Advertisement

SSLC ಪರೀಕ್ಷಾ ಅಕ್ರಮ: ಇಬ್ಬರು ಶಿಕ್ಷಕರ ಅಮಾನತು

11:37 PM Mar 25, 2024 | Team Udayavani |

ಬೆಂಗಳೂರು/ವಿಜಯಪುರ: ಸೋಮವಾರ ಆರಂಭವಾದ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ಆರೋಪದಲ್ಲಿ ಇಬ್ಬರು ಹಾಗೂ ನಿಷ್ಕಾಳಜಿ ತೋರಿದ ಆರೋಪದಲ್ಲಿ ಓರ್ವ ಸಹಿತ ಮೂವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಉಳಿದಂತೆ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಹೇಳಿದೆ.

Advertisement

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಸರಕಾರಿ ಹಿರಯ ಪ್ರಾಥಮಿಕ ಶಾಲೆ ಶಿಕ್ಷಕ ಸಾಹೇಬಗೌಡ ಉಕ್ಕಾಲಿ ಹಾಗೂ ಝಂಡದಕೇರಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಣಮಂತ್ರಾಯ ಅವರು ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮ ಎಸಗಲು ಸಹಕರಿಸಿದ ಆರೋಪ ಹೊತ್ತಿದ್ದು, ವೆಬ್‌ ಕಾಸ್ಟಿಂಗ್‌ನಲ್ಲಿ ಪರಿಶೀಲಿಸಿದ ಅಧಿಕಾರಿಗಳು ಅವರಿಬ್ಬರನ್ನು ಅಮಾನುತು ಮಾಡಿದ್ದಾರೆ.

ವಿಜಯಪುರದಲ್ಲಿ ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದ ವಿದ್ಯಾರ್ಥಿಯೊಬ್ಬನನ್ನು ಡಿಬಾರ್‌ ಮಾಡಲಾಗಿದೆ.

ಕರ್ತವ್ಯ ಲೋಪ; ಶಿಕ್ಷಕ ಅಮಾನತು
ಸೋಮವಾರ ಇಂಡಿ ಪಟ್ಟಣದ ಸಾಯಿ ಪಬ್ಲಿಕ್‌ ಶಾಲೆಯಲ್ಲಿ ನಡೆದ ಎಸೆಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿದ ಆರೋಪದಲ್ಲಿ ತಾಲೂಕಿನ ಚೋರಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಾಜಶೇಖರ ಬಂಡಿ ಅವರನ್ನು ಅಮಾನತು ಮಾಡಲಾಗಿದೆ.

ಯಾದಗಿರಿ: ಪರೀಕ್ಷೆ ಬರೆದ ತಾಯಿ-ಮಗ
ಯಾದಗಿರಿ: ಒಂದೇ ಕೇಂದ್ರದಲ್ಲಿ ತಾಯಿ-ಮಗ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಗಂಗಮ್ಮ (32) ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ಬರೆದು ಗಮನ ಸೆಳೆದಿದ್ದಾರೆ.

Advertisement

ಪರೀಕ್ಷೆಗೆ ಪಿಕಪ್‌ನಲ್ಲಿ ಬಂದ ವಿದ್ಯಾರ್ಥಿಗಳು!
ರಿಪ್ಪನ್‌ಪೇಟೆ: ಎಸೆಸೆಲ್ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಪಿಕಪ್‌ ವಾಹನದಲ್ಲಿ ಬಂದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಸರಕಾರಿ ಪಪೂ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಿದ್ದು, ಇದರ ವ್ಯಾಪ್ತಿಗೆ ಆರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಚಿಕ್ಕಜೇನಿ ಸರಕಾರಿ ಪ್ರೌಢಶಾಲೆಗಳು ಒಳಪಡುತ್ತಿವೆ. ಖಾಸಗಿಯಾಗಿ ಶ್ರೀ ಬಸವೇಶ್ವರ, ಶಾರದಾ ರಾಮಕೃಷ್ಣ ಮೇರಿಮಾತಾ ಮಲೆನಾಡು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರಬೇಕಾಗಿತ್ತು. ವಿದ್ಯಾರ್ಥಿಗಳಿಗೆ ಸರಕಾರಿ ಬಸ್‌ ವ್ಯವಸ್ಥೆಯೊಂದಿಗೆ ಉಚಿತ ಬಸ್‌ ಸಂಚಾರ ಕಲ್ಪಿಸಲಾಗಿದ್ದರೂ ಹೊಸನಗರ ತಾಲೂಕಿನ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಿಸಿ ಕೆಮರಾ ದಿಕ್ಕು ಬದಲಿಸಿದ ವಿದ್ಯಾರ್ಥಿಗಳು
ವಾಡಿ: ಎಸೆಸೆಲ್ಸಿ ಪರೀಕ್ಷೆ ಕೇಂದ್ರದ ಕೊಠಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾಗಳ ದಿಕ್ಕು ಬದಲಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಎಜುಕೇಷನ್‌ ಹಬ್‌ ಪ್ರದೇಶದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸೆಸೆಲ್ಸಿ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಆರಂಭಕ್ಕೂ ಮೊದಲು ಕೊಠಡಿ ಪ್ರವೇಶಿಸಿದ ವಿದ್ಯಾರ್ಥಿಗಳು ಮೂರು ಕೋಣಿಗಳ ಕೆಮರಾಗಳ ದಿಕ್ಕು ಬದಲಿಸಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ಕೇಂದ್ರದ ಅಧಿಧೀಕ್ಷಕರು ಸಿಸಿ ಕೆಮರಾ ದೃಶ್ಯಗಳು ವೀಕ್ಷಿಸಿದ ಬಳಿಕ ಕೃತ್ಯ ಎಸಗಿದ ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಿರುವ ವಾಡಿ ಪೊಲೀಸ್‌ ಠಾಣೆ ಪಿಎಸ್‌ಐ ಮಂಜುನಾಥ ರೆಡ್ಡಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಾವೇರಿ ಡಿಸಿ ಕಚೇರಿ ಎದುರು
ಅಣಕು ಪರೀಕ್ಷೆ ಬರೆದ ವಿದ್ಯಾರ್ಥಿ!
ಹಾವೇರಿ: ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ ದಿಂದಾಗಿ ಎಸೆಸೆಲ್ಸಿ ಪರೀಕ್ಷೆ ಪ್ರವೇಶಪತ್ರ ಬಂದಿಲ್ಲ ಎಂದು ಆರೋಪಿಸಿ, ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕಲ್ಪಿಸುವುದಕ್ಕೆ ಒತ್ತಾಯಿಸಿ ರಾಣಿಬೆನ್ನೂರ ತಾಲೂಕಿನ ಹರನಗಿರಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ ಅಭಿಷೇಕ ವಿಜಯಕುಮಾರ ಜರಮಲ್ಲ ಅಣಕು ಪರೀಕ್ಷೆ ಬರೆಯುವ ಮೂಲಕ ತನ್ನ ಪೋಷಕರೊಂದಿಗೆ ಸೋಮವಾರ ನಗರದ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾನೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಸರಿಯಾಗಿ ಶಾಲೆಗೆ ಹೋಗುತ್ತಿದ್ದೆ. ಅರ್ಧ ವಾರ್ಷಿಕ ಮೂರು ಕಿರು ಪರೀಕ್ಷೆಗಳನ್ನು ಬರೆದಿದ್ದೇನೆ. ಜನವರಿಯಲ್ಲಿ ಅನಾರೋಗ್ಯದ ಕಾರಣದಿಂದ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದು ಶಾಲೆಗೆ ರಜೆ ಹಾಕಿದ್ದೆ. ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡು ಎಂದು ಧೈರ್ಯ ಹೇಳಿದ್ದ ಗುರುಗಳು ಈಗ ಪ್ರವೇಶ ಪತ್ರ ಬಂದಿಲ್ಲವೆಂದು ಮೋಸ ಮಾಡಿದರು. ದಯವಿಟ್ಟು ಪೂರಕ ಪರೀಕ್ಷೆಯಲ್ಲಾದರೂ ಅವಕಾಶ ಕೊಡಿ ಎಂದು ಅಪರ ಜಿಲ್ಲಾ ಧಿಕಾರಿ ಹಾಗೂ ಡಿಡಿಪಿಐ ಅ ಧಿಕಾರಿಗಳಿಗೆ ಅಭಿಷೇಖ್‌ ಹಾಗೂ ಆತನ ಪೋಷಕರು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿ ಕಾರಿ ವೀರಮಲ್ಲಪ್ಪ ಹಾಗೂ ಡಿಡಿಪಿಐ ಸುರೇಶ ಹುಗ್ಗಿ ಮುಖ್ಯ ಶಿಕ್ಷಕರ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಹಾಗೂ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪರೀಕ್ಷೆ ವೇಳೆ ಅಸ್ವಸ್ಥ: ಓರ್ವ ಸಾವು
ತುಮಕೂರು: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಬ್ಬರು ಅಸ್ವಸ್ಥಗೊಂ ಡಿದ್ದು, ಅವರಲ್ಲಿ ಓರ್ವ ಮೃತಪಟ್ಟಿರುವ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ಲೋಕ ಮ್ಮನಹಳ್ಳಿ ಗೇಟ್‌ನ ಕಂಚಿರಾಯಸ್ವಾಮಿ ವಸತಿ ಶಾಲೆ ವಿದ್ಯಾರ್ಥಿ ಮೋಹನ್‌ ಕುಮಾರ್‌ ಮೃತ ವಿದ್ಯಾರ್ಥಿ. ಈತ ತುರುವೇಕೆರೆ ಸರಸ್ವತಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಅಸ್ವಸ್ಥಗೊಂಡಿದ್ದು, ಆಸ್ಪತ್ರೆ ದಾರಿ ಮಧ್ಯೆ ಮೃತ ಪಟ್ಟಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ರೋಹಿತ್‌ ಎಂಬಾತನು ಹುಲ್ಲೇಕೆರೆಯ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಅಸ್ವಸ್ಥಗೊಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿ ಅಪಘಾತದಲ್ಲಿ ಸಾವು
ಹೊಳೆಹೊನ್ನೂರು: ಸೋಮವಾರ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿ, ಜಂಬರಘಟ್ಟ ಗ್ರಾಮದ ಉಮ್ಮೆ ಕೂಲ್ಸುಂ (14) ಅಪಘಾತದಲ್ಲಿ ಮೃತಪಟ್ಟ ಘಟನೆ ರವಿವಾರ ಸಂಜೆ ಮೂಡಲವಿಠಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಪರೀಕ್ಷೆಗೆ ಹಾಜರಾಗಲೆಂದು ಗ್ರಾಮದಿಂದ ಶಿವಮೊಗ್ಗಕ್ಕೆ ತೆರಳಲು ಬಸ್‌ ಹತ್ತಲು ರಸ್ತೆ ದಾಟುತ್ತಿದ್ದಾಗ ಚನ್ನಗಿರಿ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಆನಂದಪುರ: ವಿದ್ಯಾರ್ಥಿ ಆತ್ಮಹತ್ಯೆ
ಆನಂದಪುರ: ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ, ಯಡೇಹಳ್ಳಿಯ ಪರಶುರಾಮ (17) ಸೋಮವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದಪುರ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಈತ ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ಮನೆಯ ಹಿಂಬದಿಯಲ್ಲಿ ಸಾವಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next