾವತಿ, ರಾಜ್ಯಸಭಾ ಸದಸ್ಯರಾದ ರಾಜೀವ್‌ಗೌಡ, ಕುಪೇಂದ್ರರೆಡ್ಡಿ, ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.  

ಸ್ಟೀಲ್‌ಬಿಡ್ಜ್ ಯೋಜನೆಯನ್ನು ಕೈಬಿಟ್ಟಿದ್ದು ಜನರಿಗೆ ಸಿಕ್ಕ ಗೆಲುವು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ತರಾತುರಿಯಿಂದ, ಜನರ ಅಭಿಪ್ರಾಯ ಸಂಗ್ರಹಿಸದೇ, ಪರಿಸರ ಪ್ರಮಾಣ ಪತ್ರ ತೆಗೆದುಕೊಳ್ಳದೇ, ದುಬಾರಿ ವೆಚ್ಚದೊಂದಿಗೆ ಸರ್ಕಾರ ಈ ಯೋಜನೆ ಜಾರಿಗೆ ಮುಂದಾಗಿತ್ತು. 
-ರಾಜೀವ್‌ ಚಂದ್ರಶೇಖರ್‌, ರಾಜ್ಯಸಭಾ ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next