Advertisement

ಕ್ರೀಡಾಪಟುಗಳ ನೋವಿಗೆ ಕ್ರೀಡಾ ಸಚಿವರ ಸ್ಪಂದನೆ

03:45 AM Jan 31, 2017 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟುಗಳಿಗೊಂದು ಸಿಹಿ ಸುದ್ದಿ. ಕಳೆದ 3 ವರ್ಷಗಳಿಂದ ಸಿಗದಿರುವ ನಗದು ಪುರಸ್ಕಾರ ಇನ್ನೆರಡು ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ.

Advertisement

ಉದಯವಾಣಿ ಡಿ.30ರಂದು “ಪದಕ ಗೆದ್ದರೂ ರಾಜ್ಯದ ಕ್ರೀಡಾಪಟುಗಳಿಗೆ ಸಿಕ್ಕಿಲ್ಲ ಕಾಸು!’ ಎನ್ನುವ ಶೀರ್ಷಿಕೆಯಡಿ ಪ್ರಕಟಿಸಿದ್ದ ವಿಶೇಷ ವರದಿಗೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿದ್ದು, ಹಣ ಬಿಡುಗಡೆ ಕುರಿತಂತೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌.ಪ್ರಸಾದ್‌ ಜತೆಗೆ ಸೋಮವಾರ ತುರ್ತು ಸಭೆ ನಡೆಸಿದ್ದಾರೆ.

ಕ್ರೀಡಾಪಟುಗಳಿಗೆ ಬಾಕಿ ಉಳಿದಿರುವ ಕೋಟ್ಯಂತರ ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯನ್ನು ಸಚಿವರು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಐ.ಎನ್‌.ಎಸ್‌.ಪ್ರಸಾದ್‌ ಅವರು, ಕ್ರೀಡಾಪಟುಗಳಿಗೆ ನೀಡಬೇಕಿರುವ ಹಣವನ್ನು ಮುಂದಿನ ಎರಡು ತಿಂಗಳೊಳಗೆ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

2 ದಿನದ ಒಳಗೆ ಕ್ರೀಡಾಪಟುಗಳ ಪಟ್ಟಿ ಹಣಕಾಸು ಇಲಾಖೆಗೆ:  ಈ ಹಿನ್ನೆಲೆಯಲ್ಲಿ ಪದಕ ವಿಜೇತ ಕ್ರೀಡಾಪಟುಗಳ ಪಟ್ಟಿಯನ್ನು ಎರಡು ದಿನಗಳಲ್ಲಿ ಹಣಕಾಸು ಇಲಾಖೆಗೆ ಕ್ರೀಡಾ ಇಲಾಖೆ ಕಳುಹಿಸಿ ಕೊಡಲಿದೆ. ಪಟ್ಟಿಯಲ್ಲಿರುವ ಅರ್ಹ ಕ್ರೀಡಾಪಟುಗಳ ಸಾಧನೆಯನ್ನು ಹಣಕಾಸು ಇಲಾಖೆ ಪರಿಶೀಲನೆ ನಡೆಸಲಿದೆ. ಬಳಿಕ ಫೆಬ್ರವರಿಯಲ್ಲಿ ಅನುದಾನ ನೀಡುವ ಕುರಿತು ಹಣಕಾಸು ಇಲಾಖೆ ಕ್ರಮಕೈಗೊಳ್ಳಲಿದೆ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದಯವಾಣಿಗೆ ಮಾಹಿತಿ ನೀಡಿದ್ದು, ಮುಂದಿನ ಎರಡು ತಿಂಗಳ ಒಳಗೆ ಹಣ ಬಿಡುಗಡೆಯಾಗುವುದು ಖಚಿತ ಎಂದಿದ್ದಾರೆ.

ಬಾಕಿ ಇರುವುದು 14.50 ಕೋಟಿ ರೂ.: 2014ನೇ ಸಾಲಿನಿಂದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಕ್ರೀಡಾ ಇಲಾಖೆಯಿಂದ ಸಿಕ್ಕಿರಲಿಲ್ಲ. ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಇಲಾಖೆ ಬಳಿ ಅನುದಾನ ಇರಲಿಲ್ಲ. ಈ ಬಗ್ಗೆ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಕಳೆದ ವರ್ಷವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ್ದರು. ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಸೂಚಿಸಿದ್ದರು. ಆದರೆ ಅದು ಪ್ರಗತಿಯಲ್ಲಿ ಇರಲಿಲ್ಲ. ಇದರಿಂದ ಸಾಕಷ್ಟು ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಡಕಾಗಿತ್ತು.

Advertisement

ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜತೆ ತುರ್ತು ಸಭೆ ನಡೆಸಿ ಕ್ರೀಡಾಪಟುಗಳಿಗೆ ನೀಡಲು ಬಾಕಿ ಇರುವ 14.50 ಕೋಟಿ ರೂ. ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ.  ಅವರೂ ಮನವಿಗೆ ಸ್ಪಂದಿಸಿದ್ದು, ಕ್ರೀಡಾ ಇಲಾಖೆಯಿಂದ ಪದಕ ವಿಜೇತ ಅಥ್ಲೀಟ್‌ಗಳ ಪಟ್ಟಿಯನ್ನು ಎರಡು ದಿನಗಳ ಒಳಗಾಗಿ ಕಳುಹಿಸಿಕೊಡುವಂತೆ ಸೂಚಿಸಿದ್ದಾರೆ. ಮುಂದಿನ ಎರಡು ತಿಂಗಳ ಒಳಗಾಗಿ ಸಮಸ್ಯೆ ಬಗೆ ಹರಿಯಲಿದೆ.
– ಪ್ರಮೋದ್‌ ಮಧ್ವರಾಜ್‌, ಯುವಜನ ಮತ್ತು ಕ್ರೀಡಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next