Advertisement

ಸಂಘದಿಂದ ಮಹಿಳೆಯರಿಗೆ ವಿಶೇಷ ಗೌರವ: ಪ್ರಭಾಕರ ಶೆಟ್ಟಿ

12:39 PM Aug 24, 2017 | Team Udayavani |

ಮುಂಬಯಿ: ಅರಸಿನ ಮತ್ತು ಕುಂಕುಮ ಸುಮಂಗಲೆಯರ ಸೌಭಾಗ್ಯದ ಸಂಕೇತವಾಗಿದೆ. ಶ್ರಾವಣ ಮಾಸದಲ್ಲಿ ಮಾತೆ ಶ್ರೀ ಮಹಾಲಕ್ಷ್ಮಿಯನ್ನು
ಭಕ್ತಿ, ಶ್ರದ್ಧೆಯಿಂದ ಪೂಜಿಸಿ ಆರಾಧಿಸುವುದರಿಂದ ಸುಮಂಗಲೆಯರ ಮನ-ಮನೆಯು ಐಶ್ವರ್ಯ, ಆರೋಗ್ಯದಿಂದ ತುಂಬಲೆಂದು ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಆ. 22ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ, ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಜರಗಿದ ಶ್ರಾವಣ ಸಂಭ್ರಮ-ಅರಸಿನ ಕುಂಕುಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಮಹಿಳಾ ವಿಭಾಗವೂ ಆರಂಭದಿಂದ ಇಂದಿನವರೆಗೂ ಪುರುಷರಷ್ಟೇ ಸಮಾನವಾದ ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಸಂಘವು ಮಹಿಳೆಯರಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿರುವ ಜೊತೆಗೆ ಗೌರವವನ್ನು ನೀಡುತ್ತಿದೆ ಎಂದರು.

ಸುಮಾರು 39 ವರ್ಷಗಳ ಇತಿಹಾಸ ಹೊಂದಿರುವ ಮಹಿಳಾ ವಿಭಾಗ, ಸಂಘದ ಅಧ್ಯಕ್ಷರಾಗಿದ್ದ ಎಂ. ಡಿ. ಶೆಟ್ಟಿ ಅವರ ಸಾರಥ್ಯದಲ್ಲಿ ಆರಂಭಗೊಂಡು ಡಾ| ಶಾರದಾ ಶೆಟ್ಟಿ ಕಾರ್ಯಾಧ್ಯಕ್ಷತೆಯಲ್ಲಿ ಮುಂದುವರಿದು, ಹಿರಿಯರಾದ ಡಾ| ಸುನೀತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ,
ಹಲವಾರು ದಕ್ಷ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಸಾಗಿ ಬಂದಿದೆ. ಸ್ವಂತ ಕಟ್ಟಡ, ಮಹಿಳಾ ವಸತಿ ಗೃಹ, ವೃದ್ಧಾಶ್ರಮ ಇವೆ ಮೊದಲಾದ ಸೌಕರ್ಯಗಳನ್ನು ಹೊಂದಿದೆ. ದಾನಿಗಳಾದ ಎಸ್‌. ಎಂ. ಶೆಟ್ಟಿ, ಸುಧೀರ್‌ ವಿ. ಶೆಟ್ಟಿ, ಪಾಂಡುರಂಗ ಶೆಟ್ಟಿ ಮೊದಲಾದವರ ಕೊಡುಗೆ ಅಪಾರವಾಗಿದೆ. ಇಂದು ಮುಖ್ಯ ಅತಿಥಿಗಳಾಗಿ ಆಗಮಿಸಿರುವ ದಾನಿಗಳಾದ ಗೀತಾ ಎಸ್‌. ಎಂ. ಶೆಟ್ಟಿ, ಲತಾ ಸುಧೀರ್‌ ಶೆಟ್ಟಿ, ವನಿತಾ ಪಾಂಡುರಂಗ ಶೆಟ್ಟಿ ಅವರ ಉಪಸ್ಥಿತಿಯಿಂದ ಸಮಾರಂಭಕ್ಕೆ ಇನ್ನಷ್ಟು ಕಳೆ ಹೆಚ್ಚಿದೆ ಎಂದು ಅವರು ಹೇಳಿದರು. 

ಮುಖ್ಯ ಅತಿಥಿಗಳಾದ ಗೀತಾ ಎಸ್‌. ಎಂ. ಶೆಟ್ಟಿ, ಲತಾ ಸುಧೀರ್‌ ಶೆಟ್ಟಿ, ವನಿತಾ ಪಾಂಡುರಂಗ ಶೆಟ್ಟಿ ಅವರು ಮಹಿಳಾ ವಿಭಾಗದ ಸೇವಾ ಕಾರ್ಯಗಳನ್ನು ಶ್ಲಾಘಿ ಸಿದರಲ್ಲದೆ, ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ, ಲತಾ ಪ್ರಭಾಕರ ಶೆಟ್ಟಿ ದಂಪತಿ, ಮುಖ್ಯ ಅತಿಥಿಗಳಾದ ಗೀತಾ ಎಸ್‌. ಎಂ. ಶೆಟ್ಟಿ ದಂಪತಿ, ಲತಾ ಸುಧೀರ್‌ ಶೆಟ್ಟಿ, ವನಿತಾ ಪಾಂಡುರಂಗ ಶೆಟ್ಟಿ ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

ಜತೆ ಕಾರ್ಯದರ್ಶಿ ಆಶಾ ಸುಧೀರ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಆಶಾ ಸಂತೋಷ್‌ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಶಾಂತಿ ದಿವಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭದಲ್ಲಿ ವಿಶಿಷ್ಟ ಸಾಧಕರಾದ ವಿಕಾಸ್‌ ಕಾಲೇಜು ಗೋರೆಗಾಂವ್‌ ಇದರ ಪ್ರಾಂಶುಪಾಲೆ ಡಾ| ವಿಜೇತಾ ಎಸ್‌. ಶೆಟ್ಟಿ, ಸಂಜೀವ ಶೆಟ್ಟಿ ದಂಪತಿ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಬಂಟರವಾಣಿಯ ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ಅವರನ್ನು ಗೌರವಿಸಲಾಯಿತು.

Advertisement

ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪ್ರಭಾಕರ ಭಂಡಾರಿ ಸಮ್ಮಾನಿತರನ್ನು ಪರಿಚಯಿಸಿದರು. ಸಮ್ಮಾನಕ್ಕೆ ಉತ್ತರಿಸಿದ ಡಾ| ವಿಜೇತಾ ಅವರು, ತನನ್ನು ಗುರುತಿಸಿ ಗೌರವಿಸಿದ ಬಂಟರ ಸಂಘ ಮಹಿಳಾ ವಿಭಾಗಕ್ಕೆ ಕೃತಜ್ಞತೆಗಳು. ಸುಮಾರು 25 ವರ್ಷಗಳ ಶಿಕ್ಷಕಿ ವೃತ್ತಿಯಲ್ಲಿ
ದೊರೆತ ಅನುಭವ, ಆತ್ಮ ಸಂತೃಪ್ತಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದರು.

ಮುಂದೆಯೂ ಸ್ಥಿರವಾಗಿರಲಿ
ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಬಂಟರ ಸಂಘದೊಂದಿಗಿನ ನನ್ನ ಸಂಬಂಧ ಸುಮಾರು 62 ವರ್ಷಗಳ ಸುದೀರ್ಘ‌ ಕಾಲದಿಂದ ಬೆಳೆದು ಬಂದಿದೆ. ಸಂಸ್ಥೆಯ ಮೇಲಿನ ಪ್ರೀತಿಯಿಂದ ಸೇವೆ ಮಾಡುತ್ತಾ ಬಂದಿರುವೆ. ಇದು ನನ್ನ ಕರ್ತವ್ಯವೂ ಹೌದು. ಸಂಘವು ಸಮಾಜದ
ಮಹಿಳೆಯರ ಬಗ್ಗೆ ವಿಶೇಷ ಗೌರವ ನೀಡುತ್ತಾ ಬಂದಿದೆ. ಅದು ಮುಂದೆಯೂ ಸ್ಥಿರವಾಗಿರಲೆಂದು ಆಶಿಸಿದರು. 

ಪ್ರಶಸ್ತಿ ಪ್ರದಾನ
ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ ಪ್ರಾಯೋಜಕತ್ವದಲ್ಲಿ ಪ್ರತೀ ವರ್ಷ ಅತ್ಯುತ್ಯಮ ವಿದ್ಯಾರ್ಥಿಗಳಿಗೆ ನೀಡುವ ರಾಧಾ ಡಿ. ಶೆಟ್ಟಿ ಪ್ರಶಸ್ತಿಯನ್ನು ಸಂಘದ ಉನ್ನತ ಶಿಕ್ಷಣ ಕಾಲೇಜಿನ ಮೂರನೇ ವರ್ಷದ ಬಿಎಂಎಂ ವಿದ್ಯಾರ್ಥಿನಿ ರಕ್ಷಾ ಶೆಟ್ಟಿ ಅವರಿಗೆ ವಿನೋದಾ
ಎಸ್‌. ಶೆಟ್ಟಿ ಅವರು ಪ್ರದಾನಿಸಿದರು. 

ಬಂಟರ ಸಂಘ ಪೊವಾಯಿ ಎಸ್‌. ಎಂ. ಶೆಟ್ಟಿ ಶಿಕ್ಷಣ ಸಮಿತಿಯ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ ಅವರು ಅತ್ಯುತ್ತಮ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರತೀ ವರ್ಷ ನೀಡುತ್ತಾ ಬಂದಿರುವ ಪ್ರಶಸ್ತಿಯನ್ನು ಈ ಬಾರಿ ಪೊವಾಯಿ ಎಸ್‌. ಎಂ. ಶೆಟ್ಟಿ ಕಾಲೇಜಿನ ಮೂರನೇ ವರ್ಷದ ಬಿಎಎಫ್‌ ವಿದ್ಯಾರ್ಥಿನಿ ಸುಜಯಾ ಶೆಟ್ಟಿ ಅವರಿಗೆ ಪ್ರದಾನಿಸಲಾಯಿತು.

ಭವಾನಿ ರಘುರಾಮ ಶೆಟ್ಟಿ ಪ್ರತೀ ವರ್ಷ ವಿಕಲ ಚೇತನ ಮಕ್ಕಳಿಗಾಗಿ ನೀಡುತ್ತಿರುವ ಭವಾನಿ ರಘುರಾಮ ಶೆಟ್ಟಿ ಪ್ರತಿಭಾನ್ವಿತ ಪ್ರಶಸ್ತಿಯನ್ನು ಈ ಬಾರಿ ವಿನೋದಾ ಎಸ್‌. ಶೆಟ್ಟಿ ಅವರಿಗೆ ಪ್ರದಾನಿಸಲಾಯಿತು. ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಲತಾ ಜಯರಾಮ ಶೆಟ್ಟಿ ಮತ್ತು ಜಯರಾಮ ಎನ್‌. ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.

ಸಂಘದ ಪದಾಧಿಕಾರಿಗಳು, ಯುವ ವಿಭಾಗ, ಸಂಘದ ವಿಶ್ವಸ್ತರು, ಮಾಜಿ ಅಧ್ಯಕ್ಷರು, ಮಹಿಳಾ ಮಾಜಿ ಕಾರ್ಯಾಧ್ಯಕ್ಷೆಯರು, ಸಂಚಾಲಕರು, ಸಂಘದ
ಉಪಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮನ್ವಯಕರು, ಕಾರ್ಯಾಧ್ಯಕ್ಷೆಯರು ವಿವಿಧ ಬಂಟ ಸಂಘಟನೆಗಳ ಪದಾಧಿಕಾರಿಗಳನ್ನು ಗೌರವಿಸಲಾಗುವುದು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಮಮತಾ ಎಂ. ಶೆಟ್ಟಿ ಗಣ್ಯರ ಯಾದಿಯನ್ನು ಓದಿದರು. ಅರಸಿನ ಕುಂಕುಮ ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ ಎಲ್ಲರನ್ನು ಗೌರವಿಸಲಾಯಿತು. ಜತೆ ಕಾರ್ಯದರ್ಶಿ ಜೊತೆ ಕಾರ್ಯದರ್ಶಿ ಆಶಾ ಸುಧೀರ್‌ ಶೆಟ್ಟಿ
ಅವರು ಪ್ರಾಯೋಜಕರ ಯಾದಿಯನ್ನು ಓದಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಕವಿತಾ ಐ. ಆರ್‌. ಶೆಟ್ಟಿ ಅವರು ಸಹಕರಿಸಿ ವಂದಿಸಿದರು.

ಸಂಘದ ಮಹಾಪ್ರಬಂಧಕ ಪ್ರವೀಣ್‌ ಶೆಟ್ಟಿ ವರಂಗ ಇವರ ಪರಿಕಲ್ಪನೆಯಲ್ಲಿ ಮೂಡಿಬಂದ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೇರಿಕಾ, ಕ್ಯಾಲಿಫೋರ್ನಿಯಾದಲ್ಲಿರುವ ಶಿವವಿಷ್ಣು ಮಂದಿರದ ವಿಶೇಷ ಚಿತ್ರಣದ ವೇದಿಕೆ ಎಲ್ಲರ ಗಮನ ಸೆಳೆಯಿತು. ಮಹಿಳಾ ವಿಭಾಗದ ಪ್ರಬಂಧಕಿ
ಜಯಶ್ರೀ ಪಿ. ಶೆಟ್ಟಿ ಸಹಕರಿಸಿದರು. ಉದ್ಯಮಿ ರಾಘು ಪಿ. ಶೆಟ್ಟಿ ಆಯೋಜನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. 

ಮಹಿಳಾ ವಿಭಾಗವು ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಶ್ರಾವಣ-ಸಂಭ್ರಮ, ಅರಸಿನ ಕುಂಕುಮ ಕಾರ್ಯಕ್ರಮವು ಮಹಿಳೆಯರಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಏಕತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪ್ರತಿಯೊಬ್ಬ ಮಹಿಳೆ ಲಕ್ಷ್ಮಿಯ ಸ್ವರೂಪಿಯಾಗಿದ್ದಾಳೆ. ಹೆಣ್ಣೇ ಸಂಸ್ಕೃತಿಯ ಮೂಲ. ಹೆಣ್ಣಾದವಳು ಜೀವನದಲ್ಲಿ ಸಂಸಾರದ ಕಣ್ಣಾಗಿರಬೇಕು. ಇಂದು ಮುಖ್ಯ ಅತಿಥಿಗಳಾಗಿ ಮೂವರು ಮಹಾದಾನಿಗಳು ಆಗಮಿಸಿರುವುದು ಮಹಿಳಾ ವಿಭಾಗದ ಬಹುದೊಡ್ಡ ಸೌಭಾಗ್ಯವಾಗಿದೆ. ಪಾಲ್ಗೊಂಡ ಎಲ್ಲ ಅತಿಥಿ-ಗಣ್ಯರುಗಳಿಗೆ, ಸಮಾಜ ಬಾಂಧವರಿಗೆ, ಮಹಿಳೆಯರಿಗೆ ಕೃತಜ್ಞತೆಗಳು 
ಲತಾ ಜಯರಾಮ ಶೆಟ್ಟಿ (ಕಾರ್ಯಾಧ್ಯಕ್ಷೆ : ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ).

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು
 

Advertisement

Udayavani is now on Telegram. Click here to join our channel and stay updated with the latest news.

Next