Advertisement

Ramayan: ಮುನ್ನೆಲೆಗೆ ಬಂದ ಲಂಕಾದ ರಾಮಾಯಣ ಸ್ಥಳಗಳು

12:58 AM Jan 17, 2024 | Team Udayavani |

ರಾಮಾಯಣದಲ್ಲಿ ಭಾರತ ಮತ್ತು ಅಯೋಧ್ಯೆ ಹೇಗೆ ಮುಖ್ಯವೋ, ಅಷ್ಟೇ ಪ್ರಾಮುಖ್ಯವನ್ನು ಪಡೆದ ಇನ್ನೊಂದು ದೇಶವೆಂದರೆ ಶ್ರೀಲಂಕಾ. ರಾಮಾಯಣದ ಖಳನಾಯಕ, ಲಂಕಾಧಿಪತಿ ಎಂದೇ ಸಂಬೋಧಿಸಲಾಗುವ ರಾವಣನ ನೆಲೆ ಶ್ರೀಲಂಕಾ. ಸೀತೆಯನ್ನು ಅಪಹರಿಸಿ ಲಂಕಾದ ಅಶೋಕವನದಲ್ಲಿ ಬಂಧಿಸಿಟ್ಟಿದ್ದ ಅನಂತರ ರಾಮ, ಲಕ್ಷ್ಮಣ ಮತ್ತು ವಾನರ ಸೇನೆ ಲಂಕೆಯ ಮೇಲೆ ದಾಳಿ ಮಾಡಿ, ರಾವಣನನ್ನು ಸಂಹರಿಸಿ, ಸೀತಾಳನ್ನು ರಕ್ಷಿಸಿದ ಕಥೆ ಜನಜನಿತ.

Advertisement

ಹೀಗೆ ಲಂಕಾ ಪ್ರಾಚೀನ ಕಾಲದಿಂದಲೂ ಭಾರತದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಶ್ರೀಲಂಕಾದಲ್ಲಿ ಹಿಂದೂ ಧರ್ಮದೊಂದಿಗೆ ಬೌದ್ಧ ಧರ್ಮವನ್ನು ಪಾಲಿಸಲಾಗುತ್ತದೆ. ರಾಮಾಯಣದ ಪ್ರಮುಖ ಘಟನೆಗಳು ಸಂಭ ವಿಸಿದ ವಿವಿಧ ಸ್ಥಳಗಳನ್ನು ಇಲ್ಲಿ ಕಾಣಬಹುದು. ಇದು ನೆರೆ ರಾಷ್ಟ್ರಗಳ ಸಹಿತ ವಿಶ್ವಾದ್ಯಂತದ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಈಗ ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದ್ದಂತೆಯೇ ರಾಮಾಯಣದಲ್ಲಿ ಉಲ್ಲೇಖವಾಗಿರುವ ಲಂಕಾದಲ್ಲಿನ ವಿವಿಧ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಲಾರಂಭಿಸಿದ್ದಾರೆ.

ಅಶೋಕವಾಟಿಕಾ ಅಥವಾ ಅಶೋಕವನವು ರಾವಣನು ಸೀತೆಯನ್ನು ಅಪಹರಿಸಿ ಬಂಧಿ ಸಿಟ್ಟ ಸ್ಥಳ ಎಂಬ ವಾಡಿಕೆ. ಇತ್ತೀಚೆಗೆ ಇದನ್ನು ಅಭಿವದ್ಧಿಗೊಳಿಸಿ, ಉದ್ಯಾನವನದ ರೂಪವನ್ನು ನೀಡಲಾಗಿದೆ. ಇದರ ಸಮೀಪದಲ್ಲಿ ಸೀತಾ ದೇವಿಯ ದೇಗುಲವನ್ನು ನಿರ್ಮಿಸಲಾಗಿದೆ. ಕೋನೇಶ್ವರ ದೇಗುಲ, ಮಹಾಜ್ಞಾನಿಯಾಗಿದ್ದ ರಾವಣನ ದೇಗುಲ. ಇದನ್ನು ಪಲ್ಲವ, ಚೋಳ, ಪಾಂಡ್ಯ ಹಾಗೂ ಜಾಫಾ° ಶೈಲಿಯಲ್ಲಿ ನಿರ್ಮಿಸಲಾಗಿದೆ. ನೂರಾರು ಹಿಂದೂಗಳು ಮಹಾಜ್ಞಾನಿ ರಾವಣನಿಗೆ ಗೌರವ ಸಲ್ಲಿಸಲು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.

ಥೋಟುಪೋಲಾ ಕಾಂಡಾ, ಪುಷ್ಪಕ ವಿಮಾನವನ್ನು ಹೊಂದಿದ್ದ ರಾವಣನು ಆರು ವಿಮಾನ ನಿಲ್ದಾಣಗಳನ್ನು ಹೊಂದಿದ್ದ ಎಂದು ಹೇಳಲಾಗುತ್ತದೆ. ಅದರಲ್ಲಿ ಥೋಟುಪೋಲಾ ಒಂದು. ಸೀತೆಯನ್ನು ಅಪಹರಿಸಿ ಕರೆದುಕೊಂಡು ಬಂದ ರಾವಣನು ನೇರವಾಗಿ ಇಲ್ಲಿಗೇ ಬಂದಿದ್ದನಂತೆ. ಇಂದು ಇದು ಶ್ರೀಲಂಕಾದ ಅತೀ ಎತ್ತರದ ಟ್ರೆಕ್ಕಿಂಗ್‌ ಸ್ಥಳವಾಗಿದೆ.

ಚಿಲಾವದ ಮನವರಿ ದೇಗುಲ, ರಾವಣನ ವಿರುದ್ಧ ಶ್ರೀರಾಮನು ಯುದ್ಧವನ್ನು ಗೆದ್ದ ಬಳಿಕ ಈ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು ಎನ್ನುವ ಉಲ್ಲೇಖವಿದೆ. ಇದನ್ನು ರಾಮಾ ಲಿಂಗಂ ಎಂದು ಕರೆಯಲಾಗುತ್ತದೆ. ಬ್ರಾಹ್ಮಣನನ್ನು ಕೊಂದ ಶಾಪದಿಂದ ಪ್ರಾಯಶ್ಚಿತ್ತವನ್ನು ಪಡೆದುಕೊಳ್ಳಲು ರಾಮನಿಗೆ ಶಿವನು ಇಲ್ಲಿ ದೇಗುಲವನ್ನು ನಿರ್ಮಿಸಲು ಸೂಚಿಸಿದ್ದನಂತೆ.
ರಾಮಬೋಡ, ಇಲ್ಲಿ ಹನುಮನಿಗೆ ಅರ್ಪಿಸಲಾದ ದೇಗುಲವಿದೆ. ಸೀತೆಯನ್ನು ಹುಡುಕುವ ಕಾರ್ಯವನ್ನು ಹನುಮನು ಇಲ್ಲಿಂದಲೇ ಆರಂಭಿಸಿದನು ಎನ್ನಲಾಗುತ್ತದೆ. ಹುಣ್ಣಿಮೆಯ ದಿನ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

Advertisement

ರಾಮಸೇತು ಅಥವಾ ಆ್ಯಡಮ್ಸ್‌ ಬ್ರಿಡ್ಜ್ ಎಂದು ಕರೆಯುವ ಈ ಸ್ಥಳವು ರಾಮಾಯಣದ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದು. ಶ್ರೀಲಂಕಾವನ್ನು ತಲುಪಲು ಸಮುದ್ರಕ್ಕೆ ಅಡ್ಡಲಾಗಿ ವಾನರ ಸೇನೆಯ ಸಹಾಯದಿಂದ ರಾಮನು ಈ ಸೇತುವೆಯನ್ನು ನಿರ್ಮಿಸಿದನು. ಭಾರತದ ರಾಮೇಶ್ವರದಿಂದ ಲಂಕಾದ ಮನ್ನಾರ ವರೆಗೆ ನಿರ್ಮಿಸಲಾಗಿದೆ. ಭಾರತವನ್ನು ಶ್ರೀಲಂಕಾದೊಂದಿಗೆ ಸಂಪರ್ಕಿಸುವ ಬಹುಮುಖ್ಯ ಮಾರ್ಗ ಇದಾಗಿದೆ.

ರಾವಣನ ಗುಹೆ, ಯುದ್ಧಭೂಮಿ ಹೀಗೆ ರಾಮಾಯಣಕ್ಕೆ ಸಂಬಂಧಿಸಿದ 50ಕ್ಕೂ ಅಧಿಕ ಸ್ಥಳಗಳನ್ನು ಇಲ್ಲಿ ಗುರುತಿಸಲಾಗಿದೆ. ಇಲ್ಲಿನ ರಾಗ್ಲಾ ಅರಣ್ಯಗಳ ನಡುವೆ ರಾವಣನ ಗುಹೆ ಎಂದು ಹೇಳಲಾಗುವ ಸ್ಥಳದಲ್ಲಿ ರಾವಣನ ಮೃತದೇಹವನ್ನು ಸಂರಕ್ಷಿಸಿ ಇಡಲಾಗಿದೆ. ರಾಮನ ಜೀವನಕ್ಕೆ ಸಂಬಂಧಪಟ್ಟ, ಸಿಂಹಳೀಯ ಭಾಷೆಯಲ್ಲಿ ರಚಿತವಾದ “ಮಲೆರಾಜ್‌ ಕೀ ಕಥಾ’ವು ಇಲ್ಲಿ ಜನಪ್ರಿಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next