Advertisement

ಸರಳ, ಸಾಂಪ್ರದಾಯಿಕ ಪರ್ಯಾಯೋತ್ಸವಕ್ಕೆ ನಿರ್ಧಾರ

01:57 AM Jan 10, 2022 | Team Udayavani |

ಉಡುಪಿ: ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರದ ನಿಯಮ, ನಿರ್ಬಂಧಗಳನ್ನು ಗಮನದಲ್ಲಿ ಇರಿಸಿ ಕೊಂಡು ಪರ್ಯಾಯೋತ್ಸವವನ್ನು ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ರಘುಪತಿ ಭಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈ ಬಾರಿ 251ನೇ ದ್ವೈವಾರ್ಷಿಕ ಕೃಷ್ಣ ಪೂಜಾ ಪರ್ಯಾಯ ದೀಕ್ಷೆಯನ್ನು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಜ. 18ರಂದು ಸ್ವೀಕರಿಸಿ ಸರ್ವಜ್ಞ ಪೀಠಾರೋಹಣಗೈಯಲ್ಲಿದ್ದಾರೆ. ಪುರಪ್ರವೇಶ ದಿಂದ ಪರ್ಯಾಯೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿಯೂ ದೊಡ್ಡ ಸಂಖ್ಯೆಯ ಜನರ ಭಾಗವಹಿಸುವಿಕೆಗೆ ಅವಕಾಶವಿರುವುದಿಲ್ಲ. ಬದಲಾಗಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಪ್ರದಾಯದಂತೆ ಪರ್ಯಾಯ ಪೂರ್ವಭಾವಿ ಸಂಚಾರ ಮುಗಿಸಿದ ಶ್ರೀಪಾದರು ಜ. 10ರಂದು ಪುರ ಪ್ರವೇಶ
ಮಾಡಲಿ ದ್ದಾರೆ. ಜ. 15, 16ರಂದು ನಡೆಯಬೇಕಿದ್ದ ಹೊರೆ ಕಾಣಿಕೆ ಮೆರವಣಿಗೆ ವಾರಾಂತ್ಯ ಕರ್ಫ್ಯೂ ಕಾರಣದಿಂದ ರದ್ದುಪಡಿಸಿ ಬದಲಿ ದಿನ ನಿಗದಿಪಡಿಸಲಾಗಿದೆ. ಜ. 17ರಂದು ರಾತ್ರಿ ಕೃಷ್ಣಾಪುರ ಶ್ರೀಗಳ ಅಧ್ಯಕ್ಷತೆಯಲ್ಲಿ ಪರ್ಯಾಯ ಅದಮಾರು ಶ್ರೀಗಳಿಗೆ ನಡೆಯುವ ಅಭಿವಂದನ ಕಾರ್ಯಕ್ರಮವನ್ನು ರಥಬೀದಿ ಬದಲಾಗಿ ರಾಜಾಂಗಣ ದಲ್ಲಿ ನಡೆಸಲಾಗುವುದು. ಜ. 10ರಿಂದ 17ರ ತನಕ ಸಾಯಂಕಾಲ ಪ್ರತೀದಿನ ರಥಬೀದಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜ. 15 ಮತ್ತು ಜ. 16ರ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಶಾಸಕ ಭಟ್‌ ತಿಳಿಸಿದರು.

ಸಮಿತಿ ಗೌರವಾಧ್ಯಕ್ಷ ಸೂರ್ಯ ನಾರಾಯಣ ಉಪಾಧ್ಯಾಯ, ಪದಾಧಿಕಾರಿಗಳಾದ ವಿಷ್ಣುಪ್ರಸಾದ್‌ ಪಾಡಿಗಾರು, ರವಿ ಪ್ರಸಾದ್‌ ರಾವ್‌, ಪ್ರೊ| ಕೆ. ಶ್ರೀಶ ಆಚಾರ್ಯ, ಯು. ಕೆ ರಾಘವೇಂದ್ರ ರಾವ್‌, ಜಯಪ್ರಕಾಶ್‌ ಕೆದ್ಲಾಯ, ಬಿ. ಸುಪ್ರಸಾದ್‌ ಶೆಟ್ಟಿ, ಬಿ. ವಿ. ಲಕ್ಷ್ಮೀನಾರಾಯಣ, ಪ್ರೊ| ಎಂ. ಎಲ್‌ ಸಾಮಗ, ಕೆ. ಗಣೇಶ್‌ ರಾವ್‌, ಪ್ರದೀಪ್‌ ರಾವ್‌, ಮಂಜುನಾಥ ಹೆಬ್ಟಾರ್‌, ವಾಸುದೇವ ಭಟ್‌ ಪೆರಂಪಳ್ಳಿ, ಕೊಟ್ಟಾರಿ ರಾಘವೇಂದ್ರ ಭಟ್‌ ಉಪಸ್ಥಿತರಿದ್ದರು.
ಜ. 10ರಂದು ಪುರಪ್ರವೇಶಗೈದ ಬಳಿಕ ಭಾವೀ ಪರ್ಯಾಯ ಶ್ರೀಗಳು ಶ್ರೀಮದನಂತೇಶ್ವರ, ಶ್ರೀ ಗಣಪತಿ, ಶ್ರೀ ಮಧ್ವಾಚಾರ್ಯರು, ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದು ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯಲಿದ್ದಾರೆ. ಬಳಿಕ ಪರ್ಯಾಯ ಶ್ರೀ ಅದಮಾರು ಮಠಾಧೀಶರ ಅಧ್ಯಕ್ಷತೆ
ಯಲ್ಲಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನಗರಸಭೆ ಮತ್ತು ಪರ್ಯಾಯೋತ್ಸವ ಸಮಿತಿ ಸಹಯೋಗ ದಲ್ಲಿ ಶ್ರೀಪಾದರಿಗೆ ನಾಗರಿಕ ಅಭಿವಂದನೆ ಸಂಜೆ 6ಕ್ಕೆ ನಡೆಯಲಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನಿಲ್‌, ಕೋಟ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌ ನಾಗರಿಕ ಅಭಿವಂದನೆ ಸಲ್ಲಿಸುವರು. ನಿಪ್ಪಾಣಿ ಗುರುರಾಜ ಆಚಾರ್ಯರು ಅಭಿನಂದನ ಭಾಷಣ ಮಾಡಲಿದ್ದಾರೆ.

Advertisement

ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಉಲ್ಬಣ : 340 ಮಂದಿಗೆ ಪಾಸಿಟಿವ್‌; ಶೇ.3.86 ಪಾಸಿಟಿವಿಟಿ ದರ

ಇಂದು ಕೃಷ್ಣಾಪುರಶ್ರೀ ಪುರಪ್ರವೇಶ
ಸೋಮವಾರ ಮಧ್ಯಾಹ್ನ 3ಕ್ಕೆ ಜೋಡುಕಟ್ಟೆಯಲ್ಲಿ ಕೃಷ್ಣಾಪುರ ಶ್ರೀಪಾದರು ಪುರ ಪ್ರವೇಶ ಮಾಡಲಿದ್ದಾರೆ. ಬಿರುದಾವಳಿ, ವಾದ್ಯ ಚಂಡೆವಾದನ ಸಹಿತ ಗಣ್ಯರ ಸಮ್ಮುಖದಲ್ಲಿ ಸರಳ ಶೋಭಾಯಾತ್ರೆ ಮೂಲಕ ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗುವುದು. ಸಂಘಸಂಸ್ಥೆಯ ಮುಖಂಡರು, ಭಕ್ತರು ಶ್ರೀಪಾದರಿಗೆ ಹಾರ ಅರ್ಪಿಸಲು ಅವಕಾಶ ಇರುವುದಿಲ್ಲ. ಮೆರವಣಿಗೆಯಲ್ಲಿ ಟ್ಯಾಬ್ಲೊ ಇತರ ಕಲಾ ತಂಡಗಳಿರುವುದಿಲ್ಲ.

ವಿನಾಯಿತಿಗೆ ಸರಕಾರಕ್ಕೆ ಮನವಿ
ಜ. 17ರ ರಾತ್ರಿಯಿಂದ ಜ. 18ರ ರಾತ್ರಿವರೆಗಿನ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಕೋವಿಡ್‌ ನಿಯಾಮಾವಳಿ ಗಳಿಂದ ವಿನಾಯಿತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು.

ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ. ಜ.18ರಂದು ಬೆಳಗ್ಗೆ 2ರಿಂದ ನಡೆಯುವ ಪರ್ಯಾಯ ಮೆರವಣಿಗೆ, ಸರ್ವಜ್ಞ ಪೀಠಾರೋಹಣ, ಅಕ್ಷಯ ಪಾತ್ರೆ ಹಸ್ತಾಂತರ, ಅರಳುಗದ್ದಿಗೆ ಮತ್ತು ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್‌ ಸಭೆಗಳನ್ನು ಸರಳವಾಗಿ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತಿಲ್ಲ. ಜ. 18ರ ಮಧ್ಯಾಹ್ನ ಭಕ್ತರಿಗೆ ಶ್ರೀ ಕೃಷ್ಣ ಪ್ರಸಾದ ಅನ್ನಸಂತರ್ಪಣೆ ಇರುತ್ತದೆ. ಜ. 18ರಿಂದ 22ರ ವರೆಗೆ ಪ್ರತಿನಿತ್ಯ ಸಾಯಂಕಾಲ ರಾಜಾಂಗಣದಲ್ಲಿ ಧಾರ್ಮಿಕ ಸಭೆ ಮತ್ತು ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಘುಪತಿ ಭಟ್‌ ತಿಳಿಸಿದರು.

ಹೊರೆ ಕಾಣಿಕೆ ಸೂಚನೆ
ಪರ್ಯಾಯೋತ್ಸವ ಪ್ರಯುಕ್ತ ಅನ್ನಾರಾಧನೆಗಾಗಿ ಭಕ್ತರು ತಂದೊಪ್ಪಿಸುವ ಹೊರೆ ಕಾಣಿಕೆ ಸಮರ್ಪಣ ಮೆರವಣಿಗೆ ಜ. 11ರಿಂದ 14 ಮತ್ತು ಜ.17ರಂದು ನಡೆಯಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next