Advertisement

ನಟಿ ಶೃತಿ ಹರಿಹರನ್‌ ಮದುವೆ ರಹಸ್ಯ ಬಯಲು

06:00 AM Oct 28, 2018 | Team Udayavani |

ಬೆಂಗಳೂರು: ನಟಿ ಶೃತಿ ಹರಿಹರನ್‌ ಅವರು ಶನಿವಾರ ಅರ್ಜುನ್‌ ಸರ್ಜಾ ವಿರುದ್ದ ಸಲ್ಲಿಸಿರುವ ದೂರಿನ ಮೂಲಕ ಆಕೆಯ ಮದುವೆ ರಹಸ್ಯ ಬಿಚ್ಚಿಕೊಂಡಿದೆ. ತಮ್ಮ ವಕೀಲರ ಜತೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಆಗಮಿಸಿದ ಅವರು, ಮೂರು ವರ್ಷಗಳ ಹಿಂದೆ ನಡೆದ “ವಿಸ್ಮಯ’ ಸಿನಿಮಾ ಚಿತ್ರೀಕರಣದ ರಿಹರ್ಸಲ್‌ ವೇಳೆ ಅರ್ಜುನ್‌ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ “ಶ್ರೀಮತಿ ಶೃತಿ ಹರಿಹರನ್‌ -ವೈಫ್ ಆಫ್ ರಾಮ್‌ಕುಮಾರ್‌’ ಎಂದು ಶೃತಿ ಹರಿಹರನ್‌ ನಮೂದಿಸಿದ್ದಾರೆ. ಚಿತ್ರರಂಗದಲ್ಲಿ ಶ್ರುತಿ ಹರಿಹರನ್‌ ಮದುವೆಯ ವದಂತಿ ಹಲವು ತಿಂಗಳುಗಳಿಂದ
ಹರಿದಾಡುತ್ತಲೇ ಇತ್ತು. ಆದರೆ, ಶೃತಿ ಮಾತ್ರ ಯಾವತ್ತೂ ತಮ್ಮ ಮದುವೆ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ರಾಮ್‌ ಹೆಸರು ಪ್ರಸ್ತಾಪವಾಗುತ್ತಿದ್ದಾಗಲೆಲ್ಲ “ರಾಮ್‌ ನನ್ನ ಸ್ನೇಹಿತ’ ಎಂದಷ್ಟೇ ಹೇಳಿ, ಮದುವೆ ವಿಚಾರ ನಿರಾಕರಿಸುತ್ತಲೇ ಬಂದಿದ್ದರು.

Advertisement

ಮೂಲಗಳ ಪ್ರಕಾರ, ಏಳು ವರ್ಷಗಳಿಂದ ರಾಮ್‌ ಹಾಗೂ ಶೃತಿ ಪ್ರೀತಿಯಲ್ಲಿದ್ದು, ಇತ್ತೀಚೆಗೆ ಮದುವೆಯಾಗಿದ್ದಾರೆ. ರಾಮ್‌ ಅವರು ಕಲರಿಯಪಟ್ಟು ಪಟುವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಶೃತಿ ಹರಿಹರನ್‌ಗೆ ಕೆರಿಯರ್‌ ವಿಚಾರದಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರಂತೆ. ನಟ ಅರ್ಜುನ್‌ ಸರ್ಜಾ ಅವರ ವಿರುದ್ದ ಶೃತಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರ್ಜುನ್‌ ಸ್ನೇಹಿತ ಪ್ರಶಾಂತ್‌ ಸಂಬರಗಿ ಮಾತನಾಡುತ್ತಾ, “ರಾಮ್‌ ಎನ್ನುವವರು ಫೋನ್‌ ಮಾಡಿ ಶೃತಿ ಸುಮ್ಮನಿರಬೇಕಾದರೆ ಎರಡು ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟರು’ ಎಂದು ಆಪಾದಿಸಿದ್ದರು. ಆ ಸಮಯದಲ್ಲಿ ಹೇಳಿಕೆ ನೀಡಿದ ಶೃತಿ, “ರಾಮ್‌ ಈ ಸೀನ್‌ನಲ್ಲೇ ಇಲ್ಲ’ ಎನ್ನುವ ಮೂಲಕ ಈ ಘಟನೆಗೂ ರಾಮ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.

“ಲಿಂಗದೇವರು’ ಚಿತ್ರದಿಂದ ಶೃತಿಗೆ ಔಟ್‌: “ಮಿ ಟೂ’ ಅಭಿಯಾನದಡಿ ಶೃತಿ ಹರಿಹರನ್‌ ಅವರು ಅರ್ಜುನ್‌ ಸರ್ಜಾ ವಿದ್ದ ಆರೋಪ ಮಾಡಿ, ದೂರು ದಾಖಲಿಸಿದ ಬೆನ್ನಲ್ಲೇ ಆಕೆ ಒಪ್ಪಿಕೊಂಡ ಸಿನಿಮಾದಿಂದ ಆಕೆಯನ್ನು ಕೈ ಬಿಡಲಾಗಿದೆ. ಈ ಮೂಲಕ “ಮಿ ಟೂ’ ಅಭಿಯಾನ ಶೃತಿ ಅವರ ಮುಂದಿನ ಕೆರಿಯರ್‌ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ನಿರ್ದೇಶಕ ಲಿಂಗದೇವರು ಅವರು “ದಾರಿ ತಪ್ಪಿಸು ದೇವರೇ’ ಎಂಬ ಸಿನಿಮಾವನ್ನು ಕೆಲ ತಿಂಗಳ ಹಿಂದೆ ಘೋಷಿಸಿದ್ದಲ್ಲದೇ, ಚಿತ್ರದಲ್ಲಿ ಶೃತಿ ಹರಿಹರನ್‌ ನಾಯಕಿ
ಎಂದಿದ್ದರು. ಆದರೆ, ಈಗ ಆ ಚಿತ್ರದಿಂದ ಶೃತಿಯನ್ನು ಕೈ ಬಿಡಲಾಗಿದೆ. 

ಈ ಬಗ್ಗೆ ಮಾತನಾಡಿದ ಲಿಂಗದೇವರು, ಶ್ರುತಿಯ ಪ್ರಕರಣಕ್ಕೂ, ಸಿನಿಮಾದಿಂದ ಆಕೆ ಬದಲಾಗಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. “ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಮ್ಮ ಸಿನಿಮಾ ಚಿತ್ರೀಕರಣ ಇಷ್ಟೊತ್ತಿಗೆ ಶುರುವಾಗಬೇಕಿತ್ತು. ಆದರೆ, ಸ್ಕ್ರಿಪ್ಟ್ ಇನ್ನೂ ಫೈನಲ್‌ ಆಗದ ಕಾರಣ, ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ನವೆಂಬರ್‌ ಕೊನೆಯಲ್ಲಿ ಚಿತ್ರ ಆರಂಭವಾಗಬಹುದು. ಈ ನಡುವೆಯೇ ಶೃತಿ ಹರಿಹರನ್‌ ಅವರು ಅಮೆರಿಕಕ್ಕೆ ಹೋಗುವ ತಯಾರಿಯಲ್ಲಿದ್ದಾರೆ. ಜನವರಿ ಮೊದಲ ವಾರ ಅವರು ಅಮೆರಿಕಕ್ಕೆ ತೆರಳುವುದಾಗಿ ತಿಳಿಸಿದ್ದಾರೆ. ಇದರಿಂದ ನಮ್ಮ ಸಿನಿಮಾಕ್ಕೆ ಅವರ ಡೇಟ್ಸ್‌ ಹೊಂದಾಣಿಕೆಯಾಗುತ್ತಿಲ್ಲ. ಆ
ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. 

ಕಾಲಾವಕಾಶ ಕೇಳಿದ ನಟಿ ಸಂಜನಾ
ಈ ಮಧ್ಯೆ, “ಗಂಡ ಹೆಂಡತಿ’ ಚಿತ್ರೀಕರಣ ಸಮಯದಲ್ಲಿ ನಿರ್ದೇಶಕ ಶ್ರೀವತ್ಸ ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆಂದು ನಟಿ ಸಂಜನಾ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಿರ್ದೇಶಕರ ಸಂಘ, ಸಾಕಷ್ಟು ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿ ಮಾಡಿ,
ಸಂಜನಾ ಆರೋಪ ಆಧಾರರಹಿತವಾಗಿದ್ದು, ಅಕ್ಟೋಬರ್‌ 27ರೊಳಗೆ ಬಂದು ಆಕೆ ಸ್ಪಷ್ಟನೆ ನೀಡಬೇಕು, ಇಲ್ಲವೇ
ಕ್ಷಮೆಯಾಚಿಸಬೇಕು ಎಂದು ಹೇಳಿತ್ತು. ಆದರೆ, ಸಂಜನಾ ನಿರ್ದೇಶಕರ ಸಂಘಕ್ಕೆ ಬಂದಿಲ್ಲ. ಬದಲಾಗಿ ನವೆಂಬರ್‌ 8 ರವರೆಗೆ ಕಾಲಾವಕಾಶ ಕೇಳಿದ್ದಾರೆ. “ಸಂಜನಾ ಅವರು ಅಮೆರಿಕದಲ್ಲಿರುವುದರಿಂದ ಅವರಿಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನವೆಂಬರ್‌ 8ರವರೆಗೆ ಕಾಲಾವಕಾಶ ಕೇಳಿದ್ದಾರೆ’ ಎಂದು ನಿರ್ದೇಶಕರ ಸಂಘದ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next