Advertisement

ಗದ್ದಲಕ್ಕೆ ಕೋಪಗೊಂಡ ಸ್ಪೀಕರ್‌ -ಲೋಕಸಭೆಗೆ ಕಲಾಪ ನಿರ್ವಹಿಸಲು ಬಾರದ ಓಂ ಬಿರ್ಲಾ

09:03 PM Aug 02, 2023 | Team Udayavani |

ನವದೆಹಲಿ: ಪ್ರಸಕ್ತ ಸಾಲಿನ ಮುಂಗಾರು ಅಧಿವೇಶನ ಜು.20ರಿಂದ ಶುರುವಾದ ದಿನದಿಂದ ಇದುವರೆಗೆ ಸುಗಮ ಕಲಾಪ ನಡೆದೇ ಇಲ್ಲ. ಇದರಿಂದಾಗಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಕೋಪಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ಕಾರಣದಿಂದ ಅವರು ಬುಧವಾರ ಕಲಾಪಕ್ಕೆ ಹಾಜರಾಗಿಲ್ಲ.

Advertisement

ಸದನದಲ್ಲಿ ಗೌರವಯುತವಾಗಿ ಸಂಸದರು ವರ್ತಿಸುವವರೆಗೆ ಕಲಾಪ ನಿರ್ವಹಿಸಲು ಬರುವುದೇ ಇಲ್ಲ ಎಂದು ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ವಲಯಗಳನ್ನು ಉಲ್ಲೇಖಿಸಿ ವರದಿಗಳು ಪ್ರಕಟಗೊಂಡಿವೆ.

ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರಿಗೆ ಸ್ಪೀಕರ್‌ ಬಿರ್ಲಾ ಅವರ ಅಸಂತೋಷವನ್ನು ತಿಳಿಯಪಡಿಸಲಾಗಿದೆ ಎಂದು ಸಂಸತ್‌ನ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ಸ್ಪೀಕರ್‌ ಅನುಪಸ್ಥಿತಿಯಲ್ಲಿ ಬಿಜೆಪಿ ಸದಸ್ಯ ಕಿರೀಟ್‌ ಸೋಲಂಕಿ ಅವರು ಕಲಾಪ ನಿರ್ವಹಿಸಿದರು. ಪ್ರತಿಪಕ್ಷಗಳು ಸಂಯಮ ವಹಿಸಿ ಕಲಾಪ ನಡೆಸಲು ಅನುವು ಮಾಡಿಕೊಡಬೇಕೆಂದು ಕೇಳಿದರೂ, ಸ್ಪಂದನೆ ವ್ಯಕ್ತವಾಗದ್ದರಿಂದ ಗುರುವಾರಕ್ಕೆ ಕಲಾಪ ಮುಂದೂಡಿದ್ದಾರೆ.

ವಿಧೇಯಕ ಅಂಗೀಕಾರ: ಪ್ರತಿಪಕ್ಷಗಳ ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ಖಾಸಗಿ ವಲಯಕ್ಕೆ ಲೀಥಿಯಂ ಸೇರಿದಂತೆ ಆರು ಖನಿಜಗಳ ಕ್ಷೇತ್ರದಲ್ಲಿ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಡುವ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ವಿಧೇಯಕ 2023ಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ. ವಿಶೇಷವಾಗಿ ಪರಮಾಣು ಕ್ಷೇತ್ರದಲ್ಲಿ ಅವುಗಳ ಉಪಯೋಗ ಹೆಚ್ಚಾಗಿದೆ. ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ ಅದರ ಬಗ್ಗೆ ಮಾತನಾಡಿದರು. ಇದರ ಜತೆಗೆ ಮೇಲ್ಮನೆಯಲ್ಲಿ ಅರಣ್ಯ (ಸಂರಕ್ಷಣೆ ) ತಿದ್ದುಪಡಿ ವಿಧೇಯಕಕ್ಕೆ ಕೂಡ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ.

ಪ್ರಧಾನಿಗೆ ಮಾತಾಡಲು ಸೂಚಿಸಿ: ರಾಷ್ಟ್ರಪತಿಗೆ ಮನವಿ
ಮಣಿಪುರ ಹಿಂಸಾಚಾರದ ವಿಚಾರದಲ್ಲಿ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತನಾಡಲು ಸೂಚಿಸಿ. ಹೀಗೆಂದು ಪ್ರತಿಪಕ್ಷಗಳ ಒಕ್ಕೂಟ ಐ.ಎನ್‌.ಡಿ.ಐ.ಎ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪ್ರತಿಪಕ್ಷಗಳ ನಿಯೋಗ ಮುರ್ಮು ಅವರಿಗೆ ಮನವಿ ಸಲ್ಲಿಸಿದೆ. ಬಳಿಕ ಮಾತನಾಡಿದ ಖರ್ಗೆ “ಗಲಭೆ ಪೀಡಿತ ರಾಜ್ಯಕ್ಕೆ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವಂತೆ ಮತ್ತು ಸಂಸತ್‌ನಲ್ಲಿ ಹೇಳಿಕೆ ನೀಡುವಂತೆ ರಾಷ್ಟ್ರಪತಿಗಳಿಗೆ ಪ್ರತಿಪಕ್ಷಗಳ 31 ಮುಖಂಡರ ನಿಯೋಗ ಮನವಿ ಮಾಡಿದೆ. ಇದಲ್ಲದೆ ಹರ್ಯಾಣದ ನೂಹ್‌ನಲ್ಲಿ ಉಂಟಾಗಿರುವ ಹಿಂಸಾಚಾರದ ಬಗ್ಗೆ ಕೂಡ ರಾಷ್ಟ್ರಪತಿಗಳ ಗಮನ ಸೆಳೆಯಲಾಗಿದೆ’ ಎಂದರು.

Advertisement

ಪ್ರಧಾನಿಗಳು ಸಂಸತ್‌ನಲ್ಲಿ ಹೇಳಿಕೆ ನೀಡಬೇಕು ಎನ್ನುವುದೇ ಪ್ರಧಾನ ಬೇಡಿಕೆ. 92 ದಿನಗಳಿಂದ ಮಣಿಪುರದಲ್ಲಿ ಹಿಂಸೆಯ ವಾತಾವರಣವೇ ಇದೆ. ಸರಿ ಸುಮಾರು 200 ಮಂದಿ ಅಸುನೀಗಿದ್ದಾರೆ, 500 ಮಂದಿ ಗಾಯಗೊಂಡಿದ್ದಾರೆ. ಜತೆಗೆ 60 ಸಾವಿರಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ. ಹೀಗಾಗಿ, ನರೇಂದ್ರ ಮೋದಿಯವರ ಹೇಳಿಕೆ ಮಹತ್ವ ಪಡೆಯುತ್ತದೆ ಎಂದರು.

ಸದನಕ್ಕೆ ಬನ್ನಿ ಎಂದು ಪ್ರಧಾನಿಗೆ ಸೂಚಿಸಲು ಸಾಧ್ಯವಿಲ್ಲ
ಮಣಿಪುರ ವಿಚಾರದಲ್ಲಿ ಸಂಸತ್‌ನಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸುತ್ತಿರುವ ಪ್ರತಿಪಕ್ಷಗಳು ಈಗ ಅಧಿವೇಶನಕ್ಕೆ ನರೇಂದ್ರ ಮೋದಿ ಬರಬೇಕು ಎಂದು ಆಗ್ರಹಿಸಿವೆ. ಈ ಬಗ್ಗೆ ಅವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್ಕರ್‌ “ಸದನಕ್ಕೆ ಬರಬೇಕು ಎಂದು ಪ್ರಧಾನಿಯವರಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ನಾನು ಆ ರೀತಿ ನಡೆದುಕೊಳ್ಳಲಾರೆ. ಅಧಿವೇಶನದಲ್ಲಿ ಹಾಜರಾಗಬೇಕು ಎನ್ನುವುದು ಸಂಸತ್‌ ಸದಸ್ಯರ ವಿವೇಚನೆಗೆ ಬಿಟ್ಟ ವಿಚಾರ, ಪ್ರಧಾನಿಯವರಿಗೂ ಅದು ಅನ್ವಯಿಸುತ್ತದೆ ಎಂದರು. ಆ ಹೇಳಿಕೆ ಖಂಡಿಸಿ ಪ್ರತಿಪಕ್ಷಗಳು ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದವು.

ಪ್ರತಿಪಕ್ಷಗಳ ಮುಖಂಡರಿಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಆಸಕ್ತಿಯೇ ಇಲ್ಲ. ವಿನಾ ಕಾರಣ ಮಣಿಪುರ ವಿಚಾರ ಮುಂದಿಟ್ಟು ಗದ್ದಲ ನಡೆಸುತ್ತಿವೆ. ಪ್ರತಿಪಕ್ಷಗಳ ಪ್ರಶ್ನೆಗೆ ಸರ್ಕಾರದ ಉತ್ತರವಿದೆ ಎನ್ನುವುದು ಅವರಿಗೂ ತಿಳಿದಿದೆ.
ಸುಶೀಲ್‌ ಕುಮಾರ್‌ ಮೋದಿ, ಬಿಜೆಪಿ ರಾಜ್ಯಸಭೆ ಸದಸ್ಯ

ಆಪ್‌ಗೆ ಆಘಾತ ನೀಡಿದ ಟಿಡಿಪಿ
ದೆಹಲಿ ಆಡಳಿತಾತ್ಮಕ ಸೇವೆಗಳ ವಿಧೇಯಕದ ವೇಳೆ ಅಚ್ಚರಿಯ ಬೆಳವಣಿಗೆ ನಡೆದಿದೆ. ಆಪ್‌ ಪರ ನಿಲ್ಲಬಹುದು ಎಂದು ಭಾವಿಸಲಾಗಿದ್ದ ಟಿಡಿಪಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದೆ. ಇದರಿಂದಾಗಿ ಆಪ್‌ಗೆ ಭಾರೀ ಹಿನ್ನಡೆ ಉಂಟಾಗಿದೆ. ಬೆಂಬಲ ಪಡೆಯುವ ನಿಟ್ಟಿನಲ್ಲಿ ಪ್ರತಿಪಕ್ಷಗಳ ಮುಖಂಡರನ್ನು ಭೇಟಿ ಮಾಡುವ ಸರಣಿಯಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನೂ ಭೇಟಿಯಾಗಿದ್ದರು. ಬಿಜೆಡಿ, ವೈಎಸ್‌ಆರ್‌ಸಿಪಿ ಕೂಡ ಕೇಂದ್ರ ಸರ್ಕಾರದ ಪರ ನಿಂತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next