Advertisement

ಎಫ್‌ಎಂ ರೈನ್‌ಬೋ ಪ್ರಸಾರ ಸ್ಥಗಿತ !

06:11 PM Sep 28, 2019 | Naveen |

„ರಮೇಶ್‌ ಕರುವಾನೆ
ಶೃಂಗೇರಿ: ಇತ್ತೀಚಿನ ವರ್ಷದಲ್ಲಿ ಜನಪ್ರಿಯವಾಗಿದ್ದ ಎಫ್‌ಎಂ ರೈನ್‌ಬೋ ಕಾರ್ಯಕ್ರಮ ಸ್ಥಗಿತಗೊಳಿಸಿರುವ ಇಲ್ಲಿನ ಆಕಾಶವಾಣಿ ಮರು ಪ್ರಸಾರ ಕೇಂದ್ರ, ಅರ್ಥವೇ ಆಗದ ರಾಂಚಿ ಕೇಂದ್ರದ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಕೇಳುಗರಿಗೆ ತೀವ್ರ ನಿರಾಸೆ ಮೂಡಿಸಿದೆ.

Advertisement

ಮಲೆನಾಡಿನಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಾಗ ಮನೋರಂಜನೆಗಿರುವ ಏಕೈಕ ವಸ್ತು ಆಕಾಶವಾಣಿಯಾಗಿದೆ. ಮೀಡಿಯಂ ವೇವ್‌ ತರಂಗಾಂತರದ ಭದ್ರಾವತಿ, ಮಂಗಳೂರು ಮತ್ತಿತರ ನಿಲಯಗಳು ಈಗ ಸ್ಪಷ್ಟವಾಗಿ ಕೇಳದೇ ಇರುವುದರಿಂದ ಸ್ವಾಭಾವಿಕವಾಗಿ ರೈನ್‌ಬೋ ಕೇಳುಗರ ಸಂಖ್ಯೆ ವೃದ್ಧಿಸಿದೆ. ಪ್ರತಿ ದಿನ ಶೃಂಗೇರಿಯಿಂದ ಕರೆ ಮಾಡುತ್ತಿದ್ದ ಶ್ರೋತೃಗಳು ಇದ್ದರು. ಪ್ರಶ್ನೋತ್ತರ, ಇಷ್ಟವಾದ ಚಲನಚಿತ್ರ ಗೀತೆ ಮತ್ತಿತರ ಕಾರ್ಯಕ್ರಮಕ್ಕೆ ಪ್ರತಿದಿನ ಈ ಭಾಗದ ಒಂದಷ್ಟು ಶ್ರೋತೃಗಳು ಇದ್ದರೆ, ಪ್ರತಿ ದಿನವೂ ಆಲಿಸುತ್ತಿದ್ದ ಶ್ರೋತೃಗಳು ಸಾಕಷ್ಟು ಇದ್ದರು ಎಂಬುದು ಗಮನಾರ್ಹ.

ಇಲ್ಲಿನ ಎಫ್‌ಎಂ ಮರು ಪ್ರಸಾರ ಕೇಂದ್ರದಿಂದ ಇದುವರೆಗೂ ಏಫ್‌ಎಂ ರೈನ್‌ಬೋ 101.3 ಹೆಸರಿನಲ್ಲಿ ಕನ್ನಡ ಸಂಗೀತ, ಮಾಹಿತಿ ಕಾರ್ಯಕ್ರಮಗಳು, ಸ್ಪರ್ಧೆ, ಗಂಟೆಗೊಮ್ಮೆ ವಾರ್ತೆ, ಚಿತ್ರಗೀತೆ ಎಲ್ಲವೂ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೂ ಪ್ರಸಾರ ಆಗುತ್ತಿತ್ತು. ಯಾವುದೋ ಕೆಲಸ ಮಾಡುವವರು ಎಫ್‌ಎಂ ಮೂಲಕ ತಮ್ಮ ಕರ್ತವ್ಯಕ್ಕೂ ತೊಂದರೆಯಾಗದಂತೆ ಮನೋರಂಜನೆ, ಸುದ್ದಿಯನ್ನು ಪಡೆಯುತ್ತಿದ್ದರು.

ಬೆಂಗಳೂರಿನ ಆಕಾಶವಾಣಿ ಕೇಂದ್ರದಿಂದ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಮರು ಪ್ರಸಾರವಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಎಫ್‌ಎಂ ರೈನ್‌ ಬೋ ತೆಗೆದುಹಾಕಿ ಅದರ ಬದಲಿಗೆ ರಾಂಚಿ ಕೇಂದ್ರವನ್ನು ಸೇರಿಸಿದ್ದೇ ಈ ಗೊಂದಲಕ್ಕೆ ಕಾರಣ ಎನ್ನಲಾಗಿದೆ.

ಆದರೆ, ರಾಜ್ಯದ ಜನತೆಗೆ ಆಗಿರುವ ಅನ್ಯಾಯವನ್ನು ದೆಹಲಿಗೆ ಮುಟ್ಟಿಸುವುದೇ ದೊಡ್ಡ ಹೋರಾಟವಾಗಿದೆ. ಸಂಬಂಧಿ ಸಿದ ಅಧಿಕಾರಿಗಳಿಗೆ
ಈ ಬಗ್ಗೆ ಅರಿವು ಸಹ ಇದ್ದಂತಿಲ್ಲ. ಆದರೂ, ರಾಜ್ಯದ ಲಕ್ಷಾಂತರ ಎಫ್‌ಎಂ ಕೇಳುಗರಿಗಂತೂ ಅನ್ಯಾಯವಾಗಿದೆ.

Advertisement

ದೂರದರ್ಶನ ಮರುಪ್ರಸಾರಕ್ಕಾಗಿ ಮಾರುತಿ ಬೆಟ್ಟದಲ್ಲಿ ಸ್ಥಾಪಿತವಾದ ಮರು ಪ್ರಸಾರ ಕೇಂದ್ರಕ್ಕೆ ಆಕಾಶವಾಣಿಯ ಎಫ್‌ಎಂ ರೈನ್‌ಬೋ ಮರು ಪ್ರಸಾರವನ್ನು ಸೇರ್ಪಡೆಗೊಳಿಸಲಾಗಿತ್ತು. ದೂರದರ್ಶನ ಮರುಪ್ರಸಾರ ಸ್ಥಗಿತಗೊಂಡರೂ ಪ್ರಸ್ತುತ ಆಕಾಶವಾಣಿ ಮರುಪ್ರಸಾರ ವ್ಯವಸ್ಥೆಯೂ ಇದೆ. ಕೇಂದ್ರದ ಮೇಲುಸ್ತುವಾರಿ ಕೊರತೆ, ಯುಪಿಎಸ್‌ ಇಲ್ಲದೇ ಕೆಲವೊಮ್ಮೆ ಹಲವು ದಿನಗಳ ಕಾಲ ಮತ್ತು ವಿದ್ಯುತ್‌ ನಿಲುಗಡೆ ಆಗುತ್ತಿದ್ದಂತೆ ಪ್ರಸಾರ ಸ್ಥಗಿತಗೊಳ್ಳುತ್ತಿತ್ತು.

ಈ ಬಗ್ಗೆ ಕೇಳುಗರು ಹಾಕಿದ ತೀವ್ರ ಒತ್ತಾಯ, ಒತ್ತಡದಿಂದಾಗಿ ಇವೆಲ್ಲವೂ ಈಗ ಸುಸ್ಥಿತಿಗೆ ಬಂದಿತು ಎನ್ನುವಾಗ ಹಠಾತ್‌ ಆಗಿ ರೈನ್‌ಬೋ 101.3 ಕನ್ನಡ ಕಾರ್ಯಕ್ರಮಕ್ಕೆ ಎತ್ತಂಗಡಿ ಮಾಡಿ, ಬೇರೆ ಯಾವುದೋ ಪರಭಾಷಾ ನಿಲಯದ ಕಾರ್ಯಕ್ರಮವನ್ನು ಈ ಕೇಂದ್ರಕ್ಕೆ ಜೋಡಿಸಿ, ಮರುಪ್ರಸಾರ ಮಾಡಲಾಗುತ್ತಿದೆ. ಇದರಿಂದ ಕೇಳುಗರು ನಿರಾಸೆಗೊಂಡಿದ್ದಾರೆ. ಈ ಕುರಿತು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ದೂರು ಸಲ್ಲಿಸಲು ಕ್ಷೇತ್ರದ ಸಂಸದರ ನೆರವನ್ನು ಯಾಚಿಸಲಾಗಿತ್ತು.

ಆದರೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಬರುತ್ತಿಲ್ಲ. ಬಂದರೂ ಮಾತಿಗೂ ಸಿಗುತ್ತಿಲ್ಲ ಎಂಬುದು ಆಕಾಶವಾಣಿ ಕೇಳುಗರ ದೂರಾಗಿದೆ. ಇನ್ನಾದರೂ ಸಂಸದರು ಈ ಸಮಸ್ಯೆಯನ್ನು ಗಮನಿಸಿ, ಆಕಾಶವಾಣಿಯ ಮುಖ್ಯಸ್ಥರಿಗೆ ಈ ಹಿಂದಿನಂತೆ ಎಫ್‌ಎಂ ರೈನ್‌ಬೋ 101.3 ಕಾರ್ಯಕ್ರಮವನ್ನು ಈ ಮರುಪ್ರಸಾರ ಕೇಂದ್ರಕ್ಕೆ ಜೋಡಿಸುವ ಕೆಲಸ ಮಾಡಬೇಕು ಎಂದು ಈ ಭಾಗದ ಶ್ರೋತೃಗಳು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next