Advertisement

Sri Rama ಆದರ್ಶ, ತ್ಯಾಗದ ಪ್ರತಿರೂಪ: ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

12:22 AM Jan 13, 2024 | Team Udayavani |

ಕಳೆದ ಹಲವು ಶತಮಾನಗಳಿಂದ ಕೋಟ್ಯಂತರ ಭಕ್ತರ ನಿರೀಕ್ಷೆಯಾಗಿದ್ದ ಶ್ರೀ ರಾಮನು ಜನಿಸಿದ ಸ್ಥಳದಲ್ಲಿಯೇ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಅಭೀಪ್ಸೆಯು ಸಾಕಾರವಾಗುತ್ತಿರುವ ಅಮೃತ ಘಳಿಗೆಯಲ್ಲಿ ನಾವಿದ್ದೇವೆ. ಅಯೋಧ್ಯೆಯಲ್ಲಿ 2020ರ ಆಗಸ್ಟ್‌ 5ರಂದು ದೇಶದ ಗಣ್ಯ ಮಾನ್ಯರು, ಸಾಧು, ಸತು³ರುಷರು, ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀ ರಾಮನ ದೇಗುಲಕ್ಕೆ ರಜತ ಇಟ್ಟಿಗೆಗಳನ್ನಿಟ್ಟು ಶಿಲಾನ್ಯಾಸ ನೆರವೇರಿಸಿದ್ದು ಐತಿಹಾಸಿಕ ದಿನವಾಗಿತ್ತು. ಆ ಶುಭ ಸಂದರ್ಭದಲ್ಲಿ ನಾವೂ ಸಹ ಉಪಸ್ಥಿತರಿದ್ದು ಸಾಕ್ಷೀಕರಿಸಿದ್ದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸದ್ಭಕ್ತರಿಗೆಲ್ಲ ಹೆಮ್ಮೆಯ ವಿಷಯವಾಗಿತ್ತು. ಅಂತೆಯೇ ಮಂದಿರ ಲೋಕಾರ್ಪಣೆಯ ಈ ಶುಭ ಸಂದರ್ಭವೂ ಕೂಡ. ಶ್ರೀರಾಮನನ್ನು ಶ್ರದ್ಧಾಭಕ್ತಿಯಿಂದ ಅರ್ಚಿಸುವ ಭಾರತೀಯರಿಗೆ 2024ರ ಜನವರಿ 22 ಅವಿಸ್ಮರಣೀಯ ದಿನವಾಗಿದೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮ, ರಾಮ ರಾಜ್ಯದ ಹರಿಕಾರ. ಇಂದಿಗೂ ಆತ ಭಾರತವಷ್ಟೇ ಅಲ್ಲ ಸುತ್ತಮುತ್ತಲಿನ ಅನೇಕ ದೇಶಗಳಿಗೆ ಆದರ್ಶ, ಆದರಣೀಯ. ಪ್ರಜಾಕಲ್ಯಾಣಕ್ಕಾಗಿ ಸದಾ ಸ್ಪಂದಿಸುತ್ತಿದ್ದ ರಾಜಾರಾಮ ಎಂದಿಗೂ ಜೀವಂತ! ಶ್ರೀರಾಮ ದೇವಪುರುಷ ಮಾತ್ರವಲ್ಲ, ಒಬ್ಬ ಉತ್ತಮ ಆಡಳಿತಗಾರನೂ ಹೌದು. ಆಡಳಿತಗಾರನಿಗೆ ಇರಬೇಕಾದ ಸರ್ವಗುಣ ಸಂಪನ್ನನಾಗಿದ್ದ. ಹೆತ್ತವರಿಗೆ ಸತು³ತ್ರ ನಾಗಿದ್ದರೆ ಪ್ರಜೆಗಳಿಗೆ ಆದರ್ಶ ಪುರುಷೋತ್ತಮನಾಗಿದ್ದ.

Advertisement

ತಂದೆಯ ವಚನ ಪಾಲಿಸಲು ನಗು ನಗುತ್ತಲೇ ಹದಿನಾಲ್ಕು ವರ್ಷ ವನವಾಸಕ್ಕೆ ತೆರಳಿದ ರಾಮ ತನ್ನ ಸಹೋದರ ಭರತನಿಗೆ ರಾಜ್ಯಭಾರ ಮಾಡಲು ತುಂಬು ಹೃದಯದಿಂದ ಹರಸಿದ್ದ. ಈ ದೇವಪುರುಷನಿಗೆ ಹಣ, ಅಂತಸ್ತು-ಆಸ್ತಿಪಾಸ್ತಿಗಳ ವ್ಯಾಮೋಹ ಇರಲಿಲ್ಲ. ಯುದ್ಧದಲ್ಲಿ ಶ್ರೀರಾಮನು ರಾವಣನನ್ನು ವಧಿಸಿದ ಮೇಲೆ ರಾವಣನ ರಾಜ್ಯದ ಅಪಾರ ಸಂಪತ್ತನ್ನು ನೋಡಿ ಲಕ್ಷ್ಮಣ ಮೈ ಮರೆಯುತ್ತಾನೆ. ಆಗ ರಾಮ ಹೇಳುತ್ತಾನೆ-“ಸಹೋದರ ಇದು ನಮ್ಮ ನೆಲೆಯಲ್ಲ. ನಮ್ಮ ತಾಯ್ನಾಡು ಅಯೋಧ್ಯೆ. ಮೇಲಾಗಿ ಈ ಸಂಪತ್ತು ನಮ್ಮದಲ್ಲ. ಇದರ ವ್ಯಾಮೋಹ ಅತ್ಯಂತ ಅಪಾಯಕಾರಿ. ಸಂಪತ್ತಿನ ಬೆನ್ನು ಬಿದ್ದವ ಅಮಾನುಷನಾಗುತ್ತಾನೆ. ಇದರ ನಿಜವಾದ ಹಕ್ಕುದಾರ ವಿಭೀಷಣ……’ ಎಂದು ಹೇಳಿ ರಾವಣನ ತಮ್ಮ ವಿಭೀಷಣನಿಗೆ ಪಟ್ಟ ಕಟ್ಟಿ ತಾನು ಅಯೋಧ್ಯೆಗೆ ಮರಳುತ್ತಾನೆ.
ಶ್ರೀರಾಮನ ಆಡಳಿತದ ಕಾಲದಲ್ಲಿ ಹೊಡೆದಾಟ, ಬಡಿದಾಟ, ರಕ್ತಪಾತಗಳ ಭಯವಿರಲಿಲ್ಲ. ಶಾಂತಿ, ಸಹಬಾಳ್ವೆ, ನ್ಯಾಯಪರಿಪಾಲನೆ, ಸಂಪತ್ತು, ಅಭಿವೃದ್ಧಿ, ಸಮೃದ್ಧಿಯಾಗಿದ್ದವು. ಪ್ರಜೆಗಳು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಗಳಿಂದ ಇದ್ದು ಸದಾ ಪ್ರಸನ್ನವದನರಾಗಿದ್ದರು. ಜನರು ಸತ್ಯಸಂಧರಾಗಿದ್ದರಿಂದ ಅಲ್ಲಿ ಅನೃತಕ್ಕೆ ಸ್ಥಾನವಿರಲಿಲ್ಲ. ಎಲ್ಲರೂ ಸುಖ- ಸಮೃದ್ಧಿಯಿಂದ ಇದ್ದುದರಿಂದ ಎಲ್ಲಿಯೂ ದುಃಖದ ಛಾಯೆ ಕಾಣುತ್ತಿರಲಿಲ್ಲ. ಶಾಂತಿಪ್ರಿಯರಾಗಿದ್ದ ಜನರು ಶಾಂತಿ ಮತ್ತು ಸಾಮರಸ್ಯದ ಬದುಕು ಬಾಳುತ್ತಿದ್ದರು. ಪಿತೃವಾಕ್ಯ ಪಾಲನೆಗಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಟ ಶ್ರೀರಾಮನ ಬೆಂಗಾವಲಾಗಿ ಸಹೋದರ ಲಕ್ಷ್ಮಣನೂ ಹೊರಡುತ್ತಾನೆ. ಲಕ್ಷ್ಮಣನು ಅದೇ ಆಗ ಮದುವೆಯಾದ ತನ್ನ ಹೆಂಡತಿಯನ್ನು ಹೆತ್ತವರ ಸೇವೆಗಾಗಿ ಬಿಟ್ಟು ಹೋಗುತ್ತಾನೆ. ಭರತ ತಾಯಿ ಮಾಡಿದ ತಪ್ಪನ್ನು ತಾನು ಸರಿಪಡಿಸಲು ಮುಂದಾಗುತ್ತಾನೆ. ಅಣ್ಣನನ್ನು ಕರೆ ತರಲು ಅರಣ್ಯಕ್ಕೆ ಧಾವಿಸುತ್ತಾನೆ. ಆದರೆ ತಂದೆಯ ವಚನ ಪಾಲನೆಯ ನಿರ್ಧಾರದಿಂದ ಹಿಂದೆ ಸರಿಯದ ರಾಮನ ಪಾದುಕೆಗಳನ್ನು ತನ್ನ ತಲೆಯ ಮೇಲೆ ಹೊತ್ತು ತಂದು ಅವುಗಳನ್ನು ಗದ್ದುಗೆಯ ಮೇಲಿಟ್ಟು ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾನೆ. ಇಂತಹ ಆದರ್ಶವನ್ನು ನಾವು ಶ್ರೀರಾಮ ಮತ್ತು ಅವನ ಸಹೋದರರಲ್ಲಿ ಮಾತ್ರ ಕಾಣಲು ಸಾಧ್ಯ. ಇದು ನಮ್ಮ ಪುಣ್ಯಭೂಮಿ ಭಾರತದ ಸಂಸ್ಕೃತಿ, ಪರಂಪರೆ.

ಶ್ರೀರಾಮನು ಇಡೀ ದೇಶದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾನೆ. ಶ್ರೀರಾಮಮಂದಿರ ನಿರ್ಮಾಣವು ಭಾರತಕ್ಕೆ ಸುವರ್ಣಪರ್ವವನ್ನು ತಂದಿದೆ. ರಾಮಮಂದಿರ ನಿರ್ಮಾಣ ಕೋಟ್ಯಂತರ ಭಾರತೀಯರ ಕನಸಾಗಿತ್ತು. ಅದಕ್ಕಾಗಿ ಹಲವಾರು ರಾಮ ಭಕ್ತರು ತ್ಯಾಗ ಬಲಿದಾನವನ್ನು ಮಾಡಿ ದ್ದಾರೆ. ಅಸಂಖ್ಯಾತ ಭಾರತೀಯರು ಶತ ಶತಮಾನಗಳಿಂದ ಚಾತಕಪಕ್ಷಿಯಂತೆ ನಿರೀಕ್ಷಿಸುತ್ತಿದ್ದರು. ಅನೇಕ ವರ್ಷಗಳಿಂದ ವಸ್ತ್ರಕುಟೀರದಲ್ಲಿ ಪ್ರತಿಷ್ಠಾಪಿಸಿದ್ದ ರಾಮಲಲ್ಲಾ ಇನ್ನು ಮುಂದೆ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿ ಇಡೀ ವಿಶ್ವವನ್ನು ಆಶೀರ್ವದಿಸಲಿರುವುದು ಭಾರತೀಯರೆಲ್ಲರಿಗೂ ಸಂತಸ ವನ್ನುಂಟು ಮಾಡಿದೆ.

ಪುಣ್ಯಭೂಮಿ ಭಾರತ ಹಲವು ಸಾಧು ಸಂತರು, ಮಹಾ ತ್ಮರು ಬಾಳಿ ತಮ್ಮ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಸಿದ ಪವಿತ್ರ ಭೂಮಿ. ಈ ಪುಣ್ಯಭೂಮಿಯ ಮಹತ್ತನ್ನು ಸಾರಿದ ವರಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಅಗ್ರಸ್ಥಾನ ಪಡೆದಿದ್ದಾನೆ. ಶ್ರೀರಾಮಚಂದ್ರ ಮತ್ತು ಮಾತೆ ಜಾನಕಿಯರ ಜೀವನ ಆದರ್ಶಪ್ರಾಯ ವಾದುದು. ಇಂತಹ ಶ್ರೀರಾಮಚಂದ್ರ ಪ್ರಭುವಿಗೆ ಅವನ ಜನ್ಮಭೂಮಿ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಿಸಲು ನಮಗೆ ಐದು ಶತಮಾನಗಳಷ್ಟು ಕಾಲ ಬೇಕಾಯಿತು ಎಂಬುದು ವಿಷಾದದ ಸಂಗತಿ.

ಸತತವಾಗಿ ಐದುನೂರು ವರ್ಷಗಳ ಕಾಲ ರಾಮನ ದೇಗುಲ ನಿರ್ಮಾಣದ ಹೋರಾಟದಲ್ಲಿ ಸಾಧು ಸಂತರು, ಸನ್ಯಾಸಿಗಳು, ಧರ್ಮಾಚಾರ್ಯರು, ರಾಜ ಮಹಾರಾಜರು ಮುಂತಾದ ದೇಶದ ಪ್ರತೀ ಪ್ರಜೆಯೂ ಕೈಜೋಡಿಸಿರುವುದು ಸ್ಮರಣೀಯ. ಪ್ರಸ್ತುತ ಭಾರತೀಯರೆಲ್ಲರೂ ಶ್ರೀರಾಮ ಮಂದಿರ ಲೋಕಾರ್ಪ ಣೆಯ ಸಂತಸದ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ. ಜೈ ಶ್ರೀರಾಮ್‌ ಎಂಬ ಉದ್ಘೋಷದೊಡನೆ ರಾಮನನ್ನು ಸ್ತುತಿಸಿ ಪುಳಕಿತರಾಗುತ್ತಿದ್ದಾರೆ. ಶ್ರೀರಾಮ ಮಂದಿರ ರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸೋಣ. ಶ್ರೀರಾಮನ ದರ್ಶನ ಮಾಡುವುದು ಮಾತ್ರವಲ್ಲ, ನಮ್ಮ ಮಕ್ಕಳಿಗೆ ಶ್ರೀರಾಮನ ಮುಖಾಂತರ ಧರ್ಮವನ್ನು, ನೈತಿಕತೆಯನ್ನು, ನೀತಿಯನ್ನು ಹಾಗೂ ಒಟ್ಟು ಬದುಕನ್ನು ಕಟ್ಟಿಕೊಡುವ ಪರಿಯನ್ನು ಹೇಳಿಕೊಡೋಣ. ಶ್ರೀರಾಮನ ಆದರ್ಶವನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯೋಣ. ಜೈ ಶ್ರೀಗುರುದೇವ್‌.

Advertisement

 ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ

Advertisement

Udayavani is now on Telegram. Click here to join our channel and stay updated with the latest news.

Next