Advertisement

ಯೋಗ ಮತ್ತು ಪ್ರಕೃತಿ ಚಿಕಿತ್ಸೆ ; ಜೀವನ ಪದ್ಧತಿ ಕ್ರಮ ಇಂತಿರಲಿ

12:11 AM Jul 03, 2020 | Hari Prasad |

ಆರೋಗ್ಯವೆಂದರೆ ಕೇವಲ ರೋಗರಹಿತವಾಗಿರದೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆ – ಯೋಗದ ಪಾತ್ರ ಮಹತ್ವದ್ದು.

Advertisement

“ಪ್ರಕೃತ್ಯಾಧೀನ ಮಾರೋಗ್ಯಂ’ ಈ ಪದಕ್ಕೆ ಬಹಳ ಒಳ್ಳೆಯ ಅರ್ಥವಿದೆ ಹಾಗೂ ಪ್ರಕೃತಿ ಚಿಕಿತ್ಸೆಗೆ ಸಂಪೂರ್ಣವಾಗಿ ಹೋಲಿಕೆಯಾಗುವ ಮಾತು.

ಈ ಪದದ ತಾತ್ಪರ್ಯವೇನೆಂದರೆ ಪ್ರಕೃತಿ ಅಥವಾ ನಿಸರ್ಗದ ಅ ಧೀನದಲ್ಲಿ ಮಾನವನ ಆರೋಗ್ಯ ಅಡಕವಾಗಿದೆ. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿಯ ನಿಯಮಗಳನ್ನು ಪಾಲಿಸಬೇಕೆಂಬುದೇ ಇದರ ಅರ್ಥವಾಗಿದೆ.

ಆರೋಗ್ಯವಂತನಾದ ಮನುಷ್ಯನೇ ನಿಜವಾದ ಭಾಗ್ಯವಂತನು. ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲವೆಂಬುದು ಅಕ್ಷರಶಃ ಸತ್ಯ.

ಆರೋಗ್ಯವೆಂದರೆ ಕೇವಲ ರೋಗ ರಹಿತವಾಗಿರದೆ, ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಪಾತ್ರ ಅತಿ ಮಹತ್ವದ್ದಾಗಿದೆ.

Advertisement

ಪ್ರಕೃತಿ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿ ಮಾಡಿ, ದೇಹದ ರೋಗ ನಿರೋಧಕ ಶಕ್ತಿ, ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ವಿಸರ್ಜನಾಂಗಗಳನ್ನು ಉತ್ತೇಜನಗೊಳಿಸಿ ದೇಹದ ಕಶ್ಮಲಗಳನ್ನು ಹೊರ ಹಾಕಿ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ವೃದ್ಧಿಗೊಳಿಸುತ್ತದೆ.

ಇಂದಿನ ಕೋವಿಡ್ 19 ಮಹಾಮಾರಿಗೆ ಈ ದಿನದವರೆಗೂ ಯಾವುದೇ ಲಸಿಕೆಯನ್ನು ಕಂಡುಹಿಡಿದಿಲ್ಲ ಮತ್ತು ನಿರ್ದಿಷ್ಟವಾದ ಔಷಧ ನೀಡಲಾಗುತ್ತಿಲ್ಲವಾದರೂ ಬಹಳಷ್ಟು ಜನರು ಸೋಂಕಿನ ಸುಳಿಯಿಂದ ಗುಣಮುಖರಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ ಮತ್ತು ಸೋಂಕಿತರೊಂದಿಗೆ ಪ್ರಥಮ – ದ್ವಿತೀಯ ಸಂಪರ್ಕದಲ್ಲಿದ್ದರೂ ಕೆಲವರಲ್ಲಿ ನೆಗೆಟಿವ್‌ ಪರೀಕ್ಷಾ ಫಲಿತಾಂಶ ಬಂದಿರುವುದನ್ನು ಕಂಡಿದ್ದೇವೆ.

ಪ್ರಕೃತಿ ಚಿಕಿತ್ಸೆಯ ಸಿದ್ಧಾಂತದ ಪ್ರಕಾರ ಕಾಯಿಲೆಯ ಮೂಲ – ಕ್ರಿಮಿಗಳಲ್ಲ; ಕ್ರಿಮಿಗಳನ್ನು ಬೆಳೆಸತಕ್ಕಂತಹ ಕಶ್ಮಲಗಳು ದೇಹದಲ್ಲಿ ಸಂಗ್ರಹಣೆಗೊಂಡಾಗ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿ ದೇಹಕ್ಕೆ ಪ್ರವೇಶಿಸಿದ ಕ್ರಿಮಿಗಳ ಸಂಖ್ಯೆ ಯಥೇಚ್ಛವಾಗಿ ಬೆಳೆದು ಕಾಯಿಲೆಗೆ ಕಾರಣವಾಗುತ್ತವೆ.

ನಾವೆಲ್ಲರೂ ಪ್ರಾಕೃತಿಕ ಮತ್ತು ಸಂಪ್ರದಾಯಬದ್ಧ ಜೀವನಶೈಲಿ ಅಳವಡಿಸಿಕೊಳ್ಳುವುದರಿಂದ, ದೇಹದಲ್ಲಿನ ಕಶ್ಮಲಗಳನ್ನು ನಮ್ಮ ವಿಸರ್ಜನಾಂಗಗಳ ಮೂಲಕ ಶುಭ್ರಪಡಿಸಿಕೊಂಡು, ದೇಹದ ರೋಗನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರಿಂದ ಎಲ್ಲ ರೀತಿಯ ವೈರಾಣುಗಳು, ಬ್ಯಾಕ್ಟೀರಿಯಾ ಇತರೆ ರೋಗಕಾರಕ ಕ್ರಿಮಿಗಳಿಂದ ದೂರವಿರಲು ಸಾಧ್ಯವಾಗುತ್ತದೆಯಲ್ಲದೆ ಇಂತಹ ಕ್ರಿಮಿಗಳು ದೇಹ ಪ್ರವೇಶಿಸಿದರೂ ಆರೋಗ್ಯವನ್ನು ಸುಸ್ಥಿರದಲ್ಲಿಟ್ಟುಕೊಂಡು ಸರಿಪಡಿಸಿಕೊಳ್ಳಲು ನೆರವಾಗುತ್ತದೆ.

ಪಾಲಿಸಬೇಕಿರುವ ನಿಯಮಗಳು
ಶುಭ್ರತೆ:
ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸ್ವತ್ಛತೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವಿಕೆ, ಮಲ ವಿಸರ್ಜನೆ ಮತ್ತು ಸ್ನಾನದ ಅಭ್ಯಾಸವನ್ನು ರೂಢಿ ಮಾಡಿಕೊಳ್ಳುವುದು. ದಿನವಿಡೀ ಆಗಾಗ್ಗೆ ಕೈ-ಕಾಲು ಮತ್ತು ಮುಖವನ್ನು ಸಾಬೂನಿನಿಂದ ಶುಭ್ರಗೊಳಿಸುವುದು. ನಮ್ಮ ಹಿರಿಯರು ಆಗಿನ ಕಾಲದಲ್ಲಿ ಯಾರಾದರೂ ಮನೆಗೆ ಬಂದರೆ ಮೊದಲು ನೀರನ್ನು ಕೊಟ್ಟು ಕೈ-ಕಾಲುಗಳನ್ನು ಶುಭ್ರಗೊಳಿಸಿಕೊಳ್ಳಲು ತಿಳಿಸಿ, ನಂತರ ಮನೆಯೊಳಗೆ ಬರಮಾಡಿಕೊಂಡು ಕುಡಿಯಲು ನೀರು ಕೊಡುತ್ತಿದ್ದರು.

ನೋಡಿ ಎಷ್ಟು ಒಳ್ಳೆಯ ಪದ್ಧತಿ. ಮನೆಯನ್ನು ದೇವಸ್ಥಾನ ರೀತಿಯಲ್ಲಿ ಕಾಣುವುದು ಅಂದರೆ ಮನೆಯಿಂದ ಹೊರಗೆ ಹೋಗಿ ಮತ್ತೆ ಮನೆಯನ್ನು ಪ್ರವೇಶಿಸಬೇಕೆಂದಾಗಲೆಲ್ಲ ಮನೆಯ ಹೊರಗಡೆ ಕೈ – ಕಾಲು ಮುಖ ಶುಭ್ರಗೊಳಿಸಿಕೊಂಡು ಮನೆ ಪ್ರವೇಶಿಸುವುದು. ಮನೆಯ ಒಳಭಾಗ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಯಾವುದೇ ವ್ಯಕ್ತಿಯು ನಿಮ್ಮ ಮನೆಯನ್ನು ಪ್ರವೇಶಿಸಬೇಕೆಂದರೆ ಕೈಕಾಲು ಮುಖವನ್ನು ಶುಭ್ರಗೊಳಿಸಿಕೊಂಡೇ ಒಳ ಬರುವಂತೆ ನೋಡಿಕೊಳ್ಳುವುದು.

ಆಹಾರ: ಇಡೀ ಪ್ರಪಂಚದಲ್ಲಿಯೇ ಭಾರತದ ಆಹಾರ ಪದ್ಧತಿ, ಆರೋಗ್ಯ ತತ್ವಶಾಸ್ತ್ರವು ಉನ್ನತವಾದ ಸ್ಥಾನದಲ್ಲಿದೆ. ಆದರೆ ನಾವು ಜಾಗತೀಕರಣದ ಹೆಸರಿನಲ್ಲಿ ನಮ್ಮ ಸ್ವಂತ ಆರೋಗ್ಯಭರಿತ ಆಹಾರವನ್ನು ಬಿಟ್ಟು ವಿದೇಶಗಳಿಂದ ‘ಜಂಕ್‌ ಫುಡ್‌’ಎಂದು ತಿರಸ್ಕೃತಗೊಂಡ ಆಹಾರವನ್ನು ಮಾಡರ್ನ್ ಅಥವಾ ಫ್ಯಾಶನ್‌ನ ಹೆಸರಿನಲ್ಲಿ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದೇವೆ. ಇದರ ಜತೆಯಲ್ಲಿ ಪಾರ್ಟಿಗಳು ಎಂಬ ಹೆಸರಿನಲ್ಲಿ ಚೈನೀಸ್‌ ಫುಡ್‌, ಫಾಸ್ಟ್‌ಪುಡ್‌, ಕೂಲ್‌ ಡ್ರಿಂಕ್ಸ್‌, ಪಿಜ್ಜಾ, ಬರ್ಗರ್‌ ಮುಂತಾದವುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ, ದೇಹದಲ್ಲಿ ವಿಷ ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಿದ್ದೇವೆ.

ನಾವು ನಮ್ಮ ಆರೋಗ್ಯವನ್ನು, ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು, ನಮ್ಮ ಪೂರ್ವಜರಂತೆ ನಮ್ಮ ದೇಹವನ್ನು ಆರೋಗ್ಯವಂತ ದೇಹವನ್ನಾಗಿಸಲು ನಮ್ಮ ಹಳೆಯ ಆಹಾರ ಪದ್ಧತಿಗಳಿಗೆ ಮರಳುವುದು ಅತ್ಯಗತ್ಯ. ನಮ್ಮ ಹಿರಿಯರು ರೂಪಿಸಿದ್ದ ಆರೋಗ್ಯ ಸೂತ್ರಗಳು ಯುಕ್ತಪೂರ್ಣವಾಗಿದ್ದಲ್ಲದೇ ನೈಸರ್ಗಿಕವಾಗಿದ್ದವು  ಎಂಬುದು ಗಮನಾರ್ಹ.

ದಿನಕ್ಕೆ 2 ರಿಂದ 3 ಲೀಟರ್‌ನಷ್ಟು ನೀರನ್ನು ಕುಡಿಯುವುದು. ನಾವು ಮನೆಯಲ್ಲಿಯೇ, ಆಗಿಂದಾಗ್ಗೆ ತಯಾರಿಸಿದ ಆಹಾರ ಸೇವಿಸುವುದು. ಸಸ್ಯಾಹಾರವನ್ನೇ ಸೇವನೆ ಮಾಡುವುದು. ವಿಟಮಿನ್‌ ಸಿ ಅಧಿಕವಿರುವ ಹಣ್ಣುಗಳು ಅಂದರೆ ಸ್ಥಾನಿಕವಾಗಿ ಈಗಿನ ಋತುವಿನಲ್ಲಿ ಬೆಳೆಯುವ (ಸೀಸನಲ್‌ ಹಣ್ಣುಗಳನ್ನು) ಊಟಕ್ಕೆ ಮುಂಚೆ ಅಗತ್ಯ ಪ್ರಮಾಣದಲ್ಲಿ ಸೇವಿಸುವುದು.ಊಟದಲ್ಲಿ ಹೆಚ್ಚು ತರಕಾರಿ ಮತ್ತು ಸೊಪ್ಪು ಸೇವನೆ ಮಾಡುವುದು.

ಹಸಿವಾದಾಗ ಮಾತ್ರ ಆಹಾರದ ಸೇವನೆ; ಹಿತ-ಮಿತಕರವಾದ ಆಹಾರ. ಜೀವನ ಪದ್ಧತಿ ಕ್ರಮ ಇಂತಿರಲಿ:

ನಾವು ಪ್ರಾಣಿಗಳನ್ನು ವಿಭಜಿಸುವಾಗ ದಿನಚರಿ ಹಾಗೂ ನಿಶಾಚರಿಗಳೆಂದು ಭಾಗಿಸುತ್ತೇವೆ. ಮನುಷ್ಯನು ಈ ಯಾವ ವಿಭಜನೆಗೆ ಸೇರುತ್ತಾನೆ? ಆಲೋಚಿಸಿ. ದಿನಚರಿಯೆಂದರೆ ಸೂರ್ಯನ ಉದಯದಿಂದ ಸೂರ್ಯಾಸ್ತದವರೆಗೆ ಹಾಗೂ ನಿಶಾಚರಿಗಳೆಂದರೆ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ.

ಹಳೆಯ ಕಾಲದಲ್ಲಿ ಭಾರತದಲ್ಲಿ ಜನರು ಹೆಚ್ಚಾಗಿ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಅವರು ಸೂರ್ಯೋದಯಕ್ಕೆ ಮುಂಚೆ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಸೂರ್ಯೋದಯ ನಂತರ ಆಯಾ ಸ್ಥಾನಿಕ ಆಹಾರವನ್ನು ಸ್ವಲ್ಪಮಟ್ಟಿಗೆ ತೆಗೆದುಕೊಂಡು ಕೆಲಸಕ್ಕೆ ಹೋಗುತ್ತಿದ್ದರು.

ಮಧ್ಯಾಹ್ನಕ್ಕೆ ಊಟ, ಸಂಜೆ ಸೂರ್ಯಾಸ್ತಕ್ಕೂ ಮುಂಚೆ ಊಟ ಮುಗಿಸಿ ರಾತ್ರಿ ನಿದ್ರಿಸುತ್ತಿದ್ದರು. ಇದು ಅವರ ಆರೋಗ್ಯದ ರಹಸ್ಯವಾಗಿತ್ತು. ಬೆಳಿಗ್ಗೆ 5:30 ಉದಯಪಾನಂ- 2 ರಿಂದ 4 ಲೋಟ ಕಾದಾರಿದ ನೀರಿನ ಸೇವನೆ ಬೆಳಿಗ್ಗೆ 6 ರಿಂದ 7 ಯೋಗಾಭ್ಯಾಸ (ಕ್ರಿಯಾ, ಆಸನ, ಪ್ರಾಣಾಯಾಮ, ಧ್ಯಾನ) ಬೆಳಿಗ್ಗೆ 7.30 ಕಷಾಯ/ ನಿಂಬೆರಸ + ಜೇನುತುಪ್ಪ/ ತಾಜಾ ತರಕಾರಿಯ ರಸ/ ಮೆಂತೆ ನೆನೆಸಿದ ನೀರು ಬೆಳಿಗ್ಗೆ 8.30 ಉಪಹಾರ (ಗಂಜಿ/ಹಣ್ಣುಗಳು/ ಮೊಳಕೆಕಾಳುಗಳು/ಮನೆಯಲ್ಲಿ ತಯಾರಿಸಿದ ತಿಂಡಿ) ಬೆಳಿಗ್ಗೆ 10.30 ಕ್ಯಾರೆಟ್‌/ ಸೌತೆಕಾಯಿ/ಕಿತ್ತಳೆ/ದ್ರಾಕ್ಷಿ/ಪಪ್ಪಾಯ/ದಾಳಿಂಬೆ/ಸೇಬು ಮಧ್ಯಾಹ್ನ 1.00, 1 ಬೌಲ್‌ ಹಣ್ಣುಗಳು + 1 ಬೌಲ್‌ ಹಸಿ ತರಕಾರಿಗಳು (ಕೋಸಂಬರಿ) + ಅನ್ನ/ರೊಟ್ಟಿ/ಚಪಾತಿ +ಬೇಯಿಸಿದ ತರಕಾರಿಗಳು+ಸೂಪ್‌ /ಮಜ್ಜಿಗೆ

ಸಂಜೆ 4.30 ಕಷಾಯ/ ಹರ್ಬಲ್‌ ಟೀ ಸಂಜೆ 4.45 ರಿಂದ 5.15 ಪ್ರಾಣಾಯಾಮ + ಪ್ರಾರ್ಥನೆ + ಧ್ಯಾನ ಸಂಜೆ 7.00 1 ಬೌಲ್‌ ಹಣ್ಣುಗಳು + 1 ಬೌಲ್‌ ಹಸಿ ತರಕಾರಿಗಳು (ಕೋಸಂಬರಿ) + ರೊಟ್ಟಿ/ ಚಪಾತಿ + ಬೇಯಿಸಿದ ತರಕಾರಿಗಳು + ಸೂಪ್‌ ರಾತ್ರಿ 9.00 ಗೋಲ್ಡನ್‌ ಮಿಲ್ಕ್ (ಹಾಲು + ಅರಿಶಿನ + ಬೆಲ್ಲ).

ಯೋಗಾಭ್ಯಾಸ
ನಿತ್ಯ ಆಸನಾಭ್ಯಾಸವು ಮನುಷ್ಯನ ಸಮಗ್ರ ವ್ಯಕ್ತಿತ್ವವನ್ನು ವಿಕಸನ ಮಾಡುತ್ತದೆ. ಇದು ದೇಹದಲ್ಲಿಯ ಸುಪ್ತ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ದೇಹದ ಸ್ನಾಯುಗಳು, ರಕ್ತ ಪರಿಚಲನೆ, ನರಮಂಡಲಗಳು, ಚೋದನೀಯ ಹಾಗೂ ನಿರ್ನಾಳ ಗ್ರಂಥಿಗಳು ಇತರ ಎಲ್ಲಾ ಅವಯವಗಳು ಸಮಪ್ರಮಾಣದಲ್ಲಿ ಬಲಗೊಳ್ಳುತ್ತವೆ.

ಪ್ರತೀ ದಿನ ಕನಿಷ್ಟ 4 ಬಾರಿ ಸೂರ್ಯ ನಮಸ್ಕಾರ, ಆಸನಗಳು (ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸನ, ಮತ್ಸ್ಯಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಅರ್ಧಮತ್ಸ್ಯೇಂದ್ರಾಸನ, ಶಶಾಂಕಾಸನ, ಶವಾಸನ), ಪ್ರಾಣಾಯಾಮ (ಭಸ್ತ್ರಿಕಾ, ಉಜ್ಜಯಿ, ನಾಡಿಶೋಧನ, ಭ್ರಾಮರಿ 9 ಸುತ್ತುಗಳು) ಮತ್ತು ಧ್ಯಾನದ ಅಭ್ಯಾಸವನ್ನು 1 ಗಂಟೆಯ ಮಟ್ಟಕ್ಕಾದರೂ ಮಾಡುವುದು. ಇದು ನಮ್ಮ ಮಾನಸಿಕ ಒತ್ತಡವನ್ನು ದೂರ ಮಾಡಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿಡಲು ಸಹಕರಿಸುತ್ತದೆ.

ಕ್ರಿಯೆಗಳಾದ ಜಲನೇತಿ, ಸೂತ್ರನೇತಿ, ಕಪಾಲಭಾತಿಗಳ ಅಭ್ಯಾಸವು ದೇಹದ ಹೆಚ್ಚಿನ ಶ್ಲೇಷವನ್ನು ಹೊರ ಹಾಕಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತವೆಯಲ್ಲದೆ, ಸೋಂಕಿನ ಲಕ್ಷಣಗಳನ್ನು ನಿವಾರಿಸಲು ಸಹಕರಿಸುತ್ತವೆ.

ಇತರೆ ನಿಯಮಗಳು

– ದುಶ್ಚಟಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಇವುಗಳಿಂದ ದೂರವಿರುವುದು.

– ಕೈ ಕುಲುಕುವ ಸಂಪ್ರದಾಯ ಮರೆತು, ನಮಸ್ತೇ ಸಂಪ್ರದಾಯ ಅಳವಡಿಸಿಕೊಳ್ಳುವುದು.

– ಸೀನುವಾಗ, ಕೆಮ್ಮುವಾಗ ಅಗತ್ಯವಾಗಿ ಶುಭ್ರ ಕರವಸ್ತ್ರದಿಂದ ಮೂಗು-ಬಾಯಿಯನ್ನು ಮುಚ್ಚಿಕೊಳ್ಳುವುದು.

– ಸಾಮಾಜಿಕ ಅಂತರವನ್ನು ಅಗತ್ಯವಾಗಿ ಕಾಯ್ದುಕೊಳ್ಳುವುದು.

– ಹೊರಗಿನಿಂದ ತಂದ ತರಕಾರಿ, ಸೊಪ್ಪು, ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಚೆನ್ನಾಗಿ ತೊಳೆದ ನಂತರ ಅಡುಗೆಗೆ ಬಳಸುವುದು.

– ಇನ್ಮುಂದೆ ಕನಿಷ್ಟ 6 ತಿಂಗಳು ಅಥವಾ ಒಂದು ವರ್ಷದವರೆಗಾದರೂ ಮನೆಯಿಂದ ಹೊರ ಹೋಗುವಾಗ, ಸಭೆ- ಸಮಾರಂಭಗಳಿಗೆ ಭಾಗಿಯಾಗುವಾಗ, ಜನ ನಿಬಿಡ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು.

ಕಷಾಯಗಳ ಸೇವನೆ
ದಿನಕ್ಕೊಮ್ಮೆಯಾದರೂ ರೋಗನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿಡಲು ಅಥವಾ ಹೆಚ್ಚಿಸಲು ಸಹಕಾರಿಯಾದ ಕಷಾಯಗಳ ಸೇವನೆಯನ್ನು ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾಡುವುದು. ಅರಿಶಿನ, ಕರಿಮೆಣಸು, ತುಳಸಿ, ದಾಲಿcನ್ನಿ, ಶುಂಠಿ, ಬೆಳ್ಳುಳ್ಳಿಯಲ್ಲಿ ಯಾವುದಾದರೊಂದು ಅಥವಾ ಎರಡನ್ನು ಸೇರಿಸಿ ಕಷಾಯವನ್ನು ತಯಾರಿಸಿ ಸೇವಿಸುವುದು ಶೀತಭಾದೆಯಿಂದ ನಮ್ಮನ್ನು ದೂರವಿರಿಸುತ್ತದೆ.


– ಡಾ| ಗಂಗಾಧರ ವರ್ಮ ಬಿ.ಆರ್‌, ಖ್ಯಾತ ಪ್ರಕೃತಿ ಚಿಕಿತ್ಸಾ ತಜ್ಞರು, ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next