Advertisement

ಅಮ್ಮನ ಹಿತ್ತಲಿನಲ್ಲಿ ಕಾಡು ತೋಟದ ಪಾಠ

09:22 AM May 14, 2019 | Hari Prasad |

ಮನೆ ಹಿಂಭಾಗದ ಪುಟ್ಟ ಜಾಗದಲ್ಲಿ ಸಸ್ಯ ಸಮ್ಮೇಳನ ನಡೆಸುವ ಅಮ್ಮಂದಿರು ಮಲೆನಾಡು ಕರಾವಳಿಗಳಲ್ಲಿ ಸಿಗುತ್ತಾರೆ. ಹಣ್ಣು, ಹೂವು, ಔಷಧ, ಅಡುಗೆ, ಅಲಂಕಾರ ಹೀಗೆ ವಿವಿಧ ಉಪಯುಕ್ತ ಗಿಡ ಬೆಳೆಸುತ್ತ ಅಕ್ಕರೆಯ ಸಸ್ಯಾವರಣ ಕಟ್ಟುತ್ತಾರೆ. ಗಿಡ ಸಂಗ್ರಹಿಸುವ, ಬೆಳೆಸುವ, ಆರೈಕೆ ಮಾಡುವ ಇವರ ಕ್ರಿಯಾಶೀಲತೆಯನ್ನು ಕಾಡು ತೋಟ ಕಟ್ಟುವವರೂ ಕಲಿಯಬೇಕಿದೆ.

Advertisement

ಮಳೆಗಾಲದ ಶುರುವಿನಲ್ಲಿ ಮಲೆನಾಡು, ಕರಾವಳಿಯ ಬಸ್‌ಗಳನ್ನು ಗಮನಿಸಬೇಕು. ಮಲ್ಲಿಗೆ, ಸೇವಂತಿಗೆ, ಡೇರೆ, ನಾಗದಾಳಿ, ದಾಸವಾಳ, ಕನಕಾಂಬರ, ಗುಲಾಬಿ ಸಸ್ಯಗಳ ಟಿಸಿಲು ಹಿಡಿದು ಮಹಿಳೆಯರು ಪಯಣಿಸುತ್ತಾರೆ. ಸಂಬಂಧಿಕರು, ಪರಿಚಯಸ್ಥರ ಮನೆಗಳಿಗೆ ಹೋದವರು ಮರಳುವಾಗ ಹೊಸ ಹೊಸ ಸಸ್ಯ ಹುಡುಕಿ ತರುತ್ತಾರೆ.

ಹಿತ್ತಲಲ್ಲಿ ಬೆಳೆಸುವ ಉತ್ಸಾಹ ಮಳೆ ಸಂಭ್ರಮದ ಸಾಕ್ಷಿಯಾಗಿದೆ. ಗುಂಟೆ, ಅರ್ಧಗುಂಟೆಯ ಚಿಕ್ಕ ಜಾಗದಲ್ಲಿ ಹೆಜ್ಜೆಯಿಡಲೂ ಸ್ಥಳವಿಲ್ಲ. ಇಲ್ಲಿ ಹಲವು ವರ್ಷಗಳಿಂದ ಒಂದಾದ ನಂತರ ಒಂದು ಸಸ್ಯ ನೆಡುತ್ತ ಅಮ್ಮಂದಿರ ಪುಟ್ಟಕಾಡು ಮೇಳೈಸುತ್ತದೆ. ಮಾವು, ತೆಂಗು, ಚಿಕ್ಕು, ಬಾಳೆ, ಬೇವು, ನೆಲ್ಲಿ, ಸೀತಾಫ‌ಲ, ಜಾಯಿಕಾಯಿ, ದಾಲ್ಚಿನ್ನಿ, ಬಿಂಬಳೆ, ಕಂಚಿ ಮುಂತಾದ ವೃಕ್ಷಗಳ ನೆರಳಲ್ಲಿ ಕೈತೋಟ ಕೌಶಲ ಕಾಣಿಸುತ್ತದೆ.

ಮರಗಳ ನೆರಳಿನಲ್ಲಿ, ಬೇಲಿ ಸಂಧುಗಳಲ್ಲಿ, ಕಾಲುವೆ ಅಂಚಿನಲ್ಲಿ, ಸ್ನಾನದ ನೀರು ಹರಿಯುವ ಜಾಗ ಹುಡುಕಿ ಹುಡುಕಿ ಸ್ಥಳ ಯೋಗ್ಯ ಸಸಿ ನೆಡುತ್ತಾರೆ. ಮನಸ್ಸಿನಲ್ಲಿ ಜಾಗವಿದ್ದರೆ ಭೂಮಿಯಲ್ಲಿ ಸಸಿ ನೆಡಲು ಜಾಗ ಕಾಣುತ್ತದೆಂದು ಇವರನ್ನು ನೋಡಿ ಹೇಳಬಹುದು.

ಕೊಟ್ಟು ಪಡೆಯುವುದು
ಹಿತ್ತಲೆಂಬ ಅಮ್ಮಂದಿರ ಖಾಸಾ ಹಸಿರು ಸಾಮ್ರಾಜ್ಯದಲ್ಲಿ ಗಂಡಸರ ಪ್ರವೇಶ ಬಹಳ ಕಡಿಮೆ. ಅಡುಗೆ, ಔಷಧ, ಪೂಜೆ, ಅಲಂಕಾರ ಬಳಕೆಗೆ ಅಗತ್ಯ ಸಸ್ಯಗಳೆಲ್ಲ ಇಲ್ಲಿ ಜಮಾಗೊಂಡಿರುತ್ತವೆ. ವರ್ಷಕ್ಕೆ ಒಮ್ಮೆ ಒಂದು ದಿನ ಹೂವರಳಿಸುವ ಸಸ್ಯಗಳಿಂದ ಹಿಡಿದು ವರ್ಷವಿಡೀ ಹೂ ನೀಡುವ ದಾಸವಾಳ ಸಸ್ಯಗಳಿಗೂ ಮನ್ನಣೆಯಿದೆ.

Advertisement

ಬಳ್ಳಿ, ಪೊದೆ, ಹುಲ್ಲು, ಮರ, ಗಡ್ಡೆ ಹೀಗೆ ಎಲ್ಲವೂ ಸ್ಥಾನ ಪಡೆಯುತ್ತವೆ. ಅಡುಗೆ ಕೆಲಸ, ದೊಡ್ಡಿಯಲ್ಲಿ ಹಸುಗಳ ಆರೈಕೆ, ತೋಟದ ಕೆಲಸ, ಮಕ್ಕಳ ಆರೈಕೆ, ಪೂಜೆ, ಹಾಡುಹಸೆ ಮುಂತಾದ ನಿರಂತರ ಚಟುವಟಿಕೆಗಳ ಮಧ್ಯೆ ಹತ್ತು ನಿಮಿಷ ಬಿಡುವು ಸಿಕ್ಕರೆ ಹಿತ್ತಲಲ್ಲಿ ದುಡಿಯುತ್ತ ಮೈಮರೆಯುತ್ತಾರೆ. ಗೆಳತಿ, ಸಂಬಂಧಿಕರು, ಪರಿಚಯಸ್ಥರು, ತವರು ಮನೆಯವರ ಜೊತೆಗೆ ಅಕ್ಕರೆಯ ಗಿಡ ಗೆಳೆತನ ಬೆಳೆಸಿಕೊಂಡು, ಸಸ್ಯ ಸಂಪಾದಿಸಿ ನಾಜೂಕಿನಲ್ಲಿ ಬೆಳೆಸುತ್ತಾರೆ.

ಸಂಬಂಧಿಕರ, ಸ್ನೇಹಿತೆಯರ ಒಡನಾಟದಲ್ಲಿ ಹಿತ್ತಲ ಸಾಮ್ರಾಜ್ಯ ನಿರ್ಮಿಸಿದ ಅಮ್ಮ ಹಣ ತೆತ್ತು ಸಸಿ ತಂದಿದ್ದು ಕಡಿಮೆ. ಮಲ್ಲಿಗೆ ಗಿಡ ಕೊಟ್ಟು ತೊಂಡೆಯ ದಂಟು ಪಡೆಯುತ್ತಾಳೆ. ಕನಕಾಂಬರದ ಟಿಸಿಲು ಒಯ್ದವಳಿಂದ ಡೇರಾ ಗಡ್ಡೆಯನ್ನು ಕೇಳುತ್ತಾಳೆ. ಸಸಿ ವಿನಿಮಯದ ಜಾಣ್ಮೆಯಲ್ಲಿ ಖುಷಿಯ ಕೈತೋಟ ಜನಿಸಿದೆ.

ಗಿಡಗಳ ಸಂಗಡ ಮಾತಾಡುವ ತನ್ಮಯತೆ ಇವರಲ್ಲಿದೆ. ಒಣಗುವ, ಸೊರಗುವ, ಕೊರಗುವ, ಸೊಕ್ಕಿ ಬೆಳೆಯುವ ಸಸ್ಯ ಸ್ವಭಾವಗಳನ್ನು ಗುರುತಿಸಿ ತೋಟಕ್ಕೆ ತಕ್ಕಂತೆ ಒಗ್ಗಿಸುವ ಕಲೆ ಕರಗತವಾಗಿದೆ.

ನವರಾತ್ರಿಗೆ ಹೂವರಳಿಸುವ ಸೇವಂತಿಗೆ ಕಂದುಗಳನ್ನು ಕಡು ಬೇಸಿಗೆಯಲ್ಲಿ ಸ್ಥಳ ಬದಲಿಸಿ ಹಲಸಿನ ಮರದ ನೆರಳಲ್ಲಿ ಜೋಪಾನವಾಗಿ ಪೋಷಿಸುವ ಕಾಳಜಿಯಲ್ಲಿ, ಮಳೆಗೆ ಅರಳುವ ಡೇರೆ ಗಡ್ಡೆ ನೆಲದಿಂದ ಕಿತ್ತು ಸಂರಕ್ಷಿಸುವ ತಂತ್ರಗಳಲ್ಲಿ , ಶ್ರಾವಣಕ್ಕೊಮ್ಮೆ ಹೂ ಹಬ್ಬ ಮೂಡಿಸುವ ಸೂಜಿ ಮಲ್ಲಿಗೆಗೆ ಬೇಸಿಗೆಯಲ್ಲಿ ನೀರೆರೆಯುತ್ತ ಜತನದಲ್ಲಿ ಸಂರಕ್ಷಿ$ಸುವ ನೋಟಗಳಲ್ಲಿ ಕ್ರಿಯಾಶೀಲತೆ ನೋಡಬಹುದು.

ಶಕ್ತಿ ತುಂಬುವ ಮಾಯೆ
ಕಷ್ಟಪಟ್ಟು ಸಸಿ ತಂದು ಬೇಸಿಗೆಯಲ್ಲಿ ರಕ್ಷಿಸಿದರೆ, ಅವು ಚಿಗುರಿ ಬೆಳೆಯುವಾಗ ಹೆಗ್ಗಣಗಳು ಕಿತ್ತೆಸೆಯುತ್ತವೆ. ಕೀಟಗಳು ಕಾಡುತ್ತವೆ. ಹಕ್ಕಿಗಳು ಹೂ ಕಿತ್ತೂಯ್ಯುತ್ತವೆ, ಇದ್ದಕ್ಕಿದ್ದಂತೆ ಪ್ರೀತಿಯ ಸಸ್ಯ ಸಾವನ್ನಪ್ಪಿದ ನೋವು ಕಾಡುತ್ತವೆ. ಹೂ, ಫ‌ಲ ದೊರೆಯುವ ಸಂತಸದ ಮಧ್ಯೆ ದಾಳಿಯಿಕ್ಕುವ ಸಂಕಟಗಳಲ್ಲಿ ದುಃಖ ಸಹಿಸುವ ಸವಾಲಿದೆ.

ಕಂಪೌಂಡ್‌ ಗೋಡೆಯ ಕಲಾಕೃತಿ, ಜಗುಲಿಯ ಬಣ್ಣ ಥಟ್ಟನೆ ಕಾಣಿಸುತ್ತದೆ. ಯಾರೂ ಕಾಲಿಡದ ಮನೆ ಹಿಂಬದಿಯ ಮೂಲೆಯಲ್ಲಿ ಹಿತ್ತಲಿದೆ. ಇಲ್ಲಿನ ಹೂ ಗಿಡಗಳ ನೋಟದಿಂದ ಅಮ್ಮನ ಬೆಳಗು ಶುರುವಾಗುತ್ತದೆ. ತವರಿನ ಪ್ರೀತಿ, ಗೆಳತಿಯ ನೀತಿಗಳೆಲ್ಲ ಗಿಡಗಳ ಜೊತೆ ನೆನಪು ಹಂಚುತ್ತವೆ. ಗಂಡನ ಬೈಯ್ಗುಳ, ನಾದಿನಿಯ ಚುಚ್ಚು ನುಡಿ, ಮಕ್ಕಳ ಸಂಕಟ, ಹಿರಿಯರ ಅಗಲಿಕೆ, ದೈಹಿಕ ನೋವು, ಮಾನಸಿಕ ಕಾಯಿಲೆ ಮುಂತಾಗಿ ನೂರೊಂದು ಅನುಭವಗಳನ್ನು ಹಿತ್ತಲ ಗಿಡಗಳು ಅಮ್ಮಂದಿರ ಮೂಲಕ ಆಲಿಸುತ್ತ ಸಾಂತ್ವನ ನೀಡುತ್ತವೆ.

ದುಃಖಕ್ಕೆ ಓಡಿ ಹಿತ್ತಲ ಹಸಿರಲ್ಲಿ ಕ್ಷಣ ಹೊತ್ತು ಅಡಗಿ ಹನಿಸೂಸುತ್ತ ಮಲ್ಲಿಗೆಯ ದಂಡೆ ಕಟ್ಟಿ ಬಂದವಳ ಮೊಗದಲ್ಲಿ ನೋವು ಗೆದ್ದ ನೋಟವಿದೆ. ಮನಸ್ಸು ಮುದುಡಿಸುವ ಕಷ್ಟಗಳಿಗೆ ಹಿತ್ತಲೊಳಗಿನ ಹಸಿರು ಮಾತ್ರೆಗಳಲ್ಲಿ ಗೆಲುವಿಗೆ ಶಕ್ತಿ ತುಂಬುವ ಮಾಯೆಯಿದೆ. ರಾಜಕೀಯ ಮಾತಾಡಿಲ್ಲ, ಅರ್ಥಶಾಸ್ತ್ರದ ಬಗ್ಗೆ ಗೊತ್ತಿಲ್ಲ, ವಿಜ್ಞಾನ-ಪರಿಸರದ ಮಾತುಗಾರಿಕೆಯ ಮಂಟಪಕ್ಕೆ ಅಮ್ಮ ಯಾವತ್ತೂ ಧ್ವನಿ ಎತ್ತಿ ಹೋದವಳಲ್ಲ.


‘ಓದಿಲ್ಲ…. ಅವಳಿಗೆ ಗೊತ್ತಿಲ್ಲ’ ಎಂದು ಜಗುಲಿಯ ಯಜಮಾನ ಅಡುಗೆ ಮನೆಯ ಪ್ರಪಂಚದಲ್ಲಿ ಸೇರಿಸಿಟ್ಟಾಗ ಹಿತ್ತಲಿನ ಮೂಲಕ ಇಣುಕಿ ಹಸಿರು ಜಗತ್ತು ರೂಪಿಸಿದ್ದಾಳೆ. ತಾಜಾ ಸೊಪ್ಪು, ತರಕಾರಿ, ಹಣ್ಣು ಕಿತ್ತು ತಂದು ರುಚಿ ರುಚಿಯ ಅಡುಗೆ ತಯಾರಿಸಿ ಊಟದ ತಟ್ಟೆಯ ಮೂಲಕ ಎಲ್ಲರ ಮನಸ್ಸು ಗೆಲ್ಲುತ್ತಾಳೆ.

ತರಕಾರಿ ಖರ್ಚು ಉಳಿಸಿ, ಆರೋಗ್ಯ ರಕ್ಷಿಸಿ, ಸಮಯದ ಸದುಪಯೋಗದ ಸೂತ್ರದಲ್ಲಿ ರಚನಾತ್ಮಕ ಬದುಕು ಅರಳಿಸಿದ್ದಾಳೆ. 20-30 ವರ್ಷಗಳ ಹಿಂದೆ ಯಾವುದೋ ಊರಿಂದ ತಂದ ಸೇವಂತಿಗೆ, ದಾಸವಾಳ ಗಿಡಗಳು ಇಂದಿಗೂ ಹೂವು ಅರಳಿಸುತ್ತವೆ. ಹೂವಿನ ಜೊತೆಗೆ ಸಸಿ ಕೊಟ್ಟವರ ನೆನಪಿದೆ.

ಅಮ್ಮ ಕಲಿಸಿದ ಪಾಠ
ಎಕರೆಗಟ್ಟಲೆ ಕಾಡು ತೋಟ ಕಟ್ಟಲು ಸಣ್ಣ ತೋಟದಿಂದ ಅಮ್ಮ ಕಲಿಸುವ ಪಾಠವೇನು? ಪ್ರಶ್ನೆ ಹುಟ್ಟಬಹುದು. ನಿರಂತರ ಆಸಕ್ತಿ, ಸಸಿ ಸಂಗ್ರಹಣೆಯ ಜಾಣ್ಮೆ, ಬಳಕೆಯ ಪರಿಜ್ಞಾನ, ಪರಿಶ್ರಮ, ಸ್ಥಳ ಯೋಗ್ಯ ಸಸಿ ನಾಟಿ, ಸಸಿಗಳ ಒಡನಾಟದಲ್ಲಿ ಖುಷಿ ಪಡುವ ಗುಣಗಳು ಮುಖ್ಯವಾದವು. ನಿತ್ಯ ಗಿಡಗಳ ಸುಖ ದುಃಖ ಆಲಿಸುವ ಹೃದಯ ಮಾತಿಗೆ ಮೀರಿದ್ದು! ಅಡಿಕೆ, ಬಾಳೆ, ದಾಳಿಂಬೆ, ದ್ರಾಕ್ಷಿ, ಕಾಫೀ ಮುಂತಾದ ವಾಣಿಜ್ಯ ಸಸ್ಯಗಳಿಗೆ ತೋಟಗಾರಿಕೆಯಲ್ಲಿ ಮಹತ್ವ ನೀಡುತ್ತೇವೆ. ಇದರಿಂದ ನಾಟಿ ತಳಿಯ ಅಪರೂಪದ ಫ‌ಲವೃಕ್ಷಗಳು ಕಣ್ಮರೆಯಾಗುತ್ತಿವೆ.

ಅಮ್ಮನ ಹಿತ್ತಲ ಕಾರ್ಯ ವಿಧಾನ ವಾಣಿಜ್ಯ ಮಹತ್ವವಿಲ್ಲದ ಸಸ್ಯಗಳಿಗೂ ಮನ್ನಣೆ ನೀಡಿ ತಳಿ ಉಳಿಸುತ್ತಿದೆ. ಸಸ್ಯ ವಿನಿಮಯದಲ್ಲಿ ಸಂರಕ್ಷಣೆಯ ಸಾಧ್ಯತೆ ತೋರಿಸುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹಿತ್ತಲು ಪದಕ್ಕೆ ವಿಸ್ತಾರ ಅರ್ಥವಿದೆ. ನಿರಂತರ ಅಧ್ಯಯನ, ವಿಷಯ ಸಂಗ್ರಹವಿದ್ದಾಗ ಪರಿಣಾಮಕಾರಿ ಸಾಹಿತ್ಯ ರಚನೆ ಸಾಧ್ಯ. ಇಲ್ಲಿ ಅಮ್ಮನ ಹಿತ್ತಲು ಬೆಳೆದು ಗೆಲ್ಲುವುದರ ಜೊತೆಗೆ ಬಳಸಿ ಬದುಕಿದೆ. ರೋಗಕ್ಕೆ ಮದ್ದು, ಪೂಜೆಗೆ ಹೂ, ತಿನ್ನಲು ಹಣ್ಣು, ಅಡುಗೆಗೆ ತರಕಾರಿ ಒದಗಿಸುವ ಹಿತ್ತಲಿನ ಸೆಳೆತಕ್ಕೆ ಹಲವು ಕಾರಣಗಳಿವೆ.

ವಾರಗಟ್ಟಲೆ ನೆಂಟರ ಮನೆ, ಆಸ್ಪತ್ರೆಗೆ ಹೋದ ಮಹಿಳೆಯರು ಮನೆಗೆ ಬಂದು ಕೂತು ಆಯಾಸ ಪರಿಹರಿಸಿಕೊಳ್ಳುವ ಮುಂಚೆ ಗಿಡಗಳನ್ನೊಮ್ಮೆ ಕಣ್ತುಂಬಿಕೊಳ್ಳುತ್ತಾರೆ. “ಹಸಿರು ಥೆರಫಿ’ ತಂತ್ರದಂತೆ ಕ್ಷಣ ನೋಟದಲ್ಲಿ ಮನಸ್ಸು ಪುಳಕಗೊಳ್ಳುತ್ತದೆ. ಅಡುಗೆ ಮನೆಯಲ್ಲಿ ಅಳುವ ಮಕ್ಕಳು ಹಿತ್ತಲಿಗೆ ಎತ್ತಿ ಒಯ್ದಾಗ ನಗುತ್ತವೆ. ಮನುಷ್ಯರಿಗೆ ಕಾಡು ಸಂಬಂಧಗಳು ಯಾವತ್ತೂ ಖುಷಿಯ ಆಕರವಾಗಿವೆ.

ಮಗು ಸಲಹುವ ಮಮತೆಯಲ್ಲಿ ತೋಟ ಬದುಕಿಸುವ ರೀತಿ ಶಾಲೆಗಳಲ್ಲಿ ಕಲಿಸಲು ಬರುವುದಿಲ್ಲ, ಅಮ್ಮನ ಎದೆಯ ಪ್ರೀತಿ ಇದ್ದರಷ್ಟೇ ಅಕ್ಕರೆಯ ಹಿತ್ತಲ ನೀತಿ ಅರಳುತ್ತದೆ. ತೊಡಗಿಸಿದ ಹಣ, ಮಾರುಕಟ್ಟೆ, ಸಸ್ಯ ರೋಗಗಳ ಲೆಕ್ಕಾಚಾರದ ಚಕ್ರದಲ್ಲಿ ಕೃಷಿ ರಂಗ ಅಳುತ್ತಿದೆ. ನಮಗಿಂತ ನೆಲದ ಲಾಭ ಗಮನಿಸಿ ಲೆಕ್ಕವಿಲ್ಲದ ಸಸ್ಯಗಳು ಬೆಳೆದರೆ ? ತೋಟ ನೋಡುವ ರೀತಿ ಬದಲಾಗುತ್ತದೆ. ಸಮಯ ಕಳೆಯುವ ಹವ್ಯಾಸಿ ಲೋಕದ ಅಮ್ಮನ ಹಿತ್ತಲು ಯಾವತ್ತೂ ಕುಟುಂಬದ ಆರ್ಥಿಕತೆಯ ಕೇಂದ್ರದಲ್ಲಿ ನಿಂತಿದ್ದಲ್ಲ, ಆದರೆ ಕುಟುಂಬದ ನೆಮ್ಮದಿಗೆ ಹಿತ್ತಲ ನೆರಳಿನ ಪಾತ್ರವಿದೆ. ನಮಗಾರಿಗೂ ಗೊತ್ತಾಗದಂತೆ ಅಡವಿ ಕಟ್ಟಿದ ಅಮ್ಮ ಗಾಢ ತಪಸ್ವಿ, ವರ ಪಡೆದಿದ್ದಾಳೆ. ಹಿತ್ತಲೆಂಬ ಅಮ್ಮನ ಕೈಗನ್ನಡಿಯಲ್ಲಿ ಕಾಡು ಕೃಷಿಯ ಪಾಠಗಳಿವೆ.

ಕಾಯಂ ವಿಳಾಸ ಹಿತ್ತಲಲ್ಲಿ
ಗಿಡ ಬೆಳೆಸುವ ಅನುಕೂಲಕ್ಕೆ ಮೋಟು ಕತ್ತಿ, ಪುಟ್ಟ ಸಲಿಕೆ, ತರಕಾರಿ ತ್ಯಾಜ್ಯಗಳ ಗೊಬ್ಬರ ಗುಂಡಿಯಿದೆ. ಸ್ನಾನದ ನೀರು ಹರಿಯುವಲ್ಲಿ, ಪಾತ್ರೆ ತೊಳೆಯುವಲ್ಲಿ ತೊಂಡೆ, ಬಸಳೆ, ತೆಂಗು, ಬಾಳೆ ಬೆಳೆಸಿದ ರೀತಿಯಲ್ಲಿ ನೀರಿನ ನೀತಿ ಅಡಗಿದೆ. ಅಡುಗೆಯ ಬೂದಿ ಕೀಟ ಓಡಿಸುವ ಬ್ರಹ್ಮಾಸ್ತ್ರ. ನಿತ್ಯ ಬಳಸಿದ ಚಹಾ ಪುಡಿ ಸೇವಂತಿಗೆ ಬುಡಕ್ಕೆ ಚೆಲ್ಲುತ್ತಾಳೆ, ಚಹಾ ಪುಡಿಯ ಜೊತೆಗಿನ ಸಕ್ಕರೆಯ ಸಿಹಿ ಹೀರಲು ಇರುವೆಗಳು ಆಗಮಿಸಿ ಮಣ್ಣು ಸಡಿಲಗೊಳಿಸಿ ಗಿಡ ಬೆಳೆಯಲು ನೆರವಾಗುತ್ತವೆ. ಗುಬ್ಬಿ, ಕಾಗೆ, ಓತಿ, ಕೆಂಪಿರುವೆ, ಪಿಕಳಾರ, ಗಿಳಿ, ಅಳಿಲು, ಚಿಟ್ಟೆ ಮುಂತಾಗಿ ಜೀವಸಂಕುಲಗಳು ಅಮ್ಮನ ಬಳಗವಾಗಿವೆ, ಇವಕ್ಕೆಲ್ಲ ಹಿತ್ತಲಿನಲ್ಲಿ ಕಾಯಂ ವಿಳಾಸವಿದೆ.

ಮುಂದಿನ ಭಾಗ: ಕಾಡು ಕಣಿವೆಗೆ ಕಡ್ಡಾಯ ಕೃಷಿ ನೀತಿ

— ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next