Advertisement

ಕುರ್ಲಾ ಬಂಟರ ಭವನದಲ್ಲಿ ಸಂಭ್ರಮದ ಶ್ರೀನಿವಾಸ ಕಲ್ಯಾಣೋತ್ಸವ

04:48 PM Aug 05, 2018 | |

ಮುಂಬಯಿ: ಶ್ರೀ ಬಾರ್ಕೂರು ಮಹಾಸಂಸ್ಥಾನಂ ಮುಂಬಯಿ ಘಟಕದ ಆಶ್ರಯದಲ್ಲಿ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮವು ಆ. 4 ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಾವಿರಾರು ಭಕ್ತ ಜನಸಾಗರದ ಒಕ್ಕೊರಲಿದ ಗೋವಿಂದಾ ಗೋವಿಂದಾ, ಶ್ರೀನಿವಾಸ ಗೋವಿಂದ, ವೆಂಕಟರಮಣ ಗೋವಿಂದಾ ಎಂಬ ವೇದಘೋಷ, ಮಹಾಪೂಜೆ, ಮಂಗಳಾರತಿಯೊಂದಿಗೆ ಅತ್ಯಂತ ಸಂಭ್ರಮ-ಸಡಗರದೊಂದಿಗೆ ಜರಗಿತು.

Advertisement

ಬಾಕೂìರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ಸಂತೋಷ ಭಾರತಿ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬಾಕೂìರು ಮಹಾಸಂಸ್ಥಾನದ ಮುಂಬಯಿ ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ, ಗೌರವಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ ಮತ್ತು ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಹಾಗೂ ಘಟಕದ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಜರಗಿದ ಭವ್ಯ ಶ್ರೀನಿವಾಸ ಕಲ್ಯಾಣೋತ್ಸವವನ್ನು ಭಕ್ತರೆಲ್ಲರೂ ಕಣ್ತುಂಬಿಕೊಂಡು ಪುನೀತರಾದರು.
ಮುಂಬಯಿ ಘಟಕದ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ, ಡಾ| ಸಂಗೀತಾ ಶೆಟ್ಟಿ ದಂಪತಿ, ಕರುಣಾಕರ ಶೆಟ್ಟಿ, ವಸಂತಿ ಕೆ ದಂಪತಿ, ಜಯರಾಮ ಎನ್‌. ಶೆಟ್ಟಿ, ಲತಾ ಜೆ. ಶೆಟ್ಟಿ ದಂಪತಿ ಬೆಳಗ್ಗೆ ಸುಪ್ರಭಾತ ಸೇವೆ, ಅಭಿಷೇಕ ಸೇವೆಯಲ್ಲಿ ಪಾಲ್ಗೊಂಡರು. ಕಲ್ಯಾಣೋತ್ಸವದ ದಿಬ್ಬಣವು ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರಕ್ಕೆ ಬಂದಾಗ ಅಲ್ಲಿ ಶ್ರೀ ಮಹಾವಿಷ್ಣು ಶ್ರೀನಿವಾಸ ದೇವರಿಗೆ  ವಿಶೇಷ ಪೂಜೆ ನಡೆದು ಶ್ರೀನಿವಾಸ ದೇವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬಂಟರ ಭವನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು.

ಈ ಕಲ್ಯಾಣೋತ್ಸವ ಪೂಜೆಗಾಗಿ ಶ್ರೀನಿವಾಸ- ಪದ್ಮಾವತಿ ತಿರು ಕಲ್ಯಾಣ ಮಹೋತ್ಸವ, ರಾಜರಾಜೇಶ್ವರಿ ನಗರ ಮೇಲ್ಕೋಟೆ ಬೆಂಗಳೂರು ಇಲ್ಲಿಂದ ಆಗಮಿಸಿದ ಆಗಮಿಕ ವೃಂದದ ಪ್ರಧಾನ ಅರ್ಚಕ ಮೋಹನ್‌ಬಾಬಾ ಭಟ್ಟಾಚಾರ್ಯ, ನರಸಿಂಹ ಅಯ್ಯಂಗಾರ್‌, ರಾಘವ ಭಟ್ಟಾಚಾರ್ಯ, ಅರುಣ್‌ ಭಟ್ಟಾಚಾರ್ಯ ಹಾಗೂ ಗೋಪಾಲಕೃಷ್ಣ ಭಟ್‌ ಇವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಸಾಂಗವಾಗಿ ನಡೆದ ಬಳಿಕ ವರ ಶ್ರೀನಿವಾಸ-ಭೂದೇವಿ ಪದ್ಮಾವತಿಯ ನಿಶ್ಚಿತಾರ್ಥ, ತಾಂಬೂಲ ಸೇವೆ, ಮಾಂಗಲ್ಯಧಾರಣೆ ಸುಸೂತ್ರವಾಗಿ ನೆರವೇರಿತು. ಬಳಿಕ ಚೆಂಡೆ, ಕೋಲಾಟ ಹಾಗೂ ಗೋವಿಂದ ನಾಮಾವಳಿಯಲ್ಲಿ ಭಕ್ತರು ಮೈಮರೆತರು.

ಇದೇ ಸಂದರ್ಭದಲ್ಲಿ ಭಕ್ತರನ್ನು ಉದ್ಧೇಶಿಸಿ ಮಾತನಾಡಿದ ಡಾ| ವಿಶ್ವ ಸಂತೋಷ ಭಾರತಿ ಶ್ರೀಗಳು, ಬಂಟರ ಭವನದಲ್ಲಿ ಇಂದು ಶ್ರೀನಿವಾಸನ ದೇವಸ್ಥಾನವೇ ಸೃಷ್ಟಿಯಾದಂತೆ ತೋರುತ್ತಿದೆ. ಕಿಕ್ಕಿರಿದು ಸೇರಿದ ಭಕ್ತ ಮಹಾಸಾಗರವನ್ನು ಕಂಡು ಅತ್ಯಂತ ಸಂತಸವಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವವು ಈ ಹಿಂದೆ ಕೇವಲ ಶ್ರೀ  ವೈಷ್ಣವ ಸಮುದಾಯದವರ ಸೊತ್ತಾಗಿತ್ತು. ಆ ಬಳಿಕ ರೆಡ್ಡಿ ಸಮುದಾಯ, ಒಕ್ಕಲಿಗ ಸಮುದಾಯದ ಉತ್ಸವವಾಗಿ ಮಾರ್ಪಟ್ಟು ಇದೀಗ ತುಳು-ಕನ್ನಡಿಗರ ಉತ್ಸವವಾಗಿ ಸಂಭ್ರಮಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು. 

ಬಂಟ ಸಮುದಾಯವು ಇಂದು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಯನ್ನು ನೀಡಬೇಕು. ಆರ್ಥಿಕವಾಗಿ ತೀರಾ ತೊಂದರೆಯಲ್ಲಿರುವ ಜನರಿಗಾಗಿ ಆಸ್ಪತ್ರೆಯೊಂದನ್ನು ತೆರೆಯಬೇಕು ಎನ್ನುವುದು ಬಾಕೂìರು ಮಹಾಸಂಸ್ಥಾನದ ಉದ್ದೇಶ ವಾಗಿದ್ದು, ಅದು ಕಾರ್ಯಗತಗೊಳ್ಳಲು ಮಹಾ ದಾನಿಗಳು ಸಹಕರಿಸಬೇಕು ಎಂದರು. 

Advertisement

ಆರೋಗ್ಯ ಧಾಮದ ನಿರ್ಮಾಣವೇ ಬಾಕೂìರು ಸಂಸ್ಥಾನದ ಬಹುದೊಡ್ಡ ದೇವಸ್ಥಾನವೆಂದು ನುಡಿದ ಶ್ರೀಗಳು, ವೈಚಾರಿಕತೆಯ ಪೂಜೆ ನಡೆಯಲಿ. ದೈವ-ದೇವರು ನೀಡುವುದಕ್ಕೆ ಇರುವುದು ಹೊರತು ಪಡೆಯುವುದಕ್ಕಲ್ಲ ಎಂಬುವುದನ್ನು ನಾವು ಅರ್ಥೈಯಿಸಿಕೊಳ್ಳಬೇಕು ಎಂದು ನುಡಿದರು.
ಸಮಾರಂಭದಲ್ಲಿ ಆಲ್‌ಕಾರ್ಗೋ ಲಾಜಿಸ್ಟಿಕ್‌ ಸಂಸ್ಥೆಯ ಕಾರ್ಯಾಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ  ಶಶಿಕಿರಣ್‌ ಶೆಟ್ಟಿ ಅವರನ್ನು ಸ್ವಾಮೀಜಿಯವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು. 
ರಾಜೀವ್‌ ಬಿಜಾಡಿ ಗ್ರೂಪ್‌ ಬೆಂಗಳೂರು ತಂಡದವರಿಂದ ಗಾನ ಲಹರಿ ನಡೆಯಿತು. ಬಂಟರ ಸಂಘ ಹಾಗೂ ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಬಂಟರ ಸಂಘ ಮಹಿಳಾ ವಿಭಾಗ, ಯುವ ವಿಭಾಗ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತರು  ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಈ ಹಿಂದೆ ತಿರುಪತಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಭಾಗ್ಯ ನನಗೆ ಒದಗಿತ್ತು. ಇದೀಗ ಬಂಟರ ಭವನದಲ್ಲಿ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀಪಾದರ ದಿವ್ಯ ಸಂದೇಶದೊಂದಿಗೆ ಶ್ರೀನಿವಾಸ ದೇವರ ಪ್ರತ್ಯಕ್ಷ ದರ್ಶನವಾದಂತಾಗಿದೆ. ನನಗೆ ದೇವರು ಉದ್ಯಮದ ಜೊತೆಗೆ ಸಮಾಜ ಸೇವೆ  ಮಾಡುವ ಅವಕಾಶವನ್ನು ನೀಡಿದ್ದಾರೆ. ಈ ಸೇವೆಯನ್ನು ನಾನು ಅಭಿಮಾನದಿಂದ ಮಾಡುತ್ತಿದ್ದೇನೆ. ಸ್ವಾಮೀಜಿ ಅವರ ಆಸ್ಪತ್ರೆಯ ಯೋಜನೆಗೆ ಬೃಹತ್‌ ಮೊತ್ತದ ನೆರವು ನೀಡಲು ಸಿದ್ಧನಿದ್ದೇನೆ. ಆರ್ಥಿಕವಾಗಿ ತೊಂದರೆಯಲ್ಲಿರುವವರಿಗೆ ಇದರಿಂದ ಪ್ರಯೋಜನ ದೊರಕಬೇಕು ಎಂಬುವುದೆ ನನ್ನ ಉದ್ಧೇಶವಾಗಿದೆ
 – ಶಶಿಕಿರಣ್‌ ಶೆಟ್ಟಿ 
(ಕಾರ್ಯಾಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು,ಆಲ್‌ಕಾರ್ಗೋ ಲಾಜಿಸ್ಟಿಕ್‌).

ಚಿತ್ರ-ವರದಿ:ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next