Advertisement

ತನ್ನಿಮಿತ್ತ; ಒಂಭತ್ತು ದಿನಗಳಲ್ಲಿ ರಾತ್ರಿ ದೇವಿಯ ಉಪಾಸನೆ

12:33 AM Oct 17, 2020 | mahesh |

ರಾವಣ ಸತ್ತ ಮೇಲೆ ನವಮಿಯಂದು ದುರ್ಗೆಯನ್ನು ಬ್ರಹ್ಮದೇವರು ದೇವತೆಗಳೊಡನೆ ವಿಶೇಷವಾಗಿ ಪೂಜಿಸಿದರೆಂದು ಭವಿಷ್ಯಪುರಾಣದಲ್ಲಿದೆ.

Advertisement

ದುರ್ಗಮೇ ದುಸ್ತರೇ ಕಾರ್ಯೇ ಭವದುಃಖವಿನಾಶೀನಿಮ್‌
ಪ್ರಣಮಾಮಿ ಸದಾ ಭಕ್ತ್ಯಾ ದುರ್ಗಾಂ ದುರ್ಗಾರ್ತಿನಾಶಿನೀಮ್‌
ಸ್ಕಾಂದಪುರಾಣ ಹೇಳಿದ ಈ ಮಂತ್ರದಿಂದ ದುರ್ಗಾಪೂಜೆ­ಯನ್ನು ನಾವೆಲ್ಲರೂ ಚಿತ್ರಪಟದಲ್ಲಾದರೂ ನಡೆಸಬಹುದು.

ತ್ರಿಕಾಲಂ ಪೂಜಯೇದ್ದೇವೀಂ ಜಪಸ್ತೋತ್ರಪರಾಯಣಃ
ದೇವಿಪುರಾಣ ತ್ರಿಕಾಲದಲ್ಲಿ ದೇವಿ ಪೂಜೆಯನ್ನು ವಿಧಿಸಿದೆ.
ಪಂಚದಿವಸ ವ್ರತ: ನವರಾತ್ರಿ ಉಪವಾಸ ವ್ರತವು ಹೀಗೂ ಒಂದು ಬಗೆ ಇದೆ. ನವರಾತ್ರಿಯ ಕಾಲದಲ್ಲಿ 9 ದಿನವೂ ಹಗಲು ಉಪವಾಸವಿದ್ದು ದೇವಿಯ 3 ಪೂಜೆಯ ಬಳಿಕ ರಾತ್ರಿ ಊಟ ಮಾಡುವುದು ಒಂದು ವ್ರತ. ನವರಾತ್ರಿಯಲ್ಲಿ 7 ದಿನ ಅಥವಾ 5 ದಿನ ಅಥವಾ ಕೊನೆಯ ಮೂರು ದಿನ ಅಥವಾ ಒಂದು ದಿನವಾದರೂ ದೇವಿಯ ಪೂಜೆಯನ್ನು ವೈಭವದಲ್ಲಿ ನಡೆಸಬೇಕು.

ಏಕಭುಕ್ತಸ್ತು ಪಂಚಮ್ಯಾಂ ಷಷ್ಠಾ ನಕ್ತಂ ಪ್ರವರ್ತಯೇತ್‌
ಅಯಾಚಿತಸ್ತು ಸಪ್ತಮ್ಯಾಂ ಅಷ್ಟಮ್ಯಾಂ ಸಮುಪೋಷಿತಃ
ನವಮ್ಯಾಂ ಪಾರಣಂ ಕುರ್ಯಾತ್‌ ಪಂಚರಾತ್ರಂ ಇತೀರಿತಮ್‌
ಪಂಚಮಿಯಂದು ಒಂದು ಊಟ ಮಾಡಿ, ಷಷ್ಠಿಯಂದು ರಾತ್ರಿ ಊಟ, ಸಪ್ತಮಿ­ಯಂದು ಕೇಳದೆ ಸಿಕ್ಕಿದ್ದು ಮಾತ್ರ ತಿಂದು ಅಷ್ಟಮಿ ಯಂದು ಉಪವಾಸವಿದ್ದು ನವಮಿಯಂದು ಪಾರಣ ಮಾಡ ಬೇಕು.

ಮಹಾಕಾಳಿ-ಮಹಾಲಕ್ಷ್ಮಿ-ಮಹಾಸರಸ್ವತಿ: ಶ್ರೀಭೂ ದುರ್ಗಾ ರೂಪಗಳು ಲಕ್ಷ್ಮಿಯ ಮೂರು ಮುಖ ಗಳು. ತಾಮಸವಾಗಿ ತೊಂದರೆಗಳ ನಿವೃತ್ತಿಗೆ ಕಾಳಿ ಮೊದಲು ಒಂದು ದಿನ ಆರಾಧ್ಯಳಾಗಿ, ರಾಜಸವಾಗಿ ಬದುಕಿನ ವ್ಯವಹಾರಕ್ಕೆ ಲಕ್ಷ್ಮೀ ಮುಂದಿನ ಮೂರು ದಿನ ಉಪಾಸಿತಳಾಗಿ, ಸಾತ್ವಿಕವಾಗಿ ಜ್ಞಾನ ಚಿಂತ­ನೆಗೆ ಸರಸ್ವತಿ ಕೊನೆಯ ಐದು ದಿನ ಪೂಜೆಗೊಳ್ಳು­ವಂತೆಯೂ ನವರಾತ್ರಿಯನ್ನು ನಡೆಸಬಹುದು. ಹೇಗೆ ನಾರಾ ಯಣನು ಬ್ರಹ್ಮನೊಳಗಿದ್ದು ಸೃಷ್ಟಿ ನಡೆಸುವಂತೆ, ಶಿವನೊಳಗಿದ್ದು ಸಂಹಾರ ನಡೆಸುವಂತೆ ಇರುವನೋ ಹಾಗೆಯೇ ರಮೆಯೂ ಸರಸ್ವತಿ- ಪಾರ್ವತಿಯರಲ್ಲಿದ್ದು ಜ್ಞಾನಕಾರ್ಯವನ್ನು ಶತ್ರು­ಸಂಹಾರ ನಡೆಸುವಳು. ಇದನ್ನು ತಿಳಿಸಲೆಂದೇ ಮಹಾಕಾಳಿ ಮಹಾಸರಸ್ವತಿ ಎಂದು ಲಕ್ಷ್ಮಿಯನ್ನು ಕರೆಯುವರು. ಮಹಾವಿಷ್ಣು ಎಂದು ಕರೆಯು ವಂತೆ ಮಹಾಲಕ್ಷ್ಮಿ ಎನ್ನುವುದಾಗಿಯೂ ಹೇಳುವರು.

Advertisement

ನವತರುಗಳಲ್ಲಿ ನವರಾತ್ರಿ ಪೂಜೆ
ರಂಭಾ ಕುಂಭೀ ಹರಿದ್ರಾ ಚ ಜಯಂತೀ ಬಿಲ್ವ ದಾಡಿಮೌ
ಅಶೋಕೋ ಮಾ(ದಾ)ನವೃಕ್ಷಶ್ಚ ಧಾತ್ರ್ಯಾದಿ ನವಪತ್ರಿಕಾಃ
ದೇವಿಪುರಾಣವು 9 ಮರಗಳ ಹೆಸರನ್ನು ಹೇಳಿ ದುರ್ಗೆ ಯ ನ್ನಲ್ಲಿ ಪೂಜಿಸಲೆಂದು ತಿಳಿಸಿದೆ. ಶ್ರೀಸೂಕ್ತ ಪ್ರಕಾರ, ಬಿಲ್ವಮರದ ಸನ್ನಿಧಾನದಲ್ಲಿ ದುರ್ಗಾಪೂಜೆ ಹೆಚ್ಚು ಫ‌ಲಕಾರಿ.

ನವರಾತ್ರಿಯಲ್ಲಿ ಹೋಮ: ನಮೋ ದೇವೈ ಮಹಾದೇವೈ ಶಿವಾಯೈ ಸತತಂ ನಮಃ / ನಮಃ ಪ್ರಕೃತ್ಯೆ ಭದ್ರಾಯೈ ನಿಯತಾಃ ಪ್ರಣತಾಃ ಸ್ಮ ತಾಮ್‌ – ಈ ಮಾರ್ಕಂಡೇಯ ಪುರಾಣದ ಶ್ಲೋಕದಿಂದ ತಿಲಾಜ್ಯ ಹೋಮ ಅಥವಾ ಪಾಯಸ ಹೋಮ ನವರಾತ್ರಿಯಲ್ಲಿ ವಿಶೇಷ. ವೇದಪಾರಾಯಣಾದೀನಿ ಸ್ವಶಕ್ತ್ಯಾ ಕಾರಯೇತ್‌ ವ್ರತೀ ಎನ್ನುವುದಾಗಿ ನಾರದೀಯ ಪುರಾಣವು ನವರಾತ್ರಿಯ ಸಂದರ್ಭ­­ದಲ್ಲಿ ವೇದ, ಮಹಾಭಾರತ, ಪುರಾಣ, ಪಂಚರಾತ್ರಸಂಹಿತೆಗಳ ಪಾರಾಯಣ ವಿಧಿಸಿದೆ. ಮಾರ್ಕಂಡೇಯ ಪುರಾಣದಂತೆ, ದೇವೀಚರಿತೆ ಪಾರಾಯಣವು ವಿಶೇಷ. ವಾರಾಹಿ ತಂತ್ರವು ಚರಿತೆಯ ಪಾರಾಯಣದ ಫ‌ಲವಿಶೇಷಗಳನ್ನು ತಿಳಿಸಿದೆ.

ಸ್ತೇಯಂ ಹಿಂಸಾ ಅನೃತಂ ಡಂಭಃ ಕಾಮಃ ಕ್ರೋಧಃ ಸ್ಮಯೋ ಮದಃ
ಭೇದಃ ವೈರಂ ಅವಿಶ್ವಾಸಃ ಸಂಸ್ಪರ್ಧಾ ವ್ಯಸನಾನಿ ಚ
ಏತೇ ತ್ರಯೋದಶಾನರ್ಥಾಃ ಅರ್ಥಮೂಲಾಃ ಮತಾ ನೃಣಾಮ್‌
ಸಂಪತ್ತಿಗಾಗಿ ಪ್ರಕೃತಿಮಾತೆಯ ಉಪಾಸನೆಯಲ್ಲಿ ಬರಬಹು­ದಾದ 13 ಆಪತ್ತುಗಳ ನಿವೃತ್ತಿಗೆ 13 ಅಧ್ಯಾಯದ ವ್ಯಾಸವಿರಚಿತ ಮಾರ್ಕಂಡೇಯ ಪುರಾಣದ ದೇವೀ­ಮಹಾತ್ಮ್ಯಯ ಪಾರಾ ಯಣವು ವಿಹಿತವಾಗಿದೆ. ದೇವಿಚರಿತೆಯಲ್ಲಿ ಅನೇಕ ರಕ್ಕಸರ ಸಂಹಾರವನ್ನು ಹೇಳಲಾಗಿದೆ. ಇದು ಮನುಷ್ಯನ ಒಳಗೆ ದುರ್ಗುಣಗಳಾಗಿ ಆ ಆಸುರೀ ಶಕ್ತಿಗಳ ಸಂಹಾರ ಗುರುತಿಸಿದೆ. ಇದರಿಂದಾಗಿ ಇತಿಹಾಸ ಪಾರಾಯಣ ಮಾಡುವುದರಿಂದ ನಮ್ಮೊಳಗಿನ ಕಾಮಾದಿ ವೈರಿ ದೂರಮಾಡಲು ಸಾಧ್ಯ. ಕಾಮ- ಮಧುಕೈಟಭ, ಕ್ರೋಧ-ಮಹಿಷ, ಲೋಭ- ಧೂಮ್ರ ಲೋಚನ, ಚಂಡ ಮುಂಡ-ಮೋಹ, ಮದ- ರಕ್ತಬೀಜ ಮತ್ಸರ- ಶುಂಭ ನಿಶುಂಭ. 9 ರಾತ್ರಿಚರರ ಸಂಹಾರವೇ ದೇವಿಚರಿತೆಯ ಆಂತರ್ಯ.

ದೀಪನಮಸ್ಕಾರ – ಶ್ರೀಚಕ್ರಪೂಜೆ: ನವರಾತ್ರಿಯಂದು ದೇವಿ ಯನ್ನು ಪ್ರತಿಮಾಮಾಧ್ಯಮದಲ್ಲಿ ಪೂಜಿಸುವಂತೆ ಪಂಚ ದೀಪಗಳಲ್ಲಿಯೂ ಪಂಚರೂಪದ ಲಕ್ಷ್ಮಿ­ಯನ್ನು ಶ್ರೀ-ಲಕ್ಷ್ಮೀ- ಮಾ-ಇಂದಿರಾ-ರಮಾ ಅಥವಾ ಲಕ್ಷ್ಮೀ- ಮಾಯಾ- ಜಯಾ- ಕೃತಿ-ಶಾಂತಿ ಎಂಬ ನಾಮಗಳಿಂದ ಪೂಜಿಸು­ವರು. ಅದರಂತೆ ಒಂಭತ್ತು ತ್ರಿಕೋಣಗಳ ಮಂಡಲ­ದಲ್ಲಿಯೂ ದುರ್ಗೆಯನ್ನು ಆರಾಧಿಸುವರು. ಭಗವಂತನ ಕೈಯಲ್ಲಿನ ಶಂಖಕ್ಕೆ ಅಭಿಮಾನಿನಿಯು ಲಕ್ಷ್ಮಿ ಆದಂತೆ ಚಕ್ರದ ಅಭಿಮಾನಿನಿಯು ದುರ್ಗಾದೇವಿಯು. ಹಾಗಾಗಿ ಅವಳ ಪೂಜೆಯ ಈ ಮಂಡಲವನ್ನು ಶ್ರೀಚಕ್ರವೆಂದೇ ಕರೆಯುವರು. ಶ್ರೀಚಕ್ರದಲ್ಲಿ ರಮೆಯ 3 ರೂಪಗಳನ್ನೂ 3 ಹೊತ್ತು ಪೂಜಿಸುವ ಕ್ರಮವಿದೆ. ಶ್ರೀಚಕ್ರದಲ್ಲಿ 3 ತ್ರಿಕೋಣಗಳ ಸಣ್ಣ ಮಂಡಲವೂ ಈ ಹಿನ್ನೆಲೆಯಲ್ಲಿ ಆರಾಧನೆಗೆ ಬಂದಿದೆ. ಮಂಡಲಪೂಜೆಯಲ್ಲಿ ಪಂಚವರ್ಣಗಳನ್ನು ಉಪಯೋಗಿ ಸುವರು.ಮಧ್ವಾಚಾರ್ಯರು ದುರ್ಗೆಯನ್ನು ಸ್ತುತಿಸಿದ್ದು ಹೀಗೆ
-ಕೌಶೇಯರಕ್ತವಸನಾಂ ಅರವಿಂದನೇತ್ರಾಂ ಪಾಶಾಂಕುಶಾಭಯವರೋದ್ಯತಪದ್ಮಹಸ್ತಾಮ್‌/ ಉದ್ಯತ್ಛತಾರ್ಕಸದೃಶೀಂ ಪರ ಮಾಂ ಕಸಂಸ್ಥಾಂ ಧ್ಯಾಯೇದ್ವಿಧೀಶನುತಪಾದಯುಗಾಂ ಜನಿತ್ರೀಮ್‌

ಲಲಿತಾಪಂಚಮಿ – ಶಾರದಾಪೂಜೆ

ನವರಾತ್ರಿಯಲ್ಲಿ ಮೂಲಾ ನಕ್ಷತ್ರದಂದು ಪುಸ್ತಕದ ಮಾಧ್ಯಮ ದಲ್ಲಿ ಸರಸ್ವತಿಯನ್ನು ಆವಾಹಿಸಿ ಪೂಜಿಸಬೇಕು. ಶ್ರವಣ ನಕ್ಷತ್ರದಂದು ಸರಸ್ವತಿಯ ವಿಸರ್ಜನೆ. ಹೀಗೆ 5 ದಿನಗಳಲ್ಲಿ ಗ್ರಂಥಮಾಧ್ಯಮದಲ್ಲಿ ಸೃಷ್ಟಿಕರ್ತನಾದ ಬ್ರಹ್ಮನ ರಾಣಿಯನ್ನು ವಿದ್ಯೆಗಾಗಿ ಜ್ಞಾನಕ್ಕಾಗಿ ಪೂಜಿಸಲಾಗುವುದು. ಈ ಐದು ದಿನಗಳಲ್ಲಿ ಓದಿಗೆ ಮತ್ತು ಬರಹಕ್ಕೆ ರಜೆ.

ಸರಸ್ವತಿಯ ದ್ವಾದಶನಾಮ
ವಾಗ್ವಾಣೀ ಭಾರತೀ ಬ್ರಾಹ್ಮಿ ಭಾಷಾ ಗೀಃ ಶಾರದಾ ಸ್ವರಾ
ಸರಸ್ವತೀ ಕಾಮಧೇನುಃ ವೇದಗರ್ಭಾ ಅಕ್ಷರಾತ್ಮಿಕಾ

ಪದ್ಮಪುರಾಣದಲ್ಲಿ ಸರಸ್ವತೀ ಸ್ತೋತ್ರ
ಸರಸ್ವತೀಂ ನಮಸ್ಯಾಮಿ ಚೇತನಾನಾಂ ಹೃದಿ ಸ್ಥಿತಾಮ್‌
ಮತಿದಾಂ ವರದಾಂ ಶುದ್ಧಾಂ ವೀಣಹಸ್ತಾಂ ವರಪ್ರದಾಮ್‌
ಸುಪ್ರಕಾರಾಂ ನಿರಾಲಂಬಾಂ ಅಜ್ಞಾನತಿಮಿರಾಪಹಾಮ್‌
ಶುಕ್ಲಾಂ ಮೋಕ್ಷಪ್ರದಾಂ ರಮ್ಯಾಂ ಶುಭಾಂಗೀಂ ಶೋಭನಪ್ರದಾಮ್‌
ಪದ್ಮಸಂಸ್ಥಾಂ ಕುಂಡಲಿನೀಂ ಶುಕ್ಲವರ್ಣಾಂ ಮನೋರಮಾಮ್‌

ಮಧ್ವಾಚಾರ್ಯರು ಸರಸ್ವತಿಯನ್ನು ಹೀಗೆ ತಿಳಿಸಿದ್ದಾರೆ –
ಉದ್ಯದ್ದಿವಾಕರ-ಸಮೂಹನಿಭಾಂ ಸ್ವಭರ್ತುರಂಕಸ್ಥಿತಾಂ ಅಭಯಸದ್ವರಬಾಹುಯುಕ್ತಾಮ್‌/ಮುದ್ರಾಂ ಚ ತತ್ವದೃಶ‌ಯೇ ವರಪುಸ್ತಕಂ ಚ ದೋರ್ಯುಗ್ಮಕೇನ ದಧತೀಂ ಸ್ಮರತಾತ್ಮವಿದ್ಯಾಮ್‌

ಚತುರ್ಮುಖನಿಗೆ ಸಮನಾಗಿ ಪ್ರಾಣದೇವ ಇದ್ದಾನೆ. ಚತುರ್ಮುಖನ ಮಡದಿ ಸರಸ್ವತಿಗೆ ಸಮಳಾಗಿ ವಾಯುದೇವನ ಮಡದಿ ಭಾರತಿ ಇದ್ದಾಳೆ. ಹೀಗೆ ಪುಸ್ತಕದಲ್ಲಿ ಸಕಲಶಾಸ್ತ್ರಗಳನ್ನು ನೀಡಿದ ವೇದವ್ಯಾಸರನ್ನು ಮೊದಲು ಪೂಜಿಸಿ ಬಳಿಕ ಸಕಲ ಶ್ರುತಿಗಳ ಅಭಿಮಾನಿನಿಯಾದ ಲಕ್ಷ್ಮಿಯನ್ನು ಪೂಜಿಸಬೇಕು. ಮತ್ತೆ ಎಲ್ಲದರ ಅರಿವು ನೀಡುವ ಬ್ರಹ್ಮವಾಯುಗಳನ್ನು ಪೂಜಿಸಿ ಲಲಿತಕಲಾ ವಲ್ಲಭೆ ಯ­ರಾದ ಸರಸ್ವತಿ-ಭಾರತಿಯರನ್ನು ಆರಾಧಿಸಬೇಕು. ಪ್ರತಿನಿತ್ಯ ವಿದ್ಯಾ­ರ್ಥಿಯು ಸರಸ್ವತಿಯ ಪ್ರಾರ್ಥನೆಯನ್ನು ಆರಂಭದಲ್ಲಿ ಹೀಗೆ ನಡೆಸಲಿ

– ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ

ವೇದವ್ಯಾಸಪೂಜೆ: ವ್ಯಾಸರನ್ನು ಅವರ ಹೊತ್ತಗೆಗಳ ಮಾಧ್ಯಮದಲ್ಲೇ ಪೂಜಿಸು ವುದು ಹೆಚ್ಚು ಸಮಂಜಸ. ದೇವರ ಪೂಜೆಯಂತೆಯೇ ವ್ಯಾಸ ಪೂಜೆಯನ್ನು ನಡೆಸುತ್ತಾ ಆವರಣದ ಪೂಜೆಯಲ್ಲಿ ವ್ಯಾಸರ ಶಿಷ್ಯರನ್ನೆಲ್ಲ ಸುತ್ತಲೂ ನೆನೆಯಬೇಕು.

ಋಗ್ವೇದದ ಶಿಷ್ಯನಾಗಿ ಪೈಲ, ಸಾಮವೇದದ ಶಿಷ್ಯನಾಗಿ ಜೈಮಿನಿ, ಯಜುರ್ವೇದದ ಶಿಷ್ಯನಾಗಿ ವೈಶಂಪಾಯನ, ಅಥರ್ವವೇದದ ಶಿಷ್ಯನಾಗಿ ಸುಮಂತು, ಇತಿಹಾಸ ಪುರಾಣದ ಶಿಷ್ಯನಾಗಿ ರೋಮಹರ್ಷಣ, ಭಾಗವತದ ಶಿಷ್ಯನಾಗಿ ಶುಕ, ಇತರ ಶಿಷ್ಯರಾದ ಬಾದರಿ, ಆಶ್ಮರಥ್ಯ, ಕಾಶಕೃತ್ಸ, ಲೋಮಶ, ಉಗ್ರಶ್ರವಸ್‌Õ ಮುಂತಾದವರನ್ನು ಪೂಜಿಸಬೇಕು. ಮಧ್ವಾ ಚಾರ್ಯರು ವೇದವ್ಯಾಸರನ್ನು ಹೀಗೆ ಸ್ತುತಿಸಿದ್ದಾರೆ.

ಜಯತ್ಯಜೋ ಖಂಡ-ಗುಣೋರು-ಮಂಡಲಃ ಸದೋದಿತೋ ಜ್ಞಾನ-ಮರೀಚಿ-ಮಾಲೀ/ ಸ್ವಭಕ್ತ-ಹಾರ್ದೋಚ್ಚ-ತಮೋ-ನಿಹಂತಾ ವ್ಯಾಸಾವತಾರೋ ಹರಿರಾತ್ಮ-ಭಾಸ್ಕರಃ

ದುರ್ಗಾಷ್ಟಮಿ – ಆಯುಧಪೂಜೆ: ದುರ್ಗಾಷ್ಟಮಿಯಂದು ಆಯುಧಪೂಜೆ ಮಾಡಿ ಪಾಯಸ­ಹೋಮ ಮಾಡಬೇಕೆಂದು ಭವಿಷ್ಯಪುರಾಣ ಹೇಳುವುದು. ಛತ್ರ ಚಾಮರ ಕತ್ತಿ ಗುರಾಣಿಗಳನ್ನೆಲ್ಲ ಹಿಂದೆ ರಾಜರು ಬಳಸುತ್ತಿದ್ದರು. ಅವುಗಳ ಮಂತ್ರಗಳಿಂದ ಪೂಜೆ ನಡೆಸುತ್ತಿದ್ದರು. ಇಂದು ನಾವು ವ್ಯಾಪಾರ ವ್ಯವಹಾರಕ್ಕಾಗಿ ನಮ್ಮ ಉದ್ಯಮಗಳಲ್ಲಿ ಹಾರೆ ಗುದ್ದಲಿ ಮುಂತಾದ ಸಲಕರಣೆಗಳನ್ನು ಬಳಸುತ್ತೇವೆ. ಇದನ್ನೇ ಆಯುಧವನ್ನಾಗಿ ಪೂಜಿಸುವ ಪರಿ ನಮ್ಮದಾಗಿದೆ. ಇದನ್ನು ಸಲಕರಣೆ ಪೂಜೆ ಎಂದೇ ಕರೆಯುವುದು ಯೋಗ್ಯ. ಆಯುಧ­ಲಕ್ಷಣಾದಿಗಳನ್ನೆಲ್ಲ ಅಗ್ನಿಪುರಾಣ ತಿಳಿಸಿದೆ.

ಮಹಾನವಮಿ – ವಾಹನಪೂಜೆ: ಅಶ್ವಾನಾಂ ಚ ಗಜಾನಾಂ ಚ ಶಕ್ತೀನಾಂ ಶಸ್ತ್ರಪೂಜನೇ /ಆಶ್ವಯುಕ್‌ ಶುಕ್ಲನವಮೀ ರಾತ್ರಿಯುಕ್ತಾ ವಿಶಿಷ್ಯತೇ
ಆಶ್ವಿ‌ನ ಶುದ್ಧ ನವಮಿಯಂದು ವಾಹನಪೂಜೆಯನ್ನು ಮಾಡ­ಬೇಕು. ಆಯುಧಪೂಜೆಯನ್ನು ಇಂದೂ ನಡೆಸ­ಬಹುದು. ಸೂರ್ಯ ­ಪುತ್ರ ರೇವತನು ಅಶ್ವಪಾಲನಾಗಿದ್ದರಿಂದ ವಾಹನಪೂಜೆ­ಯಂದು ಅಶ್ವಪೂಜೆಯಂದು ರೇವತನನ್ನೂ ಪೂಜಿಸಬೇಕು. ಕುದುರೆ ಹಿಂದೆ ಸೂರ್ಯನ ವಾಹನವಾದದ್ದು ಸ್ವಾತಿ ನಕ್ಷತ್ರದಂದು ಆಶ್ವಿ‌ನ ಶುದ್ಧ ನವಮಿಯಂದು. ಅಂದು ಕುದುರೆಗಳ ಪೂಜೆ ವಿಹಿತ ವಾಗಿದೆ. ಇಂದು ಕುದುರೆಗಳ ಬದಲಿಗೆ ನಾವು ಯಂತ್ರವನ್ನೇ ಬಳಸು ವುದರಿಂದ ಅಶ್ವಶಕ್ತಿ ಇದೆ ಎನ್ನುವ ನೆಲೆಯಲ್ಲಿ ಯಂತ್ರ ಪೂಜೆ ಮಾಡ ಬಹುದು. ಕುದುರೆಗಳಲ್ಲಿ ಉಚ್ಚೆç ಶ್ರವಸ್ಸು ಎನ್ನುವ ಇಂದ್ರನ ಕುದುರೆಯಲ್ಲಿ ಮತ್ತು ಆನೆಗಳಲ್ಲಿ ಐರಾವತ ಎಂಬ ಇಂದ್ರನ ಆನೆಯಲ್ಲಿ ನಾರಾಯಣನ ವಿಭೂತಿ ರೂಪ ವಿಶೇಷ ಆವೇಶ ವಿದೆ. ಇದನ್ನು ಅನುಸರಿಸಿ ಕುದುರೆ, ಆನೆ ಪೂಜೆಯನ್ನು ಹಿಂದೆ ರಾಜರು ತಮ್ಮ ಚತುರಂಗಸೈನ್ಯದ ವೈಭವಕ್ಕಾಗಿ ನಡೆಸುತ್ತಿದ್ದರು.

ವಿಜಯದಶಮೀ – ಶಮೀಪೂಜೆ
ಶಮೀಯುಕ್ತಂ ಜಗನ್ನಾಥಂ ಭಕ್ತಾನಾಂ ಅಭಯಂಕರಮ್‌
ಅರ್ಚಯಿತ್ವಾ ಶಮೀವೃಕ್ಷಂ ಅರ್ಚಯೇಚ್ಚ ತತಪ್ಪುನಃ
ಆಶ್ವಿ‌ನ ಶುದ್ಧ ದಶಮಿಯಂದು ವಿಜಯದಶಮಿಯಂದು ಶಮಿಯನ್ನು ಶಮಿಯೊಳಗೆ ನಿಂತ ನಾರಾಯಣನನ್ನು ಪೂಜಿಸಿ ವಿಜಯವನ್ನು ಪ್ರಾರ್ಥಿಸಬೇಕು. ಪಾಪನಿವೃತ್ತಿಗೊಳಿಸುವ ಶಮಿಯನ್ನು ನೆನೆಯಬೇಕು.

ಅಮಂಗಳಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ
ದುಃಸ್ವಪ್ನನಾಶಿನೀಂ ಧನ್ಯಾಂ ಪ್ರಪದ್ಯೆ?ಹಂ ಶಮೀಂ ಶುಭಾಮ್‌
ಪಾಂಡವರು ಅಸ್ತ್ರಗಳನ್ನು ಅಜ್ಞಾತವಾಸದ ಮೊದಲು ಬನ್ನಿ ಮರದ ಮೇಲೆ ಮುಚ್ಚಿಟ್ಟು ಹೋಗಿದ್ದಾರೆ. ಮತ್ತೆ ಅದನ್ನು ಪಡೆದು ಯುದ್ಧದಲ್ಲಿ ಉಪಯೋಗಿಸಿ ಜಯಗಳಿಸಿದ್ದಾರೆ. ಈ ನೆನಪಿನಲ್ಲಿ ಶಮಿಯ ಮರದ ಪೂಜೆಯು ವಿಶೇಷವೆನಿಸಿದೆ ಎಂದು ಭವಿಷ್ಯಪುರಾಣ ಹೇಳಿದೆ.

ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ
ಧರಿತ್ರೀ ಪಾರ್ಥಶಸ್ತ್ರಾಣಾಂ ರಾಮಸ್ಯ ಪ್ರಿಯವಾದಿನೀ
ಕರಿಷ್ಯಮಾಣಯಾತ್ರಾಯಾಂ ಯಥಾಕಾಲಂ ಸುಖಂ ಮಯಾ
ತತ್ರ ನಿರ್ವಿಘ್ನಕತ್ರೀ ತ್ವಂ ಭವ ಶ್ರೀರಾಮಪೂಜಿತೇ
ಗೃಹೀತ್ವಾ ಸಾಕ್ಷತಾಮಾದ್ರಾ ಶಮೀಮೂಲಗತಾಂ ಮೃದಮ್‌
ಗೀತವಾದಿತ್ರನಿಘೋಷೈಃ ಆನಯೇತ್‌ ಸ್ವಗೃಹಂ ಪ್ರತಿ

ಅಂದು ಸಂಜೆ ಶಮಿಯ ಬುಡದಲ್ಲಿನ ಮಣ್ಣನ್ನು ಮನೆಗೆ ತರುವಂತೆಯೂ ಇಲ್ಲಿ ಹೇಳಲಾಗಿದೆ. ಹಿಂದೆ ರಾಜರು ವಿಜಯ ದಶಮಿಯಂದು ಸಾಂಕೇತಿಕವಾಗಿ­ಯಾದರೂ ಸೀಮೋಲ್ಲಂಘನೆ ನಡೆಸುತ್ತಿದ್ದರು. ನಾವು ನಮ್ಮ ಎಲ್ಲ ಸಮಸ್ಯೆಗಳಿಂದ ಗೆಲುವು ಪಡೆಯಲು ಧರ್ಮರಾಜ, ಭೀಮಸೇನ, ಅರ್ಜುನ, ನಕುಲ- ಸಹದೇವರನ್ನು ಹೀಗೆ ಪ್ರಾರ್ಥಿಸುವ
– ಧರ್ಮೋ ವಿವರ್ಧತಿ ಯುಧಿಷ್ಠಿರ-ಕೀರ್ತನೇನ ಪಾಪಂ ಪ್ರಣಶ್ಯತಿ ವೃಕೋದರ-ಕೀರ್ತನೇನ / ಶತ್ರುರ್ವಿನಶ್ಯತಿ ಧನಂಜಯ – ಕೀರ್ತನೇನ ಮಾದ್ರೀಸುತೌ ಕಥಯತಾಂ ನ ಭವಂತಿ ರೋಗಾಃ

ಕದಿರು ಕಟ್ಟುವುದು: ವಿಜಯದಶಮಿಯಂದು ಹೊಸಪೈರಿನ ಭತ್ತದಿಂದ ಅಕ್ಕಿ ತೆಗೆದು ಅನ್ನಮಾಡಿ ದೇವರಿಗೆ ಸಮರ್ಪಿಸಿ ಅಖಂಡ ಎಲೆಯಲ್ಲಿ ಊಟಮಾಡಬೇಕು. ಇದು ನವಾನ್ನ ಭೋಜನ. ಹೊಸ ಅಕ್ಕಿಯಿಂದ ನಾರಾಯಣನಿಗೆ ಅಗ್ನಿ ಮುಖ ದಲ್ಲಿಯೂ ಹೊಸಾನ್ನದ ಚರುಹೋಮವನ್ನು ಮಾಡ ಬೇಕು. ಅದರ ಉಳಿದ ಅನ್ನವನ್ನು ಪ್ರಸಾದವಾಗಿ ಬಳಸ ಬೇಕು. ಅಂದು ಭತ್ತದ ತೆನೆಯನ್ನು ತುಳಸಿಕಟ್ಟೆಯಿಂದ ಮನೆ ಯೊಳಗೆ ತಂದು ದೇವರಕೋಣೆಯಲ್ಲಿಟ್ಟು ಲಕ್ಷ್ಮೀ ನಾರಾಯಣರನ್ನು ಆ ತೆನೆಯಲ್ಲಿ ಪೂಜಿಸಿ, ಬಿದಿರ ಎಲೆ ಮಾವಿನ ಕುಡಿಯೊಂದಿಗೆ ತೆಂಗಿನ ನಾರಿನಲ್ಲಿ ಮನೆಯ ಎಲ್ಲ ಕೋಣೆಗಳಿಗೆ, ತೊಟ್ಟಿಲು, ಹೊಲಿಗೆ ಯಂತ್ರ ಮುಂತಾದ ವಸ್ತುಗಳಿಗೆ, ಬಾವಿ- ಕೊಟ್ಟಿಗೆಗಳಿಗೂ ಆ ಕದಿರನ್ನು ಕಟ್ಟಬೇಕು.

ನವರಾತ್ರಿಯಲ್ಲಿ ಪೂಜೆಗೊಳ್ಳುವ ಮಹಾ ಲಕ್ಷ್ಮಿಯು, ವಿದ್ಯಾಲಕ್ಷ್ಮಿಯಾಗಿ ವಿಜಯಲಕ್ಷ್ಮಿಯಾಗಿ ಧಾನ್ಯ ಲಕ್ಷ್ಮಿಯಾಗಿ ಹೀಗೆ ಅನೇಕ ರೂಪಗಳಲ್ಲಿ ಆರಾಧನೆಗೊಳ್ಳುವಳು. ನಮಗೆ ಅನೇಕ ಬಗೆಯ ಮಾಂಗಲ್ಯವನ್ನು ಭಾಗ್ಯವನ್ನು ನೀಡುವಳು.

ಶತಾವಧಾನಿ ಡಾ| ಉಡುಪಿ ರಾಮನಾಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next