Advertisement

ಕಿಡ್ನಿ ವೈಫ‌ಲ್ಯ ರೋಗಿಗಳ ಪಾಲಿನ ಸಂಜೀವಿನಿ

05:50 PM Mar 02, 2020 | Suhan S |

ಶ್ರೀರಂಗಪಟ್ಟಣ: ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹತ್ತು, ಹಲವು ರೋಗಗಳಿಗೆ ಉಚಿತ ಯಶಸ್ವಿ ಚಿಕಿತ್ಸೆ ಲಭ್ಯ ವಿದ್ದು ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗಿರುವ ರೋಗಿಗಳ ಪಾಲಿಗೆ ಶ್ರೀರಂಗಪಟ್ಟಣ ಆಸ್ಪತ್ರೆ ಸಂಜೀವಿನಿಯಾಗಿದೆ.

Advertisement

ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗಿರುವ ರೋಗಿಗಳಿಗೆ ಡಯಾಲಿಸಿಸ್‌ ಮಾಡಲು ಆಸ್ಪತ್ರೆಯಲ್ಲಿ ಒಟ್ಟು 4 ಯಂತ್ರಗಳಿದ್ದು ನಿತ್ಯ 12 ಮಂದಿ ರೋಗಿಗಳಿಗೆ ಉಚಿತವಾಗಿ ಮೂತ್ರಪಿಂಡ ಡಯಾಲಿಸಿಸ್‌ ನಡೆಸಲಾಗುತ್ತಿದೆ. ಡಯಾಲಿಸಿಸ್‌ ಕೇಂದ್ರದಲ್ಲಿ 4 ಮಂದಿ ಟೆಕ್ನಿಷಿಯನ್‌, ಒಬ್ಬರು ಸ್ಟಾಫ್‌ ನರ್ಸ್‌, ಇಬ್ಬರು ಡಿ ಗ್ರೂಫ್‌ ನೌಕರರನ್ನು ನೇಮಕ ಮಾಡಲಾಗಿದೆ.

ಎಚ್‌ಐವಿ ಪರೀಕ್ಷೆ ಕಡ್ಡಾಯ: ವಾರಕ್ಕೊಮ್ಮೆ ನೆಪ್ರೋಲಾಜಿಸ್ಟ್‌ ವಿಭಾಗದ ತಜ್ಞ ವೈದ್ಯರು ಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳ ತಪಾಸಣೆ ನಡೆಸುತ್ತಾರೆ. ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳಿಗೆ ಅಗತ್ಯವಿರುವಾಗ ರಕ್ತ ಹೆಚ್ಚಳ ಮಾಡುವ ಯರಿತ್ರೋಪಯೋಟಿನ್‌ ಮತ್ತು ಐರನ್‌ ಸುಕ್ರೋಸ್‌ ಇಂಜೆಕ್ಷನ್‌ಗಳನ್ನು ನೀಡಲಾಗುತ್ತಿದೆ. ರೋಗಿಗಳಿಗೆ ಯಾವುದೇ ಸೊಂಕು ತಗಲದಂತೆ ಮುನ್ನೆಚ್ಚರಿಕೆಯಾಗಿ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳ ಹೆಪಟೈಟಿಸ್‌ ಸಿ.ಬಿ ಹಾಗೂ ಎಚ್‌ಐವಿ ಪರೀಕ್ಷೆ ಕಡ್ಡಾಯವಾಗಿ ಮಾಡಲಾಗುತ್ತಿದೆ.

ನಾಲ್ಕು ಯಂತ್ರ ಕೊಡುಗೆ: ಸನ್‌ಪ್ಯೂರ್‌ ಅಡುಗೆ ಎಣ್ಣೆ ಕಾರ್ಖಾನೆ (ಎಂ.ಕೆ ಆಗ್ರೋಟೆಕ್‌ ಪ್ರವೇಟ್‌ ಲಿಮಿಟಿಡ್‌) 2 ಡಯಾಲಿಸಿಸ್‌ ಯಂತ್ರಗಳನ್ನು ಉಚಿತವಾಗಿ ನೀಡಿದೆ. ಬಿಎಸ್‌ಆರ್‌ ಹೆಲ್ತ್‌ ಅಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸರಕಾರದ ವತಿಯಿಂದ ಎರಡು ಡಯಾಲಿಸಿಸ್‌ ಯಂತ್ರಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ.

ಎಪಿಎಲ್‌ ಕಾರ್ಡ್‌ನವರಿಗೂ ಉಚಿತ ಸೇವೆ: ಒಂದು ಯಂತ್ರದಿಂದ ನಿತ್ಯ ತಲಾ ಮೂರು ಮಂದಿಯಂತೆ 4 ಯಂತ್ರಗಳಿಂದ 12 ಮಂದಿಗೆ ನಿತ್ಯ ಡಯಾಲಿಸಿಸ್‌ ಮಾಡಲಾಗುತ್ತಿದೆ. ಎಪಿಎಲ್‌ ಹಾಗೂ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಎಲ್ಲಾ ರೋಗಿಗಳಿಗೂ ಉಚಿತವಾಗಿ ಡಯಾಲಿಸಿಸ್‌ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯದಿಂದ ರೋಗಿಗಳು ಮಾತ್ರವಲ್ಲದೇ ಸಾರ್ವಜನಿಕ ರಿಂದಲೂ ಆಸ್ಪತ್ರೆ ಮೆಚ್ಚುಗೆ ಗಳಿಸಿದೆ.

Advertisement

100 ಹಾಸಿಗೆಗಳುಳ್ಳ ಆಸ್ಪತ್ರೆ: ಒಟ್ಟು 100 ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ನಿತ್ಯ 300 ರಿಂದ 400 ಮಂದಿ ವಿವಿಧ ಕಾಯಿಲೆಗಳಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಿತ್ಯ 15 ಮಂದಿ ರೋಗಿಗಳನ್ನು ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಮೊಳೆರೋಗ, ಅಪೆಂಡಿಸ್‌, ಹರ್ನಿಯಾ, ಗೆಡ್ಡೆ ತೆಗೆಯುವುದು. ಸಂತಾನ ಹರಣ ಚಿಕಿತ್ಸೆ, ಗರ್ಭಕೋಶ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ.

ತಿಂಗಳಿಗೆ 30 ಮಂದಿ ಮಹಿಳೆಯರು ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗುತ್ತಾರೆ. ಇಎನ್‌ಟಿ ಶಸ್ತ್ರ ಚಿಕಿತ್ಸೆ, ಜತೆಗೆ 500 ಎಂಎ ಸಾಮರ್ಥ್ಯವುಳ್ಳ ಸಿಆರ್ಮ್ ಯಂತ್ರದ ಸಹಾಯದಿಂದ ಆಧುನಿಕ ಮೂಳೆ ಶಸ್ತ್ರಚಿಕಿತ್ಸೆ ಮಾಡಿ ರೋಗಿಗಳನ್ನು ಗುಣಪಡಿಸ ಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳಿಗೆ ಉಚಿತ ರಕ್ತ, ಮೂತ್ರ, ಕಫ, ಎಕ್ಸರೇ ತಪಾಸಣೆ ಸೌಲಭ್ಯವಿದೆ.

24/7 ವೈದ್ಯರ ಸೇವೆ: 24 ಗಂಟೆಯೂ ವೈದ್ಯರ ಸೇವೆ ಲಭ್ಯವಿದ್ದು ರಾತ್ರಿ ವೇಳೆ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರು ಅಪ್ಪಿತಪ್ಪಿ ಮಲಗಿದ್ದರೆ ಎಚ್ಚರಿಸುವ ಸಲುವಾಗಿ ಆಸ್ಪತ್ರೆ ಗೇಟ್‌ ಬಳಿ ಗಂಟೆ ವ್ಯವಸ್ಥೆ ಮಾಡಲಾಗಿದೆ. ಶ್ರೀರಂಗಪಟ್ಟಣ ಮಾತ್ರವಲ್ಲದೇ ಕೆ.ಆರ್‌.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲೂಕಿನಿಂದಲೂ ರೋಗಿಗಳು ಬಂದು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 2018-19 ನೇ ಸಾಲಿನಲ್ಲಿ ಆಸ್ಪತ್ರೆಗೆ ರಾಜ್ಯ ಸರಕಾರ ನೀಡುವ ಕಾಯಕಲ್ಪ ಪ್ರಶಸ್ತಿ ಲಭಿಸಿದೆ.

12 ಮಂದಿಗೆ ಉಚಿತ ಡಯಾಲಿಸಿಸ್‌ :  ಆಸ್ಪತ್ರೆಯಲ್ಲಿ ಅನಸ್ತೇನಿಯಾ, ಜನರಲ್‌ ಸರ್ಜರಿ, ಇಎನ್‌ಟಿ, ಮಕ್ಕಳ ತಜ್ಞ, ಗರ್ಭಿಣಿ ಹಾಗೂ ಸ್ತ್ರೀ ರೋಗ ತಜ್ಞ, ಪಿಜಿಸಿಯನ್‌, ಚರ್ಮರೋಗ, ಕಣ್ಣು, ದಂತ, ಮೂಳೆ ರೋಗ ತಜ್ಞ ವೈದ್ಯರಿದ್ದಾರೆ. 4 ಡಯಾಲಿಸಿಸ್‌ ಯಂತ್ರಗಳಿದ್ದು ನಿತ್ಯ ಮೂತ್ರಪಿಂಡ ವಿಫಲವಾಗಿರುವ 12 ಮಂದಿಗೆ ಉಚಿತ ಡಯಾಲಿಸಿಸ್‌ ಮಾಡಲಾಗುತ್ತಿದೆ. 350 ರಿಂದ 400 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಅಥವಾ 15 ಮಂದಿ ರೋಗಿಗಳು ನಿತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗುತ್ತಾರೆ. ತಿಂಗಳಿಗೆ ಕನಿಷ್ಠ 25 ರೋಗಿಗಳಿಗೆ ಸರ್ಜರಿ ಮಾಡಿ, ಅಗತ್ಯ ಔಷಧಗಳನ್ನು ನೀಡಲಾಗುತ್ತಿದೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆಯಲ್ಲಿ ಮಾಡುವ ಎಲ್ಲಾ ಸರ್ಜರಿಗಳನ್ನು ಉಚಿತವಾಗಿ ಮಾಡಲಾಗುತ್ತಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಾರುತಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಸ್ಟಾಪ್‌ ಹಾಗೂ ವೈದ್ಯರ ಸೇವೆ ತುಂಬಾ ಚೆನ್ನಾಗಿದೆ. ಇಲ್ಲಿ ಎರಡೂವರೆ ವರ್ಷದಿಂದ ಡಯಾಲಿಸಿಸ್‌ ಮಾಡಿಸುತ್ತಿದ್ದೇನೆ. ಮೊದಲು ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ತಿಂಗಳಿಗೆ 16 ಸಾವಿರ ಖರ್ಚಾಗುತ್ತಿತ್ತು. ಜತೆಗೆ ಪ್ರಯಾಣಕ್ಕೆ ಹೆಚ್ಚು ಖರ್ಚಾಗುತ್ತಿತ್ತು. ಹೆಚ್ಚುವರಿಯಾಗಿ ಡಯಾಲಿಸಿಸ್‌ ಮಾಡಿಸಬೇಕಿದ್ದರೆ ದಿನಗಟ್ಟಲೆ ಕಾಯಬೇಕಿತ್ತು. ಅದು ತಪ್ಪಿದೆ, ಜತೆಗೆ ರಕ್ತ ಹೆಚ್ಚಳ ಮಾಡುವ ಇಂಜೆಕ್ಷನ್‌ನ್ನು ಡಯಾಲಿಸಿಸ್‌ ರೋಗಿಗಳಿಗೆ ಉಚಿತವಾಗಿ ಸಿಗುತ್ತಿದೆ.  –ಮಂಜುನಾಥ್‌, ಡಯಾಲಿಸಿಸ್‌ ರೋಗಿ

 

-ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next