Advertisement

Hoysala Temples: ಕನ್ನಡ ನಾಡಿನ ಅದ್ಭುತ ವಾಸ್ತುಶಿಲ್ಪ ಹೊಯ್ಸಳ ಶೈಲಿ

09:52 AM Sep 20, 2023 | Team Udayavani |

ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದಲ್ಲಿರುವ ಹೊಯ್ಸಳ ದೇಗುಲಗಳು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕನ್ನಡ ನಾಡಿನ ಅದ್ಭುತ ಹಾಗೂ ಅದಮ್ಯ ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಕನ್ನಡ ನಾಡನ್ನು ಆಳಿದ ರಾಜಮನೆತನಗಳಲ್ಲಿ ಹೊಯ್ಸಳ ರಾಜ ಮನೆತನ ತನ್ನದೇ ಆದ ಪ್ರಖ್ಯಾತಿ ಪಡೆದಿದೆ. ಸುಮಾರು ಮೂರು ಶತಮಾನಗಳ ಹೊಯ್ಸಳರ ಆಳ್ವಿಕೆಯು ಮಧ್ಯಕಾಲೀನ ಕರ್ನಾಟಕದ ಇತಿಹಾಸದ ಒಂದು ಭವ್ಯ ಅಧ್ಯಾಯ.

ಹೊಯ್ಸಳರು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಶಿಲ್ಪಕಲೆಗಳ ಪುರೋಭಿವೃದ್ಧಿಗೆ ನೀಡಿದ ಪ್ರೋತ್ಸಾಹ ಅನನ್ಯ. ತುಂಗಭದ್ರೆಯಿಂದ ತಮಿಳುನಾಡಿನ ಮಧುರೈವರೆಗೂ ರಾಜ್ಯವನ್ನು ವಿಸ್ತರಿಸಿದ್ದರು. ಹೊಯ್ಸಳರು ತಮ್ಮ ಕಾಲದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಇವುಗಳಲ್ಲಿ ಬೇಲೂರಿನ ಚೆನ್ನಕೇಶವ, ಹಳೇಬೀಡಿನ ಹೊಯ್ಸಳೇಶ್ವರ, ಕೇದಾರೇಶ್ವರ ಮತ್ತು ಸೋಮನಾಥಪುರದ ಕೇಶವ ದೇವಾಲಯಗಳು ಹೊಯ್ಸಳ ಶಿಲ್ಪಕಲಾ ವೈಭವವನ್ನು ಜಗದ್‌ ವಿಖ್ಯಾತಗೊಳಿಸಿವೆ. ಹೊಯ್ಸಳರು, ಬಾದಾಮಿ ಚಾಲುಕ್ಯರು ಮತ್ತು ಕಲ್ಯಾಣ ಚಾಲುಕ್ಯರಿಂದ ಕನ್ನಡನಾಡಿನಲ್ಲಿ ರೂಪಗೊಂಡಿದ್ದ ವಾಸ್ತುಶಿಲ್ಪ ಶೈಲಿಯಿಂದ ಪ್ರಭಾವಿತರಾಗಿದ್ದರೂ, ತಮ್ಮದೇ ಆದ ವೈಶಿಷ್ಟ್ಯಪೂರ್ಣ “”ಹೊಯ್ಸಳ ಶೈಲಿ”ಯನ್ನು ರೂಪಿಸಿಕೊಂಡರು. ಈ ಶೈಲಿಯ ಮುಖ್ಯ ಅಂಶಗಳೆಂದರೆ, ದೇವಾಲಯಗಳ ತಳ ವಿನ್ಯಾಸವು ನಕ್ಷತ್ರಾಕಾರದಲ್ಲಿದ್ದು ಮೇಲಿನ ಕಟ್ಟಡವೂ ಅದೇ ವಿನ್ಯಾಸವನ್ನು ಹೊಂದಿರುತ್ತವೆ. ದೇವಾಲಯಗಳನ್ನು ಎತ್ತರವಾದ ಜಗಲಿಯ ಮೇಲೆ ನಿರ್ಮಿಸಿದ್ದಾರೆ.

Advertisement

ಪ್ರತಿಯೊಂದು ದೇವಾಲಯದಲ್ಲಿ ಗರ್ಭಗೃಹ, ನವರಂಗ, ಸುಖನಾಸಿ, ಮೊಗಸಾಲೆ ಮತ್ತು ಅದರ ಸುತ್ತಲೂ ಕಂಬಗಳ ಮಂಟಪಗಳನ್ನು ನಿರ್ಮಿಸಿರುತ್ತಾರೆ. ಗರ್ಭಗೃಹಗಳು ನಕ್ಷತ್ರಾಕಾರವಾಗಿರುತ್ತವೆ. ಶಿಖರಗಳು ಮಟ್ಟಸವಾಗಿದ್ದು ಹಂತ ಹಂತವಾಗಿ ಮೇಲೇರುತ್ತಾ ವಿಮಾನಗಳಿಂದ ಮುಕ್ತಾಯಗೊಳ್ಳುತ್ತವೆ. ಇವರು ದೇವಾಲಯಗಳನ್ನು ಏಕಕೂಟ, ದ್ವಿಕೂಟ, ಚತುಷ್ಕೂಟ ಮತ್ತು ಪಂಚಕೂಟ ಮಾದರಿಯಲ್ಲಿ ನಿರ್ಮಿಸಿದ್ದಾರೆ. ವಿಶೇಷವಾಗಿ ದ್ವಾರಗಳನ್ನು ಮತ್ತು ದೇವಾಲಯದ ಹೊರ ಮೈಯನ್ನು ಅತಿ ಸೂಕ್ಷ್ಮವಾದ ಮತ್ತು ಸುಂದರವಾದ ಕೆತ್ತನೆಗಳಿಂದ ಅಲಂಕೃತಗೊಳಿಸಿದ್ದಾರೆ. ಹೊಯ್ಸಳರ ದೇವಾಲಯಗಳ ಕಂಬಗಳು ಪ್ರತಿಬಿಂಬ ಮೂಡಿಸುವಷ್ಟು ಹೊಳಪಿನಿಂದ ಕೂಡಿರುವುದಲ್ಲದೆ, ಅವುಗಳ ಮೇಲೆ ಕೆತ್ತಿರುವ ಮದನಿಕಾ ವಿಗ್ರಹಗಳು ಆಗಿನ ಕಾಲದ ಶಿಲ್ಪಗಳ ಶ್ರೇಷ್ಠ ಕಲಾ ನೈಪುಣ್ಯಕ್ಕೆ ನಿದರ್ಶನವಾಗಿವೆ.

ಹೊಯ್ಸಳ ಕಲಾಶೈಲಿ ರೂಪುಗೊಳ್ಳಲು ದೊರೆ ವಿಷ್ಣುವರ್ಧನ ಕಾರಣ. ಈತನ ಮೂಲ ಹೆಸರು ಬಿಟ್ಟಿದೇವ. ವಿಷ್ಣುವರ್ಧನನ ಅತ್ಯಂತ ಪ್ರಮುಖ ಸಾಧನೆಯೆಂದರೆ ಗಂಗರಿಂದ ಗಂಗಾವಾಡಿಯನ್ನು ಗೆದ್ದುಕೊಂಡದ್ದು,ಚೋಳರನ್ನು ತಲಕಾಡಿನಿಂದ ಓಡಿಸಿ ಅದನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಕಲೆ ಮತ್ತು ವಾಸ್ತು ಶಿಲ್ಪಗಳ ದೃಷ್ಟಿಯಿಂದ ವಿಷ್ಣುವರ್ಧನನ ಕಾಲ ಅಪೂರ್ವವಾದುದು. ಇವನ ಕಾಲದಲ್ಲಿ ಅಪೂರ್ವವಾದ ಹೊಯ್ಸಳ ಕಲಾಶೈಲಿಯೊಂದು ರೂಪುಗೊಂಡಿತು. ಬೇಲೂರಿನ ಚೆನ್ನಕೇಶವ ದೇವಾಲಯವು ಇವನ ಕಲಾಭಿರುಚಿಗೆ ಜೀವಂತ ಸಾಕ್ಷಿಯಾಗಿದೆ.

ಕರುನಾಡ ಹೆಮ್ಮೆ: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆ ಗೊಂಡಿರುವುದು ಹೆಮ್ಮೆಯ ಸಂಗತಿ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲ ಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ಬದ್ಧ.- ಸಿದ್ದರಾಮಯ್ಯ, ಮುಖ್ಯಮಂತ್ರಿ

ಭಾರತದ ಪರಂಪರೆಗೆ ಸಾಕ್ಷಿ: ಇದು ಭಾರತಕ್ಕೆ ಹೆಮ್ಮೆಯ ವಿಚಾರ. ಹೊಯ್ಸಳ ವಾಸ್ತುಶಿಲ್ಪವಿರುವ ದೇಗುಲಗಳು ಈಗ ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಯಾಗಿವೆ. ಹೊಯ್ಸಳ ದೇವಾಲಯಗಳ ಸೌಂದರ್ಯ ಮತ್ತು ಸೂಕ್ಷ್ಮ ವಾಸ್ತುಶಿಲ್ಪವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ವಿಶಿಷ್ಟ ಕಲಾತ್ಮಕತೆಗೆ ಸಾಕ್ಷಿ. – ನರೇಂದ್ರ ಮೋದಿ, ಪ್ರಧಾನಿ

-ಟಿ. ಕೆಂಪಣ್ಣ, ಖ್ಯಾತ ಛಾಯಾ ಗ್ರಾಹಕರು

Advertisement

Udayavani is now on Telegram. Click here to join our channel and stay updated with the latest news.

Next