Advertisement

ಕುಟುಂಬದ ಜೊತೆ ಶ್ರೀಮುರಳಿ ಬರ್ತ್‌ಡೇ

09:59 AM Dec 19, 2019 | Team Udayavani |

ಶ್ರೀಮುರಳಿ ಅವರು ಈ ಬಾರಿ ತಮ್ಮ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳ ಜೊತೆಗಿದ್ದು, ಬರ್ತ್‌ಡೇ ಆಚರಿಸುತ್ತಿದ್ದ ಅವರು, ಮಂಗಳವಾರ ರೆಸಾರ್ಟ್‌ವೊಂದರಲ್ಲಿ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದಕ್ಕೂ ಮೊದಲೇ ಅವರು ಇತ್ತೀಚೆಗೆ ಅಭಿಮಾನಿಗಳನ್ನು ಭೇಟಿ ಮಾಡಿ, ಈ ಬಾರಿ ನಿಮ್ಮ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿಲ್ಲ, ಕ್ಷಮೆ ಇರಲಿ ಎಂದು ಅವರೊಂದಿಗೆ ಕೆಲಹೊತ್ತು ಕಳೆದು ಅವರಿಗೆ ಊಟೋಪಚಾರ ನೋಡಿಕೊಂಡು ಪ್ರೀತಿಯಿಂದಲೇ ಮಾತನಾಡಿಸಿ ಕಳುಹಿಸಿದ್ದರು.

Advertisement

ಬರ್ತ್‌ಡೇ ನಂತರದ ದಿನದಲ್ಲಿ ಅಭಿಮಾನಿಗಳ ಜೊತೆ ಒಂದು ದಿನ ಸಮಯ ಕಳೆಯಲಿರುವ ಶ್ರೀಮುರಳಿ ಸದ್ಯಕ್ಕೆ “ಮದಗಜ’ ಚಿತ್ರದ ಜಪದಲ್ಲಿದ್ದಾರೆ. ಹೌದು, “ಮದಗಜ’ ಚಿತ್ರದ ಶೀರ್ಷಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಇದೇ ಶೀರ್ಷಿಕೆಯಡಿ ಚಿತ್ರ ತಯಾರಾಗಲಿದೆ ಎಂಬುದು ನಿರ್ದೇಶಕ ಮಹೇಶ್‌ ಕುಮಾರ್‌ ಮಾತು. ಆ ಕುರಿತು ಹೇಳುವ ಅವರು, “ಚಿತ್ರದ ಶೀರ್ಷಿಕೆ ಬಗ್ಗೆ ಗೊಂದಲವಿಲ್ಲ. “ಮದಗಜ’ ಶೀರ್ಷಿಕೆಯೇ ಇರಲಿದೆ. ಜನವರಿ 15 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ಜ.18 ರಿಂದ ಚಿತ್ರೀಕರಣ ಶುರುವಾಗಲಿದೆ.

ವಾರಣಾಸಿಯಿಂದ ಚಿತ್ರೀಕರಣ ಶುರುವಾಗುತ್ತಿದ್ದು, ಅಲ್ಲೇ ಸುಮಾರು 23 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರೀಕರಣದಲ್ಲಿ ತೆಲುಗು ನಟ ಜಗಪತಿಬಾಬು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಸದ್ಯಕ್ಕೆ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದ ನಾಯಕಿಯರೇ ಇರಲಿದ್ದಾರೆ. ರಚಿತಾ ರಾಮ್‌ ಅಥವಾ ಆಶಿಕಾ ರಂಗನಾಥ್‌ ಇವರಿಬ್ಬರ ಜೊತೆ ಮಾತುಕತೆ ನಡೆದಿದ್ದು, ಇಬ್ಬರ ಪೈಕಿ ಒಬ್ಬರು ನಾಯಕಿ ಆಗಲಿದ್ದಾರೆ.

ಉಳಿದಂತೆ ಚಿತ್ರದಲ್ಲಿ ರಮ್ಯಾಕೃಷ್ಣ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯ ರಘು, ಶಿವರಾಜ್‌ ಕೆ.ಆರ್‌.ಪೇಟೆ ಇತರರು ನಟಿಸುತ್ತಿದ್ದಾರೆ. “ಮಫ್ತಿ’ ಖ್ಯಾತಿಯ ನವೀನ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಸದ್ಯಕ್ಕೆ ಸಂಗೀತ ನಿರ್ದೇಶಕರು ಅಂತಿಮವಾಗಿಲ್ಲ. ಈಗಷ್ಟೇ ಸಂಭಾಷಣೆ ಅಂತಿಮ ಹಂತದಲ್ಲಿದೆ. “ಕೆಜಿಎಫ್’ಗೆ ಸಂಭಾಷಣೆ ಬರೆದಿದ್ದ, ಚಂದ್ರಮೌಳಿ “ಮದಗಜ’ ಚಿತ್ರಕ್ಕೂ ಬರೆಯುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಮಹೇಶ್‌ ಕುಮಾರ್‌. ಚಿತ್ರವನ್ನು ಉಮಾಪತಿ ನಿರ್ಮಿಸುತ್ತಿದ್ದು, ಶ್ರೀಮುರಳಿ ಹುಟ್ಟುಹಬ್ಬಕ್ಕೆ ಚಿತ್ರದ ಮೋಷನ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next