Advertisement

Udayavani Interview;ತುಳುನಾಡ ಸಂಸ್ಕೃತಿಯಿಂದ ಜ್ಞಾನ ವೃದ್ಧಿ: ನಿರ್ದೇಶಕ ನಾಗ್‌ ಅಶ್ವಿ‌ನ್‌

01:07 AM Aug 03, 2024 | Team Udayavani |

2001-2004ರ ಅವಧಿಯಲ್ಲಿ ಮಣಿಪಾಲದ ಎಂಐಸಿಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ಮಣಿಪಾಲದಲ್ಲಿ ಪತ್ರಿಕೋದ್ಯಮ ಓದಿದೆ. ಇಲ್ಲಿರುವಾಗ ಇಲ್ಲಿನ ದೇವಸ್ಥಾನ, ದೈವಾರಾಧನೆ, ಭೂತಾರಾಧನೆ ಇತ್ಯಾದಿಗಳನ್ನು ಅಷ್ಟು ಹತ್ತಿರದಿಂದ ಕಂಡಿರಲಿಲ್ಲ. ಆದರೆ ಶಿಕ್ಷಣ ಮುಗಿದ ಅನಂತರದಲ್ಲಿ ತುಳುನಾಡಿನ ಸಂಸ್ಕೃತಿ ನನ್ನ ಜ್ಞಾನ ಹೆಚ್ಚಿಸಲು ಸಹಕರಿಸಿದೆ. ಇದು ಇತ್ತೀಚೆಗೆ ತೆರೆಕಂಡು ಹೊಸ ದಾಖಲೆ ಸೃಷ್ಟಿಸಿರುವ ಕಲ್ಕಿ ಸಿನೆಮಾದ ನಿರ್ದೇಶಕ ನಾಗ್‌ ಅಶ್ವಿ‌ನ್‌ ಅವರು “ಉದಯವಾಣಿ’ ಜತೆಗೆ ಉಡುಪಿ, ಮಣಿಪಾಲ ಪರಿಸರ ಹಾಗೂ ಕಲ್ಕಿ ಸಿನೆಮಾದ ಬಗ್ಗೆ ಹಂಚಿಕೊಂಡಿದ್ದು. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.

Advertisement

ಕಲ್ಕಿ ಕಥೆಯ ಸಂಶೋಧನೆ ಹೇಗಿತ್ತು?
ಕಲ್ಕಿ ಕಥೆಗಾಗಿ ಎರಡು ಹಂತಗಳಲ್ಲಿ ಸಂಶೋಧನೆ ನಡೆಸಿದ್ದೇನೆ. ಚಿತ್ರಕಥೆ ಎರಡು ಟೈಮ್‌ಲೈನ್‌ಗಳಲ್ಲಿ ನಡೆಯುವುದರಿಂದ ಸಾವಿರಾರು ವರ್ಷಗಳ ಮುಂದೆ ಜನ ಜೀವನ ಪದ್ಧತಿ ಹೇಗಿರಬಹುದು ಎಂಬ ಕಲ್ಪನೆ ಇಲ್ಲಿ ಮುಖ್ಯವಾಗಿತ್ತು. ಉಳಿದಂತೆ ಮಹಾಭಾರತದ ಪ್ರಮುಖ ಪಾತ್ರಗಳ ಬಗ್ಗೆ ಓದಿ, ತಿಳಿದುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಕಲ್ಕಿ ಚಿತ್ರಕಥೆ ಸಿದ್ಧಪಡಿಸುವ ಹಂತದಲ್ಲಿ ಪ್ರತೀ ಪ್ರಕ್ರಿಯೆ ಸಾಹಸವಾಗಿತ್ತು.

ಮಹಾನಟಿ ಹಿಟ್‌ ಆದ ಬಳಿಕ ಏಕಾಏಕಿ ಬಿಗ್‌ ಬಜೆಟ್‌ ಸಿನೆಮಾ ಸಾಹಸ ಹೇಗೆ ಸಾಧ್ಯವಾಯಿತು?
ಮಹಾನಟಿ ಅಂದಿನ ಕಾಲದಲ್ಲಿ ಬಿಗ್‌ ಬಜೆಟ್‌ ಸಿನೆಮವಾಗಿಯೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿ, ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡಿತ್ತು. ಕಲ್ಕಿ ಚಿತ್ರಕಥೆ ಸಿದ್ಧಪಡಿಸುವ ಹಂತದಲ್ಲೂ ಸಾಕಷ್ಟು ಶ್ರಮ ವಹಿಸಬೇಕಾಯಿತು. ಅನಂತರ ದೊಡ್ಡ ನಟರ ಆಯ್ಕೆ ಎಲ್ಲವೂ ಸಾಹಸವಾಗಿತ್ತು.

ಸಿನೆಮಾ ಕಲಾವಿದರ ಆಯ್ಕೆ ಹೇಗಿತ್ತು?
ಅಶ್ವತ್ಥಾಮ ಪಾತ್ರಕ್ಕೆ ಅಮಿತಾಭ್‌ ಬಚ್ಚನ್‌ ಜತೆಗೆ ಪ್ರಭಾಸ್‌ ಮತ್ತು ಕಮಲ್‌ಹಾಸನ್‌ ಅವರ ಪಾತ್ರವೂ ನಿರ್ಣಾಯಕವಾಗಿತ್ತು. ನಿರ್ಮಾಪಕರ ಜತೆಗೆ ಚರ್ಚಿಸಿ ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಸಾವಿರಾರು ಮಂದಿಯ ಆಡಿಶನ್ಸ್‌ ನಡೆಸಿದ್ದೇವು.

ಕಲ್ಕಿಯ ಭಾಗ 2ರ ನಿರೀಕ್ಷೆಗಳೇನು?ಹೊಸ ಸಿನೆಮಾದ ಯೋಚನೆ?
ಇದೊಂದು ಸಾಕಷ್ಟು ಉದ್ದದ ದಾರಿಯಾಗಿದೆ. ಕಥೆ ಸಿದ್ಧವಿದ್ದು, ಇನ್ನಷ್ಟು ಸಂಶೋಧನೆ, ಯೋಜನೆಗಳು ರೂಪುಗೊಳ್ಳಬೇಕಿದ್ದು, ಈಗಲೇ ಎಲ್ಲವನ್ನು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ವಿಶ್ರಾಂತಿ ಬೇಕಿದೆ. ಸ್ವಲ್ಪ ಸಮಯ ಕಳೆದು ಅನಂತರ ಮುಂದಿನ ಸಿನೆಮಾದ ಯೋಚನೆ.

Advertisement

ನಿಮ್ಮ ಕಲ್ಪನೆಯಲ್ಲಿ ಅಶ್ವತ್ಥಾಮ ಕಲ್ಕಿಯ ರಕ್ಷಕನಾಗಿದ್ದು ಹೇಗೆ?
ಬಾಲ್ಯದಲ್ಲಿ ದೂರದರ್ಶನದಲ್ಲಿ ನೋಡುತ್ತಿದ್ದ ಮಹಾಭಾರತ ಧಾರಾವಾಹಿಯ ದೃಶ್ಯಗಳು ನನಗೆ ಮೂಲ ಪ್ರೇರಣೆಯಾಗಿವೆ. ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನ ಕೊನೆಯ ಕ್ಷಣಗಳು ನನಗೆ ಈ ರೀತಿಯ ಆಸಕ್ತಿಕರ ಯೋಚನೆ ಬರಲು ಕಾರಣ. ತುಂಬು ಗರ್ಭಿಣಿಯನ್ನು ಕೊಂದ ಅಪವಾದ ಇರುವ ಅಶ್ವತ್ಥಾಮನಿಗೆ ಮೋಕ್ಷಕ್ಕೆ ಇರುವ ಒಂದೇ ದಾರಿ ಎಂದರೆ ಗರ್ಭದಲ್ಲಿರುವ ಮಗು ಮತ್ತು ತಾಯಿಯ ರಕ್ಷಣೆ ಮಾಡುವುದು ಎಂಬ ಆಲೋಚನೆಯಲ್ಲಿ ನನ್ನ ಚಿತ್ರಕಥೆಯಲ್ಲಿ ಅಶ್ವತ್ಥಾಮನನ್ನು ರಕ್ಷಕನಾಗಿ ಕನೆಕ್ಟ್ ಮಾಡಲಾಯಿತು.

ಸಿನೆಮಾದಲ್ಲಿ ಭವಿಷ್ಯದ ದೃಷ್ಟಿಕೋನದಲ್ಲಿ ಕಾಶಿ ಯಾಕೆ ಆಯ್ಕೆ ಮಾಡಿಕೊಂಡಿರುವುದು?
ಕಾಶಿ ಜಗತ್ತಿನ ಪುರಾತನ ಪಟ್ಟಣ ಎಂಬ ಪ್ರತೀತಿ ಇದೆ. ಗಂಗಾ ನದಿಯ ತಟದಲ್ಲಿ ನಾಗರಿಕತೆ ಉದಯಿಸಿದೆ ಎಂಬ ಐತಿಹ್ಯವಿದ್ದು, ಭವಿಷ್ಯದಲ್ಲಿ ಜಗತ್ತಿನ ಎಲ್ಲ ಕಡೆಗಳಲ್ಲಿ ಕೆಟ್ಟ ದಿನಗಳು ಎದುರಾದರೂ ಕಾಶಿ ಪಟ್ಟಣ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಜೀವನದ ಮುಕ್ತಿ ಧಾಮವೂ ಕಾಶಿಯೇ ಆಗಿದೆ ಎಂಬುದು ಅನೇಕರ ನಂಬಿಕೆ. ಈ ನಿಟ್ಟಿನಲ್ಲಿ ಕಾಶಿ ನಗರವನ್ನು ಕೇಂದ್ರೀಕರಿಸಲಾಗಿದೆ.

ಕನ್ನಡಿಗರಿಂದ ಸ್ಪಂದನೆ ಹೇಗಿತ್ತು ?
ಕಲ್ಕಿ ಕನ್ನಡ ಡಬ್ಬಿಂಗ್‌ ಅವತರಣಿಕೆಯಲ್ಲಿ ಭಾಷೆಯ ಸಾಹಿತ್ಯ ಮತ್ತು ಸಂಭಾಷಣೆಗಳು ಯಾವುದೇ ಲೋಪ ಇಲ್ಲದಂತೆ ಮೂಡಿ ಬರುವ ಬಗ್ಗೆ ನಾನು ಕನ್ನಡ ಬರಹಗಾರರ ಜತೆಗೆ ಸಾಕಷ್ಟು ಬಾರಿ ಚರ್ಚಿಸಿದ್ದೇನೆ. ಕನ್ನಡದಲ್ಲಿ ಸಿನೆಮಾಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈಗ ಎಲ್ಲ ಸಿನೆಮಾಗಳು ಎಲ್ಲ ಭಾಷೆಗೂ ಡಬ್‌ ಆಗುತ್ತಿವೆ. ಹೀಗಾಗಿ ಯಾವುದೇ ಸಿನೆಮಾ ಒಂದು ಭಾಷೆಗೆ ಸೀಮಿತವಾಗಿಲ್ಲ.

ಮಣಿಪಾಲದಲ್ಲಿ ಶಿಕ್ಷಣದ ಜತೆಗೆ ಬೇರೆ ಏನೇನು ಕಂಡುಕೊಂಡಿರಿ?
ಶೈಕ್ಷಣಿಕ ಜೀವನದಲ್ಲಿ ಏನೇನು ಕಲಿಯ ಬೇಕೋ ಅದೆಲ್ಲವನ್ನೂ ಮಣಿಪಾಲದಲ್ಲಿ ಕಲಿತೆ. ಮಣಿಪಾಲ ಎಂಐಸಿ ನಿಜಕ್ಕೂ ಗ್ರೇಟ್‌ ಪ್ಲೇಸ್‌. ಜೀವನದಲ್ಲಿ ಆತ್ಮ ವಿಶ್ವಾಸ, ಜೀವನ ರೂಪಿಸುವ ಕೌಶಲ ಕಲಿತೆ.

ಮಣಿಪಾಲದಲ್ಲಿ ಇಷ್ಟದ ಸ್ಥಳ?
ಎಂಡ್‌ ಪಾಯಿಂಟ್‌. ವಾರಾಂತ್ಯ ಅಲ್ಲಿಗೆ ಹೋಗಿ ಹರಟೆ ಹೊಡೆಯುತ್ತಿದ್ದೆವು.

ಕಲ್ಕಿ ಸಿನೆಮಾದ ಹಿಂದೆ ಉಡುಪಿ ಶ್ರೀಕೃಷ್ಣನ ಪ್ರೇರಣೆ ಇದೆಯೇ?
ವಿದ್ಯಾರ್ಥಿಯಾಗಿದ್ದಾಗ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದೆ. ಆದರೆ ಈ ಬಾರಿ ಉಡುಪಿಗೆ ಆಗಮಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿದಾಗ ವಿಶಿಷ್ಟ ಸಕಾರಾತ್ಮಕ ಅನುಭವ ನನಗಾಯಿತು. ಭಗವಂತ ಶ್ರೀಕೃಷ್ಣ ಎಲ್ಲರಿಗೂ, ಎಂದಿಗೂ ಪ್ರೇರಣಾತ್ಮಕ ಶಕ್ತಿ.

ಯಕ್ಷಗಾನ, ಕೋಲ ಸಹಿತ ತುಳು ಸಂಸ್ಕೃತಿ ಹೇಗೆ ಪ್ರಭಾವ ಬೀರಿದೆ?
ಕರಾವಳಿ ಸುಂದರ ಸಂಸ್ಕೃತಿಯ ತಾಣ. ವಿದ್ಯಾರ್ಥಿ ಜೀವನದಲ್ಲಿ ಯಕ್ಷ ಗಾನ, ಭೂತಾರಾಧನೆ ತಿಳಿದು ಪುಳಕಗೊಂಡಿದ್ದೆ. ತುಳುನಾಡಿನ ಸಂಸ್ಕೃತಿಯಿಂದ ನನ್ನ ಜ್ಞಾನ ವೃದ್ಧಿಸಿದೆ. ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ “ಕಾಂತಾರ’ ಅತ್ಯಂತ ಸೊಗಸಾದ ಸಿನೆಮಾ.

ನಾಗ್‌ ಅಶ್ವಿ‌ನ್‌ ಹಿನ್ನೆಲೆ
38 ವರ್ಷ ಪ್ರಾಯದ ನಾಗ್‌ ಅಶ್ವಿ‌ನ್‌ ಅವರು ವೈದ್ಯ ಕುಟುಂಬದಲ್ಲಿ ಹುಟ್ಟಿದ್ದು, ರಾಣ ದಗ್ಗುಬಾಟಿಯ ಅವರ ಬಾಲ್ಯದ ಸ್ನೇಹಿತ. 2001-2004ರ ಅವಧಿಯಲ್ಲಿ ಮಣಿಪಾಲದ ಎಂಐಸಿಯಲ್ಲಿ ಜರ್ನಲಿಸಂ ಪದವಿ ಪಡೆದು, ನ್ಯೂಯಾರ್ಕ್‌ ಫಿಲ್ಮಂ ಅಕಾಡೆಮಿಯಲ್ಲಿ ಸಿನೆಮಾ ನಿರ್ದೇಶನದ ಕೋರ್ಸ್‌ ಪಡೆದಿದ್ದರು. ಅನಂತರ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಮಹಾನಟಿ, ಜಾತಿ ರತ್ನಾಲು ಸೂಪರ್‌ ಹಿಟ್‌ ಸಿನೆಮಾಗಳನ್ನು ನೀಡಿದ್ದರು. ಬೆಸ್ಟ್‌ ಡೆಬ್ಯೂ ಡೈರೆಕ್ಟರ್‌, ಬೆಸ್ಟ್‌ ಡೈರೆಕ್ಟರ್‌, ಬೆಸ್ಟ್‌ ಫೀಚರ್‌ ಫಿಲಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

-ರಾಜು ಖಾರ್ವಿ ಕೊಡೇರಿ/ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next