Advertisement

ಶಾಲೆಗೆ ಕಾಲಿಡದೇ ಕಳೆಯಿತು ಶೈಕ್ಷಣಿಕ ವರ್ಷ!

09:21 PM Apr 10, 2021 | Team Udayavani |

ದಾವಣಗೆರೆ: ಕೊರೊನಾ ಮಹಾಮಾರಿ ಭೀತಿಯಿಂದಾಗಿ ಶಾಲಾ ದರ್ಶನ ಭಾಗ್ಯವಿಲ್ಲದೇ ಒಂದರಿಂದ ಐದನೇ ತರಗತಿಯ ಲಕ್ಷಾಂತರ ವಿದ್ಯಾರ್ಥಿಗಳು ಇಂದಿಗೆ (ಏ.10) ಶೈಕ್ಷಣಿಕ ವರ್ಷ ಪೂರ್ಣಗೊಳಿಸಿದ್ದು, ಕಿರಿಯ ವಿದ್ಯಾರ್ಥಿಗಳ ಪಾಲಿಗೆ ಇದು ಅಕ್ಷರಶಃ “ಶೂನ್ಯ’ ವರ್ಷವೇ ಆಗಿದೆ.

Advertisement

ಕೊರೊನಾ ಕಾಟ ಇಲ್ಲದೇ ಇದ್ದಿದ್ದರೆ ಪ್ರಾಥಮಿಕ ಹಾಗೂ ಪ್ರೌಢಶಾಲೆ (1-9ನೇ ತರಗತಿ) ವಿದ್ಯಾರ್ಥಿಗಳು ಏ. 10ರಂದು ತಮ್ಮ ಫಲಿತಾಂಶ ಪಟ್ಟಿ ಪಡೆದು ಬೇಸಿಗೆ ರಜೆಯ ಸಂಭ್ರಮಕ್ಕೆ ತೆರಳುತ್ತಿದ್ದರು. ದುರದೃಷ್ಟವಶಾತ್‌ ಈ ವರ್ಷ ಪೂರ್ತಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಶಾಲೆ ಹಾಗೂ ಶಿಕ್ಷಕರ ದರ್ಶನ ಭಾಗ್ಯವೇ ಸಿಕ್ಕಿಲ್ಲ. ಇದು ಈ ಕಿರಿಯ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆಯೂ ಕರಾಳ ಛಾಯೆಯ ಆತಂಕ ಮೂಡಿದೆ. ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷವನ್ನು ಒಂದೆರಡು ತಿಂಗಳು ವಿಸ್ತರಣೆ ಮಾಡಿದರೂ 1-5ನೇ ತರಗತಿ ಮಕ್ಕಳಿಗೆ ಶಾಲಾ ಪ್ರವೇಶ ಭಾಗ್ಯ ದೊರಕುವ ಸಾಧ್ಯತೆ ಕಡಿಮೆ ಇದೆ.

ಹೀಗಾಗಿ ಈ ವರ್ಷಪೂರ್ಣ ಕಿರಿಯ ವಿದ್ಯಾರ್ಥಿಗಳ ಪಾಲಿಗೆ ಸಂಪೂರ್ಣ ರಜಾ ವರ್ಷವಾಗಿ ಮಾರ್ಪಡಲಿದೆ. ಕೊರೊನಾ ಕಾರಣದಿಂದಾಗಿ ಸರ್ಕಾರ ಶೈಕ್ಷಣಿಕ ವರ್ಷ ಆರಂಭದಲ್ಲಿ ಎರಡ್ಮೂರು ತಿಂಗಳು ವಿದ್ಯಾಗಮ ಕಾರ್ಯಕ್ರಮ ಮಾಡಿತು. ಆಗ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪಂಚಾಯಿತಿ ಕಟ್ಟೆ, ದೇವಸ್ಥಾನದ ಆವಾರ, ಬಯಲು ಜಾಗೆಗಳಲ್ಲಿ ಕುಳಿತು ಒಂದಿಷ್ಟು ಅಭ್ಯಾಸ ಮಾಡಿದರು.

ಈ ಅವಧಿಯಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದ್ದರಿಂದ ಬಹಳಷ್ಟು ಪಾಲಕರು ಅದರಲ್ಲಿಯೂ ಒಂದರಿಂದ ಐದನೇ ತರಗತಿಯ ಕಿರಿಯ ವಿದ್ಯಾರ್ಥಿಗಳನ್ನು ವಿದ್ಯಾಗಮಕ್ಕೂ ಕಳುಹಿಸಲಿಲ್ಲ. ಮುಂದೆ ಕೆಲ ಮಾರ್ಪಾಡುಗಳೊಂದಿಗೆ ವಿದ್ಯಾಗಮ ಪುನಾರಂಭ ಮಾಡಲಾಯಿತಾದರೂ ಅಲ್ಲಿ 1-5ನೇ ತರಗತಿಯ ಚಿಕ್ಕಮಕ್ಕಳನ್ನು ಹೊರಗಿಡಲಾಯಿತು.

ಇದರಿಂದ ಕಿರಿಯ ವಿದ್ಯಾರ್ಥಿಗಳು ವಿದ್ಯಾಗಮ ಶಿಕ್ಷಣದಿಂದಲೂ ವಂಚಿತರಾದರು. ಕಿರಿಯ ವಿದ್ಯಾರ್ಥಿಗಳು ನಿರಂತರ ಶಿಕ್ಷಣಕ್ಕಾಗಿ ಬಾನುಲಿ ಪಾಠ ಒಂದನ್ನೇ ನೆಚ್ಚಿಕೊಳ್ಳಬೇಕಾಯಿತು. ಬಾನುಲಿ ಪಾಠವು ನೇರ ಬೋಧನೆಯಷ್ಟು ಪರಿಣಾಕಾರಿಯಾಗಿಲ್ಲ. ಇದರ ಪ್ರಯೋಜನ ಪಡೆದವರ ಸಂಖ್ಯೆ ಕೂಡ ತೀರಾ ವಿರಳ. ಕೊರೊನಾ ಈಗ ಮತ್ತೆ ಎರಡನೇ ಅಲೆ ರೂಪದಲ್ಲಿ ಭೀತಿ ಹುಟ್ಟಿಸುತ್ತಿರುವುದರಿಂದ 1-5ನೇ ತರಗತಿಯ ಮಕ್ಕಳಿಗೆ ಶಾಲೆ, ಶಿಕ್ಷಕರ ದರ್ಶನ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

Advertisement

ಶೈಕ್ಷಣಿಕ ಬುನಾದಿಗೆ ಪೆಟ್ಟು: ಒಂದರಿಂದ ಐದನೇ ತರಗತಿ ಮಕ್ಕಳು ವರ್ಷ ಪೂರ್ಣ ಶಾಲೆಗೆ ಹೋಗದೆ ಇರುವುದರಿಂದ ಅವರ ಶೈಕ್ಷಣಿಕ ಬುನಾದಿಗೆ ಭಾರೀ ಧಕ್ಕೆಯಾಗುವ ಸಾಧ್ಯತೆ ಬಗ್ಗೆ ಪಾಲಕರಲ್ಲಿ ಆತಂಕ ಸೃಷ್ಟಿಯಾಗಿದೆ. ಕೊರೊನಾ ಕಾರಣದಿಂದ ಅಂಗನವಾಡಿ, ಶಿಶುವಿಹಾರಗಳು ಸಹ ಬಂದ್‌ ಆಗಿವೆ. ಇದರಿಂದಾಗಿ ಪ್ರಸಕ್ತ ವರ್ಷ ಒಂದನೇ ತರಗತಿಗೆ ಪ್ರವೇಶ ಪಡೆದ ಮಕ್ಕಳು ಆರಂಭಿಕ ಅಕ್ಷರ ಜ್ಞಾನದಿಂದಲೂ ಹೊರಗುಳಿದಿದ್ದಾರೆ. ಇಡೀ ವರ್ಷ ಯಾವುದೇ ಅಧ್ಯಯನ ಇಲ್ಲದೇ ಮುಂದಿನ ತರಗತಿಗೆ ಹೋಗುತ್ತಿರುವ ಈ ಮಕ್ಕಳನ್ನು ಶೈಕ್ಷಣಿಕವಾಗಿ ಯಾವ ರೀತಿ ಸದೃಢಗೊಳಿಸಬೇಕು ಎಂಬುದು ಪಾಲಕರ ಜತೆಗೆ ಶಿಕ್ಷಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

 ಸೇತುಬಂಧ ವಿಸ್ತರಣೆ: ಒಂದು ತರಗತಿಯಿಂದ ಇನ್ನೊಂದು ತರಗತಿಗೆ ಹೋದ ಆರಂಭದಲ್ಲಿ ಶಿಕ್ಷಣ ಇಲಾಖೆ ಪ್ರತಿ ವರ್ಷ ಜೂ.20ವರೆಗೆ “ಸೇತುಬಂಧ’ ಕಾರ್ಯಕ್ರಮ ನಡೆಸುತ್ತದೆ. ಇದರಲ್ಲಿ ಹೊಸ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಯನ್ನು ಪರೀಕ್ಷೆಗೊಳಪಡಿಸಿ ಆ ವಿದ್ಯಾರ್ಥಿ ಹಿಂದಿನ ತರಗತಿಯಲ್ಲಿ ಎಷ್ಟು ಗ್ರಹಿಸಿದೆ, ಎಷ್ಟು ತಿಳಿದಿದೆ ಎಂಬುದನ್ನು ಅರಿಯಲಾಗುತ್ತದೆ. ಬಳಿಕ ಅಂಥ ವಿದ್ಯಾರ್ಥಿಗಳ ಮೇಲೆ 20 ದಿನಗಳ ಕಾಲ ವಿಶೇಷ ಕಾಳಜಿ ವಹಿಸಿ ಅವರನ್ನು ಶೈಕ್ಷಣಿಕವಾಗಿ ಮುಂದೆ ತರುವ ಪ್ರಯತ್ನ ಮಾಡಲಾಗುತ್ತದೆ. ಫಲಿತಾಂಶಕ್ಕಾಗಿ ಇದಕ್ಕೂ ಪರೀಕ್ಷೆ ಮಾಡಿ ಹೊಸ ತರಗತಿಯ ಪಾಠಗಳನ್ನು ಶುರು ಮಾಡಲಾಗುತ್ತದೆ.

ಕೊರೊನಾ ಸಂದರ್ಭದಲ್ಲಿ ಶಾಲೆಗಳೇ ಆರಂಭವಾಗದೇ ಇರುವುದರಿಂದ ಈ ಬಾರಿ ಈ ಸೇತುಬಂಧ ಕಾರ್ಯಕ್ರಮ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಇದರ ಅವಧಿಯನ್ನು ನಾಲ್ಕರಿಂದ ಆರು ತಿಂಗಳವರೆಗೂ ವಿಸ್ತರಿಸುವ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇದೆ.

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next