Advertisement

ಸೂಪರ್‌ಸ್ಟಾರ್‌ ನಟಿ ಶ್ರೀದೇವಿ ಇನ್ನು ನೆನಪು

06:00 AM Feb 26, 2018 | Team Udayavani |

ನವದೆಹಲಿ: ಇದನ್ನು ಸದ್ಮಾ ಎಂದಾದರೂ ಬಣ್ಣಿಸಬಹುದು ಅಥವಾ ಸ್ತಂಭೀಭೂತವೆಂದಾದರೂ ಕರೆಯಬಹುದು. ಇಡೀ ಭಾರತೀಯ ಚಿತ್ರರಂಗವೇ ಈ ಕೆಟ್ಟ ಸುದ್ದಿ ಕೇಳಿ ಶಾಕ್‌ಗೆ ಒಳಗಾಗಿದೆ. ದೇಶದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂದೇ ಖ್ಯಾತರಾಗಿದ್ದ, ಜನಪ್ರಿಯ ನಟಿ ಶ್ರೀದೇವಿ (54) ದುಬೈನಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಶನಿವಾರ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Advertisement

ದುಬೈನಲ್ಲಿ ತಾವು ನೆಲೆಸಿದ್ದ ಜುಮೈರಾ ಎಮಿರೇಟ್ಸ್‌ ಟವರ್ಸ್‌ನಲ್ಲಿದ್ದ ತಮ್ಮ ಸೂಟ್‌ನಲ್ಲಿನ ಸ್ನಾನದ ಕೋಣೆಗೆ ತಡರಾತ್ರಿ, ಸ್ಥಳೀಯ ಕಾಲಮಾನ ರಾತ್ರಿ 11ರ ಸುಮಾರಿಗೆ ಶೌಚಕ್ಕೆ ತೆರಳಿದ್ದ ಶ್ರೀದೇವಿ, ಅಲ್ಲಿಯೇ ಕುಸಿದುಬಿದ್ದರು. ತಕ್ಷಣ ಅವರನ್ನು ರಾಶಿದ್‌ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಇಹಲೋಕ ತ್ಯಜಿಸಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ, ದುಬೈನಲ್ಲಿರುವ ಭಾರತೀಯರಲ್ಲಿ ಅನೇಕರು ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಶ್ರೀದೇವಿ ಮೃತದೇಹ ಇರಿಸಲಾಗಿದ್ದ ದುಬೈ ಕ್ರಿಮಿನಾಲಜಿ ಕಚೇರಿ ಮುಂದೆ ಜಮಾಯಿಸಿ, ಅಂತಿಮ ದರ್ಶನಕ್ಕಾಗಿ ಕಾಯಲಾರಂಭಿಸಿದರು.
ಶ್ರೀದೇವಿಯವರ ಪತಿ ಬೋನಿ ಕಪೂರ್‌ ಅವರ ಸೋದರ ಸಂಬಂಧಿಯಾದ ಮೋಹಿತ್‌ ಮಾರ್ವಾ ಅವರ ಮದುವೆಗಾಗಿ ಪತಿ ಬೋನಿ ಕಪೂರ್‌ ಹಾಗೂ ಎರಡನೇ ಮಗಳು ಖುಷಿ ಜತೆಗೆ ದುಬೈಗೆ ಆಗಮಿಸಿದ್ದರು ಶ್ರೀದೇವಿ. ಅವರ ಮೊದಲ ಪುತ್ರಿ ಜಾಹ್ನವಿ ಶೂಟಿಂಗ್‌ ಇದ್ದಿದ್ದರಿಂದ ಆಗಮಿಸಿರಲಿಲ್ಲ. ಇತ್ತೀಚೆಗೆ, ದುಬೈನ ರಸ್‌-ಅಲ್‌ ಖೈಮತ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಮದುವೆ ಮುಗಿದ ನಂತರ, ಕೆಲ ಸಂಬಂಧಿಗಳು ಭಾರತಕ್ಕೆ ಹಿಂದಿರುಗಿದರೂ, ಶ್ರೀದೇವಿ ಕುಟುಂಬ ಮಾತ್ರ ಅಲ್ಲೇ ಉಳಿದುಕೊಂಡಿತ್ತು.

ತಡವಾದ ಕಾನೂನು ಪ್ರಕ್ರಿಯೆ
ದುಬೈನಲ್ಲಿ ನಿಧನರಾಗಿದ್ದರಿಂದ, ಶನಿವಾರ ಪೂರ್ತಿ ಹಲವು ಕಾನೂನಾತ್ಮಕ ಪ್ರಕ್ರಿಯೆಗಳಿಂದಾಗಿ ಶ್ರೀದೇವಿಯವರ ಪಾರ್ಥಿವ ಶರೀರವನ್ನು ಬೇಗನೇ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲ. ದುಬೈನಲ್ಲಿರುವ ಭಾರತೀಯ ರಾಯಭಾರಿ ನವದೀಪ್‌ ಸಿಂಗ್‌ ಸೂರಿ ಹಾಗೂ ಕೌನ್ಸುಲ್‌ ಜನರಲ್‌ ವಿಪುಲ್‌ ಅವರ ಸಹಾಯದ ಹೊರತಾಗಿಯೂ, ಸಂಜೆ 4:30 ಆದರೂ ಈ ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿದಿರಲೇ ಇಲ್ಲ.

ಮರಣೋತ್ತರ ಪರೀಕ್ಷೆ
ಮೊದಲಿಗೆ ಸಹಜ ಸಾವಾಗಿದ್ದರಿಂದ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಯಲಾರದೆಂದು ಊಹಿಸಲಾಗಿತ್ತು. ಆದರೆ, ದುಬೈ ಕಾನೂನಿನ ಪ್ರಕಾರ, ದುಬೈ ಪೊಲೀಸ್‌ ಇಲಾಖೆಯ ಆಯ್ದ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ವಿಧಿವಿಜ್ಞಾನ ತಜ್ಞರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮುಕೇಶ್‌ ಅಂಬಾನಿ ಅವರ ಚಾರ್ಟೆಡ್‌ ವಿಮಾ ನದ ಮೂಲಕ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಯಿತು.

Advertisement

“ಸಿರಿ’ ದೇವಿಯ ಕುರಿತ ಕುತೂಹಲಕಾರಿ ಸಂಗತಿಗಳು
– ಸೂಪರ್‌ಸ್ಟಾರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೊದಲ ನಟಿ
– “ರೂಪ್‌ ಕಿ ರಾಣಿ ಚೋರೋಂ ಕಾ ರಾಜಾ’ ಚಿತ್ರದ ದುಷ್ಮನ್‌ ದಿಲ್‌ ಕಾ ವೋ ಹೈ ಹಾಡಿನ ನೃತ್ಯದಲ್ಲಿ ಶ್ರೀದೇವಿ ತೊಟ್ಟಿದ್ದ ಉಡುಪು ಬರೋಬ್ಬರಿ 25 ಕೆ.ಜಿ. ತೂಕವಿತ್ತು.
– ತಮಿಳು ಚಿತ್ರ ಮೂಂದ್ರು ಮುಡಿಚು(1976)ವಿನಲ್ಲಿ ರಜನಿಕಾಂತ್‌ ಅವರ ಮಲತಾಯಿಯಾಗಿ ನಟಿಸಿದ್ದಾಗ ಶ್ರೀದೇವಿಗೆ ಇನ್ನೂ 13ರ ಹರೆಯ.
– ಚಾಲ್‌ಬಾಜ್‌ ಚಿತ್ರದ ಜನಪ್ರಿಯ ಹಾಡು “ನಾ ಜಾನೇ ಕಹಾ ಸೇ ಆಯಿ ಹೇ’ ಹಾಡಿಗೆ ಚಿತ್ರೀಕರಣ ನಡೆಯುತ್ತಿದ್ದಾಗ ಶ್ರೀದೇವಿಗೆ 103 ಡಿಗ್ರಿ ಜ್ವರವಿತ್ತು. ಆದರೂ ಅವರು ಧೃತಿಗೆಡದೆ ಕರ್ತವ್ಯನಿಷ್ಠೆ ಮೆರೆದಿದ್ದರು
– ತಮ್ಮ 54ರ ಹರೆಯದಲ್ಲೂ 20ರ ಹರೆಯದ ನಾಯಕಿಯರಿಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದವರು
– ನಟ ಮಿಥುನ್‌ ಚಕ್ರವರ್ತಿ ಮತ್ತು ಶ್ರೀದೇವಿ ರಹಸ್ಯವಾಗಿ ವಿವಾಹವಾಗಿದ್ದರು. ಆದರೆ, ನಂತರ ಮನಸ್ತಾಪವಾಗಿ ಇಬ್ಬರೂ ಬೇರ್ಪಟ್ಟರು. ಮಾಧ್ಯಮದವರು ವಿವಾಹ ನೋಂದಣಿ ಪ್ರಮಾಣಪತ್ರ ತೋರಿಸಿದ ಬಳಿಕವಷ್ಟೇ ಮಿಥುನ್‌ ಅವರು ತಾವು ಮದುವೆಯಾಗಿದ್ದಾಗಿ ಒಪ್ಪಿಕೊಂಡಿದ್ದರು.
– ಶ್ರೇಷ್ಠ ನಟಿ ವಿಭಾಗದಲ್ಲಿ 5 ಫಿಲಂಫೇರ್‌ ಪ್ರಶಸ್ತಿ ಅವರ ಪಾಲಾಗಿದೆ
– ಸದ್ಮಾ, ಚಾಂದಿನಿ, ಗರಾಜಾ°, ಕ್ಷಣ ಕ್ಷಣಂ ಚಿತ್ರಕ್ಕೆ ಹಿನ್ನೆಲೆ ಗಾಯನವನ್ನೂ ನೀಡಿದವರು ಶ್ರೀದೇವಿ
– ಜುರಾಸಿಕ್‌ ಪಾರ್ಕ್‌ನಲ್ಲಿ ಶ್ರೀದೇವಿಗೆ ಪಾತ್ರವೊಂದನ್ನು ನೀಡಲು ಸ್ಟೀವನ್‌ ಸ್ಪೈಲ್‌ಬರ್ಗ್‌ ಮುಂದೆ ಬಂದಿದ್ದರು. ಆದರೆ, ಆಗ ಬಾಲಿವುಡ್‌ನ‌ಲ್ಲಿ ಉತ್ತುಂಗದಲ್ಲಿದ್ದ ಕಾರಣ, ಈ ಆಫ‌ರ್‌ ತಿರಸ್ಕರಿಸಿದ್ದರು
– ಶ್ರೀದೇವಿಗೆ ಅತಿ ಹೆಚ್ಚು ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ಕಮಲ್‌ ಹಾಸನ್‌. ಇವರು 40 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
– ಹುಟ್ಟುಹಬ್ಬ ಆಚರಿಸುವುದೆಂದರೆ ಅವರಿಗೆ ಆಗಿ ಬರುತ್ತಿರಲಿಲ್ಲ

ಶಾರುಖ್‌ ಉಳಿಸಲು ಬಾಜಿಗರ್‌ನಿಂದ ಶ್ರೀದೇವಿ ದೂರ
“ಬಾಜಿಗರ್‌’ ಸಿನಿಮಾಗೆ ನಾಯಕಿಯ ಆಯ್ಕೆ ನಡೆಯುತ್ತಿತ್ತು. ನಿರ್ದೇಶಕ ಅಬ್ಟಾಸ್‌ ಮಸ್ತಾನ್‌ ಅವರ ಮೊದಲ ಆಯ್ಕೆ ಶ್ರೀದೇವಿಯೇ ಆಗಿದ್ದರು. ಆ ಸಿನಿಮಾದಲ್ಲಿ ಸೀಮಾ ಮತ್ತು ಪ್ರಿಯಾ ಎಂಬ ಅವಳಿ ಪಾತ್ರಗಳನ್ನು ಸೃಷ್ಟಿಸಿ, ಶ್ರೀದೇವಿಯವರನ್ನೇ ಹಾಕಿಸಿ ದ್ವಿಪಾತ್ರ ಮಾಡಿಸಲು ನಿರ್ಧರಿಸಿದರು. ಆದರೆ, ಸಿನಿಮಾದ ಕಥೆಯಂತೆ ನಟಿ(ಶ್ರೀದೇವಿ)ಯನ್ನೇನಾದರೂ ಶಾರುಖ್‌ಖಾನ್‌ ಕೊಲ್ಲುವುದನ್ನು ತೋರಿಸಿದರೆ, ಖಂಡಿತಾ ಜನರ ಪಾಲಿಗೆ ಶಾರುಖ್‌ ವಿಲನ್‌ ಆಗಿ ಬದಲಾಗುತ್ತಾರೆ ಎಂಬ ಭೀತಿಯಿಂದ ನಿರ್ದೇಶಕರು, ಶ್ರೀದೇವಿಯನ್ನು ಆ ಸಿನಿಮಾಗೆ ಆಯ್ಕೆ ಮಾಡಲಿಲ್ಲ. ಕೊನೆಗೆ ಕಾಜೋಲ್‌ ಮತ್ತು ಶಿಲ್ಪಾ ಶೆಟ್ಟಿಗೆ ಆ ಪಾತ್ರ ದೊರಕಿತು. ಶ್ರೀದೇವಿ ಅವರು ಆಗಿನ ಕಾಲದಲ್ಲಿ ಜನಮಾನಸದಲ್ಲಿ ಮೂಡಿಸಿದ್ದ ಪ್ರಭಾವ ಎಂಥದ್ದಿರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next