Advertisement

ನೌಕರರಿಗೆ ವಿಶೇಷ ಕ್ರೀಡಾ ತರಬೇತಿ

06:05 PM Sep 21, 2021 | Team Udayavani |

ಬೀದರ: ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಿಗೆ ಆಯ್ಕೆಯಾದ ಜಿಲ್ಲೆಯ ಸರ್ಕಾರಿ ನೌಕರರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ ಹೇಳಿದರು. ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಯ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ಎಂಟು ಸರ್ಕಾರಿ ನೌಕರರಿಗೆ ನಗರದ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ನೌಕರರು ಕ್ರೀಡೆ ಸೇರಿದಂತೆ ಎಲ್ಲಕ್ಷೇತ್ರಗಳಲ್ಲೂ ಸಾಧನೆ ಮೆರೆಯಬೇಕು. ನೌಕರರಿಗೆ ಅಗತ್ಯ ಸಹಕಾರ ನೀಡಲು ಸಂಘ ಸದಾ ಸಿದ್ಧವಿದೆ ಎಂದರು.

Advertisement

ಹರಿಯಾಣಾದ ಕುರುಕ್ಷೇತ್ರದಲ್ಲಿ ಸೆ.23ರಿಂದ 30ರ ವರೆಗೆ ನಡೆಯಲಿರುವ ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ತಂಡಕ್ಕೆ ಜಿಲ್ಲೆಯಿಂದ ಮೊದಲ ಬಾರಿಗೆ ಎಂಟು ಜನ ಸರ್ಕಾರಿ ನೌಕರರು ಆಯ್ಕೆಯಾಗಿರುವುದು ಅತೀವ ಸಂತಸ ಉಂಟು ಮಾಡಿದೆ. ಇದು, ಜಿಲ್ಲೆಯ ಸರ್ಕಾರಿ ನೌಕರರ ಕ್ರೀಡಾ ಆಸಕ್ತಿ, ಕ್ರಿಯಾಶೀಲತೆಗೆ ನಿದರ್ಶನವಾಗಿದೆ ಎಂದು ಹೇಳಿದರು.

ಕೋವಿಡ್‌ ಸೋಂಕಿನ ಕಾರಣ ಪ್ರಸಕ್ತ ವರ್ಷ ಬೀದರನಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ನಡೆಸಲು ಸಾಧ್ಯವಾಗಲಿಲ್ಲ. ಮುಂಬರುವ ವರ್ಷಗಳಲ್ಲಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಸಂಘಟಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಹಾಕಿ ತಂಡಕ್ಕೆ ಆಯ್ಕೆಯಾದ ಜಿಲ್ಲೆಯ ಸರ್ಕಾರಿ ನೌಕರರಾದ ಸೈಯದ್‌ ಬಾಬರ್‌ ಹುಸೇನ್‌, ಎಂ.ಡಿ. ನಜೀಬುದ್ದಿನ್‌, ಶೇಕ್‌ ಮಸಿವುದ್ದಿನ್‌, ಸುಹೇಲ್‌ ಅಹಮ್ಮದ್‌, ಸೈಯದ್‌ ಉಮರ್‌ ಅಲಿ, ಝೀಶಾನ್‌ ಅಹಮ್ಮದ್‌, ಬಸವಪ್ರಭು ಹಾಗೂ ಪೀಟರ್‌ ಪೌಲ್‌ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷ ಮಾಣಿಕರಾವ್‌ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕಾರ್ಯದರ್ಶಿ ಮನೋಹರ ಕಾಶಿ, ನಿರ್ದೇಶಕರಾದ ಶಿವಶಂಕರ ಟೋಕರೆ, ಸೋಹೆಲ್‌, ಅನ್ಸರ್‌ ಬೇಗ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶಿವರಾಜ ಕಪಲಾಪುರೆ, ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್‌, ಸರ್ಕಾರಿ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೀಮರಾವ್‌
ಹಡಪದ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next