Advertisement

ಶ್ರೀದುರ್ಗಾ ಮಕ್ಕಳ ಮೇಳಕ್ಕೆ ವಿಶ್ವೇಶತೀರ್ಥ ಪ್ರಶಸ್ತಿ 

06:00 AM Nov 16, 2018 | Team Udayavani |

ಯಕ್ಷಗಾನ ಕಲಾರಂಗ ಉಡುಪಿ ಇವರು ಯಕ್ಷಗಾನ ಸಂಘಟನೆಗೆ ನೀಡುವ ಪ್ರತಿಷ್ಠಿತ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಶ್ರೀದುರ್ಗಾ ಮಕ್ಕಳ ಮೇಳ ಕಟೀಲು ಆಯ್ಕೆಯಾಗಿದೆ.ನ.25 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು. ಎಳೆಯರಿಗೆ ಯಕ್ಷಶಿಕ್ಷಣ ನೀಡುತ್ತಾ ನಿರಂತರ ಪ್ರದರ್ಶನಗಳೊಂದಿಗೆ ಅವರನ್ನು ಪ್ರೇರೇಪಿಸುತ್ತಾ ತೆಂಕುತಿಟ್ಟು ಯಕ್ಷಗಾನದಲ್ಲಿ ಹೊಸ ಸಂಚಲನ ಉಂಟುಮಾಡಿದ ಸಂಸ್ಥೆ ಶ್ರೀದುರ್ಗಾ ಮಕ್ಕಳ ಮೇಳ ಕಟೀಲು. ಈಗ ಮೊದಲಿನಂತೆ ಮೇಳದಲ್ಲಿ ಕಲಾವಿದರು ತಯಾರಾಗುತ್ತಿಲ್ಲ. ಶಾಲಾಶಿಕ್ಷಣದೊಂದಿಗೆ ಯಕ್ಷಶಿಕ್ಷಣ ಕೊಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಟೀಲಿನ ಹರಿನಾರಾಯಣದಾಸ ಅಸ್ರಣ್ಣರು ಹತ್ತು ವರ್ಷಗಳ ಹಿಂದೆ ಶ್ರೀದುರ್ಗಾ ಮಕ್ಕಳ ಮೇಳ ಸ್ಥಾಪಿಸಿ ನಿರಂತರ ಕಲಿಕೆ ಪ್ರದರ್ಶಗಳ ಮೂಲಕ ಅವರು ಈ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗಮನಾರ್ಹ. 

Advertisement

 ಪ್ರತಿ ಶನಿವಾರ, ಭಾನುವಾರ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಲೀಲಾವತಿ ಬೈಪಡಿತ್ತಾಯ, ಹರಿನಾರಾಯಣ ಬೈಪಡಿತ್ತಾಯ, ಸರ್ಪಂಗಳ ಈಶ್ವರ ಭಟ್‌, ರಾಜೇಶ್‌ ಐ. ಗುರುಗಳಾಗಿ ನಾಲ್ಕು ವಿಭಾಗಗಳಲ್ಲಿ ಭಾಗವತಿಕೆ, ಚಂಡೆ-ಮದ್ದಲೆ, ಮಾತುಗಾರಿಕೆ, ಯಕ್ಷನಾಟ್ಯ ಕಲಿಸಿಕೊಡುತ್ತಿದ್ದಾರೆ. ದಿವಾಣ ಶಂಕರ ಭಟ್ಟರಿಂದ ಮುಖವರ್ಣಿಕೆ ಶಿಬಿರ, ಕೆ. ಗೋವಿಂದ ಭಟ್ಟರಿಂದ ವಿಶೇಷ ನಾಟ್ಯ ತರಗತಿ ನಡೆಸಲಾಗುತ್ತಿದೆ. ಈ ಹತ್ತು ವರ್ಷಗಳಲ್ಲಿ 275 ಪ್ರದರ್ಶನಗಳನ್ನು ನೀಡಿದ್ದಾರೆ. ಇದರಲ್ಲಿ ಒಟ್ಟು 272 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಕೃಷ್ಣಲೀಲೆ-ಕಂಸವಧೆ, ಇಂದ್ರಜಿತು ಕಾಳಗ, ವೀರಮಣಿ ಕಾಳಗ, ಸುದರ್ಶನ ವಿಜಯ, ಪಾಂಚಜನ್ಯ, ವೀರ ಬಭುವಾಹನ, ಮಹಿಷ ಮರ್ದಿನಿ, ಜಾಂಬವತಿ ಕಲ್ಯಾಣ, ಪಂಚವಟಿ, ಮಾಯಾತಿಲೋತ್ತಮೆ, ದûಾಧರ, ಗಿರಿಜಾ ಕಲ್ಯಾಣ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳು ಅಡಕವಾಗಿರುವುದು ಇನ್ನೊಂದು ವೈಶಿಷ್ಟ. ಈಗ ಯಕ್ಷಗಾನದಿಂದ ಮರೆಯಾಗುತ್ತಿರುವ ಪೂರ್ವರಂಗವನ್ನು ಮಕ್ಕಳಿಗೆ ಕಲಿಸಿಕೊಟ್ಟು ಪ್ರದರ್ಶಿಸಲಾಗುತ್ತಿದೆ. ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ಮುಖ್ಯ ಸ್ತ್ರೀವೇಷ, ಚಂದ ಭಾಮ, ಷಣ್ಮುಖ ಸುಬ್ರಾಯ, ರಂಗ-ರಂಗಿ, ಅರೆಪಾವಿನಾಟ, ಚಪ್ಪರಮಂಚ ಮತ್ತು ಕೋಲಾಟ ಇವುಗಳೆಲ್ಲಾ ಪೂರ್ವ ರಂಗ ಪ್ರದರ್ಶನದಲ್ಲಿ ಒಳಗೊಂಡಿದೆ. ಕೃಷ್ಣನ ಒಡ್ಡೋಲಗ, ರಾಮನ ಒಡ್ಡೋಲಗ, ಪಾಂಡವರ ಒಡ್ಡೋಲಗ, ಹನುಮಂತನ ಒಡ್ಡೋಲಗ, ಬಣ್ಣದ ಒಡ್ಡೋಲಗವೂ ಸೇರಿದಂತೆ ಹತ್ತು ಒಡ್ಡೋಲಗಗಳನ್ನು ಪ್ರದರ್ಶಿಸಲು ಇಲ್ಲಿಯ ಮಕ್ಕಳು ಸಮರ್ಥರಾಗಿದ್ದಾರೆ. ನಾಡಿನಾದ್ಯಂತ ಪ್ರದರ್ಶನ ನೀಡಿದ ಹಿರಿಮೆ ಸಂಸ್ಥೆಗಿದೆ. 

ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಳದ ಆಶ್ರಯ, ದಾನಿಗಳ ಸಹಕಾರದಿಂದ ಟ್ರಸ್ಟ್‌ ದೂರಗಾಮಿ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತವಾಗಿದೆ. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಸಂಸ್ಥೆ ಭದ್ರ ಭವಿಷ್ಯದ ಮುನ್ಸೂಚನೆಯನ್ನು ಶೈಶವದಲ್ಲೇ ತೋರಿಸಿದೆ. 

ಪ್ರೊ| ನಾರಾಯಣ ಎಂ. ಹೆಗಡೆ 

Advertisement

Udayavani is now on Telegram. Click here to join our channel and stay updated with the latest news.

Next