Advertisement

Speaker: ಖಾದರ್‌ ಅವಿರೋಧ ಆಯ್ಕೆ

11:49 PM May 24, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನ ಸಭೆಯ ನೂತನ ಸ್ಪೀಕರ್‌ ಆಗಿ ಯು.ಟಿ. ಖಾದರ್‌ ಫ‌ರೀದ್‌ ಅವರು ಅವಿರೋಧವಾಗಿ ಆಯ್ಕೆಯಾದರು. ಮಂಗಳೂರು (ಹಿಂದಿನ ಉಳ್ಳಾಲ) ಕ್ಷೇತ್ರದಿಂದ ಸತತ ಐದನೇ ಬಾರಿಗೆ ಆಯ್ಕೆಯಾಗಿರುವ ಖಾದರ್‌ ರಾಜ್ಯದ 23ನೇ ಸ್ಪೀಕರ್‌ ಆಗಿದ್ದಾರೆ. ಬುಧವಾರ ಸದನ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರು ನೂತನ ಸಚಿವರ ಪರಿಚಯ ಮಾಡಿಕೊಟ್ಟರು. ಬಳಿಕ ಹಂಗಾಮಿ ಸ್ಪೀಕರ್‌ ಆರ್‌.ವಿ. ದೇಶಪಾಂಡೆ ಅವರು ಸ್ಪೀಕರ್‌ ಚುನಾ ವಣೆಯ ಪ್ರಕ್ರಿಯೆ ಕೈಗೆತ್ತಿಕೊಂಡರು.
ಸಭಾ ನಾಯಕರೂ ಆದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್‌ ಸ್ಥಾನಕ್ಕೆ ಯು.ಟಿ.ಖಾದರ್‌ ಫ‌ರೀದ್‌ ಹೆಸರನ್ನು ಸೂಚಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅನುಮೋದಿಸಿದರು. ಸ್ಪೀಕರ್‌ ಆಯ್ಕೆ ಪ್ರಸ್ತಾವವನ್ನು ಧ್ವನಿ ಮತಕ್ಕೆ ಹಾಕಿ ಅವಿ ರೋಧ ಆಯ್ಕೆ ಘೋಷಿಸಲಾಯಿತು.

Advertisement

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಖಾದರ್‌ ಅವರನ್ನು ಸ್ಪೀಕರ್‌ ಪೀಠಕ್ಕೆ ಕರೆತಂದು ಶುಭ ಹಾರೈಸಿದರು. ಇವರು ರಾಜ್ಯ ವಿಧಾನಮಂಡಲ ಇತಿ ಹಾಸದಲ್ಲಿಯೇ ಮುಸ್ಲಿಂ ಸಮುದಾ ಯದ ಮೊದಲ ಸ್ಪೀಕರ್‌ ಆಗಿದ್ದಾರೆ.

ಅಭಿನಂದನೆಗಳ ಮಹಾಪೂರ
ನೂತನ ಸ್ಪೀಕರ್‌ಗೆ ಸದನದ ಎಲ್ಲ ಸದಸ್ಯರೂ ಅಭಿನಂದನೆ ಸಲ್ಲಿಸಿ, ಅವರ ಜಾತ್ಯತೀತ ನಿಲುವು, ಸರಳತೆ, ಸಜ್ಜನಿಕೆ ಯನ್ನು ಕೊಂಡಾಡಿದರು. ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಅವ ಕಾಶ ಒದಗಿದ್ದು, ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ಆ ಸ್ಥಾನಕ್ಕೆ ಘನತೆ ಹೆಚ್ಚಿಸುವಂತೆ ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಖಾದರ್‌ ಸಭಾಧ್ಯಕ್ಷರ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ವಿಶ್ವಾಸವಿದೆ. ಅವರು ಬಹಳ ತಾಳ್ಮೆ ಇರುವ ವ್ಯಕ್ತಿ. ಅದು ಈ ಹುದ್ದೆಗೆ ಅಗತ್ಯವಾದ ಗುಣ. ಸದನದಲ್ಲಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಚರ್ಚೆಗಳಾಗಲಿ ಎಂದ ರಲ್ಲದೆ, ಹೊಸದಾಗಿ ಆರಿಸಿ ಬಂದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಯು.ಟಿ.ಖಾದರ್‌ ಮಾದರಿ ಶಾಸಕ ರಾಗಿ ಕೆಲಸ ಮಾಡಿದ್ದು, ವಿಪಕ್ಷ ದಲ್ಲಿದ್ದ ಸಂದರ್ಭದಲ್ಲಿ ಉಪ ನಾಯಕ ನಾಗಿ ಪರಿಣಾಮಕಾರಿ, ಜವಾಬ್ದಾರಿ  ಯುತವಾಗಿ ಕಾರ್ಯ ನಿರ್ವಹಿಸಿ ದವರು. ಜಾತ್ಯತೀತ ಮನೋಭಾವ ಉಳ್ಳವರು ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಖಾದರ್‌ ಸ್ಪೀಕರ್‌ ಆಗುವ ಮೂಲಕ ರಾಜ್ಯ ವಿಧಾನಸಭೆಯ ಇತಿಹಾಸಕ್ಕೆ ಸೇರಿ ದ್ದಾರೆ ಎಂದು ಹೇಳಿದರು. ನಾನು ನಿಮ್ಮ ತಂದೆ ಜತೆ ಶಾಸಕನಾಗಿ ಕೆಲಸ ಮಾಡಿದ್ದೆ. ನಿಮ್ಮನ್ನು ಸೇವಾದಳದ ಕಾರ್ಯಕರ್ತನಾಗಿ, ವಿದ್ಯಾರ್ಥಿ ಘಟಕದ ಕಾರ್ಯಕರ್ತನಾಗಿ, ಶಾಸಕ ನಾಗಿ, ಮಂತ್ರಿಯಾಗಿ ನೋಡಿದ್ದೇನೆ. ಇಂದು ನಿಮ್ಮನ್ನು ಸ್ಪೀಕರ್‌ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆ ಸ್ಥಾನ ಬಹಳ ಶ್ರೇಷ್ಠವಾದುದು. ನಾವು ಮಾಜಿ ಸ್ಪೀಕರ್‌ ವೈಕುಂಠ ಬಾಳಿಗ ಅವರ ಇತಿಹಾಸವನ್ನು ಕೇಳಿದ್ದೇವೆ. ಎಸ್‌.ಎಂ. ಕೃಷ್ಣ, ಜಗದೀಶ್‌ ಶೆಟ್ಟರ್‌, ರಮೇಶ್‌ ಕುಮಾರ್‌ ಅವರು ಈ ಸ್ಥಾನದಲ್ಲಿ ಕೂತಿದ್ದರು. ಇವರೆಲ್ಲರೂ ಆಡಳಿತ ಅಥವಾ ವಿಪಕ್ಷದ ಯುವ ಸದಸ್ಯರನ್ನು ಎಬ್ಬಿಸಿ ಮಾತನಾಡಲು ಹೇಳುತ್ತಿದ್ದರು ಎಂದು ಸ್ಮರಿಸಿದರು.

Advertisement

ಸ್ಪೀಕರ್‌ ಸ್ಥಾನ ಸಿಕ್ಕಿದ್ದು ನನ್ನ ಸೌಭಾಗ್ಯ: ಖಾದರ್‌

ಬೆಂಗಳೂರು: ಸ್ಪೀಕರ್‌ ಸ್ಥಾನ ನನಗೆ ಸಿಕ್ಕಿರುವ ಸೌಭಾಗ್ಯ. ಸದನದ ಎಲ್ಲ ಸದಸ್ಯರ ನಿರೀಕ್ಷೆ- ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಹೊಣೆಗಾರಿಕೆಯನ್ನು ನಿಭಾಯಿಸುತ್ತೇನೆ. ಸಂವಿಧಾನಬದ್ಧ ಸಂಸ್ಥೆಗೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ನೂತನ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ಸ್ಪೀಕರ್‌ ಪೀಠವನ್ನು ಅಲಂಕರಿಸಿದ ಬಳಿಕ ಸಿಎಂ, ಡಿಸಿಎಂ, ಮಾಜಿ ಸಿಎಂ, ಸಚಿ ವರು, ಪಕ್ಷಾತೀತವಾಗಿ ಸದಸ್ಯರ ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ತುಳುನಾಡಿನವನಾದ ನನ್ನ ಭಾಷೆ ಎಲ್ಲರಿಗೂ ಅರ್ಥವಾಗುತ್ತದೆ. ವಿಧಾನ ಸಭಾಧ್ಯಕ್ಷರಾಗಿದ್ದ ವೈಕುಂಠ ಬಾಳಿಗ, ಲೋಕಸಭಾ ಸ್ಪೀಕರ್‌ ಆಗಿದ್ದ ಕೆ.ಎಸ್‌. ಹೆಗ್ಡೆಯ ವರಂತೆ ಜಿಲ್ಲೆಗೆ ಗೌರವ ತರುವ ಕೆಲಸ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ನಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಬೇರೆ ಬೇರೆ ಇರಬಹುದು. ಆದರೆ ನಾವು ಪರಸ್ಪರ ಶತ್ರುಗಳಲ್ಲ. ಹಾಗಾಗಿ ಎಲ್ಲರೂ ನಾಡಿನ ಜನರ ಹಿತಕ್ಕಾಗಿ ಕೆಲಸ ಮಾಡೋಣ. ನಾಡಿನ ಸಾಮಾನ್ಯ ಜನ, ರೈತರು, ಯುವಕರು, ಮಹಿಳೆಯರು, ಶೋಷಿತರು, ಸಂಕಷ್ಟದಲ್ಲಿರುವವರು ಸೇರಿದಂತೆ ಸಮಸ್ತ ಜನರ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು.

ಸದನದ ಎಲ್ಲ ಶಾಸಕರ ಗೌರವ ಕಾಪಾಡುವುದು ನನ್ನ ಜವಾಬ್ದಾರಿ. ಅದನ್ನು ಮಾಡುತ್ತೇನೆ. ಯಾವುದೋ ಒಂದು ಪಕ್ಷ, ಗುಂಪಿನ ಕೆಲಸ ಮಾಡಲು ನಾನು ಇಲ್ಲಿ ಕುಳಿತಿಲ್ಲ. ಹಿರಿಯ- ಕಿರಿಯ ಶಾಸಕರಿಗೆ ಕೊಂಡಿಯಾಗಿ ನಾನು ಕಾರ್ಯ ನಿರ್ವಹಿಸುತ್ತೇನೆ. ಹಿರಿಯರು, ಅನುಭವಿಗಳ ಮಾತುಗಳನ್ನು ಕಿರಿಯರು ಆಲಿಸಿ, ಗ್ರಹಿಸಬೇಕು. ನಿಯಮಾವಳಿಗಳನ್ನು ಅರಿಯಬೇಕು ಎಂದು ಹೇಳಿದರು.

ಕೃತಜ್ಞತೆ-ಸ್ಮರಣೆ: ಸ್ಪೀಕರ್‌ ಸ್ಥಾನಕ್ಕೆ ನನ್ನನ್ನು ಗುರುತಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ರಾಹುಲ್‌ ಗಾಂಧಿ, ಕೆ.ಸಿ. ವೇಣು ಗೋಪಾಲ್‌, ರಣದೀಪ್‌ ಸಿಂಗ್‌ ಸುಜೇìವಾಲ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಸರ್ವಶಕ್ತನಾದ ದೇವರು, ತಂದೆ- ತಾಯಿ, ಕ್ಷೇತ್ರದ ಮತದಾರರು, ಜಿಲ್ಲೆಯ ಜನತೆ ಜತೆಗೆ ಎಲ್ಲ ಧರ್ಮಗಳ ಮುಖಂಡರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ತಕ್ಕಡಿ ಸಮವಾಗಿರಲಿ: ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯು.ಟಿ. ಖಾದರ್‌ ಸ್ಪೀಕರ್‌ ಆಗಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ. ರಾಜ್ಯ ವಿಧಾನಮಂಡಲ ತನ್ನದೇ ಆದ ಘನತೆ ಹೊಂದಿದೆ ನಿಮಗೆ ಅಭಿನಂದನೆಗಳು. ನಿಮ್ಮ ತಕ್ಕಡಿ ಸಮವಾಗಿ ಇರಲಿ ಎಂದು ಹೇಳಿದರು. ನಿಮಗೆ ಇಪ್ಪತ್ತು ವರ್ಷದ ಅನುಭವ ಇದೆ. ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡಿದ್ದೀರಿ. ವಿಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವವನ್ನು ಹೆಚ್ಚಿಸಿದ್ದಾರೆ. ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಸಂವಿಧಾನದಲ್ಲಿ ವಿಶೇಷ ಸ್ಥಾನ ಸಭಾಪತಿಗಳಿಗೆ ಇದೆ. ಸರಕಾರದ ಅಳಿವು ಉಳಿವಿನ ತೀರ್ಮಾನ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ್ದೂ ಇವೆ. ತಾವು ನೀಡುವ ತೀರ್ಪು ಲ್ಯಾಂಡ್‌ ಮಾರ್ಕ್‌ ಆಗುತ್ತದೆ. ನಿಷ್ಪಕ್ಷಪಾತವಾಗಿ ನೀವು ಕೆಲಸ ಮಾಡಿ. ವಿಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚಿದ್ದಾರೆ. ಆಡಳಿತ ಪಕ್ಷದಲ್ಲಿ ನಿಮ್ಮ ನಿಕಟಪೂರ್ವ ಪಕ್ಷದ ಆತ್ಮೀಯರು ಇದ್ದಾರೆ. ಇಬ್ಬರನ್ನೂ ಸಮನಾಗಿ ನೋಡಿ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next